ಕ್ಯಾಪ್ಟನ್ ಆದ ಹಂಸಾಗೆ ಖುಷಿಗಿಂತ ಕಣ್ಣೀರು, ದ್ವೇಷ ಸಿಕ್ಕಿದ್ದೇ ಜಾಸ್ತಿ; ಇದಕ್ಕೆಲ್ಲ ಕಾರಣ ಏನು?

ಹಂಸಾ ಅವರಿಗೆ ಬಿಗ್​ ಬಾಸ್​ ಆಟವೇ ಸಾಕು ಎಂಬಂತೆ ಆಗಿದೆ. ಎರಡೇ ವಾರಕ್ಕೆ ಅವರು ಸಾಕಷ್ಟು ಕಣ್ಣೀರು ಹಾಕಿದ್ದಾರೆ. ಈ ಸೀಸನ್​ನಲ್ಲಿ ಜಗಳವೇ ಹೈಲೈಟ್​ ಆಗುತ್ತಿದೆ. ಕ್ಯಾಪ್ಟನ್ ಆಗಿರುವ ಹಂಸಾ ಅವರು ಎಲ್ಲರ ನಿಷ್ಠುರ ಎದುರಿಸುವಂತಾಗಿದೆ. ಪ್ರತಿ ಟಾಸ್ಕ್​ ಆಡಿದಾಗಲೂ ಬಿಗ್​ ಬಾಸ್​ ಮನೆಯ ಸದಸ್ಯರು ಕ್ಯಾಪ್ಟನ್​ ಹಂಸಾ ಮೇಲೆ ಕಿರುಚಾಡುತ್ತಿದ್ದಾರೆ.

ಕ್ಯಾಪ್ಟನ್ ಆದ ಹಂಸಾಗೆ ಖುಷಿಗಿಂತ ಕಣ್ಣೀರು, ದ್ವೇಷ ಸಿಕ್ಕಿದ್ದೇ ಜಾಸ್ತಿ; ಇದಕ್ಕೆಲ್ಲ ಕಾರಣ ಏನು?
ಹಂಸಾ

Updated on: Oct 10, 2024 | 10:52 PM

ಪ್ರತಿ ಬಾರಿ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಕ್ಯಾಪ್ಟನ್​ ಆದವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಗುತ್ತವೆ. ಅಲ್ಲದೇ ಇಮ್ಯುನಿಟಿ ಸಿಗುತ್ತದೆ. ಅದಕ್ಕಾಗಿ ಎಲ್ಲರೂ ಕ್ಯಾಪ್ಟನ್​ ಆಗಲು ಇಷ್ಟಪಡುತ್ತಾರೆ. ಆದರೆ ಈ ಸೀಸನ್​ನಲ್ಲಿ ಮೊದಲ ಕ್ಯಾಪ್ಟನ್​ ಆದ ಹಂಸಾ ಅವರು ಸಿಕ್ಕಾಪಟ್ಟೆ ಪೇಜಿಗೆ ಸಿಲುಕಿದ್ದಾರೆ. ಎಲ್ಲ ಟಾಸ್ಕ್​ನ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿದೆ. ಪ್ರತಿ ಟಾಸ್ಕ್​ನಲ್ಲಿಯೂ ಬಿಗ್​ ಬಾಸ್​ ಮನೆಯ ಸದಸ್ಯರು ಇಲ್ಲಸಲ್ಲದ ಕಿರಿಕ್​ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಹಂಸಾ ಅವರೇ ಹೊಣೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ದಿನವೂ ಹಂಸಾ ಅವರು ಕಣ್ಣೀರು ಹಾಕುತ್ತಾ ಕಿರಿಕಿರಿ ಅನುಭವಿಸುವಂತಾಗಿದೆ.

ಜಗಳ ಆಡುವುದನ್ನೇ ಆಟದ ತಂತ್ರಗಾರಿಕೆ ಎಂದು ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನ ಬಹುತೇಕ ಎಲ್ಲ ಸ್ಪರ್ಧಿಗಳು ಅಂದುಕೊಂಡಂತಿದೆ. ಹಾಗಾಗಿ ಅವಕಾಶ ಸಿಕ್ಕಾಗಲೆಲ್ಲ ಸ್ಪರ್ಧಿಗಳು ಜಗಳ ಆಡುತ್ತಿದ್ದಾರೆ. ಟಾಸ್ಕ್ ಆಡುವಾಗ ಬೇಕುಬೇಕಂತಲೇ ಕಿರಿಕ್​ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಆಟ ಕೆಟ್ಟು ಹೋಗುತ್ತಿದೆ. ಅಂತಿಮವಾಗಿ ಕ್ಯಾಪ್ಟನ್​ ನಿವೇಚನೆಗೆ ಬಿಡಲಾಗುತ್ತದೆ. ಆಗ ಹಂಸಾಗೆ ನಿಜವಾದ ಕಷ್ಟ ಎದುರಾಗುತ್ತದೆ.

ತಮ್ಮ ವಿವೇಚನೆ ಬಳಸಿ ಹಂಸಾ ಅಂತಿಮ ತೀರ್ಮಾನ ನೀಡಿದಾಗ ಸ್ವರ್ಗದವರಾಗಲಿ, ನರಕದವರಾಗಲಿ ಒಪ್ಪಿಕೊಳ್ಳುವುದೇ ಇಲ್ಲ. ಟಾಸ್ಕ್​ನ ನಿಯಮಗಳನ್ನು ಸ್ಪರ್ಧಿಗಳು ಅರ್ಧಂಬರ್ಧ ಅರ್ಥ ಮಾಡಿಕೊಂಡು ಇಡೀ ಆಟವನ್ನು ಕೆಡಿಸುತ್ತಿದ್ದಾರೆ. ಟಾಸ್ಕ್​ ಉಸ್ತುವಾರಿ ಹೊತ್ತ ಹಂಸಾ ಅವರಿಗೆ ಜಗಳ ಪರಿಹರಿಸುವುದೇ ಕೆಲಸ ಆಗಿ ಬಿಟ್ಟಿದೆ. ಇದರಿಂದ ಸ್ವರ್ಗದವರಿಂದಲೂ, ನರಕದವರಿಂದಲೂ ಹಂಸಾ ಟೀಕೆಗೆ ಗುರಿ ಆಗುವಂತಾಗಿದೆ.

ಇದನ್ನೂ ಓದಿ: ‘ಏನೇನೋ ಬೊಗಳುತ್ತಾನೆ’: ಪದೇಪದೇ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ

ಈ ಹಿಂದಿನ ಸೀಸನ್​ಗಳಲ್ಲಿ ಮೊದಲ ಎರಡು ವಾರ ಮನೆಯಲ್ಲಿ ಸಾಧ್ಯವಾದಷ್ಟು ಶಾಂತಿ ತುಂಬಿರುತ್ತಿತ್ತು. ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಈ ಸೀಸನ್​ನಲ್ಲಿ ಹಾಗಿಲ್ಲ. ಆರಂಭದಿಂದಲೇ ಜಗಳಗಳು ಅತಿಯಾಗಿವೆ. ಹೆಜ್ಜೆ ಹೆಜ್ಜೆಗೂ ಗಲಾಟೆ ನಡೆಯುತ್ತಿದೆ. ಚಿಕ್ಕ ವಿಷಯವನ್ನು ಕೂಡ ಏರು ಧ್ವನಿಯಲ್ಲೇ ಹೇಳಲಾಗುತ್ತಿದೆ. ಬೇಕಂತಲೇ ಗೊಂದಲ ಸೃಷ್ಟಿಸಿ, ಅದರಿಂದ ಜಗಳ ಎಬ್ಬಿಸಿ ಇಡೀ ಮನೆಯ ಶಾಂತಿ ಕೆಡಿಸಲಾಗುತ್ತಿದೆ. ಇದರಿಂದ ಕಿರಿಕಿರಿ ಆಗಿರುವ ಹಂಸಾ ಅವರು ‘ಈ ವಾರ ನಾನೇ ಹೊರಗೆ ಹೋಗುತ್ತೇನೆ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us