ಬಿಗ್​​ಬಾಸ್ ಮನೆಗೆ ಒಂಟಿಯಾಗಿ ಹೋದವರ್ಯಾರು, ಜಂಟಿ ಆದವರ್ಯಾರು?

Bigg Boss Kannada: ಬಿಗ್​​ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿದೆ. 19 ಸ್ಪರ್ಧಿಗಳು ಬಿಗ್​​ಬಾಸ್ ಮನೆ ಸೇರಿಕೊಂಡಿದ್ದಾರೆ. ಈ 19 ಸ್ಪರ್ಧಿಗಳಲ್ಲಿ ಕೆಲವರು ಒಂಟಿಯಾಗಿ ಮನೆಯ ಒಳಗೆ ಹೋಗಿದ್ದರೆ ಇನ್ನು ಕೆಲವರು ಜಂಟಿಯಾಗಿ ಮನೆಯ ಒಳಗೆ ಹೋಗಿದ್ದಾರೆ. ಅಂದಹಾಗೆ ಬಿಗ್​​ಬಾಸ್ ಮನೆಗೆ ಯಾರು ಜಂಟಿಯಾಗಿ ಹೋಗಿದ್ದಾರೆ? ಯಾರು ಒಂಟಿಯಾಗಿ ಹೋಗಿದ್ದಾರೆ? ಇಲ್ಲಿದೆ ನೋಡಿ ಪಟ್ಟಿ...

ಬಿಗ್​​ಬಾಸ್ ಮನೆಗೆ ಒಂಟಿಯಾಗಿ ಹೋದವರ್ಯಾರು, ಜಂಟಿ ಆದವರ್ಯಾರು?
Bigg Boss Kannada 12

Updated on: Sep 28, 2025 | 11:43 PM

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಇಂದು (ಸೆಪ್ಟೆಂಬರ್ 28) ಪ್ರಾರಂಭ ಆಗಿದೆ. ಕಿಚ್ಚ ಸುದೀಪ್ ಅವರು ಬಿಗ್​​ಬಾಸ್ ಶೋನ ಗ್ರ್ಯಾಂಡ್ ಓಪನಿಂಗ್ ಮಾಡಿದ್ದಾರೆ. ಈ ಬಾರಿ ಬಿಗ್​​ಬಾಸ್ ಮನೆಗೆ ಬರೋಬ್ಬರಿ 19 ಮಂದಿ ಪ್ರವೇಶ ಮಾಡಿದ್ದಾರೆ. ಆದರೆ ಈ ಬಾರಿ ಸುದೀಪ್ ಅವರು ಸ್ಪರ್ಧಿಗಳು ಮನೆಯ ಒಳಗೆ ಹೋಗುವ ಮುಂಚೆಯೇ ಅವರಿಂದ ಗೇಮ್ ಒಂದನ್ನು ಆಡಿಸಿದರು. ಇದರಿಂದಾಗಿ ಒಬ್ಬರೇ ಮನೆಯ ಒಳಗೆ ಹೋಗಲು ಸ್ಪರ್ಧಿಗಳು ಅನಿವಾರ್ಯವಾಗಿ ಜಂಟಿ ಆಗಬೇಕಾಯ್ತು.

ಬಿಗ್​​ಬಾಸ್ ಲೈವ್ ವೀಕ್ಷಿಸಲು ಹಲವಾರು ಮಂದಿ ವೀಕ್ಷಕರು ಕಾರ್ಯಕ್ರಮಕ್ಕೆ ಬಂದಿದ್ದರು. ಅವರಿಗೆ ವಿಶೇಷ ಅಧಿಕಾರ ನೀಡಲಾಗಿತ್ತು. ಪ್ರತಿ ಸ್ಪರ್ಧಿಗೆ ಅವರು ವೋಟ್ ಹಾಕಿ ನಿರ್ದಿಷ್ಟ ಸ್ಪರ್ಧಿ ಸಿಂಗಲ್ ಆಗಿ ಮನೆಯ ಒಳಗೆ ಹೋಗಬೇಕಾ ಅಥವಾ ಮತ್ತೊಬ್ಬ ಸ್ಪರ್ಧಿಯ ಜೊತೆಗೆ ಜಂಟಿಯಾಗಿ ಮನೆಯ ಒಳಗೆ ಹೋಗಬೇಕಾ ಎಂಬುದನ್ನು ನಿಶ್ಚಯ ಮಾಡಬೇಕಿತ್ತು. 75% ಗಿಂತಲೂ ಹೆಚ್ಚು ಮತ ಗಳಿಸಿದವರಿಗೆ ಒಂಟಿಯಾಗಿ ಮನೆಗೆ ಹೋಗುವ ಅವಕಾಶ ಸಿಗುತ್ತಿತ್ತು, 75ಕ್ಕಿಂತಲೂ ಕಡಿಮೆ ಮತ ಪಡೆದವರು ಜಂಟಿಯಾಗಿಯೇ ಮನೆಯ ಒಳಗೆ ಹೋಗಬೇಕಿತ್ತು. ಜಂಟಿ ಆದವರಿಗೆ ಇಬ್ಬರಿಗೂ ಕೈಗಳಿಗೆ ಹಗ್ಗವೊಂದನ್ನು ಕಟ್ಟಲಾಗುತ್ತದೆ. ಎಲ್ಲೇ ಹೋದರು ಅವರಿಬ್ಬರೂ ಒಟ್ಟಿಗೆ ಹೋಗಬೇಕು.

ಅದರಂತೆ ಹಾಸ್ಯನಟ ಗಿಲ್ಲಿ ಮತ್ತು ಕಾವ್ಯ ಅವರುಗಳು ಕಡಿಮೆ ಮತ ಪಡೆದುಕೊಂಡು ಇಬ್ಬರೂ ಸಹ ಜಂಟಿಯಾಗಿ ಬಿಗ್​​ಬಾಸ್ ಮನೆಯ ಒಳಗೆ ಹೋದರು. ಆ ಬಳಿಕ ಡಾಗ್ ಸತೀಶ್ ಅವರಿಗೂ ಸಹ ಕಡಿಮೆ ಮತಗಳು ಬಂದವು. ಆ ಬಳಿಕ ಬಂದ ಹಾಸ್ಯ ಕಲಾವಿದ ಚಂದ್ರಪ್ರಭಾ ಅವರಿಗೂ ಕಡಿಮೆ ಮತಗಳು ಬಂದವು. ಆದರೆ ಆ ಇಬ್ಬರೂ ಸಹ ಜಂಟಿಯಾಗಿ ಮನೆಯ ಒಳಗೆ ಹೋದರು.

ಇದನ್ನೂ ಓದಿ:Bigg Boss Kannada 12 Live: ಬಿಗ್​​ಬಾಸ್ ಕನ್ನಡ 12 ಗ್ರ್ಯಾಂಡ್ ಓಪನಿಂಗ್​​ ಲೈವ್

‘ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ ಅವರಿಗೂ ಕಡಿಮೆ ಮತಗಳು ಸಿಕ್ಕಿದವು, ಅವರಿಗೂ ಮುಂಚೆ ಬಂದಿದ್ದ ಧಾರಾವಾಹಿ ನಟಿ ಮಂಜು ಭಾಷಿಣಿ ಅವರಿಗೂ ಸಹ ಕಡಿಮೆ ಮತಗಳು ಸಿಕ್ಕಿದ್ದವು. ಹಾಗಾಗಿ ಆ ಇಬ್ಬರೂ ಸಹ ಪರಸ್ಪರ ಒಪ್ಪಿಗೆ ಮೇರೆಗೆ ಜಂಟಿಯಾಗಿ ಮನೆ ಪ್ರವೇಶಿಸಿದರು. ಬಳಿಕ ಬಂದ ನಟ ಅಭಿಷೇಕ್ ಅವರಿಗೆ ಹಾಗೂ ಅಶ್ವಿನಿ ಅವರಿಗೂ ಕಡಿಮೆ ಮತಗಳು ಬಂದವು. ಇಬ್ಬರೂ ಸಹ ಪರಸ್ಪರ ಒಪ್ಪಿಗೆ ಮೇರಿಗೆ ಜಂಟಿಯಾಗಿ ಒಳಗೆ ಹೋದರು.

ಅಮಿತ್, ಕರಿಬಸಪ್ಪ, ಗಾಯಕ ಮಾಳು, ಸ್ಪಂದನಾ ಮತ್ತು ರಕ್ಷಿತಾ ಶೆಟ್ಟಿ ಅವರುಗಳಿಗೂ ಸಹ ಮತಗಳು ಕಡಿಮೆ ಬಂದವು. ಕಡಿಮೆ ಮತಗಳನ್ನು ಪಡೆದವರಲ್ಲಿಯೂ ಕರಿಬಸಪ್ಪ ಹೆಚ್ಚು ಮತ ಪಡೆದಿದ್ದರಿಂದ ಅವರಿಗೆ ಜೊತೆಗಾರರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಯ್ತು. ಅಂತೆಯೇ ಅವರು ಆರ್​​ಜೆ ಅಮಿತ್ ಅವರನ್ನು ಆಯ್ಕೆ ಮಾಡಿದರು. ಅಂತಿಮವಾಗಿ ಗಾಯಕ ಮಾಳು, ಸ್ಪಂದನಾ ಮತ್ತು ರಕ್ಷಿತಾ ಶೆಟ್ಟಿ ಉಳಿದುಕೊಂಡರು. ಅವರಲ್ಲಿ ಯಾರು ಯಾರಿಗೆ ಜೊತೆ ಆಗಬೇಕು ಎಂಬುದನ್ನು ಬಿಗ್​​ಬಾಸ್ ನಿರ್ಣಯ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ