ಚುನಾವಣೆ ಗೆದ್ದರೆ ಮಾಂಸ ಮಾರಾಟ ಬ್ಯಾನ್ ಮಾಡ್ತಾರಾ ಖುಷ್ಬೂ ಪತಿ ಸುಂದರ್? ಸಿಕ್ತು ಸ್ಪಷ್ಟನೆ
ಖ್ಯಾತ ನಟಿ ಖುಷ್ಬೂ ಅವರ ಪತಿ ಸುಂದರ್ ಸಿ. ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಚುನಾವಣೆ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ಬಗೆಬಗೆಯ ಗಾಸಿಪ್ ಹಬ್ಬಿವೆ. ಸುಂದರ್ ಗೆದ್ದರೆ ಮಾಂಸ ಮಾರಾಟಕ್ಕೆ ನಿಷೇಧ ಹೇರುತ್ತಾರೆ ಎಂಬ ವದಂತಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Elections) ಹತ್ತಿರ ಬರುತ್ತಿದ್ದಂತೆ ರಾಜಕೀಯ ಅಖಾಡದಲ್ಲಿ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಖ್ಯಾತ ನಟ ಮತ್ತು ನಿರ್ದೇಶಕ ಸುಂದರ್ ಸಿ. (Sundar C) ಅವರು ಈ ಬಾರಿ ಮಧುರೈ ಸೆಂಟ್ರಲ್ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದು, ಅವರ ಹೆಸರಿನಲ್ಲಿ ಹಬ್ಬಿರುವ ಒಂದು ಸುಳ್ಳು ಸುದ್ದಿ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಸುಂದರ್ ಪತ್ನಿ, ನಟಿ ಖುಷ್ಬೂ (Khushboo) ಅವರು ತಿರುಗೇಟು ನೀಡಿದ್ದಾರೆ.
ಸುಂದರ್ ಸಿ. ಅವರು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ, ಮಧುರೈ ಮೀನಾಕ್ಷಿ ಅಮ್ಮನವರ ದೇವಾಲಯದ ಪವಿತ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಮಧುರೈ ಸೆಂಟ್ರಲ್ ಕ್ಷೇತ್ರದಲ್ಲಿರುವ ಎಲ್ಲಾ ಮಾಂಸದ ಅಂಗಡಿಗಳನ್ನು ನಿಷೇಧಿಸುವುದಾಗಿ ಹೇಳಿದ್ದಾರೆ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದು ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಈ ಸುದ್ದಿಯನ್ನು ಸುಂದರ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ತಮಿಳಿನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಅವರು, ‘ನಾನು ಗೆದ್ದರೆ ಮಾಂಸದ ಅಂಗಡಿಗಳನ್ನು ಮುಚ್ಚಿಸುತ್ತೇನೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು. ನಾನು ಜನರ ಹಕ್ಕುಗಳನ್ನು ಮತ್ತು ಭಾವನೆಗಳನ್ನು ಗೌರವಿಸುವ ವ್ಯಕ್ತಿ. ನನ್ನನ್ನು ನೇರವಾಗಿ ಎದುರಿಸಲು ಧೈರ್ಯವಿಲ್ಲದವರು ಇಂತಹ ಕೆಳಮಟ್ಟದ ಹಾದಿ ಹಿಡಿದಿದ್ದಾರೆ. ನಮ್ಮ ಏಕತೆ ಮತ್ತು ಗೆಲುವಿನ ಮೂಲಕ ಇಂತಹ ಸುಳ್ಳುಗಾರರಿಗೆ ತಕ್ಕ ಉತ್ತರ ನೀಡುತ್ತೇವೆ’ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
When they fail to counter the honesty of a man with integrity, they retort to such fake narratives. @arivalayam is scared and its so evident. Spreading such false narrative to gain support will only boomerang. People of Madurai are very clear and stand with @SundarCOffl .… https://t.co/bwScPkTzGd
— KhushbuSundar (@khushsundar) April 6, 2026
ಸುಂದರ್ ಅವರ ಪತ್ನಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಅವರು ಪತಿಯ ಬೆಂಬಲಕ್ಕೆ ನಿಂತಿದ್ದಾರೆ. ಈ ಸುಳ್ಳು ಸುದ್ದಿಯ ಹಿಂದೆ ಆಡಳಿತಾರೂಢ ಡಿಎಂಕೆ ಪಕ್ಷದ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ. ‘ಪ್ರಾಮಾಣಿಕ ವ್ಯಕ್ತಿಯನ್ನು ಎದುರಿಸಲು ಸಾಧ್ಯವಾಗದಿದ್ದಾಗ ಇಂತಹ ಸುಳ್ಳು ಕಥೆಗಳನ್ನು ಸೃಷ್ಟಿಸಲಾಗುತ್ತದೆ. ಡಿಎಂಕೆ ಸೋಲಿನ ಭೀತಿಯಲ್ಲಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಮಧುರೈ ಜನರು ಬುದ್ಧಿವಂತರಾಗಿದ್ದು, ಅವರು ಸುಂದರ್ ಜೊತೆಗಿದ್ದಾರೆ’ ಎಂದು ಖುಷ್ಬೂ ಹೇಳಿದ್ದಾರೆ.
ಇದನ್ನೂ ಓದಿ: 54ನೇ ವಯಸ್ಸಿನಲ್ಲಿ 20 ಕೆಜಿ ತೂಕ ಇಳಿಸಿಕೊಂಡ ಖುಷ್ಬೂ; ಸಾಧ್ಯವಾಗಿದ್ದು ಹೇಗೆ?
ಸುಂದರ್ ಸಿ. ಅವರು ಪಿಎನ್ಕೆ ಅಭ್ಯರ್ಥಿಯಾಗಿ ಎಐಎಡಿಎಂಕೆ ಮೈತ್ರಿಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಈಗ ಈ ವಿವಾದ ಸೃಷ್ಟಿಯಾಗಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ತಮಿಳು ನಟ ದಳಪತಿ ವಿಜಯ್ ಕೂಡ ತಮ್ಮದೇ ಪಕ್ಷದ ಮೂಲಕ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




