‘ರಿಷಬ್ ಶೆಟ್ಟಿ ಫೌಂಡೇಷನ್’ ಮೂಲಕ ಬಡ ಮಕ್ಕಳ ಸಹಾಯಕ್ಕೆ ನಿಂತ ಡಿವೈನ್ ಸ್ಟಾರ್

ರಾಷ್ಟ್ರ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ‘ರಿಷಬ್ ಶೆಟ್ಟಿ ಫೌಂಡೇಷನ್’ ಮೂಲಕ ಸದ್ದಿಲ್ಲದೆ ಸಮಾಜಸೇವೆ ಮಾಡುತ್ತಿದ್ದಾರೆ. ಬಡ ಮತ್ತು ಅಶಕ್ತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವ ಹಾಗೂ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗಳಿಸಿದ್ದರಲ್ಲಿ ಸಮಾಜಕ್ಕೆ ಮರಳಿ ನೀಡುವ ಮೂಲಕ ಅವರು ರಿಯಲ್ ಸ್ಟಾರ್ ಎನಿಸಿಕೊಂಡಿದ್ದಾರೆ.

‘ರಿಷಬ್ ಶೆಟ್ಟಿ ಫೌಂಡೇಷನ್’ ಮೂಲಕ ಬಡ ಮಕ್ಕಳ ಸಹಾಯಕ್ಕೆ ನಿಂತ ಡಿವೈನ್ ಸ್ಟಾರ್
ರಿಷಬ್ ಶೆಟ್ಟಿ

Updated on: Jul 09, 2026 | 11:21 AM

ಮುಖ್ಯಾಂಶಗಳು

  • ರಿಷಬ್ ಶೆಟ್ಟಿ ಫೌಂಡೇಷನ್‌ನಿಂದ ಹೊಸ ಶಿಕ್ಷಣ ಕ್ರಾಂತಿ
  • ಬಡ ವಿದ್ಯಾರ್ಥಿಗಳ ಓದಿಗೆ ಡಿವೈನ್ ಸ್ಟಾರ್ ಆಸರೆ
  • ಸರ್ಕಾರಿ ಶಾಲೆಗಳ ದತ್ತು ಪಡೆದ ಹೆಮ್ಮೆಯ ಕನ್ನಡಿಗ.

ಚಿತ್ರರಂಗದಲ್ಲಿ ಕೇವಲ ನಟನೆಯಷ್ಟೇ ಅಲ್ಲದೆ, ತಮ್ಮದೇ ಆದ ವಿಭಿನ್ನ ಕಥೆ ಹಾಗೂ ನಿರ್ದೇಶನದ ಮೂಲಕ ಕರಾವಳಿಯ ಸೊಗಡನ್ನು ಜಾಗತಿಕ ಮಟ್ಟಕ್ಕೆ ರಿಷಬ್ ಶೆಟ್ಟಿ ಕೊಂಡೊಯ್ದಿದ್ದಾರೆ. ‘ಕಾಂತಾರ’ ಹಾಗೂ ‘ಕಾಂತಾರ: ಚಾಪ್ಟರ್ 1’ ಮೂಲಕ ಎಲ್ಲರ ಗಮನ ಸೆಳೆದರು. ಈಗ ಅವರು ಸಾಮಾಜಿಕ ಕೆಲಸಗಳ ಮೂಲಕವೂ ಜನರ ಮನಗೆಲ್ಲುತ್ತಿದ್ದಾರೆ. ರಿಷಬ್ ಶೆಟ್ಟಿ (Rishab Shetty) ಸಾಕಷ್ಟು ಕಷ್ಟದಿಂದ ಬಂದವರು. ಹೀಗಾಗಿ, ಕಷ್ಟದಲ್ಲಿ ಇರುವವರ ಕಂಡರೆ ಅವರ ಹೃದಯ ಮಿಡಿಯುತ್ತದೆ.

ರಿಷಬ್ ಅವರು ‘ರಿಷಬ್ ಶೆಟ್ಟಿ ಫೌಂಡೇಷನ್’ ಆರಂಭಿಸಿದ್ದು, ಇದರ ಮೂಲಕ ಬಡ ಹಾಗೂ ಅಶಕ್ತ ಜನರಿಗೆ ಸಹಾಯ ಮಾಡಿದ್ದಾರೆ. ರಿಷಬ್ ಶೆಟ್ಟಿ ಫೌಂಡೇಶನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೋ ಇದಕ್ಕೆ ಸಾಕ್ಷಿ.

ಸರ್ಕಾರಿ ಶಾಲೆಗಳ ದತ್ತು ಹಾಗೂ ಶಿಕ್ಷಣ ಕ್ರಾಂತಿ:

‘ಬಾಲ್ಯದ ಕನಸುಗಳು ಮೂಡುವ ಮಾತೃಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ಸಿಗಬೇಕು’ ಎಂಬ ಡೈಲಾಗ್ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಇತ್ತು. ಇದೇ ಧ್ಯೇಯದೊಂದಿಗೆ ರಿಷಬ್ ಶೆಟ್ಟಿ ಫೌಂಡೇಷನ್ ಕಾರ್ಯನಿರ್ವಹಿಸುತ್ತಿದೆ. ತಾವು ಓದಿದ ಸರ್ಕಾರಿ ಶಾಲೆಯನ್ನು ದತ್ತು ಪಡೆದು, ಅದಕ್ಕೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಮಾದರಿಯಾಗಿದ್ದಾರೆ. ಕಷ್ಟದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಿಷಬ್, ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸುತ್ತಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಆಸರೆ:

ಕೂಲಿ ಕಾರ್ಮಿಕರು, ಹೋಟೆಲ್ ಕಾರ್ಮಿಕರು ಹಾಗೂ ರೈತರ ಮಕ್ಕಳಿಗೆ ಮುಂದೆ ಓದಲು ಹಣದ ಕೊರತೆಯಾದಾಗ ರಿಷಬ್ ಶೆಟ್ಟಿ ಫೌಂಡೇಷನ್ ಸ್ಕಾಲರ್‌ಶಿಪ್ ನೀಡಿ ಬೆಂಬಲವಾಗಿ ನಿಂತಿದೆ. ‘ನನ್ನ ತಂದೆ ತೀರಿಕೊಂಡ ಮೇಲೆ ಓದು ನಿಲ್ಲಿಸುವ ಪರಿಸ್ಥಿತಿ ಇತ್ತು. ಆದರೆ ರಿಷಬ್ ಸರ್ ಕೊಟ್ಟ ಸ್ಕಾಲರ್‌ಶಿಪ್‌ನಿಂದಾಗಿ ನನ್ನ ಓದು ಮುಂದುವರಿಸಲು ಸಾಧ್ಯವಾಯಿತು’ ಎಂದು ಕಣ್ಣೀರು ಹಾಕುತ್ತಾ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಿಗ್ ಅಪ್​ಡೇಟ್​; ‘ಕಾಂತಾರ: ಚಾಪ್ಟರ್ 2’ ಸ್ಕ್ರಿಪ್ಟ್ ಆರಂಭಿಸಿದ ರಿಷಬ್ ಶೆಟ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದ ಮೆಚ್ಚುಗೆ:

ಕೇವಲ ಹಣ ಗಳಿಸುವುದಷ್ಟೇ ಅಲ್ಲ, ಗಳಿಸಿದ್ದರಲ್ಲಿ ಸಮಾಜಕ್ಕೆ ಮರಳಿ ನೀಡುವುದೇ ನಿಜವಾದ ಸಾಧನೆ ಎಂದು ತೋರಿಸಿಕೊಟ್ಟಿರುವ ರಿಷಬ್ ಶೆಟ್ಟಿ ಅವರ ಈ ಮಾನವೀಯ ಕಾರ್ಯಕ್ಕೆ ಕರ್ನಾಟಕದ ಜನತೆ ಹಾಗೂ ಅಭಿಮಾನಿ ಬಳಗದಿಂದ ಎಲ್ಲ ಕಡೆಗಳಿಂದ ಮೆಚ್ಚುಗೆ ಹಾಗೂ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us