ಬಿಗ್ ಬಾಸ್ ಮನೆ ರಣರಂಗ ಆಗುವಂತಿದೆ ರಜತ್ ಮಾತು; ಹೆಚ್ಚಿದ ಗಲಾಟೆ

ವೈಲ್ಡ್ ಕಾರ್ಡ್​ ಸ್ಪರ್ಧಿಗಳು ಬಂದಾಗ ಬಿಗ್ ಬಾಸ್​ ಮನೆಯಲ್ಲಿ ಸಹಜವಾಗಿಯೇ ಸದ್ದು ಗದ್ದಲ ಜಾಸ್ತಿ ಇರುತ್ತದೆ. ರಜತ್ ಕೂಡ ಭಾರಿ ಸದ್ದು ಮಾಡುತ್ತಿದ್ದಾರೆ. ಅವರ ಮಾತುಗಳು ಖಾರವಾಗಿವೆ. ಇದರಿಂದಾಗಿ ಬಿಗ್ ಬಾಸ್​ ಮನೆಯ ಇನ್ನುಳಿದ ಸ್ಪರ್ಧಿಗಳಿಗೆ ಕೋಪ ಹೆಚ್ಚುತ್ತಿದೆ. ಉಗ್ರಂ ಮಂಜು ಮತ್ತು ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ಜಾಸ್ತಿ ಆಗಿದೆ.

ಬಿಗ್ ಬಾಸ್ ಮನೆ ರಣರಂಗ ಆಗುವಂತಿದೆ ರಜತ್ ಮಾತು; ಹೆಚ್ಚಿದ ಗಲಾಟೆ
ರಜತ್

Updated on: Nov 28, 2024 | 10:25 PM

ಬಿಗ್ ಬಾಸ್​ ಎಂದರೆ ಗಲಾಟೆಗಳು ಕಾಮನ್. ಆದರೆ ಪ್ರತಿ ಸೀಸನ್​ನಲ್ಲೂ ಜಗಳದ ಪ್ರಮಾಣ ಜಾಸ್ತಿ ಆಗುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಕೂಡ ಸದ್ದು ಗದ್ದಲ ಅಧಿಕ ಆಗಿದೆ. ವೈಲ್ಡ್​ ಕಾರ್ಡ್​ ಮೂಲಕ ರಜತ್ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ದೊಡ್ಮನೆಗೆ ಕಾಲಿಡುವುದಕ್ಕೂ ಮುನ್ನವೇ ಅವರು ಕ್ವಾಟ್ಲೆ ಕೊಡುವ ನಿರ್ಧಾರ ಮಾಡಿಕೊಂಡಿದ್ದರು. ಬಂದ ಬಳಿಕ ಮಾತಿನ ಮೂಲಕ ಎಲ್ಲರಿಗೂ ಚಾಟಿ ಬೀಸುತ್ತಿದ್ದಾರೆ. ಆದರೆ ರಜತ್ ಅವರ ಮಾತುಗಳಿಂದ ಕೆಲವರಿಗೆ ನೋವಾಗಿದೆ. ಇದೇ ರೀತಿ ಮುಂದುವರಿದರೆ ಜಗಳ ಜೋರಾಗುವುದು ಗ್ಯಾರಂಟಿ.

ಮಣ್ಣಿನಿಂದ ಆಕೃತಿಗಳನ್ನು ಮಾಡುವ ಟಾಸ್ಕ್​ನಲ್ಲಿ ರಜತ್ ಅವರು ಅಗ್ರೆಷನ್ ತೋರಿಸಿದ್ದಾರೆ. ಆಟದ ನಡುವೆ ಅವರು ಬುರುಡೆ ಒಡೆದು ಹಾಕುವುದಾಗಿ ಬೆದರಿಸಿದ್ದಾರೆ. ಇದನ್ನು ಅನೇಕರು ಖಂಡಿಸಿದ್ದಾರೆ. ‘ಬುರುಡೆ ಹೊಡೆದು ಹಾಕುತ್ತೇನೆ’ ಎಂದು ರಜತ್ ಹೇಳಿದ್ದರು. ‘ಆಟದ ಮಧ್ಯೆದಲ್ಲಿ ಇಂಥ ಮಾತುಗಳನ್ನು ಆಡಿದ್ದು ಸರಿಯಲ್ಲ’ ಎಂದು ಮಂಜು ಟೀಕಿಸಿದ್ದಾರೆ.

ಈ ಮೊದಲು ಚೈತ್ರಾ ಕುಂದಾಪುರ ಜೊತೆ ಜಗಳ ಮಾಡುವಾಗಲೂ ಕೂಡ ರಜತ್ ಅವರು ನಾಲಿಗೆ ಹರಿಬಿಟ್ಟಿದ್ದರು. ಅದಕ್ಕೂ ಮುನ್ನ ಗೋಲ್ಡ್ ಸುರೇಶ್ ಜೊತೆ ಜಗಳ ಮಾಡಿಕೊಂಡಾಗಲೂ ಅವಾಚ್ಯ ಪದಗಳನ್ನು ಬಳಸಿದ್ದರು. ಅವರು ಪ್ರತಿ ಬಾರಿ ಮಾತಿನ ಎಲ್ಲೆ ಮೀರಿದಾಗ ಬಿಗ್ ಬಾಸ್ ಮನೆ ರಣರಂಗ ಆಗಿದೆ. ರಜತ್ ಅವರು ಇನ್ಮೇಲಾದರೂ ತಮ್ಮ ವರ್ತನೆ ಸರಿಪಡಿಸಿಕೊಂಡರೆ ಉತ್ತಮ. ಇಲ್ಲದಿದ್ದರೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರೂ ಅಚ್ಚರಿ ಇಲ್ಲ.

ಇದನ್ನೂ ಓದಿ: ತಾಯತ ಎಲ್ಲಿ ಕಟ್ಟಿಸಬೇಕೋ ಅಲ್ಲಿ ಕಟ್ಟಿಸುತ್ತೇನೆ: ರಜತ್ ವಿರುದ್ಧ ಶಪತ ಮಾಡಿದ ಚೈತ್ರಾ

ಕ್ಯಾಪ್ಟೆನ್ಸಿ ಟಾಸ್ಕ್​ನಿಂದ ರಜತ್ ಅವರನ್ನು ಉಗ್ರಂ ಮಂಜು ಹೊರಗೆ ಇಟ್ಟಿದ್ದಾರೆ. ಇದರಿಂದಾಗಿ ರಜತ್ ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಮಂಜುಗೆ ಮಹಾರಾಜನ ಪಟ್ಟ ನೀಡಲಾಗಿದೆ ಎಂಬುದನ್ನೂ ಕೂಡ ಲೆಕ್ಕಿಸದೇ ‘ರೋಗಿಷ್ಟ ರಾಜ’ ಎಂದು ರಜತ್ ಹೇಳಿದ್ದಾರೆ. ಇಂಥ ಹಲವು ಮಾತುಗಳಿಂದ ರಜತ್ ಅವರು ಅನೇಕರ ಕೆಂಗಣ್ಣಿಗೆ ಗುರಿ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us