ಹೇಳದೇ ಕೇಳದೇ ಅಂಬರೀಶ್ ಮನೆಗೆ ಬಂದಿದ್ದ ನಟ ವಿವೇಕ್; ವಿಶೇಷ ಘಟನೆ ನೆನಪಿಸಿಕೊಂಡ ಸುಮಲತಾ

Actor Vivek Death: ಕಾಲಿವುಡ್ನ ಜನಪ್ರಿಯ ನಟ ವಿವೇಕ್ ಹೃದಯಾಘಾತದಿಂದ ಶನಿವಾರ (ಏ.17) ನಿಧನರಾದರು. ಅವರಿಗೆ ನಟಿ ಸುಮಲತಾ ಅಂಬರೀಷ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಒಂದು ಹಳೇ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಹೇಳದೇ ಕೇಳದೇ ಅಂಬರೀಶ್ ಮನೆಗೆ ಬಂದಿದ್ದ ನಟ ವಿವೇಕ್; ವಿಶೇಷ ಘಟನೆ ನೆನಪಿಸಿಕೊಂಡ ಸುಮಲತಾ
ವಿವೇಕ್​ - ಸುಮಲತಾ ಅಂಬರೀಷ್​
Edited By:

Updated on: Apr 17, 2021 | 3:52 PM

ಜನಪ್ರಿಯ ನಟ ವಿವೇಕ್​ ಅವರು ನಿಧನರಾದ ಸುದ್ದಿ ಕೇಳಿ ಇಡೀ ಚಿತ್ರರಂಗಕ್ಕೆ ಆಘಾತ ಆಗಿದೆ. ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ವಿವೇಕ್​ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರಿಗೆ ವಿವೇಕ್​ ಜೊತೆ ಒಡನಾಟ ಇತ್ತು. ನಟಿ ಸುಮಲತಾ ಅಂಬರೀಷ್​ ಅವರು ಸಹ ವಿವೇಕ್​ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಅವರ ವ್ಯಕ್ತಿತ್ವವನ್ನು ಬಣ್ಣಿಸಿದ್ದಾರೆ.

ಕನ್ನಡದ ದಿಗ್ಗಜ ನಟರಲ್ಲಿ ಒಬ್ಬರಾದ ರೆಬಲ್​ ಸ್ಟಾರ್​ ಅಂಬರೀಷ್​ ಬಗ್ಗೆ ವಿವೇಕ್​ ಅವರಿಗೆ ಅಪಾರ ಅಭಿಮಾನವಿತ್ತು. ತಮ್ಮ ಅಭಿಮಾನವನ್ನು ಅಭಿವ್ಯಕ್ತಿಸುವ ಸಲುವಾಗಿ ನೇರವಾಗಿ ಅಂಬಿ ಮನೆಗೆ ಬಂದಿದ್ದರಂತೆ ವಿವೇಕ್​! ಅದು ಕೂಡ ಹೇಳದೇ ಕೇಳದೇ. ಆ ಘಟನೆಯನ್ನು ಸುಮಲತಾ ಅವರು ಈಗ ಮೆಲುಕು ಹಾಕಿದ್ದಾರೆ. ಅಗಲಿದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಟ್ವೀಟ್​ ಮಾಡಿರುವ ಸುಮಲತಾ ಆ ವಿಶೇಷ ಘಟನೆಯ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ.

‘ಒಂದು ದಿನ ವಿವೇಕ್​ ಅವರು ಹೇಳದೇ ಕೇಳದೇ ನಮ್ಮ ಮನೆಗೆ ಬಂದಿದ್ದು ಈಗ ನೆನಪಾಗುತ್ತಿದೆ. ಅಂಬರೀಷ್​ ಅವರ ಉದಾರತೆ ಮತ್ತು ಹೃದಯ ವೈಶಾಲ್ಯತೆಯ ಬಗ್ಗೆ ಕೇಳಿ ತಿಳಿದುಕೊಂಡು, ಆ ಬಗ್ಗೆ ಮೆಚ್ಚುಗೆ ಸೂಚಿಸುವ ಸಲುವಾಗಿ ನೇರವಾಗಿ ಅವರು ನಮ್ಮ ಮನೆಗೆ ಬಂದಿದ್ದರು. ಅದರಿಂದ ನಮ್ಮಿಬ್ಬರಿಗೆ ಅಚ್ಚರಿ ಮತ್ತು ಖುಷಿ ಆಗಿತ್ತು.  ಯಾಕೆಂದರೆ ನಾವಿಬ್ಬರೂ ಅವರ ಪ್ರತಿಭೆಗೆ ಅಭಿಮಾನಿಗಳಾಗಿದ್ದೆವು’ ಎಂದು ಸುಮಲತಾ ಟ್ವೀಟ್​ ಮಾಡಿದ್ದಾರೆ.

‘ನಟ ವಿವೇಕ್​ ನಿಧನದ ಸುದ್ದಿ ಕೇಳಿ ಆಘಾತ ಆಗಿದೆ. ಅವರನ್ನು ಕೇವಲ ನಟ ಎಂದು ಕರೆದರೆ ಅವರ ಪ್ರತಿಭೆ, ಸಾಮಾಜಿಕ ಕಾರ್ಯ, ಬುದ್ಧಿವಂತಿಕೆಯನ್ನು ಕಡೆಗಣಿಸಿದಂತೆ ಆಗುತ್ತದೆ. ಅವರ ನಿಧನದಿಂದಾದ ನಷ್ಟವನ್ನು ಭರಿಸಲು ಸಾಧ್ಯವಿಲ್ಲ’ ಎಂದು ಸುಮಲತಾ ಅಂಬರೀಷ್​ ಕಂಬನಿ ಮಿಡಿದಿದ್ದಾರೆ. ನಟ ಪುನೀತ್​ ರಾಜ್​ಕುಮಾರ್​ ಕೂಡ ಟ್ವೀಟ್​ ಮಾಡಿದ್ದು, ‘ವಿವೇಕ್​ ಸರ್​ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ನಮ್ಮ ಕಾಲದ ಅತಿ ನಲ್ಮೆಯ ಕಾಮಿಡಿ ನಟ ಅವರಾಗಿದ್ದರು’ ಎಂದು ಸ್ಮರಿಸಿಕೊಂಡಿದ್ದಾರೆ.

ಇದನ್ನೂ ಓದಿ: Vivek: ತಮಿಳು ನಟ ವಿವೇಕ್​ ನಿಧನಕ್ಕೆ ಕಂಬನಿ ಮಿಡಿದ ಪುನೀತ್​, ರಜನಿಕಾಂತ್​, ಪ್ರಕಾಶ್​ ರೈ, ರೆಹಮಾನ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us