
‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಮೊದಲ ವಾರದ ಪಂಚಾಯಿತಿ ನಡೆದಿದೆ. ಈ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಹಲವು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರಲ್ಲೂ ಗಗನ್ ಚಿನ್ನಪ್ಪ, ತಾಂಡವ್ ರಾಮ್ ಅವರಿಗೆ ಸಾಕಷ್ಟು ಎಚ್ಚರಿಕೆ ನೀಡಿದ್ದಾರೆ. ಸಂಚಿಕೆ ನಡೆಯುವಾಗ ಗಗನ್ ಚಿನ್ನಪ್ಪ ಅವರು ಬಹಳ ಸಲುಗೆಯಿಂದ ಮಾತನಾಡಲು ಶುರು ಮಾಡಿದರು. ಆಗ ಅವರು ಬಳಸಿದ ಪದಗಳಿಂದ ಕಿಚ್ಚ ಸುದೀಪ್ ಅವರಿಗೆ ಕೋಪ ಬಂತು. ಮಾತಿನ ಭರದಲ್ಲಿ ಗಡಿ ಮೀರಿದ ಗಗನ್ ಚಿನ್ನಪ್ಪ ಅವರಿಗೆ ಸುದೀಪ್ ಅವರು ಖಡಕ್ ತಿರುಗೇಟು ನೀಡಿದರು.
ಗಗನ್ ಚಿನ್ನಪ್ಪ ಅವರು ಮೊದಲ ವಾರವೇ ವಿಐಪಿ ಆಗುವ ಅವಕಾಶ ಪಡೆದರು. ಆದ್ದರಿಂದ ಅವರ ಆಟವನ್ನು ಕಿಚ್ಚ ಸುದೀಪ್ ಹೊಗಳಿದರು. ‘ನೀವು ಚೆನ್ನಾಗಿ ಆಡಿದ್ದೀರಿ. ಅದು ಸುಲಭ ಅಲ್ಲ’ ಎಂದು ಸುದೀಪ್ ಹೇಳಿದರೆ. ಆದರೆ ಗಗನ್ ಅವರನ್ನು ವಿಐಪಿ ಆಗಲು ಬಿಟ್ಟುಕೊಟ್ಟ ಇನ್ನುಳಿದ ಸ್ಪರ್ಧಿಗಳನ್ನು ಕೂಡ ಎಚ್ಚರಿಸಲು ಸುದೀಪ್ ಪ್ರಯತ್ನಿಸಿದರು. ಅದಕ್ಕೆ ಉತ್ತರಿಸಿದ ಗಗನ್ ಅವರು, ‘ಮೊದಲು ನನ್ನನ್ನು ಹೊಗಳಿ, ಈಗ ಹಾಕಿಕೊಡುತ್ತಿದ್ದೀರಲ್ಲ ಸರ್’ ಎಂದು ಹೇಳಿದರು.
ಈ ಮಾತು ಕೇಳಿಸಿಕೊಂಡ ಸುದೀಪ್ ಅವರಿಗೆ ವಿಪರೀತಿ ಕೋಪ ಬಂತು. ‘ನಮ್ಮ-ನಿಮ್ಮ ನಡುವೆ ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತೇನೆ. ಹಾಕಿಕೊಡಕ್ಕೆ ನನಗೆ ಬರಲ್ಲ. ಡೈರೆಕ್ಟ್ ಆಗಿ ಹಾಕುತ್ತೇನೆ. ನಾನು ಏನು ಮಾತನಾಡಲು ಹೊರಟಿದ್ದೇನೆ ಎಂಬುದು ಗೊತ್ತಿಲ್ಲದೇ ನೀವು ಮುಂಚಿತವಾಗಿ ಮಾತನಾಡಿದರೆ ನೀವು ನನ್ನನ್ನು ಎದುರು ಹಾಕಿಕೊಳ್ಳುತ್ತೀರಿ’ ಎಂದು ಸುದೀಪ್ ಅವರು ಎಚ್ಚರಿಕೆ ನೀಡಿದರು.
‘ನಿಮ್ಮನ್ನು ಹೊಗಳಿದ ಮಾತ್ರಕ್ಕೆ ನಾನು ಬೇರೆಯವರ ಬಗ್ಗೆ ಮಾತನಾಡಬಾರದು ಅಂತೇನೂ ಇಲ್ಲ. ಹೊಗಳಿ ಹಾಕ್ಕೊಡ್ತೀರಿ ಎಂದರೆ ಯಾವ ರೀತಿಯ ಭಾಷೆ ಇದು? ನಿಮಗೂ ನಮಗೂ ಸ್ನೇಹವೇ ಇಲ್ಲ. ಇಲ್ಲಿ ನಾನು ನಿರೂಪಕ, ನೀವು ಸ್ಪರ್ಧಿ. ನಾವು ಗೌರವಯುತವಾಗಿ ಮಾತನಾಡಬೇಕು. ನಿಮ್ಮನ್ನು ಹೊಗಳಿದ ರೀತಿಯಲ್ಲೇ ಬೇರೆಯವರನ್ನು ಸರಿಪಡಿಸುವ ಅಧಿಕಾರ ಕೂಡ ನನಗೆ ಇದೆ. ಇದನ್ನು ಹಾಕ್ಕೊಡೋದು ಎನ್ನಲ್ಲ. ತಿದ್ದುವುದು ಅಂತಾರೆ’ ಎಂದು ಸುದೀಪ್ ಹೇಳಿದರು.
ಇದನ್ನೂ ಓದಿ: ಬಿಗ್ ಬಾಸ್: ಉಳಿದವರಿಗೆ ಏಕವಚನ ಕೊಟ್ಟು ಗೌರವ ನಿರೀಕ್ಷೆ ಮಾಡಿದ ಗಗನ್ ಚಿನ್ನಪ್ಪ
ಸುದೀಪ್ ಅವರು ಈ ರೀತಿ ಹೇಳಿದ ಬಳಿಕ ಗಗನ್ ಚಿನ್ನಪ್ಪ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಸಲುಗೆ ತೆಗೆದುಕೊಳ್ಳಲು ಹೋಗಿ ಮಿತಿಮೀರಿ ಮಾತನಾಡಿದ್ದಕ್ಕೆ ಅವರು ಕ್ಷಮೆ ಕೇಳಿದರು. ಅವರ ಕ್ಷಮೆಯನ್ನು ಸುದೀಪ್ ಒಪ್ಪಿದರು. ಇನ್ಮುಂದೆ ಈ ರೀತಿ ಮಾತನಾಡಬಾರದು ಎಂಬುದು ಇನ್ನುಳಿದ ಸ್ಪರ್ಧಿಗಳಿಗೂ ಪಾಠವಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.