
ಸಮಯ್ ರೈನಾ (Samay Raina) ನಡೆಸಿಕೊಡುತ್ತಿದ್ದ ಜನಪ್ರಿಯ ಯೂಟ್ಯೂಬ್ ಶೋ, ‘ಇಂಡಿಯಾಸ್ ಗಾಟ್ ಲೇಟೆಂಟ್’ನ ಮೊದಲ ಸೀಸನ್ನಲ್ಲಿ ಪಾಡ್ಕಾಸ್ಟರ್ ರಣ್ವೀರ್ ಅಲ್ಹಾಬಾದಿಯಾ ಅತಿಥಿಯಾಗಿ ಬಂದಾಗ ಆಡಿದ್ದ ಅತ್ಯಂತ ಅಶ್ಲೀಲ ಮಾತಿನಿಂದಾಗಿ ಸಮಯ್ ರೈನಾ, ರಣ್ವೀರ್ ಅಲ್ಹಾಬಾದಿಯಾ ಸೇರಿದಂತೆ ಹಲವರ ವಿರುದ್ಧ ದೂರುಗಳು ದಾಖಲಾಗಿದ್ದವು. ವಿಶೇಷವಾಗಿ ಸಮಯ್ ರೈನಾ ಮತ್ತು ರಣ್ವೀರ್ ಅಲ್ಹಾಬಾದಿಯಾ ವಿರುದ್ಧ ಹಲವು ಕಡೆ ಎಫ್ಐಆರ್ಗಳು ದಾಖಲಾಗಿದ್ದವು. ಅದೇ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನಲ್ಲಿ ಅಂಗವಿಕಲರ ಕುರಿತು ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಕ್ಕೂ ಸಹ ಎಫ್ಐಆರ್ ದಾಖಲಾಗಿತ್ತು. ಇದೀಗ ಎಲ್ಲ ಎಫ್ಐಆರ್ಗಳನ್ನು ರದ್ದು ಮಾಡಲಾಗಿದೆ.
ವಿವಾದದ ಬಳಿಕ ಸಮಯ್ ರೈನಾ ಮತ್ತು ರಣ್ವೀರ್ ವಿರುದ್ಧ ಹಲವು ರಾಜ್ಯಗಳಲ್ಲಿ ದೂರುಗಳು ದಾಖಲಾಗಿದ್ದವು. ಅದರಂತೆ ಎಫ್ಐಆರ್ ಸಹ ದಾಖಲಾಗಿತ್ತು. ಸಮಯ್ ರೈನಾ ಮತ್ತು ರಣ್ವೀರ್ ಅಲ್ಹಾಬಾದಿಯಾ ಅವರನ್ನು ಮುಂಬೈ ಪೊಲೀಸರು ವಿಚಾರಣೆ ಸಹ ನಡೆಸಿದ್ದರು. ಅವರನ್ನು ಮಾತ್ರವೇ ಅಲ್ಲದೆ, ‘ಇಂಡಿಯಾ ಗಾಟ್ ಲೇಟೆಂಟ್’ಶೋನ ಆ ನಿಗದಿತ ಎಪಿಸೋಡ್ನಲ್ಲಿ ಭಾಗಿ ಆಗಿದ್ದ ಪ್ರೇಕ್ಷಕರನ್ನು ಸಹ ವಿಚಾರಣೆ ಮಾಡಲಾಗಿತ್ತು. ಶೋಗೆ ಅದಕ್ಕೆ ಮುಂಚೆ ಅತಿಥಿಗಳಾಗಿ ಹೋಗಿದ್ದವರನ್ನು ಸಹ ವಿಚಾರಣೆ ಮಾಡಲಾಗಿತ್ತು.
ನಂತರ ರಣ್ವೀರ್ ಅಲಹಾಬಾದಿಯಾ ಹಾಗೂ ಸಮಯ್ ರೈನಾ ಸುಪ್ರೀಂ ಕೋರ್ಟ್ನ ಮೊರೆ ಹೋಗಿ, ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನು ಒಂದೆಡೆ ಸೇರಿಸುವಂತೆ ಮತ್ತು ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಕೋರಿದ್ದರು. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಅವರ ಹೇಳಿಕೆಗಳನ್ನು ಬಲವಾಗಿ ಟೀಕಿಸಿತು ಮತ್ತು ಇಬ್ಬರಿಗೂ ದಂಡವನ್ನು ಸಹ ಹೇರಿತು ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ ಕೆಲಸ ಮಾಡುವಂತೆ ಸಮಯ್ ರೈನಾಗೆ ಆದೇಶಿಸಿತ್ತು.
ಇದನ್ನೂ ಓದಿ:ಆಲಿಯಾ ಮೇಲೆ ಪ್ರೀತಿ, ‘ಆಲ್ಫಾ’ ನೋಡಲು ಇಡೀ ಚಿತ್ರಮಂದಿರ ಬುಕ್ ಮಾಡಿದ ಸಮಯ್ ರೈನಾ
ಇದೀಗ ಸುಪ್ರೀಂಕೋರ್ಟ್, ಶುಕ್ರವಾರ ನೀಡಿದ ಆದೇಶದಲ್ಲಿ ಸಮಯ್ ರೈನಾ ಮತ್ತು ರಣ್ವೀರ್ ಅಲ್ಹಾಬಾದಿಯಾ ವಿರುದ್ಧ ದಾಖಲಾಗಿದ್ದ ಎಲ್ಲ ಎಫ್ಐಆರ್ಗಳನ್ನು ರದ್ದು ಮಾಡಿದೆ. ಈ ಮೂಲಕ ಸಮಯ್ ರೈನಾ ಮತ್ತು ರಣ್ವೀರ್ ಇಬ್ಬರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಸಮಯ್ ರೈನಾ ಇದೀಗ ‘ಇಂಡಿಯಾ ಗಾಟ್ ಲೇಟೆಂಟ್’ ಶೋನ ಎರಡನೇ ಸರಣಿ ಪ್ರಾರಂಭ ಮಾಡಿದ್ದಾರೆ. ಈ ಬಾರಿ ಶೋ, ಯೂಟ್ಯೂಬ್ ಮತ್ತು ನೆಟ್ಫ್ಲಿಕ್ಸ್ ಎರಡರಲ್ಲೂ ಒಟ್ಟಿಗೆ ಪ್ರಸಾರ ಆಗುತ್ತಿದೆ. ಕಳೆದ ಬಾರಿಗಿಂತಲೂ ಒಳ್ಳೆಯ ಪ್ರತಿಕ್ರಿಯೆಯನ್ನು ಶೋ ಪಡೆದುಕೊಳ್ಳುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ