ಗೆದ್ದರೆ ಒಂದು ರೀತಿ, ಸೋತರೆ ಒಂದು ರೀತಿ? ಪ್ರತಾಪ್ ನಡವಳಿಕೆಗೆ ತಿರುಗಿ ಬಿತ್ತು ಮನೆ

ನಮ್ರತಾ, ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಅತಿ ಹೆಚ್ಚು ಅಂಕ ಪಡೆದು ಟಿಕೆಟ್ ರೇಸ್​ಗೆ ಅರ್ಹರಾದರು. ತುಕಾಲಿ ಸಂತೋಷ್, ಕಾರ್ತಿಕ್ ಹಾಗೂ ತನಿಷಾ ಅವರು ಸಂಗೀತಾಗೆ ವೋಟ್ ಹಾಕಿದರು. ಈ ಮೂಲಕ ಫಿನಾಲೆ ಟಿಕೆಟ್ ಸಂಗೀತಾ ಕೈ ಸೇರಿತು.

ಗೆದ್ದರೆ ಒಂದು ರೀತಿ, ಸೋತರೆ ಒಂದು ರೀತಿ? ಪ್ರತಾಪ್ ನಡವಳಿಕೆಗೆ ತಿರುಗಿ ಬಿತ್ತು ಮನೆ
ಪ್ರತಾಪ್-ಸಂಗೀತಾ
Updated By: ರಾಜೇಶ್ ದುಗ್ಗುಮನೆ

Updated on: Jan 13, 2024 | 8:33 AM

ಡ್ರೋನ್ ಪ್ರತಾಪ್ (Drone Prathap) ಅವರು ಈ ವಾರ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಅವರಿಗೆ ಬಿಗ್ ಬಾಸ್ ಫಿನಾಲೆ ಟಿಕೆಟ್ ಮಿಸ್ ಆಗಿದೆ. ಸಂಗೀತಾ ಟಿಕೆಟ್ ಪಡೆದು ಫಿನಾಲೆ ತಲುಪಿದ್ದಾರೆ. ಇದರಿಂದ ಡ್ರೋನ್ ಪ್ರತಾಪ್ ಅವರು ಡಲ್ ಆಗಿದ್ದಾರೆ. ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಅವರು ನಡೆದುಕೊಂಡ ರೀತಿಗೆ ವರ್ತೂರು ಸಂತೋಷ್ ಹಾಗೂ ಸಂಗೀತಾ ಸಾಕಷ್ಟು ಸಿಟ್ಟಾಗಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 12ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

ಈ ವಾರ ವೈಯಕ್ತಿಕ ಟಾಸ್ಕ್ ನೀಡಲಾಗಿತ್ತು. ಡ್ರೋನ್ ಪ್ರತಾಪ್, ನಮ್ರತಾ ಹಾಗೂ ಸಂಗೀತಾ ಅತಿ ಹೆಚ್ಚು ಅಂಕ ಪಡೆದು ಟಿಕೆಟ್ ರೇಸ್​ಗೆ ಅರ್ಹರಾದರು. ಆ ಬಳಿಕ ಉಳಿದ ಐವರು ಸದಸ್ಯರು ಯಾರು ಟಿಕೆಟ್​ಗೆ ಅರ್ಹರು ಎಂದು ವೋಟ್ ಮಾಡಿದರು. ಡ್ರೋನ್ ಪ್ರತಾಪ್​ಗೆ ವರ್ತೂರು ಸಂತೋಷ್ ವೋಟ್ ಮಾಡಿದರೆ, ನಮ್ರತಾಗೆ ವಿನಯ್ ಮತ ಚಲಾಯಿಸಿದರು. ತುಕಾಲಿ ಸಂತೋಷ್, ತನಿಷಾ ಹಾಗೂ ಕಾರ್ತಿಕ್ ಸಂಗೀತಾಗೆ ವೋಟ್ ಹಾಕಿದರು. ಈ ಮೂಲಕ ಫಿನಾಲೆ ಟಿಕೆಟ್ ಸಂಗೀತಾ ಕೈ ಸೇರಿತು. ಜೊತೆಗೆ ಅವರು ಕ್ಯಾಪ್ಟನ್ ಕೂಡ ಆದರು.

ಹೆಚ್ಚು ಅಂಕ ಪಡೆದ ಪ್ರತಾಪ್​ ತಮಗೆ ಫಿನಾಲೆ ಟಿಕೆಟ್ ಸಿಗಬಹುದು ಎಂದು ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಇದು ಅವರಿಗೆ ಬೇಸರ ಮೂಡಿಸಿತು. ಜೊತೆಗೆ ಕ್ಯಾಪ್ಟನ್ ಆಗಬೇಕು ಎನ್ನುವ ಅವರ ಕನಸು ಕನಸಾಗಿಯೇ ಉಳಿಯಿತು. ‘ನಾನು ಇಷ್ಟು ಶ್ರಮ ಹಾಕಿ ಆಡಿ ಅತಿ ಹೆಚ್ಚು ಅಂಕ ಗಳಿಸಿದರೂ ನನಗೆ ನೀವು ಯಾರೂ ವೋಟ್ ಮಾಡಲಿಲ್ಲ. ನಾನು ಫಿನಾಲೆ ಟಿಕೆಟ್ ಪಡೆಯಲು ಅರ್ಹನಾಗಿದ್ದೆ. ಕ್ಯಾಪ್ಟನ್ ಆಗಬೇಕು ಎಂದು ಕನಸು ಕಂಡಿದ್ದೆ’ ಎಂದು ಬೇಸರ ಮಾಡಿಕೊಂಡರು. ಸಂಗೀತಾ ಹ್ಯಾಂಡ್​ಶೇಕ್ ಮಾಡಲು ಬಂದರೂ ಅವರು ಅದಕ್ಕೆ ಒಪ್ಪಲಿಲ್ಲ.

ಪ್ರತಾಪ್ ನಡೆದುಕೊಂಡ ರೀತಿ ಸಂಗೀತಾಗೆ ಬೇಸರ ಮೂಡಿಸಿತು. ಈ ಕಾರಣಕ್ಕೆ ಅವರು ಸಂಗೀತಾ ಅಸಮಾಧಾನಗೊಂಡರು. ‘ಪ್ರತು ನಾನು ನಿನಗೆ ಒಳ್ಳೆಯದಾಗಲಿ ಎಂದು ಬಯಸಿದೆ. ಆದರೆ, ನೀನೇಕೆ ಇಷ್ಟು ಬೇಸರ ಮಾಡಿಕೊಂಡಿದ್ದೀಯಾ? ನಾನು ಗೆದ್ದಿರೋದು ನಿನಗೆ ಖುಷಿ ನೀಡಿಲ್ಲ ಅಲ್ಲವೇ’ ಎಂದರು. ಇದಕ್ಕೆ ಪ್ರತಾಪ್ ‘ಹೌದು’ ಎಂದು ನೇರವಾಗಿ ಉತ್ತರಿಸಿದರು. ಈ ಮಧ್ಯೆ ಸಂಗೀತಾ ಕಾಲಿಗೆ ಬೀಳೋಕೂ ಹೋದರು ಪ್ರತಾಪ್.

ಇದನ್ನೂ ಓದಿ: ಸಂಗೀತಾಗೆ ಫಿನಾಲೆ ಟಿಕೆಟ್ ಜೊತೆ ಮತ್ತೊಂದು ದೊಡ್ಡ ಅಡ್ವಾಂಟೇಜ್ ಕೊಟ್ಟ ಬಿಗ್ ಬಾಸ್

ಆ ಬಳಿಕ ವರ್ತೂರು ಸಂತೋಷ್ ಅವರು ಪ್ರತಾಪ್​ಗೆ ಕ್ಲಾಸ್ ತೆಗೆದುಕೊಂಡರು. ‘ಇಡೀ ಮನೆಯಲ್ಲಿ ಯಾರೂ ನನ್ನ ಪರ ಇಲ್ಲ ಎಂದು ಹೇಳ್ತಾ ಇದೀಯಲ್ಲ. ನಾನು ನಿನ್ನ ಪರವಾಗಿ ನಿಂತಿದ್ದು ಕಾಣುತ್ತಿಲ್ಲವೇ? ಇಡೀ ಮನೆಯಲ್ಲಿ ಮೊದಲಿನಿಂದ ನಾನು ನಿನಗೆ ಬೆಂಬಲ ನೀಡುತ್ತಾ ಬಂದಿದ್ದೀನಿ. ಆದರೆ, ಅದಕ್ಕೆ ನೀನು ಬೆಲೆ ಕೊಡಲೇ ಇಲ್ಲ. ನಾನು ನಿನಗೆ ವೋಟ್ ಮಾಡಿ ಏನು ಪ್ರಯೋಜನ? ನನ್ನನ್ನು ನೀನು ಪರಿಗಣಿಸುತ್ತಲೇ ಇಲ್ಲವಲ್ಲ’ ಎಂದು ವರ್ತೂರು ಸಂತೋಷ್ ಸಿಟ್ಟಾದರು. ಎಪಿಸೋಡ್ ಜೊತೆ ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 7:58 am, Sat, 13 January 24