
ಚಿತ್ರರಂಗದ (Movie Industry) ಬಹುತೇಕರು ದೇವರಿನಲ್ಲಿ ವಿಶ್ವಾಸ ಇರುವವರೇ ಆಗಿದ್ದಾರೆ. ಸಿನಿಮಾಗಳ ಶೂಟಿಂಗ್ ಆರಂಭವಾಗುವುದೇ ದೇವರ ಪೂಜೆ ಮೂಲಕ, ಮುಗಿಯುವುದು ಸಹ ಪೂಜೆಯ ಮೂಲಕವೇ. ಆದರೆ ನಟ-ನಟಿಯರ ಐಶಾರಾಮಿ ಜೀವನ ಶೈಲಿ, ಪಾರ್ಟಿಗಳು, ಅವರ ಉಡುಪುಗಳು ಇನ್ನಿತರೆಗಳನ್ನು ಗಮನಿಸುವ ಜನ ದೇವರಲ್ಲಿ ನಂಬಿಕೆ ಇಲ್ಲದವರು ಎಂದು ನಿರ್ಧರಿಸಿಬಿಡುತ್ತಾರೆ. ನಟಿ ಶ್ರುತಿ ಹಾಸನ್, ಪಾಶ್ಚಾತ್ಯ ಶೈಲಿಯ ಜೀವನ ನಿರ್ವಹಣೆ ಮಾಡುವ ನಟಿಯರಲ್ಲಿ ಒಬ್ಬರು. ಲಿವಿನ್ ರಿಲೇಶನ್ ಶಿಪ್, ಪದೇ ಪದೇ ಬದಲಾಗುವ ಬಾಯ್ಫ್ರೆಂಡ್, ನೈಟ್ ಲೈಫ್, ಪಾರ್ಟಿಗಳು, ಕಾನ್ಸರ್ಟ್ಗಳು ಇನ್ನೂ ಹಲವು. ಆದರೆ ಅವರು ಅಪ್ಪಟ ದೈವ ಭಕ್ತೆ. ದೇವಾಲಯ ಒಂದಕ್ಕೆ ಹೋಗಿದ್ದಕ್ಕೆ ತಮ್ಮ ಜೀವನ ಬದಲಾಯ್ತು ಎಂದು ಅವರು ಖುದ್ದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ ಶ್ರುತಿ ಹಾಸನ್ ಅವರು ತಮ್ಮ ಜೀವನದಲ್ಲಿ ಉಂಟಾದ ದೊಡ್ಡ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ. ಜೀವನದಲ್ಲಿ ಖಿನ್ನತೆಗೆ ಒಳಗಾಗಿದ್ದರಂತೆ ಶ್ರುತಿ ಹಾಸನ್, ಜೀವನದಲ್ಲಿ ಯಾವುದೂ ಸರಿಯಾಗಿ ನಡೆಯುತ್ತಿಲ್ಲ, ಸೋಲುತ್ತಿದ್ದೇನೆ ಎಂದು ಅನಿಸಲು ಆರಂಭಿಸಿತ್ತಂತೆ. ಕಷ್ಟಗಳ ಮೇಲೆ ಕಷ್ಟಗಳು ಬರುತ್ತಿದ್ದವಂತೆ. ಆಗ ಗೆಳೆಯನೊಬ್ಬ ದೇವಾಲಯವೊಂದಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದನಂತೆ.
ಗೆಳೆಯನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಶ್ರುತಿ ಹಾಸನ್, ಚೆನ್ನೈನ ವಾರಾಹಿ ಅಮ್ಮನ ಗುಡಿಗೆ ಭೇಟಿ ನೀಡಿದರು. ನಂತರ ತಮ್ಮ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿವೆ ಎಂದು ಅವರು ಹೇಳಿದ್ದಾರೆ. ‘ಅದು ತುಂಬಾ ಪುಟ್ಟ ದೇವಸ್ಥಾನ, ಅಲ್ಲಿ ಯಾವುದೇ ವಿಐಪಿ ಸಾಲುಗಳಿಲ್ಲ ಅಥವಾ ಅದ್ದೂರಿತನವಿಲ್ಲ. ಆದರೆ ಅಲ್ಲಿಗೆ ಹೋದಾಗ ನನಗೆ ಒಂದು ವಿಭಿನ್ನವಾದ ಶಕ್ತಿ ಮತ್ತು ಶಾಂತಿ ಸಿಕ್ಕಿತು’ ಎಂದು ಶ್ರುತಿ ವಿವರಿಸಿದ್ದಾರೆ. ‘ದೇವರೇ ನಮ್ಮನ್ನು ಆರಿಸಿಕೊಳ್ಳುತ್ತಾರೆ ಎಂಬುದನ್ನು ನಾನು ಅಲ್ಲಿಗೆ ಹೋದ ಮೇಲೆ ನಂಬಿದ್ದಾಗಿ ಅವರು ತಿಳಿಸಿದ್ದಾರೆ. ಆ ಭೇಟಿಯ ನಂತರ ಅವರ ಮನಸ್ಸಿನಲ್ಲಿದ್ದ ಭಯಗಳೆಲ್ಲಾ ದೂರವಾಗಿ, ಜೀವನದ ಬಗ್ಗೆ ಒಂದು ಸ್ಪಷ್ಟತೆ ಸಿಕ್ಕಿತಂತೆ. ಶ್ರುತಿ ಹಾಸನ್ ಅವರ ಈ ಆಧ್ಯಾತ್ಮಿಕ ಪಯಣದ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ:ರಾಮ್ ಚರಣ್ ಸಿನಿಮಾನಲ್ಲಿ ಶ್ರುತಿ ಹಾಸನ್ ಐಟಂ ಹಾಡು
ಶ್ರುತಿ ಹಾಸನ್ ಪ್ರಸ್ತುತ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳಿನ ‘ಟ್ರೈನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತೆಲುಗಿನ ‘ಆಕಾಶಂ ಲೋ ಒಕ ತಾರ’ ಸಿನಿಮಾನಲ್ಲಿ ನಟಿಸುತ್ತದ್ದಾರೆ. ‘ಸಲಾರ್ 2’ ಸಿನಿಮಾನಲ್ಲೂ ಅವರೇ ನಾಯಕಿ. ಇತ್ತೀಚೆಗಷ್ಟೆ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಐಟಂ ಹಾಡಿನಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ. ಇವುಗಳ ಜೊತೆಗೆ ಹೊಸ ಆಲ್ಬಂ ಬಿಡುಗಡೆ ಮಾಡಲು ಸಹ ಅವರು ಸಜ್ಜಾಗುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ