ರಾಜ್ಯಕ್ಕೆ ಶಿವರಾಜ್ ಕುಮಾರ್ ಕೊಡುಗೆ ಏನು ಎಂದ ಸಂಬರ್ಗಿ, ಸಮಾಧಾನದ ಉತ್ತರ ಕೊಟ್ಟ ಶಿವಣ್ಣ

|

Updated on: May 07, 2023 | 8:27 PM

Prashanth Sambargi: ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿರುವ ಶಿವರಾಜ್ ಕುಮಾರ್ ಅವರನ್ನು ಪ್ರಶಾಂತ್ ಸಂಬರ್ಗಿ ಟೀಕಿಸಿದ್ದು, ಈ ಬಗ್ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯಕ್ಕೆ ಶಿವರಾಜ್ ಕುಮಾರ್ ಕೊಡುಗೆ ಏನು ಎಂದ ಸಂಬರ್ಗಿ, ಸಮಾಧಾನದ ಉತ್ತರ ಕೊಟ್ಟ ಶಿವಣ್ಣ
ಶಿವಣ್ಣ- ಸಂಬರ್ಗಿ
Follow us on

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election 2023) ಸಿನಿಮಾ ನಟ-ನಟಿಯರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಕನ್ನಡದ ಕೆಲವು ಸ್ಟಾರ್ ನಟರುಗಳು ತಮ್ಮಿಚ್ಛೆಯ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಕೆಲವು ರಾಜಕೀಯ ಪಕ್ಷದ ಕುರುಡು ಬೆಂಬಲಿಗರು, ತಮ್ಮ ವಿಪಕ್ಷದ ಪರವಾಗಿ ಚುನಾವಣೆ ಪ್ರಚಾರ ಮಾಡುತ್ತಿರುವ ನಟರನ್ನು ಟೀಕಿಸುವುದರಲ್ಲಿ ನಿತರಾಗಿದ್ದಾರೆ. ಇಂಥಹವರಲ್ಲಿ ಮಾಜಿ ಬಿಗ್​ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ (Prashanth Sambaragi) ಸಹ ಒಬ್ಬರು.

ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ನಟ ಶಿವರಾಜ್ ಕುಮಾರ್ (Shiva Rajkumar) ಅವರನ್ನು ಹೀಗಳೆಯುವಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿದ್ದ ಪ್ರಶಾಂತ್ ಸಂಬರ್ಗಿ, ಶಿವಣ್ಣನ ಅಭಿಮಾನಿಗಳಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೆ ಅದನ್ನು ಡಿಲೀಟ್ ಮಾಡಿದ್ದರು. ಅದಾದ ಬಳಿಕ ಮತ್ತೆ ಶಿವರಾಜ್ ಕುಮಾರ್ ಅವರನ್ನು, ರಾಜ್ಯಕ್ಕೆ ಅವರ ಕೊಡುಗೆಗಳನ್ನು ಪ್ರಶ್ನೆ ಮಾಡುವ ಪೋಸ್ಟ್ ಒಂದನ್ನು ಹಂಚಿಕೊಂಡರು.

‘ದಿ ಕಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಸಿನಿಮಾಗಳ ನಿಷೇಧಕ್ಕೆ ಕಾಂಗ್ರೆಸ್ ಯತ್ನಿಸಿದ್ದು ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈ ರಾಜ್ಯಕ್ಕೆ ನಿಮ್ಮ ಕೊಡುಗೆ ಏನು? ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರ ಮತ್ತು ಆದಾಯ ತೆರಿಗೆ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು? 2020 ರಲ್ಲಿ ಸ್ಯಾಂಡಲ್ ಹುಡ್ ಡ್ರಗ್ ವಿಷಯದಲ್ಲಿ ನೀವು ಏಕೆ ಮೌನವಾಗಿದ್ದಿರಿ? ಕರ್ನಾಟಕವನ್ನು ಮಾದಕ ಮುಕ್ತ ಮಾಡಲು ನಮ್ಮ ಯುವ ಜನರಿಗೆ ತಮ್ಮ ಸಂದೇಶವೇನು? ಹೀಗೆ ಸುಮಾರು ಹತ್ತು ಪ್ರಶ್ನೆಗಳನ್ನು ಸಂಬರ್ಗಿ, ಶಿವಣ್ಣನಿಗೆ ಕೇಳಿದ್ದಾರೆ.

ಸಾಮಾನ್ಯವಾಗಿ ಯಾರ ಬಗ್ಗೆಯೂ ಋಣಾತ್ಮಕವಾಗಿ ಮಾತನಾಡದ ಶಿವರಾಜ್ ಕುಮಾರ್, ಸಂಬರ್ಗಿಯ ಏಕಪಕ್ಷೀಯ ಹೇಳಿಕೆಗಳ ಬಗ್ಗೆಯೂ ಸಮಾಧಾನಕರ ಉತ್ತರವನ್ನೇ ನೀಡಿದ್ದಾರೆ. ಬೀದರ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್ ಕುಮಾರ್, ”ಪ್ರಶಾಂತ್ ಸಂಬರ್ಗಿ ಹೇಳಿಕೆಗೆ ಪುಲ್ ಸ್ಟಾಪ್ ಹಾಕಬೇಕು. ಅದೆಲ್ಲ ಅವಶ್ಯಕತೆ ಇಲ್ಲ. ದೇಶದಲ್ಲಿ ಸಾವಿರ ಜನ ಸಾವಿರ ಮಾತನಾಡುತ್ತಾರೆ, ಅದನ್ನೆಲ್ಲ ಕೇರ್ ಮಾಡಿ ಬದುಕೊಕ್ಕಾಗಲ್ಲ.
ಮನುಷ್ಯನ ಆತ್ಮಕ್ಕೆ ಏನು ಅನುಸುತ್ತೆ ಅದನ್ನ ಮಾಡಕೊಂಡು ಇದ್ದರೇನೆ ಮನುಷ್ಯ ಅನ್ನೊದು, ಸಂಬರ್ಗಿ ಹೇಳಿಕೆಯಿಂದ ನನಗೆ ನನ್ನ ಅಭಿಮಾನಿಗಳಿಗೆ ಯಾವುದೆ ರೀತಿ ಹರ್ಟ್ ಆಗಿಲ್ಲ, ಇಂತಹ ಹೇಳಿಕೆಗಳಿಗೆ ಕೇರ್ ಮಾಡೊಕ್ಕೆ ಹೋಗಬೇಡಿ. ಬೇರೆದವರ ಹೇಳಿಕೆಗೆ ನಾನು ಮಾತನಾಡಲ್ಲ, ನಿಮ್ಮನ್ನು ಚೆನ್ನಾಗಿ ನೊಡಿಕೊಳ್ಳುವ ವ್ಯಕ್ತಿಯನ್ನು ಆಯ್ಕೆ ಮಾಡಿ, ಒಳ್ಳೆ ಮನುಷ್ಯರನ್ನು ಗೆಲ್ಲಿಸಿ” ಎಂದು ಅಭಿಮಾನಿಗಳಿಗೆ ಶಿವಣ್ಣ ಕಿವಿ ಮಾತು ಹೇಳಿದ್ದಾರೆ.

ಶಿವಣ್ಣನ ಚುನಾವಣಾ ಪ್ರಚಾರದ ಬಗ್ಗೆ ಪೋಸ್ಟ್ ಮಾಡಿರುವ ಪ್ರಶಾಂತ್ ಸಂಬರ್ಗಿ, ”ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೆ ಇಲ್ಲ ಪೇಮೆಂಟ್ ಅಷ್ಟೆ ಮುಖ್ಯ. ಒಪ್ಪಿಕೊಂಡ ಪಾತ್ರ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ ಅವರು ಕೇಳೊಲ್ಲ. ಮತ್ತೆ ಪೇಮೆಂಟ್ ತಗೋಂದು ಇನ್ನೊಂದು ಸಿನಿಮಾ ಸೈನ್ ಮಾಡ್ತಾರೆ. ರಾಜಕೀಯದಲ್ಲೂ ಅದೇ ಸೂತ್ರ ಬಳಸುತ್ತಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು, ಎಲ್ಲಾ ಒಂದೇ, ಪ್ಯಾಕೆಟ್ ಬಂತಾ? ಸರಿ ಆಲ್​ರೈಟ್ ಮುಂದಕ್ಕೆ ಹೋಗೋಣ” ಎಂಬ ಕೀಳು ಅಭಿರುಚಿಯ ಪೋಸ್ಟ್ ಅನ್ನು ಪ್ರಶಾಂತ್ ಸಂಬರ್ಗಿ ಹಂಚಿಕೊಂಡಿದ್ದರು. ಇದೇ ಪೋಸ್ಟ್​ನಲ್ಲಿ ಅವಾಚ್ಯ ಅರ್ಥ ಹೊಮ್ಮುವ ಪದದ ಬಳಕೆಯನ್ನೂ ಮಾಡಿದ್ದರು. ಸಂಬರ್ಗಿಯ ಈ ಪೋಸ್ಟ್​ಗೆ ಶಿವಣ್ಣ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ ಬಳಿಕ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:26 pm, Sun, 7 May 23