‘ಮುಟ್ಟಿನ ಸಮಯದಲ್ಲಾಗುವ ಸಮಸ್ಯೆ ನಿರ್ಲಕ್ಷಿಸಿಬೇಡಿ’; ಸ್ವಾನುಭವದಲ್ಲಿ ಕಿವಿಮಾತು ಹೇಳಿದ ಸಂಗೀತಾ ಭಟ್

ನಟಿ ಸಂಗೀತಾ ಭಟ್ ಅವರು ತಮ್ಮ ಮುಟ್ಟಿನ ಸಮಯದಲ್ಲಾಗುವ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅವರಿಗೆ ಗರ್ಭಕೋಶದಲ್ಲಿ ಗಡ್ಡೆ ಬೆಳೆದು ಶಸ್ತ್ರಚಿಕಿತ್ಸೆಗೆ ಒಳಗಾದ ಕಹಿಸತ್ಯವನ್ನು ಹಂಚಿಕೊಂಡಿದ್ದಾರೆ. ಅನಿಯಮಿತ ಋತುಚಕ್ರ, ವಿಪರೀತ ನೋವು ಸಾಮಾನ್ಯವೆಂದು ನಿರ್ಲಕ್ಷಿಸಬಾರದು ಎಂಬುದು ಅವರ ಕಿವಿಮಾತು. ಈ ಗರ್ಭಕೋಶದ ಗಡ್ಡೆ ಕ್ಯಾನ್ಸರ್ ಕೂಡ ತರಬಹುದು.

‘ಮುಟ್ಟಿನ ಸಮಯದಲ್ಲಾಗುವ ಸಮಸ್ಯೆ ನಿರ್ಲಕ್ಷಿಸಿಬೇಡಿ’; ಸ್ವಾನುಭವದಲ್ಲಿ ಕಿವಿಮಾತು ಹೇಳಿದ ಸಂಗೀತಾ ಭಟ್
ಸಂಗೀತಾ ಭಟ್

Updated on: Oct 27, 2025 | 3:07 PM

ಮುಟ್ಟಿನ ಸಮಯದಲ್ಲಿ ಸಮಸ್ಯೆ ಇದ್ದರೆ ಅದನ್ನು ಅನೇಕ ಮಹಿಳೆಯರು ನಿರ್ಲಕ್ಷಿಸುತ್ತಾರೆ. ಪದೇ ಪದೇ ಋತುಚಕ್ರ ಸಂಭವಿಸೋದು, ಹಲವು ತಿಂಗಳು ಮುಟ್ಟಾಗದೇ ಇರುವುದು ಅಥವಾ ಮುಟ್ಟಾದಾಗ ಸಹಿಸಲಾರದಷ್ಟು ನೋವು ಉಂಟಾಗುವುದು ಸರ್ವೇ ಸಾಮಾನ್ಯ ಎಂದುಕೊಂಡಿರುತ್ತಾರೆ. ಆದರೆ, ವೈದ್ಯ ಲೋಕ ಇದನ್ನು ಸಾಮಾನ್ಯ ಎಂದು ಪರಿಗಣಿಸೋದಿಲ್ಲ. ಇದರ ಹಿಂದೆ ‘ಆ ಒಂದು’ ಕಾರಣ ಇರಬಹುದು ಎಂದು ನಟಿ ಸಂಗೀತಾ ಭಟ್ (Sangeetha Bhat) ಹೇಳುತ್ತಾರೆ. ಇದು ಅವರ ಸ್ವ ಅನುಭವದ ಮಾತು. ‘ಟಿವಿ9 ಕನ್ನಡ ಡಿಜಿಟಲ್​​’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಸಂಗೀತಾ ಭಟ್​ಗೆ ಕಳೆದ ಕೆಲವು ತಿಂಗಳಿಂದ ಪದೇ ಪದೇ ಋತುಚಕ್ರ ಸಂಭವಿಸುತ್ತಿತ್ತು. ಇದರ ಜೊತೆಗೆ ಅತೀವ ನೋವು. ಮೊದಲು ವೈದ್ಯರೊಬ್ಬರನ್ನು ಸಂಪರ್ಕಿಸಿದಾಗ ಇದು ಸಾಮಾನ್ಯ ಎಂದಿದ್ದರು. ಕುಟುಂಬದವರಿಗೂ ಹಾಗೆಯೇ ಅನಿಸಿತು. ಹೀಗಾಗಿ, ಯಾರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ, ಸಂಗೀತಾಗೆ ಮಾತ್ರ ಇದು ಸಾಮಾನ್ಯದ ರೀತಿ ಕಾಣಿಸಲೇ ಇಲ್ಲ. ಹೀಗಾಗಿ, ಸ್ಕ್ಯಾನಿಂಗ್ ಇತ್ಯಾದಿ ಪರೀಕ್ಷೆಗಳನ್ನು ಮಾಡಿಸಿದಾಗ ಗರ್ಭಕೋಶದಲ್ಲಿ 1.75 ಸೆಂಟಿಮೀಟರ್ ಗಡ್ಡೆ ಬೆಳೆದಿರುವುದು ಕಂಡು ಬಂತು. ಈ ಗಡ್ಡೆಯೇ ಈ ಸಮಸ್ಯೆಗೆಲ್ಲ ಕಾರಣ ಎಂದು ವೈದ್ಯರು ಹೇಳಿದರು. ಹೀಗಾಗಿ ಸಂಗೀತಾ ಭಟ್ ಅವರು ‘ಹಿಸ್ಟ್ರೋಸ್ಟೋಫಿಕ್ ಪಾಲಿಪೆಕ್ಟ್ರೊಮಿ’ ಹೆಸರಿನ ಶಸ್ತ್ರಚಿಕಿತ್ಸೆಗೆ ಒಳಗಾದರು.

‘ಈ ಆಪರೇಷನ್ ಮಾಡಿದ ಬಳಿಕ ಇಷ್ಟೇ ದಿನಕ್ಕೆ ರಿಕವರಿ ಆಗುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ಈ ಗಡ್ಡೆ ಒಮ್ಮೆ ಆಪರೇಷನ್ ಮಾಡಿಸಿದ ಬಳಿಕ ಮತ್ತೆ ಬರಬಹುದು. ಜೀವನ ಪೂರ್ತಿ ಈ ಸಮಸ್ಯೆ ಜೊತೆ  ಬದುಕಬೇಕಾಗಿ ಬರಬಹುದು’ ಎಂದು ಸಂಗೀತಾ ಭಟ್ ಹೇಳುತ್ತಾರೆ.  ಋತುಚಕ್ರದಲ್ಲಿ ವ್ಯತ್ಯಯ ಉಂಟಾಗಬಹುದು. ಮುಟ್ಟಿನ ಸಮಯದಲ್ಲಿ ಅತೀವ ನೋವು ಕಾಣಿಸಿಕೊಳ್ಳುತ್ತದೆಯಂತೆ. ದೇಹದ ತೂಕ ಹೆಚ್ಚೋದು, ತಲೆಕೂದಲು ಉದುರೋ ಸಮಸ್ಯೆ ಕಾಣಿಸುತ್ತದೆಯಂತೆ.

ಇದನ್ನೂ ಓದಿ
‘ಮಿಸ್ ಮಾಡಿಕೊಳ್ತೀನಿ’; ಮನೆಯಿಂದ ಹೊರಟಿದ್ದ ರಾಶಿಕಾನ ತಬ್ಬಿ ಹೇಳಿದ ಸೂರಜ್
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’; ಬದಲಾದ ಅಶ್ವಿನಿ ಗೌಡ
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಮಾಯಕಾರನಾಗಲು ಬೇಕಾಯ್ತು 6 ಗಂಟೆ
4ನೇ ಭಾನುವಾರವೂ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಡಬಲ್ ಡಿಜಿಟ್ ಕಲೆಕ್ಷನ್

‘ಕೆಲವು ಮಹಿಳೆಯರಿಗೆ ಹಲವು ತಿಂಗಳು ಮುಟ್ಟು ಆಗುವುದೇ ಇಲ್ಲ. ಇನ್ನೂ ಕೆಲವರಿಗೆ ತಿಂಗಳಿಗೆ ಹಲವು ಬಾರಿ ಆಗಬಹುದು. ಋತುಚಕ್ರ ಉಂಟಾದಾಗ ಸಾಕಷ್ಟು ನೋವು ಕಾಣಿಸಿಕೊಳ್ಳಬಹುದು. ಇದನ್ನು ಅನೇಕರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಅದು ಸರಿ ಅಲ್ಲ. ನಾವು ತಿನ್ನುವ ಆಹಾರದಲ್ಲಿ ಸಾಕಷ್ಟು ವಿಷಕಾರಿ ಅಂಶಗಳಿರುತ್ತವೆ. ಇದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಆಗಬಹುದು’ ಎನ್ನುತ್ತಾರೆ ಸಂಗೀತಾ ಭಟ್. ಅಂದಹಾಗೆ, ಈ ಸಮಸ್ಯೆ ಬರಲು ನಿಜವಾದ ಕಾರಣ ಏನು ಎಂದು ಹೇಳಲು ಸಾಧ್ಯವಿಲ್ಲವಂತೆ. ಭಾರತದಲ್ಲಿ 10 ಮಹಿಳೆಯರ ಪೈಕಿ ಒಬ್ಬರಿಗೆ ಈ ಸಮಸ್ಯೆ ಇದೆಯಂತೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ನಟಿ ಸಂಗೀತಾ ಭಟ್, ಮಹಿಳೆಯರಿಗೆ ನೀಡಿದ್ದಾರೆ ಮುಖ್ಯ ಸಂದೇಶ

ಸಂಗೀತಾ ಭಟ್​ ನಟನೆಯ ‘ಕಮಲ್ ಶ್ರೀದೇವಿ’ ಹೆಸರಿನ ಸಿನಿಮಾ ಸೆಪ್ಟೆಂಬರ್ 19ರಂದು ರಿಲೀಸ್ ಆಯಿತು. ಈ ಸಿನಿಮಾ ರಿಲೀಸ್ ಕಾರಣಕ್ಕೆ ಅವರು ಆಪರೇಷನ್ ಮುಂದಕ್ಕೆ ಹಾಕಿಕೊಂಡರು. ಆದರೆ, ಆಪರೇಷನ್ ಮಾಡಿಸದೇ ಬೇರೆ ದಾರಿ ಇರಲಿಲ್ಲ. ಶಸ್ತ್ರಚಿಕಿತ್ಸೆ ಎಂದಾಗ ಅವರಿಗೆ ಭಯ ಆಯಿತು. ಆದರೂ ಪತಿ ಸುದರ್ಶನ್ ಕೊಟ್ಟ ಧೈರ್ಯದಿಂದ ಸಂಗೀತಾ ಆಪರೇಷನ್ ಮಾಡಿಸಿಕೊಂಡರು. ವಿಶೇಷ ಎಂದರೆ ಇಲ್ಲಿ ಹೊಟ್ಟೆ ಕೊಯ್ದು ಆಪರೇಷನ್ ಮಾಡೋದಿಲ್ಲ. ಬದಲಿಗೆ ಒಂದು ಸಣ್ಣ ಮಿಶನ್​ ಅನ್ನು ದೇಹದ ಒಳಗೆ ಕಳುಹಿಸಿ ಈ ಆಪರೇಷನ್ ಮಾಡಲಾಗುತ್ತದೆ.

‘ಎಷ್ಟೋ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿರಬಹುದು. ಹೀಗಾಗಿ ಅದನ್ನು ನಿರ್ಲಕ್ಷಿಸಬಾರದು. ಮುಂದೊಮ್ಮೆ ಇದು ಕ್ಯಾನ್ಸರ್ ಆಗಿಯೂ ಬದಲಾಗುವ ಸಾಧ್ಯತೆ ಇರುತ್ತದೆ. ಗರ್ಭಕೋಶ ಲೈನ್​ಅಲ್ಲೇ ಬೆಳೆಯುವುದರಿಂದ ಮುಂದೆ ಪ್ರೆಗ್ನೆನ್ಸಿಗೂ ಸಮಸ್ಯೆ ಉಂಟು ಮಾಡಬುದು’ ಎಂದು ಸಂಗೀತಾ ಭಟ್ ಜಾಗೃತಿ ಮೂಡಿಸೋ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:07 pm, Mon, 27 October 25