‘ಅನುಪಮಾ’ ಧಾರಾವಾಹಿ ಶೂಟಿಂಗ್ ಸೆಟ್ನಲ್ಲಿ ಅಗ್ನಿ ಅವಘಡ; ಭಯಾನಕ ವಿಡಿಯೋ ವೈರಲ್
ಅಗ್ನಿ ಅವಘಡ ಸಂಭವಿಸಿದಾಗ ಅದೃಷ್ಟವಶಾತ್ ಚಿತ್ರೀಕರಣ ನಡೆಯುತ್ತಿರಲಿಲ್ಲ. ಆದ್ದರಿಂದ ಪ್ರಾಣ ಹಾನಿ ಆಗಿಲ್ಲ. ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ‘ಅನುಪಮಾ’ ಶೂಟಿಂಗ್ ಸೆಟ್ ಸಂಪೂರ್ಣ ಭಸ್ಮವಾಗಿದೆ. ಘಟನೆ ಬಗ್ಗೆ ತನಿಖೆ ಆಗಬೇಕು ಎಂದು ಅಖಿಲ ಭಾರತ ಸಿನಿಮಾ ಕಾರ್ಮಿಕರ ಒಕ್ಕೂಟ ಒತ್ತಾಯಿಸಿದೆ.

ಹಿಂದಿಯ ಜನಪ್ರಿಯ ಧಾರಾವಾಹಿ ‘ಅನುಪಮಾ’ (Anupamaa Serial) ಶೂಟಿಂಗ್ ಸೆಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮುಂಬೈನ ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಸಿಟಿಯಲ್ಲಿ (Dadasaheb Phalke Chitranagari) ಈ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಸೋಮವಾರ (ಜೂನ್ 23) ಮುಂಜಾನೆ ಈ ಘಟನೆ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ. ಘಟನೆಯ ಬಗ್ಗೆ ತನಿಖೆ ಮಾಡಲಾಗುತ್ತಿದೆ.
ಭಾನುವಾರ (ಜೂನ್ 22) ಚಿತ್ರೀಕರಣಕ್ಕೆ ರಜೆ ಇತ್ತು. ಸೋಮವಾರದ ಶೂಟಿಂಗ್ ಆರಂಭ ಆಗುವುದಕ್ಕೂ ಮುನ್ನವೇ ಈ ದುರಂತ ಸಂಭವಿಸಿದೆ. ಈ ವೇಳೆ ಸೆಟ್ನಲ್ಲಿ ಕಲಾವಿದರು ಯಾರೂ ಇರಲಿಲ್ಲ. ಆ ಕಾರಣದಿಂದ ಜೀವ ಹಾನಿ ಆಗುವುದು ತಪ್ಪಿದೆ. ಇಡೀ ಸ್ಟುಡಿಯೋಗೆ ಬೆಂಕಿ ಹೊತ್ತಿಕೊಂಡಿರುವ ಭಯಾನಕ ವಿಡಿಯೋ ವೈರಲ್ ಆಗಿದೆ.
‘ಅನುಪಮಾ’ ಧಾರಾವಾಹಿ ನಿರ್ಮಾಪಕರು ಮತ್ತು ವಾಹಿನಿಯವರು ಸೂಕ್ತ ಭದ್ರತಾ ಕ್ರಮ ತೆಗೆದುಕೊಳ್ಳದೇ ಇರುವುದೇ ಈ ಅವಘಡಕ್ಕೆ ಕಾರಣ ಎಂದು ಆರೋಪಿಸಲಾಗುತ್ತಿದೆ. ಅಖಿಲ ಭಾರತ ಸಿನಿಮಾ ಕಾರ್ಮಿಕರ ಒಕ್ಕೂಟವು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ನಿರ್ಲಕ್ಷ್ಯದಿಂದಲೇ ಈ ಘಟನೆ ಸಂಭವಿಸಿದೆ. ಹಾಗಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
VIDEO | Mumbai: Fire breaks out on the set of TV show ‘Anupamaa’ at Film City, Goregaon. Further details awaited.
(Source: Third Party)
(Full video available on PTI Videos – https://t.co/n147TvqRQz) pic.twitter.com/LyCY2wAUFx
— Press Trust of India (@PTI_News) June 23, 2025
‘ಈ ಅಗ್ನಿ ಅನಾಹುತದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ಫಿಲ್ಮ್ ಸಿಟಿಯ ಮ್ಯಾನೇಜಿಂಗ್ ಡೈರೆಕ್ಟರ್ ಅಮಾನತು ಮಾಡಬೇಕು. ನಿರ್ಮಾಪಕರು ಕಾರ್ಮಿಕರ ಸುರಕ್ಷತೆಗೆ ಬದ್ಧರಾಗಿಲ್ಲ. ಇದರಿಂದ ಸಾವಿರಾರು ಕಾರ್ಮಿಕರನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ’ ಎಂದಿದ್ದಾರೆ ಅಖಿಲ ಭಾರತ ಸಿನಿಮಾ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಸುರೇಶ್ ಶ್ಯಾಮ್ಲಾಲ್ ಗುಪ್ತಾ.
ಇದನ್ನೂ ಓದಿ: ಅಗ್ನಿ ಅವಘಡ: ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಮೊಬೈಲ್ ಅಂಗಡಿ
‘ನಿರ್ಮಾಪಕರು, ವಾಹಿನಿಯರು, ಫಿಲ್ಮ್ ಸಿಟಿ ಮ್ಯಾನೇಜರ್, ಲೇಬರ್ ಕಮಿಷನರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ವಿಮೆ ಹಣ ಪಡೆಯುವ ಸಲುವಾಗಿ ಬೇಕಂತಲೇ ಬೆಂಕಿ ಹಾಕಿರಬಹುದೇ ಎಂಬುದನ್ನು ತನಿಖೆ ಮಾಡಬೇಕು’ ಎಂದು ಕೂಡ ಕಾರ್ಮಿಕರ ಒಕ್ಕೂಟ ಒತ್ತಾಯಿಸಿದೆ. ಘಟನೆಗೆ ಸಂಬಂಧಿಸಿದಂತೆ ಧಾರಾವಾಹಿ ತಂಡವು ಪ್ರತಿಕ್ರಿಯೆ ನೀಡಿದೆ. ಅಗ್ನಿ ಅವಘಡದಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ತಂಡ ಸ್ಪಷ್ಟಪಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








