ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

|

Updated on: Oct 04, 2024 | 4:49 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ರ ಜಾಮೀನು ಅರ್ಜಿ ವಿಚಾರಣೆ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​ನಲ್ಲಿ ನಡೆಯಿತು. ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ಸುದೀರ್ಘವಾಗಿ ವಾದ ಮಂಡನೆ ಮಾಡಿದರು.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ
Follow us on

ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದೆ. ಈ ಹಿಂದೆ ಕೆಲವು ಬಾರಿ ಅರ್ಜಿ ವಿಚಾರಣೆ ವಿವಿಧ ಕಾರಣಗಳಿಗೆ ಮುಂದೂಡಲಾಗಿತ್ತು. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಹಿರಿಯ ವಕೀಲ ಸಿಎನ್ ನಾಗೇಶ್ ಅವರು ಇಂದು ದರ್ಶನ್ ಪರ ವಾದ ಮಂಡಿಸಿದರು. ಕಳೆದ ಎರಡು ವಾರದಿಂದಲೂ ದರ್ಶನ್​ಗೆ ಜಾಮೀನು ಅರ್ಜಿ ಮುಂದೂಡಿಕೆ ಆಗುತ್ತಲೇ ಬಂದಿದ್ದು, ಇಂದು ಕೊನೆಗೂ ಸಿವಿ ನಾಗೇಶ್ ಅವರು ದರ್ಶನ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ದಿನದ ಅಂತ್ಯಕ್ಕೆ ಪ್ರಕರಣದ ವಿಚಾರಣೆಯನ್ನು ನಾಳೆ (ಅಕ್ಟೋಬರ್ 05) ಮಧ್ಯಾಹ್ನ 12:30ಕ್ಕೆ ಮುಂದೂಡಿಕೆ ಮಾಡಲಾಯ್ತು.

ಎಸ್​ಪಿಪಿ ಪ್ರಸನ್ನ ಕುಮಾರ್ ಹಾಜರಿಯಲ್ಲಿ ವಾದ ಮಂಡನೆ ಆರಂಭಿಸಿದ ಹಿರಿಯ ವಕೀಲ ಸಿವಿ ನಾಗೇಶ್, ಪ್ರಕರಣದಲ್ಲಿ ಮಾಧ್ಯಮಗಳು ದರ್ಶನ್ ಅನ್ನು ಅಪರಾಧಿ ಎಂದೇ ಬಿಂಬಿಸಿವೆ ಎಂದು ಟೀಕೆ ವ್ಯಕ್ತಪಡಿಸಿದ ಸಿವಿ ನಾಗೇಶ್ ಆ ನಂತರ ಎಸ್​ಪಿಪಿ ಅವರು ಈ ತನಿಖೆಯನ್ನು ಅತ್ಯುತ್ತಮ ಎಂದಿದ್ದಾರೆ. ಆದರೆ ಇದೊಂದು ಕಳಪೆ ತನಿಖೆ ವರದಿ ಎಂದು ವಾದ ಆರಂಭಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಾದದ ಟಿಪ್ಪಣಿ ಸಲ್ಲಿಸಿದ ನಾಗೇಶ್ ಅವರು ಆ ಬಳಿಕ ಎರಡು ಸುಪ್ರೀಂ ಕೋರ್ಟ್​ನ ಆದೇಶಗಳನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು.

ಇದನ್ನೂ ಓದಿ: ತೀವ್ರ ಬೆನ್ನು ನೋವು ಇದ್ರೂ ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ ಎಂದ ದರ್ಶನ್: ಕಾರಣ ಏನು?

ಇಂದು ಸಿವಿ ನಾಗೇಶ್​ ಅವರು ದೀರ್ಘವಾಗಿ ವಾದ ಮಂಡನೆ ಮಾಡಿದರು. ಆರಂಭದಲ್ಲಿ ಮಾಧ್ಯಮಗಳ ವಿಚಾರ, ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ವಿರುದ್ಧ ಮಾಡಲಾದ ಆರೋಪಗಳ ಬಗ್ಗೆ ನ್ಯಾಯಾಲಯದ ಗಮನ ಸೆಳೆದ ವಕೀಲರು, ಮಾಧ್ಯಮಗಳ ವರದಿ ಆಧಾರದಲ್ಲಿ ತೀರ್ಪು ನೀಡಬಾರದೆಂದು ಮನವಿ ಮಾಡಿದರು. ಬಳಿಕ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿರುವ ವೈರುಧ್ಯಗಳ ಬಗ್ಗೆ ಗಮನ ಸೆಳೆದರು. ಜೊತೆಗೆ ಸುಪ್ರೀಂ ಕೋರ್ಟ್​ನ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ, ಪೊಲೀಸರು ತನಿಖೆಯ ವೇಳೆ ವಶಪಡಿಸಿಕೊಂಡಿರುವ ವಸ್ತುಗಳನ್ನು ಗಂಭೀರವಾಗಿ ಅಂದರೆ ಸಾಕ್ಷಿಗಳೆಂದು ಪರಿಗಣಿಸುವ ಅಗತ್ಯವಿಲ್ಲವೆಂದು ವಾದಿಸಿದರು.

ಸಿವಿ ನಾಗೇಶ್ ಅವರ ಸುದೀರ್ಘ ವಾದವನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 04ರ ಮಧ್ಯಾಹ್ನ 12:30ಗೆ ಮುಂದೂಡಿಕೆ ಮಾಡಿದರು. ನಾಳೆಯೂ ಸಹ ಸಿವಿ ನಾಗೇಶ್ ಅವರ ವಾದ ಮುಂದುವರೆಯಲಿದ್ದು, ಅದಾದ ಬಳಿಕ ಪ್ರಸನ್ನ ಅವರ ಆಕ್ಷೇಪಣೆ ಸಹ ಇರುವ ಸಾಧ್ಯತೆ ಇದೆ. ಆ ಬಳಿಕ ನ್ಯಾಯಾಧೀಶರು ಜಾಮೀನು ಅರ್ಜಿ ಕುರಿತಂತೆ ತೀರ್ಪು ನೀಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ