‘ಆ ಸೋಲಿನಿಂದ ಬಚಾವ್ ಆದ್ರಿ’; ಕಿಯಾರಾಗೆ ಹೇಳಿದ ನಯನತಾರಾ ಪತಿ
'ಟಾಕ್ಸಿಕ್' ಸಿನಿಮಾದ ಅದ್ಧೂರಿ ಈವೆಂಟ್ನಲ್ಲಿ ನಟಿ ಕಿಯಾರಾ ಅಡ್ವಾಣಿ ಕುರಿತು ನಿರ್ದೇಶಕ ವಿಘ್ನೇಶ್ ಶಿವನ್ ತಮಾಷೆಯಾಗಿ ನೀಡಿದ ಹೇಳಿಕೆ ವೈರಲ್ ಆಗಿದೆ. ತಾವಿಬ್ಬರೂ ಜೊತೆಯಾಗಿ ಮಾಡಬೇಕಿದ್ದ ಸಿನಿಮಾ ಸೋತಿದ್ದರಿಂದ ಕಿಯಾರಾ ದೊಡ್ಡ ಸೋಲಿನಿಂದ ಬಚಾವ್ ಆದರು ಎಂದು ವಿಘ್ನೇಶ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಮುಖ್ಯಾಂಶಗಳು
- 'ಟಾಕ್ಸಿಕ್' ಈವೆಂಟ್ನಲ್ಲಿ ವಿಘ್ನೇಶ್ ಶಿವನ್ ಟ್ರೋಲ್
- ‘LIC' ಸಿನಿಮಾದ ದೊಡ್ಡ ಸೋಲಿನಿಂದ ಬಚಾವ್ ಆದ್ರು ಕಿಯಾರಾ
- ತಮ್ಮದೇ ಸಿನಿಮಾದ ಫ್ಲಾಪ್ ಒಪ್ಪಿಕೊಂಡು ವೇದಿಕೆಯಲ್ಲಿ ನಕ್ಕ ನಿರ್ದೇಶಕ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ (Toxic Movie) ಪ್ರೀ-ರಿಲೀಸ್ ಈವೆಂಟ್ನಲ್ಲಿ ಕಾಲಿವುಡ್ ನಿರ್ದೇಶಕ, ನಯನತಾರಾ ಪತಿ ವಿಘ್ನೇಶ್ ಶಿವನ್ ತಮ್ಮ ಹಾಸ್ಯಪ್ರಜ್ಞೆಯಿಂದ ತಮ್ಮನ್ನೇ ಟ್ರೋಲ್ ಮಾಡಿಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ. ನಟಿ ಕಿಯಾರಾ ಅಡ್ವಾಣಿ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವು ನಿರ್ದೇಶಿಸಿದ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿದ್ದನ್ನು ಒಪ್ಪಿಕೊಳ್ಳುತ್ತಾ ಕಿಯಾರಾ ಆ ಸೋಲಿನಿಂದ ಬಚಾವ್ ಆದದ್ದನ್ನು ತಮಾಷೆಯಾಗಿ ನೆನಪಿಸಿಕೊಂಡಿದ್ದಾರೆ.
ಕಿಯಾರಾಗೆ ಕಥೆ ಹೇಳಿದ್ದ ವಿಘ್ನೇಶ್ ಶಿವನ್
ವೇದಿಕೆಯಲ್ಲಿ ಮಾತನಾಡಿದ ವಿಘ್ನೇಶ್ ಶಿವನ್, ‘ಕಿಯಾರಾ, ನನಗೆ ನೀವು ಚೆನ್ನಾಗಿ ನೆನಪಿದ್ದೀರಿ. ಕಬೀರ್ ಸಿಂಗ್ ಸಿನಿಮಾ ಬಿಡುಗಡೆಯಾಗುವ ಮುನ್ನ ನಾನು ನಿಮಗೊಂದು ಕಥೆ ಹೇಳಲು ಬಂದಿದ್ದೆ. ನಂತರ ಆ ಕಥೆಯನ್ನು ಲವ್ ಇನ್ಶೂರೆನ್ಸ್ ಕಂಪನಿ ಹೆಸರಿನಲ್ಲಿ ಸಿನಿಮಾ ಮಾಡಿದೆ. ಆದರೆ ನೀವು ತುಂಬಾ ಲಕ್ಕಿ, ಏಕೆಂದರೆ ಆ ಸಿನಿಮಾದಲ್ಲಿ ನೀವು ನಟಿಸಲಿಲ್ಲ’ ಎಂದು ನಗುತ್ತಾ ಹೇಳಿದರು.
#VigneshShivan at #TOXIC Event 😄:
“Kiara.. I remember you.. Before Kabir Singh, I Met kiara to narrate a story.. I made that film now.. It’s called Love insurance Company.. You are lucky.. You didn’t do it..”😅 pic.twitter.com/UuM98wzki6
— Laxmi Kanth (@iammoviebuff007) August 24, 2026
ಫ್ಲಾಪ್ ಸಿನಿಮಾದಿಂದ ಪಾರಾದ ನಟಿ
ವಿಘ್ನೇಶ್ ಶಿವನ್ ನಿರ್ದೇಶನದ ‘ಲವ್ ಇನ್ಶೂರೆನ್ಸ್ ಕಂಪನಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಭಾರೀ ಸೋಲು ಅನುಭವಿಸಿತ್ತು. ಒಂದು ವೇಳೆ ಕಿಯಾರಾ ಆ ಪ್ರಾಜೆಕ್ಟ್ ಒಪ್ಪಿಕೊಂಡಿದ್ದರೆ, ಅವರ ಖಾತೆಗೆ ಸೋಲೊಂದು ಸೇರುತ್ತಿತ್ತು. ಹೀಗಾಗಿ ವಿಘ್ನೇಶ್ ಸ್ವತಃ ತಾವೇ ತಮ್ಮ ಸಿನಿಮಾದ ಸೋಲನ್ನು ಒಪ್ಪಿಕೊಂಡು ಕಿಯಾರಾ ಆ ಸೋಲಿನಿಂದ ಬಚಾವ್ ಆದರು ಎಂದು ಸ್ವಯಂ-ಹಾಸ್ಯ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ಯಶ್ ಬೆಂಬಲ ನೆನೆದು ಟಾಕ್ಸಿಕ್; ಈವೆಂಟ್ನಲ್ಲಿ ಧನ್ಯವಾದ ಹೇಳಿದ ಕಿಯಾರಾ
ನೆಟ್ಟಿಗರ ಮೆಚ್ಚುಗೆ
ತಮ್ಮದೇ ಸಿನಿಮಾದ ಸೋಲನ್ನು ಸಾರ್ವಜನಿಕ ವೇದಿಕೆಯಲ್ಲಿ ಮುಕ್ತವಾಗಿ ಒಪ್ಪಿಕೊಂಡ ವಿಘ್ನೇಶ್ ಶಿವನ್ ಅವರ ಸರಳತೆ ಮತ್ತು ಹಾಸ್ಯಪ್ರಜ್ಞೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ವಿಘ್ನೇಶ್ ಅವರಿಗೆ ಯಾವ ವೇದಿಕೆ ಮೇಲೆ ಏನು ಮಾತನಾಡಬೇಕು ಎಂಬುದು ತಿಳಿಯಲ್ಲ ಎಂದಿದ್ದಾರೆ. ಕಿಯಾರಾ ಅಡ್ವಾಣಿ ಕೂಡ ವಿಘ್ನೇಶ್ ಅವರ ಈ ಮಾತುಗಳನ್ನು ಕೇಳಿ ನಗೆ ಬೀರಿದ್ದು, ಈ ವೀಡಿಯೋ ತುಣುಕುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




