ಅಪ್ಪಾಜಿಯೇ ದಾರಿ ಹಾಕಿಕೊಟ್ಟರು, ಎಲ್ಲರೂ ಪಾಲಿಸುತ್ತಿದ್ದಾರೆ: ಶಿವಣ್ಣ
Shiva Rajkumar: ನಟ ಶಿವರಾಜ್ ಕುಮಾರ್ ಇಂದು ಫಿಲಂ ಚೇಂಬರ್ನಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಅವರು ಡಾ ರಾಜ್ಕುಮಾರ್ ಅವರಿಂದಾಗಿ ಶುರುವಾದ ನೇತ್ರದಾನದ ಕ್ರಾಂತಿಯ ಬಗ್ಗೆ ಮಾತನಾಡಿದರು. ಚಿತ್ರರಂಗಕ್ಕೆ ನಾಯಕತ್ವದ ಅವಶ್ಯಕತೆಯ ಬಗ್ಗೆ ಸಹ ಮಾತನಾಡಿದರು. ಫಿಲಂ ಚೇಂಬರ್ನ ಗೊಂದಲದ ಬಗ್ಗೆಯೂ ಈ ವೇಳೆ ಅವರು ಮಾತನಾಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲಂ ಚೇಂಬರ್)ನಲ್ಲಿ ಇಂದು (ಏಪ್ರಿಲ್ 27) ರಂದು ಚಿತ್ರರಂಗದವರಿಗೆ ಆರೋಗ್ಯ ತಪಾಸಣೆ ಇರಿಸಲಾಗಿತ್ತು. ನಟ ಶಿವರಾಜ್ ಕುಮಾರ್ (Shiva Rajkumar) ಸೇರಿದಂತೆ ಹಲವು ಪ್ರಮುಖ ಕಲಾವಿದರು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, ಫಿಲಂ ಚೇಂಬರ್ ಆಯೋಜನೆ ಮಾಡಿರುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸುದ್ದಿಗಾರರೊಟ್ಟಿಗೆ ಮಾತನಾಡಿದ ಶಿವಣ್ಣ, ನೇತ್ರದಾನದ ಬಗ್ಗೆ ಮಾತನಾಡುತ್ತಾ, ಅಪ್ಪಾಜಿ ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಸಾಗುತ್ತಿದ್ದೇವೆ ಎಂದರು.
ನೇತ್ರದಾನದ ಕ್ರಾಂತಿಯನ್ನು ಪ್ರಾರಂಭವಾದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ‘ನಮ್ಮ ಕಣ್ಣುಗಳನ್ನು ದಾನ ಮಾಡುವುದರಿಂದ ಹಲವಾರು ಜನರಿಗೆ ದೃಷ್ಟಿ ಕೊಡಬಹುದು ಎಂದು ವೈದ್ಯರು ಹೇಳಿದಾಗ ಅಪ್ಪಾಜಿಯವರು ಖುಷಿಯಿಂದ ನೇತ್ರದಾನ ಮಾಡಿದರು. ಮಾತ್ರವಲ್ಲದೆ ಕಡ್ಡಾಯವಾಗಿ ತಮ್ಮ ಕಣ್ಣುಗಳನ್ನು ದಾನ ಮಾಡಬೇಕೆಂದು ಮೊದಲೇ ತಿಳಿಸಿದ್ದರು. ಅದರಂತೆ ಅಪ್ಪಾಜಿಯವರು ನಿಧನರಾದ ದಿನ ರಾಘವೇಂದ್ರ ರಾಜ್ಕುಮಾರ್ ಅವರು ನೆನಪು ಮಾಡಿಕೊಂಡು ವೈದ್ಯರನ್ನು ಕರೆಸಿ ನೇತ್ರದಾನ ಪ್ರಕ್ರಿಯೆ ಪೂರ್ಣಗೊಳಿಸಿದರು’ ಎಂದು ನೆನಪು ಮಾಡಿಕೊಂಡರು.
ಅಣ್ಣಾವ್ರು ನೇತ್ರದಾನ ಮಾಡಿದ್ದಕ್ಕಾಗಿ ಅವರನ್ನು ಅನುಸರಿಸಿ ಕೋಟ್ಯಂತರ ಜನ ನೇತ್ರದಾನ ಮಾಡಿದರು. ನಮ್ಮ ಕುಟುಂಬದವರು ಸಹ ತಪ್ಪದೆ ನೇತ್ರದಾನ ಮಾಡುತ್ತೇವೆ. ಕೇವಲ ದಾನ ಮಾಡಿಬಿಡುವುದು ಮಾತ್ರವೇ ಅಲ್ಲ, ಆ ದಿನ ಬಂದಾಗ ಸಂಬಂಧಿಸಿದವರಿಗೆ ಮಾಹಿತಿ ನೀಡಿ ಕಣ್ಣುದಾನ ಪ್ರಕ್ರಿಯೆ ಪೂರ್ಣ ಆಗುವಂತೆ ನೋಡಿಕೊಳ್ಳಬೇಕು’ ಎಂದು ಸಹ ಅವರು ಹೇಳಿದರು.
ಇದನ್ನೂ ಓದಿ:ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ
ಚಿತ್ರರಂಗಕ್ಕೆ ನಾಯಕನ ಕೊರತೆ ಇದೆ ಎಂಬ ಪತ್ರಕರ್ತರ ಮಾತಿಗೆ ಉತ್ತರಿಸಿದ ಶಿವಣ್ಣ, ‘ಯಾರೋ ಒಬ್ಬರಿಂದ ಚಿತ್ರರಂಗ ನಡೆಯುವುದಲ್ಲ. ಸಾಮೂಹಿಕ ನಾಯಕತ್ವ ಈಗಿನ ಅಗತ್ಯತೆ. ಎಲ್ಲರೂ ಸೇರಿ ಚಿತ್ರರಂಗವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಈಗ ಚಿತ್ರರಂಗದ ಪರಿಸ್ಥಿತಿ ಉತ್ತಮವಾಗಿದೆ. ಆದರೆ ಅದನ್ನು ಉಳಿಸಿಕೊಂಡು ಹೋಗಬೇಕಿದೆ’ ಎಂದರು.
ಬೇರೆ ಬೇರೆ ಫಿಲಂ ಚೇಂಬರ್ಗಳು ಸೃಷ್ಟಿಯಾಗುತ್ತಿರುವ ಬಗ್ಗೆ ಮಾತನಾಡಿದ ಶಿವಣ್ಣ, ‘ನನಗೆ ಗೊತ್ತಿರುವುದು ಒಂದೇ ಫಿಲಂ ಚೇಂಬರ್ ಅದು ಈ ಫಿಲಂ ಚೇಂಬರ್, ನನಗೆ ಬೇರೆ ಫಿಲಂ ಚೇಂಬರ್ಗಳ ಬಗ್ಗೆ ಗೊತ್ತಿಲ್ಲ. ಸುಮ್ಮನೆ ಗೊಂದಲ ಉಂಟು ಮಾಡುವ ಪ್ರಯತ್ನ ಬೇಡ. ಎಲ್ಲರೂ ಒಂದಾಗಿ ಸಾಗಬೇಕಿದೆ ಆಗ ಮಾತ್ರ ಚಿತ್ರರಂಗ ಉಳಿಯಲಿದೆ’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ