‘ಬೃಂದಾವನ’ ಧಾರಾವಾಹಿಯಲ್ಲಿ ಕೂಡು ಕುಟುಂಬದ ಕಥೆ; ಹೈಲೈಟ್ ಆದ ‘ಕನ್ನಡತಿ’ ಅಮ್ಮಮ್ಮ

| Updated By: ರಾಜೇಶ್ ದುಗ್ಗುಮನೆ

Updated on: Sep 23, 2023 | 1:08 PM

‘ಗೀತಾ’ ಹಾಗೂ ‘ರಾಮಾಚಾರಿ’ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದು, ರಾಮ್ ಜಿ ನಿರ್ದೇಶನ ಇದೆ. ಈಗ ಅವರು ‘ಬೃಂದಾವನ’ ಧಾರಾವಾಹಿ ಮೂಲಕ ಅವರು ಬರಲು ರೆಡಿ ಆಗಿದ್ದಾರೆ. ಇದರ ಪ್ರೋಮೋ ಯೋಗರಾಜ್ ಭಟ್ ಅವರ ಧ್ವನಿಯಲ್ಲಿ ಮೂಡಿ ಬಂದಿದೆ.

‘ಬೃಂದಾವನ’ ಧಾರಾವಾಹಿಯಲ್ಲಿ ಕೂಡು ಕುಟುಂಬದ ಕಥೆ; ಹೈಲೈಟ್ ಆದ ‘ಕನ್ನಡತಿ’ ಅಮ್ಮಮ್ಮ
ಬೃಂದಾವನ
Follow us on

‘ಬೃಂದಾವನ’ ಧಾರಾವಾಹಿಯ ಟೈಟಲ್ ಇತ್ತೀಚೆಗೆ ರಿಲೀಸ್ ಆಗಿ ಗಮನ ಸೆಳೆದಿತ್ತು. ವಿವಿಧ ರೀತಿಯ ಧಾರಾವಾಹಿಗಳನ್ನು ನೀಡಿ ಫೇಮಸ್ ಆದವರು ನಿರ್ದೇಶಕ ರಾಮ್​ ಜಿ. ಅವರು ಈಗ ಹೊಸ ಧಾರಾವಾಹಿ  ನಿರ್ದೇಶನ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಒಂದಲ್ಲ, ಎರಡಲ್ಲ, 36 ಜನರಿರುವ ಕುಟುಂಬದ ಕಥೆಯನ್ನು ಹೇಳುತ್ತಿದ್ದಾರೆ. ‘ಕನ್ನಡತಿ’ ಧಾರಾವಾಹಿ ಮೂಲಕ ಅಮ್ಮಮ್ಮ ಎಂದೇ ಫೇಮಸ್ ಆಸಗಿದ್ದ ಚಿತ್ಕಲಾ ಬೀರಾದಾರ್ (Chitkala Biradar) ಅವರು ಮತ್ತೊಮ್ಮೆ ಕಿರುತೆರೆಯಲ್ಲಿ ಮಿಂಚಲು ರೆಡಿ ಆಗಿದ್ದಾರೆ.

ರಾಮ್ ಜಿ. ಅವರು ಈ ಮೊದಲು ಸಾಕಷ್ಟು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ. ‘ಪುಟ್ಟಗೌರಿ ಮದುವೆ’, ‘ಅಕ್ಕ’, ‘ಮಂಗಳಗೌರಿ’ ಮೊದಲಾದ ಧಾರಾವಾಹಿಗಳನ್ನು ಅವರು ನಿರ್ದೇಶನ ಮಾಡಿ ಗಮನ ಸೆಳೆದಿದ್ದಾರೆ. ‘ಗೀತಾ’ ಹಾಗೂ ‘ರಾಮಾಚಾರಿ’ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದು, ರಾಮ್ ಜಿ ನಿರ್ದೇಶನ ಇದೆ. ಈಗ ಅವರು ‘ಬೃಂದಾವನ’ ಧಾರಾವಾಹಿ ಮೂಲಕ ಅವರು ಬರಲು ರೆಡಿ ಆಗಿದ್ದಾರೆ. ಇದರ ಪ್ರೋಮೋ ಯೋಗರಾಜ್ ಭಟ್ ಅವರ ಧ್ವನಿಯಲ್ಲಿ ಮೂಡಿ ಬಂದಿದೆ.

‘ಈಗಿನ ಕಾಲದಲ್ಲಿ ಕೂಡು ಕುಟುಂಬ ಎಂದರೆ ಎಷ್ಟು ಜನ ಇರಬಹುದು? ನಾಲ್ಕು ಜನ, ಎಂಟು ಜನ, 16 ಜನ? ಈ ಕುಟುಂಬದಲ್ಲಿ 36 ಜನ ಇದ್ದಾರೆ. ಈ ಫ್ಯಾಮಿಲಿ ಫೋಟೋ ತೆಗೆಯಬೇಕು ಎಂದರೆ ಟ್ರಾಫಿಕ್​ನೇ ಸ್ಟಾಪ್ ಮಾಡಬೇಕಾಗುತ್ತದೆ’ ಎಂದು ಯೋಗರಾಜ್ ಭಟ್ ಧ್ವನಿಯಲ್ಲಿ ಪ್ರೋಮೋ ಮೂಡಿ ಬಂದಿದೆ. ಮನೆಯಲ್ಲಿ ಏಳೇಳು ಬಾತ್​ರೂಂ ಇದ್ರೂ ಸಾಲುತ್ತಿಲ್ಲ. ಇನ್ನು ಮನೆ ತುಂಬಾ ಮಕ್ಕಳು. ಪ್ರೀತಿಗೆ ಇಲ್ಲಿ ಕೊರತೆ ಇಲ್ಲ.

‘ಈ ಬೃಂದಾವನಕ್ಕೆ ಗೌರವದ ಕಿರೀಟ ಈ ಸುಧಾ ಮೂರ್ತಿ’ ಎಂದು ಚಿತ್ಕಲಾ ಅವರನ್ನು ಪರಿಚಯಿಸಲಾಗಿದೆ. ಮೊಮ್ಮೊಗನಿಗೆ ಮದುವೆ ಮಾಡಬೇಕು ಅನ್ನೋದು ಸುಧಾ ಮೂರ್ತಿ ಆಸೆ. ಆದರೆ, ಮನೆಯಲ್ಲಿರುವ ಎಲ್ಲರ ಒಪ್ಪಿಗೆ ಇದಕ್ಕೆ ಸಿಗಬೇಕು. ಇದು ಅಷ್ಟು ಸುಲಭಕ್ಕೆ ಸಿಗೋದಲ್ಲ. ಸದ್ಯ ಧಾರಾವಾಹಿ ಪ್ರೋಮೋ ಗಮನ ಸೆಳೆಯುತ್ತಿದೆ.

‘ಕನ್ನಡತಿ’ ಧಾರಾವಾಹಿಯಲ್ಲಿ ಚಿತ್ಕಲಾ ಅವರು ರತ್ನಮಾಲಾ ಹೆಸರಿನ ಪಾತ್ರ ಮಾಡಿದ್ದರು. ಆ ಧಾರಾವಾಹಿಯಲ್ಲಿ ಪತಿಯನ್ನು ಕಳೆದುಕೊಂಡು ಮನೆಯನ್ನು ಮುನ್ನಡೆಸುವ ಮಹಿಳೆಯಾಗಿ ಅವರು ನಟಿಸಿದ್ದರು. ‘ಬೃಂದಾವನ’ ಧಾರಾವಾಹಿಯಲ್ಲೂ ಅವರದ್ದು ಇದೇ ರೀತಿಯ ಪಾತ್ರ. ಇಡೀ ಮನೆಗೆ ಈ ಸುಧಾ ಮೂರ್ತಿ (ಚಿತ್ಕಲಾ) ಹೆಡ್.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಪಾತ್ರ ಮುಗಿದ ಬಳಿಕ ಸನ್ಯಾಸತ್ವ ಪಡೆದ ಚಿತ್ಕಲಾ ಬೀರಾದಾರ್

ಚಿತ್ಕಲಾ ಲುಕ್ ಬದಲಾಗಿದೆ. ‘ಅಮ್ಮಮ್ಮ ಲುಕಿಂಗ್ ಕ್ಯೂಟ್’ ಎಂದು ಅನೇಕರು ಬರೆದುಕೊಂಡಿದ್ದಾರೆ. ಇನ್ನು, ಧಾರಾವಾಹಿ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ‘ಈ ಧಾರಾವಾಹಿ ಎಲ್ಲರ ಗಮನ ಸೆಳೆಯೋದು ಪಕ್ಕಾ’ ಎಂದು ಅನೇಕರು ಹೇಳಿದ್ದಾರೆ. ‘ಗೀತಾ’ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇದು ಕೊನೆಗೊಂಡ ಬಳಿಕ ‘ಬೃಂದಾವನ’ ಆರಂಭ ಆಗಲಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ