ರೀಲ್ಸ್ ಮಾಡಿ ಮತ್ತೆ ಇಕ್ಕಟ್ಟಿಕೆ ಸಿಲುಕಿದ ರಜತ್; ಮತ್ತೊಂದು ದೂರು ದಾಖಲು

ಬಿಗ್ ಬಾಸ್ ಸ್ಪರ್ಧಿ ರಜತ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ಸಿಗರೇಟ್ ಹಚ್ಚಿ ವಿಡಿಯೋ ಮಾಡಿದ ಆರೋಪ ಅವರ ಮೇಲಿದೆ. ಈ ಕುರಿತು ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿಂದೆ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಪಾಲಾಗಿದ್ದ ರಜತ್, ಈಗ ಮತ್ತೆ ಅದೇ ರೀತಿ ವಿವಾದ ಸೃಷ್ಟಿಸಿದ್ದಾರೆ.

ರೀಲ್ಸ್ ಮಾಡಿ ಮತ್ತೆ ಇಕ್ಕಟ್ಟಿಕೆ ಸಿಲುಕಿದ ರಜತ್; ಮತ್ತೊಂದು ದೂರು ದಾಖಲು
ರಜತ್
Edited By:

Updated on: Feb 05, 2026 | 2:58 PM

ಬಿಗ್ ಬಾಸ್ ಸ್ಪರ್ಧಿ ಹಾಗೂ ನಟ ರಜತ್ (Rajat) ಅವರು ಈಗ ಮತ್ತೆ ಇಕ್ಕಟ್ಟಿಕ್ಕೆ ಸಿಲುಕಿದ್ದಾರೆ. ಈ ಮೊದಲು ಮಚ್ಚು ಹಿಡಿದು ರೀಲ್ಸ್ ಮಾಡಿ ಅವರು ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು. ಈಗ ಅವರು ಮತ್ತೆ ರೀಲ್ಸ್ ಮಾಡಿದ ಕಾರಣಕ್ಕೆ ತೊಂದರೆ ಅನುಭವಿಸುವಂತಾಗಿದೆ. ಮೈಸೂರು ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ರಜತ್ ವಿಡಿಯೋ ಮಾಡಿದ್ದಾರೆ. ಈ ವೇಳೆ ಅವರು ಸಿಗರೇಟ್ ಹಚ್ಚಿದ್ದಾರೆ. ಇದರಿಂದ ಅವರ ವಿರುದ್ಧ ದೂರು ದಾಖಲಾಗಿದೆ.

ಇತ್ತೀಚೆಗೆ ರಜತ್ ಅವರು ವಿಡಿಯೋ ಒಂದನ್ನು ಮಾಡಿದರು. ಈ ವಿಡಿಯೋದಲ್ಲಿ ಅವರು ರೆಟ್ರೋ ಸ್ಟೈಲ್ ಕಾರಲ್ಲಿ ಬರುತ್ತಾರೆ. ಈ ವೇಳೆ ಅವರು ಸಿಗರೇಟ್ ಕೂಡ ಹಚ್ಚುತ್ತಾರೆ. ಈ ವಿಡಿಯೋ ಶೂಟ್ ಆಗಿದ್ದು ಮೈಸೂರು ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎದುರು. ಈ ಸಂಬಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನಲ್ಲಿ ಏನಿದೆ?

ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಈ ದೂರನ್ನು ನೀಡಿದ್ದಾರೆ. ರಜತ್ ವಿರುದ್ದ ಎಫ್​ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ. ‘ರಜತ್ ಪಾರಂಪರಿಕ ಕಟ್ಟಡದ ಮುಂದೆ ಅನುಮತಿ ಪಡೆಯದೆ ವಿಡಿಯೋ ಮಾಡಿದ್ದಾರೆ. ಸಿಗರೇಟ್ ಹಿಡಿದು ಕಾರಿನಿಂದ ಇಳಿದಿದ್ದಾರೆ. ಇದು ಅವರ ಫಾಲೋರ್ಸ್‌ಗೆ ಕೆಟ್ಟ ಸಂದೇಶ ನೀಡುತ್ತದೆ. ಈ ಮೊದಲು ಕೂಡ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ಎಫ್​ಐಅರ್ ದಾಖಲಾಗಿತ್ತು. ಇದೀಗ ಮತ್ತೆ ಅದೇ ರೀತಿ ಮಾಡಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಕೋರಲಾಗಿದೆ.

ಇದನ್ನೂ ಓದಿ: ನಿಮಗೆ ಬೇಕಾದವರಿಗೇ ಕಿಚ್ಚನ ಚಪ್ಪಾಳೆ ಕೊಡೋಕೆ ಆಗತ್ತಾ? ರಜತ್ ಕಿಶನ್ ಖಡಕ್ ಪ್ರಶ್ನೆ

ಹಿಂದಿನ ಪ್ರಕರಣ

ಕಲರ್ಸ್​​ ರಿಯಾಲಿಟಿ ಶೋ ಒಂದರಲ್ಲಿ ರಜತ್ ಹಾಗೂ ವಿನಯ್ ಗೌಡ ಭಾಗಿ ಆಗಿದ್ದರು. ಶೋ ಶೂಟಿಂಗ್ ಮುಗಿದ ಬಳಿಕ ಸ್ಟುಡಿಯೋ ಹೊರಗೆ ವಿನಯ್ ಹಾಗೂ ರಜತ್ ನಿಜವಾದ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ಸಂಬಂಧ ಎಫ್​​ಐಆರ್ ದಾಖಲಿಸಿ, ಇಬ್ಬರನ್ನೂ ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ಜಾಮೀನು ಪಡೆದು ಇಬ್ಬರೂ ಹೊರ ಬಂದಿದ್ದರು. ನಂತರ ಕೋರ್ಟ್​​ಗೆ ಸರಿಯಾಗಿ ಹಾಜರಾಗದ ಕಾರಣ ಅವರನ್ನು ಮತ್ತೆ ಬಂಧಿಸಲಾಯಿತು. ಈ ಪ್ರಕರಣದ ನೆನಪು ಮಾಸುವ ಮುನ್ನವೇ ಅವರಿಗೆ ಮತ್ತೊಂದು ತೊಂದರೆ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.