ಮಹಿಳೆಯರಿಗೆ ಗೌರವ ಕೊಡೋದು ದರ್ಶನ್ ಅಭಿಮಾನಿಗಳಿಗೆ ಗೊತ್ತು: ವಿಜಯಲಕ್ಷ್ಮಿ

‘ದಿ ಡೆವಿಲ್’ ಸಿನಿಮಾದ ನಟಿ ರಚನಾ ರೈ ಅವರು ವಿಜಯಲಕ್ಷ್ಮಿ ದರ್ಶನ್ ಅವರ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಕೆಲವು ಪ್ರಮುಖ ಪ್ರಶ್ನೆಗಳಿಗೆ ವಿಜಯಲಕ್ಷ್ಮಿ ದರ್ಶನ್ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಅಭಿಮಾನಿಗಳ ಬಗ್ಗೆ ಎದುರಾದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ಸಂದರ್ಶನದ ಪ್ರೋಮೋ ಬಹಳ ವೈರಲ್ ಆಗಿದೆ.

ಮಹಿಳೆಯರಿಗೆ ಗೌರವ ಕೊಡೋದು ದರ್ಶನ್ ಅಭಿಮಾನಿಗಳಿಗೆ ಗೊತ್ತು: ವಿಜಯಲಕ್ಷ್ಮಿ
Vijayalakshmi Darshan

Updated on: Dec 14, 2025 | 8:18 AM

ನಟ ದರ್ಶನ್ (Darshan) ಅವರು ಈಗ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪ್ರಮುಖ ಆರೋಪಿ ಆಗಿದ್ದಾರೆ. ಅವರು ಜೈಲಿನಲ್ಲಿ ಇರುವಾಗಲೇ ‘ದಿ ಡೆವಿಲ್’ (The Devil) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಅಭಿಮಾನಿಗಳೇ ಪ್ರಚಾರ ಮಾಡಿದ್ದಾರೆ. ದರ್ಶನ್ ಕುಟುಂಬದ ಸದಸ್ಯರು ಕೂಡ ಸಿನಿಮಾದ ಕೆಲಸ ಪೂರ್ಣಗೊಳ್ಳುವಲ್ಲಿ ಶ್ರಮಿಸಿದ್ದಾರೆ. ಇಷ್ಟು ದಿನಗಳ ಕಾಲ ಬಹುತೇಕ ಮೌನವಾಗಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಈಗ ಮೌನ ಮುರಿದಿದ್ದಾರೆ. ಇದೇ ಮೊದಲ ಬಾರಿಗೆ ಅವರು ದೀರ್ಘ ಸಂದರ್ಶನ (Vijayalakshmi Darshan Interview) ನೀಡಿದ್ದಾರೆ.

ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್​​ಗೆ ವಿಜಯಲಕ್ಷ್ಮಿ ದರ್ಶನ್ ಅವರು ಸಂದರ್ಶನ ನೀಡಿದ್ದಾರೆ. ನಟಿ ರಚನಾ ರೈ ಅವರು ಈ ಸಂದರ್ಶನ ಮಾಡಿದ್ದಾರೆ. ಇದರಲ್ಲಿ ಹಲವು ವಿಷಯಗಳ ಬಗ್ಗೆ ಅವರು ಮೌನ ಮುರಿದಿದ್ದಾರೆ. ದರ್ಶನ್ ಬದುಕಿನಲ್ಲಿ ಆದ ಕಹಿ ಘಟನೆಗಳ ಬಗ್ಗೆಯೂ ವಿಜಯಲಕ್ಷ್ಮಿ ಮಾತನಾಡಿದ್ದಾರೆ. ಅಲ್ಲದೇ, ದರ್ಶನ್ ಅಭಿಮಾನಿಗಳ ಕುರಿತು ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಸಂದರ್ಶನದ ಪ್ರೋಮೋ ಹಂಚಿಕೊಳ್ಳಲಾಗಿದೆ. ಸದ್ಯದಲ್ಲೇ ಪೂರ್ತಿ ಸಂದರ್ಶನದ ವಿಡಿಯೋ ಬಿಡುಗಡೆ ಆಗಲಿದೆ. ಕೆಲವು ಮುಖ್ಯವಾದ ಪ್ರಶ್ನೆಗಳಿಗೆ ವಿಜಯಲಕ್ಷ್ಮಿ ದರ್ಶನ್ ಅವರು ನೇರ ಉತ್ತರ ನೀಡಿದ್ದಾರೆ. ‘ದಿ ಡೆವಿಲ್ ಸಿನಿಮಾದ ಯಶಸ್ಸಿನಿಂದ ಬಹಳ ಖುಷಿ ಆಗುತ್ತಿದೆ. ದರ್ಶನ್ ಇಲ್ಲದೇ ಇದ್ದರೂ ಕೂಡ ಅಭಿಮಾನಿಗಳು ಅವರ ಸಿನಿಮಾವನ್ನು ಮತ್ತು ಅವರನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಾರೆ ಎಂಬುದಕ್ಕೆ ಇದು ಒಂದು ಉದಾಹರಣೆ’ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಸಂದರ್ಶನದ ಪ್ರೋಮೋ:

ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗ ದರ್ಶನ್ ಬದುಕಿನಲ್ಲಿ ಒಂದು ಶಾಕಿಂಗ್ ಘಟನೆ ಎದುರಾಯಿತು. ಆ ಬಗ್ಗೆ ಪ್ರತಿಕ್ರಿಯಿಸಿದ ವಿಜಯಲಕ್ಷ್ಮಿ ಅವರು, ‘ಈ ರೀತಿ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ನಾವು ಅದನ್ನು ನಿರೀಕ್ಷಿಸಿರಲಿಲ್ಲ’ ಎಂದಿದ್ದಾರೆ. ‘ಜನರು ನೆಗೆಟಿವ್ ಆಗಿ ಮಾತನಾಡಿದರೆ ನನಗೆ ಪರಿಣಾಮ ಬೀರಲ್ಲ. ಯಾಕೆಂದರೆ ಶೇಕಡ 90ರಷ್ಟು ಜನರು ಪ್ರೀತಿ ತೋರಿಸಿದ್ದಾರೆ. ಅದು ಸಾಕು. ನೆಗೆಟಿವ್ ಕಮೆಂಟ್​​ಗಳನ್ನು ನಾನು ಓದುವುದೇ ಇಲ್ಲ’ ಎಂದಿದ್ದಾರೆ ವಿಜಯಲಕ್ಷ್ಮಿ ದರ್ಶನ್.

ಇದನ್ನೂ ಓದಿ: ‘ದಿ ಡೆವಿಲ್’ ನೋಡಿ ಸ್ಪೆಷಲ್ ವಿಮರ್ಶೆ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್

‘ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದು ದರ್ಶನ್ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಸೆಲೆಬ್ರಿಟಿಸ್ (ಫ್ಯಾನ್ಸ್) ಬಳಿ ಹಣ ಸಂಗ್ರಹ ಮಾಡಿ ಒಂದು ಶಾಲೆ ಶುರು ಮಾಡೋಣ. ಅವರನ್ನು ಈಗ ಅನಕ್ಷರಸ್ಥರು ಅಂತ ಯಾರೆಲ್ಲ ಹೇಳುತ್ತಿದ್ದಾರೋ ಅವರನ್ನೇ ಕರೆದುಕೊಂಡು ಬಂದು ದಯವಿಟ್ಟು ಶಿಕ್ಷಣ ನೀಡಿ ಅಂತ ಹೇಳೋಣ’ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:15 am, Sun, 14 December 25