3 ದಿನ ಸ್ನಾನ ಮಾಡಿಲ್ಲ ಹನುಮಂತ; ಉತ್ತರ ಕರ್ನಾಟಕದ ಮರ್ಯಾದೆ ತೆಗಿಬೇಡ ಎಂದ ಸುರೇಶ್

|

Updated on: Oct 25, 2024 | 9:18 PM

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಸಿಂಗರ್​ ಹನುಮಂತ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ನೀಡಿರುವುದು ಗೊತ್ತೇ ಇದೆ. ಕಳೆದ ಮೂರು ದಿನದಿಂದ ಹನುಮಂತ ಸ್ನಾನವೇ ಮಾಡಿಲ್ಲ. ಹಾಗಾಗಿ ಹನುಮಂತನಿಗೆ ಗೋಲ್ಡ್ ಸುರೇಶ್​ ಬುದ್ಧಿ ಹೇಳಿದ್ದಾರೆ. ಆದರೆ ಸುರೇಶ್​ ಹೇಳಿದ ಮಾತಿಗೆ ಹನುಮಂತ ಸ್ವಲ್ಪವೂ ಬೆಲೆ ಕೊಟ್ಟಿಲ್ಲ.

3 ದಿನ ಸ್ನಾನ ಮಾಡಿಲ್ಲ ಹನುಮಂತ; ಉತ್ತರ ಕರ್ನಾಟಕದ ಮರ್ಯಾದೆ ತೆಗಿಬೇಡ ಎಂದ ಸುರೇಶ್
ಧನರಾಜ್, ಗೋಲ್ಡ್ ಸುರೇಶ್, ಹನುಮಂತ
Follow us on

ಈಗಾಗಲೇ ಬೇರೆ ಬೇರೆ ಟಿವಿ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿ ಪಡೆದಿರುವ ಸಿಂಗರ್​ ಹನುಮಂತ ಈಗ ಬಿಗ್ ಬಾಸ್​ ಸ್ಪರ್ಧಿ. ಅವರು ದೊಡ್ಮನೆಯೊಳಗೆ ಕಾಲಿಟ್ಟು 5 ದಿನ ಕಳೆದಿದೆ. ಆದರೆ 3 ದಿನ ಅವರು ಸ್ನಾನವನ್ನೇ ಮಾಡಿಲ್ಲ! ಈ ವಿಚಾರವನ್ನು ಗೋಲ್ಡ್ ಸುರೇಶ್ ಅವರು ಪ್ರಸ್ತಾಪ ಮಾಡಿದ್ದಾರೆ. ಗೋಲ್ಡ್ ಸುರೇಶ್ ಮತ್ತು ಹನುಮಂತ ಅವರು ಉತ್ತರ ಕರ್ನಾಟಕದವರು. ಹಾಗಾಗಿ ಇಬ್ಬರ ನಡುವೆ ಮೊದಲಿನ ದಿನದಿಂದಲೂ ಸ್ನೇಹ ಬೆಳೆದಿದೆ. ಹನುಮಂತನಿಗೆ ಸ್ನಾನ ಮಾಡು ಎಂದು ಗೋಲ್ಡ್ ಸುರೇಶ್​ ಅವರು ಒತ್ತಾಯ ಮಾಡಿದ್ದಾರೆ. ಆದರೆ ತಾವು ಸ್ನಾನ ಮಾಡಲ್ಲ ಎಂದು ಹನುಮಂತ ಹಠ ಹಿಡಿದಿದ್ದಾರೆ.

ಬಿಗ್​ ಬಾಸ್​ ಶೋನ 25ನೇ ದಿನ ಸಂಜೆ 5 ಗಂಟೆ 10 ನಿಮಿಷಕ್ಕೆ ಗೋಲ್ಡ್ ಸುರೇಶ್ ಮತ್ತು ಹನುಮಂತ ಅವರು ಮಾತನಾಡುತ್ತಾ ಕುಳಿತಿದ್ದರು. ಅವರ ಜೊತೆ ಧನರಾಜ್​ ಕೂಡ ಇದ್ದರು. ಹನುಮಂತ ಸ್ನಾನ ಮಾಡಿಲ್ಲ ಎಂಬುದು ಗೋಲ್ಡ್ ಸುರೇಶ್ ಅವರಿಗೆ ಗೊತ್ತಾಯಿತು. ‘ನಿನ್ನೆ ಮತ್ತು ಇವತ್ತು ನೀನು ಜಳಕ ಮಾಡಿಲ್ಲ’ ಎಂದು ಅವರು ಹೇಳಿದರು. ‘ನಿನ್ನೆ ಮಾತ್ರವಲ್ಲ ಮೊನ್ನೆ ಕೂಡ ನಾನು ಸ್ನಾನ ಮಾಡಿಲ್ಲ’ ಎಂದರು ಹನುಮಂತ.

‘ನಾರುತ್ತಿದ್ದೀಯಲೇ.. ಗಬ್ಬಲೇ.. ಹನುಮ್ಯ.. ನೀನು ನಮ್ಮ ಉತ್ತರ ಕರ್ನಾಟಕದ ಮರ್ಯಾದೆ ತೆಗೆಯುತ್ತೀಯಲೇ. ಮಂದಿ ಏನು ಅಂದುಕೊಳ್ಳಲ್ಲ ಹೇಳು? ಏನ್ರಿ.. ನೀವು ಉತ್ತರ ಕರ್ನಾಟಕದ ಮಂದಿ 3-4 ದಿನ ಜಳಕ ಮಾಡಂಗಿಲ್ಲ ಅಂತ ಕೇಳಿದರೆ ನಾವು ಏನು ಹೇಳೋದು?’ ಎಂದು ಸುರೇಶ್​ ಪ್ರಶ್ನಿಸಿದರು. ‘ನಾವು ಮಾಡಂಗಿಲ್ಲ’ ಎಂದು ಉತ್ತರಿಸಿದರು ಹನುಮಂತ.

ಇದನ್ನೂ ಓದಿ: ಟಾಯ್ಲೆಟ್ ಬಳಸುವುದು ಹೇಗೆ? ಹನುಮಂತನಿಗೆ ತೋರಿಸಿಕೊಟ್ಟ ಧನರಾಜ್

‘ನಾಳೆ ಸ್ನಾನ ಮಾಡುತ್ತೇನೆ ಬಿಡು’ ಎಂದು ಹನುಮಂತ ಹೇಳಿದರು. ‘ಅದೇ ನಾಲ್ಕು ದಿನಕ್ಕೊಮ್ಮೆ’ ಎಂದರು ಸುರೇಶ್​. ‘ಬಿಟ್ಟರೆ 8 ದಿನಕ್ಕೆ ಒಮ್ಮೆ ಸ್ನಾನ ಮಾಡ್ತೀನಿ. ನಾನು ಜಳಕ ಮಾಡಿಲ್ಲ ಅಂದ್ರೆ ನಿನಗೆ ಬೇಜಾರಾಗುತ್ತೆ ಸುಮ್ಮನೆ’ ಎಂದಿದ್ದಾರೆ ಹನುಮಂತ. ‘ನನಗೆ ಏನೂ ಬೇಜಾರು ಇಲ್ಲ. ಆದರೆ ನೀನು ಕೆಟ್ಟದಾಗಿ ನಾರುತ್ತಿದ್ದೀಯ’ ಎಂದು ಗೋಲ್ಡ್ ಸುರೇಶ್ ಅವರು ಹೇಳಿದ್ದಾರೆ. ‘ಹೌದೇನೋ ಹುಲಿ.. ನಾನು ನಾರುತ್ತಿದ್ದೀನಾ?’ ಎಂದು ಪಕ್ಕದಲ್ಲೇ ಕೂತಿದ್ದ ಧನರಾಜ್​ಗೆ ಹನುಮಂತ ಪಶ್ನೆ ಕೇಳಿದರು. ‘ಎ.ಸಿ. ಇದೆಯಲ್ಲ.. ಹೇಗೆ ನಾರೋದು? ನಾನು ಕೂಡ ಇವತ್ತು ಟಾಸ್ಕ್ ಬರುತ್ತೆ ಅಂತ ಸ್ನಾನ ಮಾಡಿಲ್ಲ’ ಎಂದು ಧನರಾಜ್​ ಹೇಳಿದ್ದಾರೆ. ‘ಹನುಮಂತನ ಜೊತೆ ಸೇರಿ ಧನರಾಜ್​ ಕೂಡ ಕೆಟ್ಟ’ ಎಂದು ಸುರೇಶ್​ ನಕ್ಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.