ಮಕ್ಕಳು ಜನಿಸಿದಾಗ ಜೇಬಿನಲ್ಲಿ ಎಷ್ಟು ಹಣವಿತ್ತು: ನಡೆದು ಬಂದ ಹಾದಿ ನೆನೆದ ನಟ ಪ್ರೇಮ್

|

Updated on: May 08, 2023 | 8:00 AM

Weekend With Ramesh: ಇಬ್ಬರು ಮಕ್ಕಳು ಜನಿಸಿದಾಗ ತಮ್ಮ ಜೇಬಿನಲ್ಲಿ ಇದ್ದ ಹಣವೆಷ್ಟು ಎಂಬುದನ್ನು ನೆನಪು ಮಾಡಿಕೊಂಡ ಪ್ರೇಮ್, ಮಕ್ಕಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.

ಮಕ್ಕಳು ಜನಿಸಿದಾಗ ಜೇಬಿನಲ್ಲಿ ಎಷ್ಟು ಹಣವಿತ್ತು: ನಡೆದು ಬಂದ ಹಾದಿ ನೆನೆದ ನಟ ಪ್ರೇಮ್
ಪ್ರೇಮ್ ಮಕ್ಕಳು
Follow us on

ನಟ ಪ್ರೇಮ್ (Prem) ಚಿತ್ರರಂಗಕ್ಕೆ (Sandalwood) ಬರುವ ಮೊದಲೇ ಮದುವೆ ಆಗಿಬಿಟ್ಟಿದ್ದರೂ ಅದೂ ಮನೆಯವರ ವಿರೋಧದ ನಡುವೆ. ಆದರೆ ಮದುವೆ ಆದಮೇಲೆ ಪ್ರೇಮ್​ ಪರಿಸ್ಥಿತಿ ಇನ್ನಷ್ಟು ವಿಷಮವಾಯಿತು. ಇರಲು ಮನೆಯಿಲ್ಲದೆ ಅತ್ತೆಯವರ ಮನೆಯಲ್ಲಿಯೇ ಇರಬೇಕಾಯಿತು. ಹಾಗೋ ಹೀಗೋ ತುತ್ತಿನ ಚೀಲ ತುಂಬಿಸುತ್ತಿದ್ದ ಉದ್ಯಮವೂ ನಷ್ಟದ ಪಾಲಾಯಿತು. ಹಾಗಿರುವಾಗ ಯಾರೋ ಗೆಳೆಯನ ಸಹಾಯದಿಂದ ಧಾರಾವಾಹಿಯಲ್ಲಿ 300 ದಿನಗೂಲಿಯ ಎಕ್ಸ್​ಟ್ರಾ ಆಗಿ ನಟಿಸಲು ಹೋದವನಿಗೆ ಟಿ.ಎನ್.ಸೀತಾರಾಮ್ (TN Seertharam) ಅವರು ಹೀರೋನ ಗೆಳೆಯನ ಪಾತ್ರ ನೀಡಿದರು.

ಮನ್ವಂತರ ಧಾರಾವಾಹಿಯಲ್ಲಿ ನಾಯಕ ಸುನಿಲ್ ರಾವ್ ಗೆಳೆಯನಾಗಿದ್ದ ಪ್ರೇಮ್​ಗೆ ಬೇರೆ ಧಾರಾವಾಹಿಗಳಿಂದಲೂ ಅವಕಾಶಗಳು ಬರಲಾರಂಭಿಸಿದರು. ಅದೇ ವೇಳೆಗೆ ಜಾಹಿರಾತೊಂದರ ನೆರವಿನ ಮೂಲಕ ಪ್ರಾಣ ಸಿನಿಮಾಕ್ಕೆ ಆಯ್ಕೆ ಆಗಿ ಮೊತ್ತ ಮೊದಲ ಬಾರಿಗೆ ನಾಯಕ ನಟರಾದರು ಪ್ರೇಮ್. ವಿಶೇಷವೆಂದರೆ ಪ್ರೇಮ್ ಜೀವನದ ಮೊದಲ ಸಿನಿಮಾ ಪ್ರಾಣದ ಮುಹೂರ್ತ ನಡೆವಾಗ ಅವರ ಮಗಳು ಇನ್ನೂ ಆರು ದಿನದ ಕೂಸಂತೆ.

ವೀಕೆಂಡ್ ವಿತ್ ರಮೇಶ್​ನಲ್ಲಿ ಅವರೇ ಹೇಳಿಕೊಂಡಿರುವಂತೆ, ನನ್ನ ಮಗಳು ಜನಿಸಿದಾಗ ನನ್ನ ಹತ್ತಿರ ಮುನ್ನೂರು ರುಪಾಯಿಗಳಿದ್ದವು. ಆದರೆ ನನಗೆ ಮೊತ್ತ ಮೊದಲ ಸಿನಿಮಾ ಅವಕಾಶ ದೊರಕಿತ್ತು. ಆಕೆ ನನಗೆ ಅದೃಷ್ಟ ತಂದುಕೊಟ್ಟಳು. ಆದರೆ ನನ್ನ ಮಗ ಹುಟ್ಟಿದಾಗ ನನ್ನ ಬಳಿ ಭರಪೂರವಾಗಿ ಹಣ ಇತ್ತು. ನನ್ನ ಮಗ ಹುಟ್ಟಿದ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಜೊತೆ-ಜೊತೆಯಲಿ ಸಿನಿಮಾಕ್ಕಾಗಿ ಅಡ್ವಾನ್ಸ್ ಆಗಿ ದೊಡ್ಡ ಮೊತ್ತದ ಹಣ ಕೊಟ್ಟಿದ್ದರು ಅದು ನನ್ನ ಜೇಬಿನಲ್ಲಿತ್ತು ಎಂದು ನೆನಪು ಮಾಡಿಕೊಂಡಿದ್ದಾರೆ ಪ್ರೇಮ್.

ಪ್ರೇಮ್​ಳ ಮಗಳ ಹೆಸರು ಅಮೃತಾ ಮಗನ ಹೆಸರು ಏಕಾಂತ್. ಅಮೃತಾ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಟಗರು ಪಲ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಾಗಭೂಷಣ್ ನಾಯಕ. ಇನ್ನು ಪ್ರೇಮ್​ರ ಪುತ್ರ ಏಕಾಂತ್, ಕಾಲೇಜು ಶಿಕ್ಷಣದಲ್ಲಿದ್ದು ಒಳ್ಳೆಯ ವಿದ್ಯಾರ್ಥಿಯಂತೆ. ಅವರಿಗೂ ಸಿನಿಮಾ ಕ್ಷೇತ್ರಕ್ಕೆ ಬರುವ ಆಸಕ್ತಿ ಇದೆಯಂತೆ.

ಇನ್ನು ಪ್ರೇಮ್​ರ ಪುತ್ರಿ ಅಮೃತಾ ಬಯೋ ಮೆಡಿಕಲ್ ಓದುತ್ತಿದ್ದರಂತೆ ಅವರಿಗೆ ಡಾಕ್ಟರ್ ಆಗುವ ಕನಸಿತ್ತಂತೆ ಆದರೆ ವಿಧಿ ಅವರನ್ನು ಸಿನಿಮಾದತ್ತ ಕರೆದುಕೊಂಡು ಬಂದಿದೆ ಎಂದ ಪ್ರೇಮ್, ”ಇಂಥಹಾ ಮಕ್ಕಳನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ಇಬ್ಬರೂ ಸಹ ಎಂದೂ ಯಾವುದಕ್ಕೂ ಡಿಮ್ಯಾಂಡ್ ಮಾಡಿದವರಲ್ಲ. ನಾವೇ ಏನಾದರೂ ಕೊಡಿಸುವವರೆಗೆ ಏನನ್ನೂ ಕೇಳುವವರಲ್ಲ. ಇಬ್ಬರೂ ಸಹ ಈಗಲೂ ಬಿಎಂಟಿಸಿ ಬಸ್​ನಲ್ಲೇ ಓಡಾಡುತ್ತಾರೆ. ಮಗ ಬಹಳ ಚೆನ್ನಾಗಿ ಓದುತ್ತಿದ್ದಾನೆ. ಮಗಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾಳೆ ಇಂಥಹಾ ಮಕ್ಕಳನ್ನು ಪಡೆದ ನಾನು ಧನ್ಯ” ಎಂದರು.

ಇನ್ನು ಅಮೃತಾ ಮಾತನಾಡಿ, ಸಿನಿಮಾ ಸೆಟ್​ನ ಬಿಡುವಿನ ಸಮಯದಲ್ಲಿ ಎಲ್ಲರೂ ಅಪ್ಪ-ಅಮ್ಮನ ಲವ್ ಸ್ಟೋರಿ ಕೇಳಲು ಕುಳಿತುಕೊಂಡು ಬಿಡುತ್ತಿದ್ದರು ಎಂದರೆ, ಮಗ ಏಕಾಂತ್, ನನಗೆ ಅವರ ಸ್ಟ್ರಗಲ್​ಗಳ ಬಗ್ಗೆ ಹೆಚ್ಚಿಗೆ ಗೊತ್ತಿರಲಿಲ್ಲ ಆದರೆ ಇಂದು ವೀಕೆಂಡ್ ವಿತ್ ರಮೇಶ್​ನಿಂದ ಗೊತ್ತಾಯಿತು. ಅಪ್ಪನ ಸಾಧನೆಗಳಿಗೆ ಗೌರವ ನೀಡಿದ ಶೋಗೆ ಧನ್ಯವಾದಗಳು ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ