ಪ್ರಭಾಸ್ ಸರಳತೆಯ ಕೊಂಡಾಡಿದ ಸೂರ್ಯ, ಬಿಚ್ಚಿಟ್ಟರು ಅಪರೂಪದ ಘಟನೆ
ಪ್ರಭಾಸ್ಗೆ ಹಲವು ಚಿತ್ರರಂಗದಲ್ಲಿ ಗೆಳೆಯರಿದ್ದಾರೆ. ಅವರ ಎಲ್ಲ ಗೆಳೆಯರು ಹೇಳುವುದು ಒಂದೇ ಮಾತು, ಪ್ರಭಾಸ್ ರೀತಿ ಆತಿಥ್ಯ ಇನ್ಯಾರೂ ಮಾಡುವುದಿಲ್ಲ ಎಂದು. ಇದೀಗ ತಮಿಳಿನ ಸ್ಟಾರ್ ನಟ ಸೂರ್ಯ, ಪ್ರಭಾಸ್ರ ಆತಿಥ್ಯ ಮತ್ತು ಅವರ ಸರಳತೆಗೆ ಸಂಬಂಧಿಸಿದಂತೆ ಘಟನೆ ಒಂದನ್ನು ನೆನಪು ಮಾಡಿಕೊಂಡಿದ್ದಾರೆ.

ಪ್ರಭಾಸ್, ಭಾರತದ ನಂಬರ್ 1 ಪ್ಯಾನ್ ಇಂಡಿಯಾ ಸ್ಟಾರ್. ಅವರ ಸಿನಿಮಾಗಳು ಚೆನ್ನಾಗಿಲ್ಲದಿದ್ದರೂ ಐದು ನೂರು ಕೋಟಿ ಗಳಿಸುತ್ತವೆ. ಭಾರಿ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಪ್ರಭಾಸ್, ಭಾರತದ ಅತ್ಯಂತ ದುಬಾರಿ ನಟರಲ್ಲಿ ಒಬ್ಬರು. ಸಿನಿಮಾಕ್ಕೆ ಭಾರಿ ದೊಡ್ಡ ಸಂಭಾವನೆ ಪಡೆಯುವ ಪ್ರಭಾಸ್, ಇರುವುದು ಮಾತ್ರ ಸರಳವಾಗಿ. ತಮ್ಮ ಸಹನಟರಿಗೆ ಹೊಟ್ಟೆ ಬಿರಿಯುವಷ್ಟು ಊಟ ಹಾಕಿಸುವ ಪ್ರಭಾಸ್ ತಾವು ಮಾತ್ರ ಸರಳ ಆಹಾರ ಸೇವಿಸುತ್ತಾರೆ. ದೊಡ್ಡ ಸ್ಟಾರ್ ನಟ ಆದರೂ ಸಹ ವಿನಯದಿಂದ ವರ್ತಿಸುತ್ತಾರೆ. ಯಾರೊಂದಿಗೂ ಹೆಚ್ಚು ಮಾತನಾಡದೆ ಪುಟ್ಟ ಬಾಲಕನಂತೆ ವ್ಯವಹರಿಸುತ್ತಾರೆ.
ಹಲವು ಚಿತ್ರರಂಗಗಳಲ್ಲಿ ಪ್ರಭಾಸ್ಗೆ ಗೆಳೆಯರಿದ್ದಾರೆ. ತಮಿಳು ಚಿತ್ರರಂಗದಲ್ಲಿಯೂ ಸಹ ದೊಡ್ಡ ಗೆಳೆಯರ ಬಳಗ ಪ್ರಭಾಸ್ಗೆ ಇದೆ. ಆಗಾಗ್ಗೆ ತಮ್ಮ ಗೆಳೆಯರನ್ನು ಮನೆಗೆ ಆಹ್ವಾನಿಸಿ ಪಾರ್ಟಿ ಮಾಡುತ್ತಾರೆ, ಭೋಜನ ಕೂಟ ಏರ್ಪಾಟು ಮಾಡುತ್ತಾರೆ. ತಮಿಳಿನ ಸ್ಟಾರ್ ನಟ ಸೂರ್ಯ ಅವರೂ ಸಹ ಪ್ರಭಾಸ್ರ ಆಪ್ತ ಗೆಳೆಯರಲ್ಲಿ ಒಬ್ಬರು. ಒಮ್ಮೆ ಸೂರ್ಯ ಅವರನ್ನು ಪ್ರಭಾಸ್ ಊಟಕ್ಕೆ ಕರೆಸಿದ್ದರಂತೆ. ಆಗ ನಡೆದ ಘಟನೆಯನ್ನು ಸೂರ್ಯ ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ಈ ವರೆಗೂ ಸಮಂತಾ ಜೊತೆ ಸಿನಿಮಾ ಮಾಡಿಲ್ಲ ಯಾಕೆ?
‘ಕಂಗುವ’ ಸಿನಿಮಾದ ಆಡಿಯೋ ಲಾಂಚ್ ಸಂದರ್ಭದಲ್ಲಿ ಪ್ರಭಾಸ್ ಬಗ್ಗೆ ಮಾತನಾಡಿದ ಸೂರ್ಯ, ‘ನನಗೆ ಪ್ರಭಾಸ್ ಅನ್ನು ಭೇಟಿ ಆಗುವುದೆಂದರೆ ಬಹಳ ಇಷ್ಟ. ‘ಬಾಹುಬಲಿ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ಹೊರಗಿನ ಯಾರೂ ಸಹ ಸೆಟ್ಗೆ ಹೋಗುವಂತಿರಲಿಲ್ಲ. ಆದರೆ ನಾನು ಹೋಗಿದ್ದೆ. ಬಹಳ ಸ್ವೀಟ್ ಫ್ರೆಂಡ್ ಪ್ರಭಾಸ್ ನನಗೆ. ನನ್ನನ್ನು ಒಮ್ಮೆ ಭೋಜನಕ್ಕೆ ಆಹ್ವಾನ ಮಾಡಿದ್ದರು. ಆ ದಿನ ಬೇರೆ ಕೆಲಸಗಳು ಬಂದಿದ್ದರಿಂದ ಬಹಳ ತಡವಾಗಿಬಿಟ್ಟಿತು. ಸುಮಾರು 11:30ಕ್ಕೆ ನಾನು ಪ್ರಭಾಸ್ ಅನ್ನು ಭೇಟಿ ಮಾಡಿದೆ. ಆ ವರೆಗೆ ಅವರೂ ಸಹ ಊಟ ಮಾಡದೆ ನನಗಾಗಿ ಕಾಯುತ್ತಿದ್ದರು. ಅಂದು ನಾವು ಬಹಳ ಎಂಜಾಯ್ ಮಾಡಿದೆವು. ನಾನು ಮತ್ತೊಮ್ಮೆ ಪ್ರಭಾಸ್ ಜೊತೆ ಊಟ ಮಾಡಲು ಕಾಯುತ್ತಿದ್ದೇನೆ’ ಎಂದಿದ್ದಾರೆ.
ಅದು ಮಾತ್ರವೇ ಅಲ್ಲದೆ, ‘ನಾನು ಪ್ರಭಾಸ್ ಜೊತೆ ಒಂದೊಳ್ಳೆ ಆಕ್ಷನ್ ಸಿನಿಮಾದಲ್ಲಿ ನಟಿಸಲು ಕಾಯುತ್ತಿದ್ದೇನೆ’ ಎಂದಿದ್ದಾರೆ. ಸೂರ್ಯ ಒಬ್ಬರೇ ಅಲ್ಲ, ಪ್ರಭಾಸ್ ಜೊತೆ ನಟಿಸಿದ ಹಲವು ನಟರು ಪ್ರಭಾಸ್ ನೀಡುವ ಆತಿಥ್ಯವನ್ನು ಮನಸಾರೆ ಹೊಗಳಿದ್ದಾರೆ. ನಟರಾದ ಪೃಥ್ವಿರಾಜ್ ಸುಕುಮಾರನ್ ಅಂತೂ ಪ್ರಭಾಸ್ ಕಳಿಸಿದ ಊಟ ಇಡಲು ಇನ್ನೊಂದು ರೂಂ ಬಾಡಿಗೆಗೆ ಪಡೆದುಕೊಂಡಿದ್ದರಂತೆ. ಶ್ರುತಿ ಹಾಸನ್ ಸಹ ಪ್ರಭಾಸ್ ತಿನ್ನಿಸುವ ಊಟದ ಬಗ್ಗೆ ಸಾಕಷ್ಟು ಬಾರಿ ದೂರು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ