ನಿರ್ದೇಶಕನಾದ ಹಿರಿಯ ನಟ ಮೂಗು ಸುರೇಶ್; ‘ಕ್ಷಮೆಯಿರಲಿ ತಂದೆ’ ಬಿಡುಗಡೆಗೆ ಸಿದ್ಧ
ಖ್ಯಾತ ನಟ ಮೂಗು ಸುರೇಶ್ ಅವರ ನಿರ್ದೇಶನ ಮತ್ತು ನಿರ್ಮಾಣದಲ್ಲಿ ‘ಕ್ಷಮೆಯಿರಲಿ ತಂದೆ’ ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ಮಂಜುನಾಥ್ ಹೆಗ್ಡೆ, ರೇಣುಕಾಬಾಲಿ, ವಿನ್ಯಾ ಶೆಟ್ಟಿ, ಶ್ರೀಮಂತ ಜೊತೆ ಮೂಗು ಸುರೇಶ್ ಕೂಡ ನಟಿಸಿದ್ದಾರೆ. ಜೂನ್ 12ರಂದು ಈ ಚಿತ್ರ ರಿಲೀಸ್ ಆಗಲಿದೆ.

ಹಿರಿಯ ನಟ ಮೂಗು ಸುರೇಶ್ (ಎಂ.ಎನ್. ಸುರೇಶ್) ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ (Kannada Film Industry) ಸಕ್ರಿಯರಾಗಿದ್ದಾರೆ. ಹಾಸ್ಯನಟನಾಗಿ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಷ್ಟು ವರ್ಷಗಳ ಅನುಭವದಿಂದ ಅವರು ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ಅವರು ನಿರ್ದೇಶಕನಾಗಿ, ನಿರ್ಮಾಪಕನಾಗಿ ಬಡ್ತಿ ಪಡೆದಿದ್ದಾರೆ. ‘ಕ್ಷಮೆಯಿರಲಿ ತಂದೆ’ ಸಿನಿಮಾಗೆ ಮೂಗು ಸುರೇಶ್ (Moogu Suresh) ಅವರು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ.
ಎಂ.ಎನ್. ಸುರೇಶ್ ಅವರು ರಂಗಭೂಮಿ, ಕಿರುತೆರೆ, ಹಿರಿತೆರೆ ಕಲಾವಿದರಾಗಿ ಕಳೆದ ಮೂರು ದಶಕಗಳಿಂದ ಜನಪ್ರಿಯರಾಗಿದ್ದಾರೆ. ‘ಕ್ಷಮೆಯಿರಲಿ ತಂದೆ’ ಸಿನಿಮಾಗೆ ಅವರು ಈಗಾಗಲೇ ಶೂಟಿಂಗ್ ಮುಗಿಸಿದ್ದಾರೆ. ಜೂನ್ 12ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಮೋಷನ್ ಪೋಸ್ಟರ್ ಹಾಗೂ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಯಿತು.
ಚಂದನವನದ ಹೆಸರಾಂತ ನಿರ್ದೇಶಕರಾದ ಟಿ.ಎಸ್. ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ಮೇಕಪ್ ರಾಮಕೃಷ್ಣ ಅವರು ‘ಕ್ಷಮೆಯಿರಲಿ ತಂದೆ’ ಚಿತ್ರದ ಸುದ್ದಿಗೋಷ್ಠಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೋಷನ್ ಪೋಸ್ಟರ್, ಲಿರಿಕಲ್ ವಿಡಿಯೋ ಅನಾವರಣ ಮಾಡಿದರು. ಟ್ರೇಲರ್ ನೋಡಿದ ಅವರು ಸಿನಿಮಾಗೆ ಶುಭ ಹಾರೈಸಿದರು.
‘ಕ್ಷಮೆಯಿರಲಿ ತಂದೆ’ ಸಿನಿಮಾದ ಪೋಷನ್ ಪೋಸ್ಟರ್:
ಎಂ.ಎನ್. ಸುರೇಶ್ ಅವರು ನಿರ್ಮಾಪಕನಾಗಿ ಹಾಗೂ ನಿರ್ದೇಶಕರಾಗಿ ಗೆಲುವು ಪಡೆಯಲಿ ಎಂದು ಎಲ್ಲರೂ ಹಾರೈಸಿದರು. ಈ ವೇಳೆ ಸುರೇಶ್ ಅವರು ಮಾತನಾಡಿದರು. ‘ನಾನು ಕೆಲವು ಸಿನಿಮಾಗಳಿಗೆ ಸಹ-ನಿರ್ಮಾಪಕನಾಗಿದ್ದೆ. ಪೂರ್ಣಪ್ರಮಾಣದ ನಿರ್ಮಾಪಕನಾಗಿರುವುದು ಈ ಸಿನಿಮಾದಿಂದ. ನಾನು ನಿರ್ದೇಶನ ಮಾಡಬೇಕೆಂದುಕೊಂಡಿರಲಿಲ್ಲ. ನನ್ನ ಕಾರ್ಯವೈಖರಿಯನ್ನು ಹತ್ತಿರದಿಂದ ಬಲ್ಲ ಸ್ನೇಹಿತರು ನೀವೇ ನಿರ್ದೇಶನ ಮಾಡಿ ಅಂತ ಹೇಳಿದರು’ ಎಂದಿದ್ದಾರೆ ಸುರೇಶ್.
ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೇರಿದ ಸೆಲೆಬ್ರಿಟಿಗಳು
‘ಇದು ನನ್ನ ಮೊದಲ ನಿರ್ದೇಶನದ ಸಿನಿಮಾ ಆದ್ದರಿಂದ ಬೇರೆಯವರು ದುಡ್ಡು ಹಾಕುವುದು ಬೇಡ ಅಂತ ನಾನು ಕೂಡಿಟ್ಟಿದ್ದ ಹಣವನ್ನೇ ಈ ಸಿನಿಮಾಗೆ ಹಾಕಿ ನಿರ್ಮಾಣ ಮಾಡಿದ್ದೇನೆ. ಇದಕ್ಕೆ ನನ್ನ ಕುಟುಂಬದ ಸಹಕಾರವೂ ಇದೆ. ಶೀರ್ಷಿಕೆಯೇ ತಿಳಿಸುವಂತೆ ಇದೊಂದು ತಂದೆ-ಮಗನ ಬಾಂಧವ್ಯದ ಸಿನಿಮಾ. ಹರೀಶ್ ಅವರು ಕಥೆ ಬರೆದಿದ್ದಾರೆ’ ಎಂದು ಎಂ.ಎನ್. ಸುರೇಶ್ ಅವರು ಮಾಹಿತಿ ನೀಡಿದರು. ಸೂರ್ಯಕಾಂತ್ ಅವರ ಛಾಯಾಗ್ರಹಣ, ಮುತ್ತುರಾಜ್ ಅವರ ಸಂಕಲನ, ಪುಣ್ಯೇಶ್ ಕುಮಾರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





