
ನಟ ಕಿಚ್ಚ ಸುದೀಪ್ (Kichcha Sudeep) ಅವರು ಈವರೆಗೂ 11 ಸೀಸನ್ಗಳಲ್ಲಿ ಬಿಗ್ ಬಾಸ್ ಶೋ ನಡೆಸಿಕೊಟ್ಟಿದ್ದಾರೆ. ಆದರೆ 12ನೇ ಸೀಸನ್ಗೆ ಅವರು ನಿರೂಪಣೆ ಮಾಡಲ್ಲ ಎಂದು ತೀರ್ಮಾನಿಸಿದ್ದರು. ಆ ಸುದ್ದಿ ಕೇಳಿ ಅಭಿಮಾನಿಗಳಿಗೆ ಬೇಸರ ಆಗಿತ್ತು. ಸುದೀಪ್ ಇಲ್ಲ ಎಂದರೆ ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೀಕ್ಷಕರು ಹೇಳಿದ್ದರು. ಈಗ ಕಿಚ್ಚ ಸುದೀಪ್ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ. ಮತ್ತೆ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಕೂಡ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲೇ ಮುಂದುವರಿಯಲಿದೆ. ಈ ಕುರಿತು ‘ಕಲರ್ಸ್ ಕನ್ನಡ’ ವಾಹಿನಿ ಘೋಷಣೆ ಮಾಡಿದೆ.
ಕಿಚ್ಚ ಸುದೀಪ್ ಅವರನ್ನು ವೀಕ್ಷಕರು ಸಖತ್ ಇಷ್ಟಪಡುತ್ತಾರೆ. ಅವರನ್ನು ನೋಡುವ ಸಲುವಾಗಿಯೇ ವಾರಾಂತ್ಯದಲ್ಲಿ ಅಭಿಮಾನಿಗಳು ಟಿವಿ ಎದುರು ಕೂರುತ್ತಾರೆ. ಸುದೀಪ್ ಇಲ್ಲದೇ ಇದ್ದರೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ನೋಡುವುದಿಲ್ಲ ಎಂದು ಕೂಡ ಅನೇಕ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದರು. ಆದರೆ ಈಗ ಸುದೀಪ್ ಅವರೇ ನಿರೂಪಣೆ ಮಾಡಲು ಒಪ್ಪಿಕೊಂಡಿರುವುದು ಎಲ್ಲರಿಗೂ ಖುಷಿ ತಂದಿದೆ.
ಬಿಗ್ ಬಾಸ್ ಶೋ ನಡೆಸಿಕೊಡುವುದು ಸುಲಭವಲ್ಲ. ಅದಕ್ಕೆ ಸಾಕಷ್ಟು ಬದ್ಧತೆ ಬೇಕಾಗುತ್ತದೆ. ಸುದೀಪ್ ಅವರು ಸತತವಾಗಿ 11 ಸೀಸನ್ಗಳನ್ನು ನಡೆಸಿಕೊಟ್ಟಿದ್ದಾರೆ. ಇದು ದಾಖಲೆ ಕೂಡ ಹೌದು. ಆ ದಾಖಲೆಯ ಜರ್ನಿಯನ್ನು ಅವರು ಮುಂದುವರಿಸಲಿದ್ದಾರೆ. 12ನೇ ಸೀಸನ್ ನಡೆಸಿಕೊಡಲು ಅವರು ಒಪ್ಪಿಕೊಂಡಿದ್ದರಿಂದ ವೀಕ್ಷಕರ ಉತ್ಸಾಹ ಹೆಚ್ಚಾಗಿದೆ.
ಸುದೀಪ್ ಅವರಿಗೆ ಬಿಗ್ ಬಾಸ್ ಬಗ್ಗೆ ಕೆಲವು ಅಸಮಾಧಾನ ಇದೆಯಾ ಎಂಬ ಅನುಮಾನ ಮೂಡಿತ್ತು. ಆ ಕಾರಣದಿಂದಲೇ ಅವರು ಶೋ ನಿರೂಪಣೆ ಮಾಡಲ್ಲ ಎಂದು ಕಳೆದ ಸೀಸನ್ ಅಂತ್ಯದಲ್ಲಿ ಘೋಷಿಸಿರಬಹುದಾ ಎಂಬ ಪ್ರಶ್ನೆ ಕೂಡ ಉದ್ಭವ ಆಗಿತ್ತು. ಆದರೆ ಆ ರೀತಿ ಏನೂ ಅಸಮಾಧಾನ ಇಲ್ಲ, ತಾವು ಯಾವುದೇ ಷರತ್ತು ಹಾಕಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಅಲ್ಲದೇ ಸ್ಪರ್ಧಿಗಳ ಆಯ್ಕೆ ಬಗ್ಗೆಯೂ ತಮಗೆ ಅಸಮಾಧಾನ ಇಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ 12’ ಮಹತ್ವದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಭಾಗಿ; ಲೈವ್ ನೋಡಿ..
‘ಬಿಗ್ ಬಾಸ್ ಕನ್ನಡ ಸೀಸನ್ 12’ ಯಾವಾಗಿನಿಂದ ಪ್ರಸಾರ ಆಗಲಿದೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ‘ಕಲರ್ಸ್ ಕನ್ನಡ’ ತಿಳಿಸಿದೆ. ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬ ಲೆಕ್ಕಾಚಾರ ಈಗಲೇ ಶುರುವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.