Puneeth Rajkumar: ನನ್ನ ಮಗುವನ್ನೇ ಕಳೆದುಕೊಂಡಂತೆ ಅನ್ನಿಸುತ್ತಿದೆ; ಕಂಬನಿ ಮಿಡಿದ ಶಿವರಾಜ್ ಕುಮಾರ್

| Updated By: shivaprasad.hs

Updated on: Oct 31, 2021 | 10:38 AM

Shiva Rajkumar: ನಟ ಶಿವರಾಜ್ ಕುಮಾರ್ ಪುನೀತ್ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸಹಕಾರ ಕೋರಿದ ಅಭಿಮಾನಿಗಳು, ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆ ಅವರು ಪುನೀತ್ ನಿಧನ ತನ್ನ ಮಗುವನ್ನೇ ಕಳೆದುಕೊಂಡಂತೆ ಎನಿಸುತ್ತಿದೆ ಎಂದು ಕಂಬನಿ ಮಿಡಿದಿದ್ದಾರೆ.

Puneeth Rajkumar: ನನ್ನ ಮಗುವನ್ನೇ ಕಳೆದುಕೊಂಡಂತೆ ಅನ್ನಿಸುತ್ತಿದೆ; ಕಂಬನಿ ಮಿಡಿದ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Follow us on

ಸದಾ ಶಿವನಗರದ ನಿವಾಸದ ಬಳಿ ಡಾ.ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದು, ಪುನೀತ್ ನಿಧನದಿಂದ ಉಂಟಾಗಿರುವ ದುಃಖವನ್ನು ಹಂಚಿಕೊಂಡಿದ್ದಾರೆ. ‘‘ಅಪ್ಪು ಇಲ್ಲ ಎನ್ನುವುದಕ್ಕೆ ತುಂಬಾ ಕಷ್ಟ ಆಗುತ್ತದೆ. ಆತ ವಯಸ್ಸಿನಲ್ಲಿ ಚಿಕ್ಕವನು, ವಯಸ್ಸು ಕಡಿಮೆ. ಅಷ್ಟು ಬೇಗ ಭಗವಂತನಿಗೆ ಇಷ್ಟ ಆಗಿ ಬಿಟ್ಟ. ಆದರೆ ಇದು ನಮಗೆ ನೋವು ಕೊಡುತ್ತೆ. ಅಭಿಮಾನಿ ದೇವರುಗಳಿಗೆ ನೋವು ಕೊಡುತ್ತೆ. ಫ್ಯಾಮಿಲಿಗಳು ಮಕ್ಕಳ ಜೊತೆ ಬಂದಾಗ ಅವರ ದುಖಃ ನೋಡಿ ನಮಗೆ ನೋವಾಯ್ತು. ಅವಸರವಾಗಿ ಕರೆದುಕೊಂಡು ಬಿಟ್ಟ ಅದನ್ನು ಅರಗಿಸಿಕೊಳ್ಳೋದು ಕಷ್ಟ. ಊರಿಗೆ ಹೋಗಿದ್ದಾನೆ ಬರಬಹುದು ಅನಿಸುತ್ತೆ. ನಾನು ಅವನಿಗಿಂತ 13 ವರ್ಷ ದೊಡ್ಡವನು. ನನ್ನ ಮಗುವನ್ನು ಕಳೆದುಕೊಂಡಂತೆ ಆಗುತ್ತಿದೆ’’ ಎಂದು ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಏನೇ ಆದರೂ ಮುಂದಿನ ಜೀವನ ಸಾಗಬೇಕು ಎಂದು ಶಿವಣ್ಣ ನುಡಿದಿದ್ದಾರೆ. ‘‘ಜೀವನ ಸಾಗಬೇಕು, ಫ್ಯಾಮಿಲಿ ಇದೆ. ನಾವು ಅವರ ಜೊತೆ ಇದ್ದೇವೆ ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಅಪ್ಪು ಆಸೆ ಆಕಾಂಕ್ಷೆ ನೆರವೇರಿಸಲು ಪ್ರಯತ್ನಿಸುತ್ತೇವೆ’’ ಎಂದು ನುಡಿದಿದ್ದಾರೆ. ಸರ್ಕಾರದ ವ್ಯವ್ಥಸ್ಥೆಗೆ ಕೃತಜ್ಞತೆ ಸೂಚಿಸಿದ ಶಿವಣ್ಣ, ‘‘ ವ್ಯವಸ್ಥಿತವಾಗಿ ಅಂತಿಮದರ್ಶನ ಹಾಗೂ ಅಂತ್ಯಕ್ರಿಯೆಗೆ ಸಹಕರಿಸಿದ ಸರ್ಕಾರ, ಪೊಲೀಸರು, ಅಧಿಕಾರಿಗಳಿಗೆ ಕೃತಜ್ಞತೆಗಳು. ತುಂಬಾ ಚೆನ್ನಾಗಿ ಯಾರಿಗೂ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಿದರು. ಬೊಮ್ಮಾಯಿ ಅವರಿಗೆ ವಿಶೇಷ ಧನ್ಯವಾದಗಳು. ನಮ್ಮ ಕುಟುಂಬದ ಮೇಲೆ ಇಷ್ಟೊಂದು ಪ್ರೀತಿ, ವಿಶ್ವಾಸವಿಟ್ಟಿದ್ದೀರಾ. ಅಪ್ಪಾಜಿದು ಅಂತ್ಯಕ್ರಿಯೆ ತುಂಬಾ ಕಷ್ಟ ಆಗಿತ್ತು. ಈ ವಿಚಾರವಾಗಿ ಇಡೀ ಸರ್ಕಾರಕ್ಕೆ ಧನ್ಯವಾದಗಳು’’ ಎಂದಿದ್ದಾರೆ.

ಅಭಿಮಾನಿಗಳಿಗೆ ಸದ್ಯದಲ್ಲೇ ಪ್ರವೇಶಕ್ಕೆ ಅವಕಾಶ:
ಸ್ಥಳಕ್ಕೆ ನಿರ್ಬಂಧವಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ‘‘ಹಾಲು ತುಪ್ಪ ಆಗುವವರೆಗೂ ಬಿಡಲು ಸಾಧ್ಯವಿಲ್ಲ. ಹಾಲು ತುಪ್ಪ ಆದ ಮೇಲೆ ಸಿಎಂ ಬೊಮ್ಮಾಯಿ ಅವರ ಜೊತೆ ಮಾತನಾಡುತ್ತೇವೆ. ಐದು ದಿನ ಅಲ್ಲ ಬೇಗನೆ ಅವಕಾಶ ಮಾಡಿಕೊಡುತ್ತೇವೆ. ಅಪ್ಪು ನಿಮ್ಮವನು ನೀವು ನೋಡದೆ ಇನ್ನು ಯಾರು ನೋಡುತ್ತಾರೆ. ಈ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟೋಕೆ ಆಗುವುದಿಲ್ಲ. ಇದಕ್ಕೆ ನಾವು ಚಿರ‌ಋಣಿಗಳು. ಅಪ್ಪು‌ ನನ್ನಲ್ಲಿ ಇದ್ದಾನೆ, ರಾಘುವಿನಲ್ಲಿದ್ದಾನೆ, ಚಿತ್ರರಂಗದಲ್ಲಿದ್ದಾನೆ, ನಿರ್ಮಾಪಕರು ಪ್ರತಿಯೊಬ್ಬರಲ್ಲಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ (ಅಭಿಮಾನಿಗಳು) ಹೃದಯದಲ್ಲಿ ಇದ್ದಾನೆ. ನೀವು ಯಾವತ್ತು ಅವನನ್ನು ಮರೆಯುವುದಿಲ್ಲ’’ ಎಂದಿದ್ದಾರೆ.

ನೋವನ್ನು ನುಂಗಿ ಬದುಕಬೇಕು, ದುಡುಕಬೇಡಿ; ಅಭಿಮಾನಿಗಳಿಗೆ ಕಿವಿಮಾತು:
ಅಪ್ಪು ಅಭಿಮಾನಿಗಳ ಆತ್ಮಹತ್ಯೆ ವಿಚಾರಕ್ಕೆ ಶಿವಣ್ಣ, ದಯವಿಟ್ಟು ಆ ರೀತಿ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ಧಾರೆ.
ಅಪ್ಪು ಇದ್ದಿದ್ದರೆ ಇದನ್ನು ಇಷ್ಟಪಡುತ್ತಿರಲಿಲ್ಲ. ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ. ನಿಮ್ಮ ಸಹಾಯ ನಿಮ್ಮ ಕುಟುಂಬಕ್ಕೆ ಬೇಕಾಗಿದೆ. ಖಂಡಿತಾ ನೋವಾಗುತ್ತದೆ, ಆದರೆ ಆ ನೋವನ್ನು ನುಂಗಿ ಬದುಕಬೇಕು. ನಾವು ಸಹಾ ಅದನ್ನೇ ಮಾಡುತ್ತಿದ್ದೇವೆ. ಕುಟುಂಬದ ಜೊತೆ ಇರಬೇಕಾದದ್ದು ನಮ್ಮ ಜವಾಬ್ದಾರಿ. ಬೇರೆ ರೀತಿ ಕೋಪ ತೋರಿಸಬೇಡಿ. ಅಪ್ಪು ಅಪ್ಪಾಜಿ ಸಹಾ ಇದನ್ನೇ ಹೇಳುತ್ತಿದ್ದರು. ಏನೇ ಆದರೂ ಜೀವನ ನಡೆಯಬೇಕು. ಶೋ ಮಸ್ಟ್ ಗೋ ಆನ್’’ ಎಂದು ಶಿವರಾಜ್ ಕುಮಾರ್ ಸದಾಶಿವನಗರ ನಿವಾಸದ ಬಳಿ ನುಡಿದಿದ್ದಾರೆ.

ಇದನ್ನೂ ಓದಿ:

Puneeth Rajkumar: ‘ಡಾ. ರಾಜ್​ ಸಮಾಧಿ ಮಣ್ಣನ್ನು ಫ್ಯಾನ್ಸ್​ ತೋಡಿದ್ದರು; ಅಂಥ ಸ್ಥಿತಿ ಪುನೀತ್​ಗೆ ಬರಬಾರದು’; ರಾಘಣ್ಣ ಮನವಿ

ನಟನೆಯಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ ‘ಕನ್ನಡತಿ’, ಇಲ್ಲಿದೆ ರಂಜಿನಿ ರಾಘವನ್ ಅವರ ಮನದಾಳದ ಮಾತು