ಸುಶಾಂತ್​ ಸಾವಿನಲ್ಲಿ ದುಡ್ಡು ಮಾಡಿಕೊಳ್ಳುತ್ತಿರುವ ನೀಚರು; 3 ಮುಖ್ಯ ವಿಷಯ ತೆರೆದಿಟ್ಟ ಸಹೋದರಿ

SSR: ಸುಶಾಂತ್​ ಸಿಂಗ್​ ರಜಪೂತ್ ಹೆಸರಿನಲ್ಲಿ ಹಣ ಸಂಗ್ರಹಿಸಲಾಗುತ್ತಿದೆ ಎಂಬುದು ಅವರ ಸಹೋದರಿ ಮೀತೂ ಸಿಂಗ್ ಗಮನಕ್ಕೆ ಬಂದಿದೆ. ಈ ಬಗ್ಗೆ ಅವರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.

ಸುಶಾಂತ್​ ಸಾವಿನಲ್ಲಿ ದುಡ್ಡು ಮಾಡಿಕೊಳ್ಳುತ್ತಿರುವ ನೀಚರು; 3 ಮುಖ್ಯ ವಿಷಯ ತೆರೆದಿಟ್ಟ ಸಹೋದರಿ
ಸುಶಾಂತ್​ ಸಿಂಗ್​ ರಜಪೂತ್​

Updated on: Jun 05, 2021 | 9:46 AM

ನಟ ಸುಶಾಂತ್​ ಸಿಂಗ್​ ರಜಪೂತ್​ ನಿಧನರಾಗಿ ಒಂದು ವರ್ಷ ಕಳೆಯುತ್ತಿದೆ. ಅವರ ಸಾವಿನ ನಂತರ ಬಾಲಿವುಡ್​ನಲ್ಲಿ ಹಲವು ಘಟನೆಗಳು ನಡೆದವು. ಸುಶಾಂತ್​ ಸಾವಿಗೆ ನ್ಯಾಯ ಸಿಗಬೇಕು ಎಂದು ಇಂದಿಗೂ ಅವರ ಅಭಿಮಾನಿಗಳು ಹೋರಾಡುತ್ತಲೇ ಇದ್ದಾರೆ. ಕುಟುಂಬದವರು ಕೂಡ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ನಡುವೆಯೇ ಕೆಲವರು ಅಮಾನವೀಯ ಕೃತ್ಯ ಮಾಡುತ್ತಿದ್ದಾರೆ. ಸುಶಾಂತ್ ಸಿಂಗ್​ ರಜಪೂತ್​ ಹೆಸರು ಹೇಳಿಕೊಂಡು ದುಡ್ಡು ಮಾಡುವ ಕೆಲಸಕ್ಕೆ ಕಿಡಿಗೇಡಿಗಳು ಕೈ ಹಾಕಿದ್ದಾರೆ. ಈ ಬಗ್ಗೆ ಸುಶಾಂತ್​ ಸಹೋದರಿ ಮೀತೂ ಸಿಂಗ್​ ಎಚ್ಚರಿಕೆ ನೀಡಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂಬುದು ಮೀತೂ ಸಿಂಗ್ ಗಮನಕ್ಕೆ ಬಂದಿದೆ. ಈ ಬಗ್ಗೆ ಅವರು ಟ್ವೀಟ್​ ಮಾಡಿದ್ದು, ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ‘ಕೆಲವರು ಸುಶಾಂತ್​ ಸಾವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅದು ತೀರಾ ಅಮಾನವೀಯ ಕೆಲಸ. ಆ ವ್ಯಕ್ತಿಗಳು ಕೂಡಲೇ ಇಂಥ ಕೃತ್ಯದಿಂದ ಹಿಂದೆ ಸರಿಯಬೇಕು’ ಎಂದು ಮೀತೂ ಸಿಂಗ್​ ಹೇಳಿದ್ದಾರೆ.

‘ಸುಶಾಂತ್​ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಲು ನಾವು ಯಾರಿಗೂ ಅಧಿಕಾರ ನೀಡಿಲ್ಲ. ಸುಶಾಂತ್​ ಜೀವನವನ್ನು ಆಧರಿಸಿ ಪುಸ್ತಕ ಬರೆಯಲು ಯಾರಿಗೂ ನಾವು ಅನುಮತಿ ಕೊಟ್ಟಿಲ್ಲ. ಸಿನಿಮಾ ಮಾಡಲು ಕೂಡ ಯಾರೂ ನಮ್ಮಿಂದ ಸಮ್ಮತಿ ಪಡೆದುಕೊಂಡಿಲ್ಲ’ ಎಂದು ಈ ಮೂರು ವಿಷಯಗಳನ್ನು ಮೀತೂ ಸಿಂಗ್​ ಸ್ಪಷ್ಟಪಡಿಸಿದ್ದಾರೆ. ಸುಶಾಂತ್​ ಅವರ ದುರಂತ ಅಂತ್ಯವನ್ನು ಲಾಭಕ್ಕಾಗಿ ಬಳಸಿಕೊಳ್ಳಲು ನಮ್ಮ ಕುಟುಂಬದವರು ಮುಂದಾಗುವುದಿಲ್ಲ. ಬೇರೆಯವರಿಗೂ ಅಂಥ ಕೆಲಸ ಮಾಡಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

2020ರ ಜೂನ್​ 14ರಂದು ಸುಶಾಂತ್​ ಅವರ ಮೃತದೇಹವು ಬಾಂದ್ರಾ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿ ಆಗಿರಲಿಲ್ಲ ಎಂಬುದು ಹಲವರ ವಾದ. ಪ್ರಕರಣದ ಕುರಿತಂತೆ ಸಿಬಿಐ, ಎನ್​ಸಿಬಿ ಮತ್ತು ಜಾರಿ ನಿರ್ದೇಶನಾಲಯ ಮೂರು ಆಯಾಮಗಳಿಂದ ತನಿಖೆ ನಡೆಸುತ್ತಿವೆ. ಸುಶಾಂತ್​ ಸಾವಿಗೆ ನ್ಯಾಯ ಸಿಗಬೇಕು ಎಂದು ಅವರ ಅಭಿಮಾನಿಗಳು ಮತ್ತು ಕುಟುಂಬದವರು ಸೋಶಿಯಲ್​ ಮೀಡಿಯಾದಲ್ಲಿ ಇಂದಿಗೂ ಹ್ಯಾಶ್​​ಟ್ಯಾಗ್​ಗಳ ಮೂಲಕ ಅಭಿಯಾನ ನಡೆಸುತ್ತಿದ್ದಾರೆ.

ಇದನ್ನೂ ಓದಿ:

ಸುಶಾಂತ್​ ಸಿಂಗ್​ ರಜಪೂತ್​ ಮನೆ ಕೆಲಸದವರಿಗೆ ಗೊತ್ತಿದೆಯಾ ಡ್ರಗ್ಸ್​ ಸತ್ಯ? ಎನ್​ಸಿಬಿಯಿಂದ ವಿಚಾರಣೆ

ಬಿಗ್​ ಬಾಸ್​ ಮನೆ ಒಳಗೆ ಹೋಗಲಿದ್ದಾರೆ ಸುಶಾಂತ್​ ಸಿಂಗ್​ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us