
ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ (Rashmika Mandanna) ಅವರು ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ಮದುವೆ ಮಾಡಿಕೊಂಡರು. ಈ ವಿವಾಹದಲ್ಲಿ ಕೇವಲ ಆಪ್ತರು ಹಾಗೂ ಕುಟುಂಬದ ಸದಸ್ಯರು ಮಾತ್ರ ಭಾಗಿಯಾಗಿದ್ದರು. ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ. ಈಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Vijay Deverakonda) ಅವರು ಅಭಿಮಾನಿಗಳನ್ನು ಭೇಟಿ ಆಗಿದ್ದಾರೆ. ವಿಜಯ್ ದೇವರಕೊಂಡ ಅವರ ಪೋಷಕರ ಊರಾದ ತುಮ್ಮನ್ಪೇಟ್ನಲ್ಲಿ ಅಭಿಮಾನಿಗಳಿಗಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲಾಗಿದೆ.
ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ತುಮ್ಮನ್ಪೇಟ್ ಗ್ರಾಮಕ್ಕೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಬಂದಾಗ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ತಮ್ಮೂರಿನ ಜನರಿಗಾಗಿ ವಿಜಯ್ ದೇವರಕೊಂಡ ಪೋಷಕರು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅಭಿಮಾನಿಗಳನ್ನು ಉದ್ದೇಶಿಸಿ ವಿಜಯ್ ದೇವರಕೊಂಡ ಮಾತನಾಡಿದರು.
ತಮ್ಮೂರಿನ ಸೊಸೆ ರಶ್ಮಿಕಾ ಮಂದಣ್ಣ ಅವರನ್ನು ನೋಡಿ ಜನರು ಖುಷಿಪಟ್ಟರು. ಜನರಿಂದ ಸಿಗುತ್ತಿರುವ ಭರಪೂರ ಪ್ರೀತಿಯನ್ನು ಕಂಡು ರಶ್ಮಿಕಾ ಮಂದಣ್ಣ ಅವರು ನಗು ಚೆಲ್ಲಿದರು. ಊರಿನಲ್ಲಿ ವಿಜಯ್ ದೇವರಕೊಂಡ ಅವರು ಹೊಸದಾಗಿ ಫಾರ್ಮ್ಹೌಸ್ ಕಟ್ಟಿಸಿದ್ದಾರೆ. ಅಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಲಾಗಿದೆ. ಬಳಿಕ ಅಭಿಮಾನಿಗಳನ್ನು ಭೇಟಿ ಮಾಡಿ ಶುಭ ಹಾರೈಕೆ ಸ್ವೀಕರಿಸಿದರು.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರಿಗೆ ಖ್ಯಾತಿ ಇದೆ. ಹಾಗಿದ್ದರೂ ಕೂಡ ಈ ಶುಭ ಸಂದರ್ಭದಲ್ಲಿ ಅವರು ತಮ್ಮೂರಿನ ಜನರನ್ನು ಮೆರೆತಿಲ್ಲ. ಮದುವೆ ಮುಗಿಯುತ್ತಿದ್ದಂತೆಯೇ ಊರಿನ ಜನರಿಗಾಗಿ ವಿಜಯ್ ದೇವರಕೊಂಡ ಅವರು ಸಮಯ ನೀಡಿದ್ದಾರೆ. ಅವರ ಈ ಗುಣಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ವಿವಾಹದ ಬಳಿಕವೂ ಸಂಸ್ಕೃತಿ ಮರೆಯದ ರಶ್ಮಿಕಾ-ವಿಜಯ್; ಅಭಿಮಾನಿಗಳಿಂದ ಮೆಚ್ಚುಗೆ
ಅಭಿಮಾನಿಗಳನ್ನು ಮದುವೆಗೆ ಕರೆಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ದೇಶದ ವಿವಿಧ ನಗರಗಳಲ್ಲಿ ಸಿಹಿ ವಿತರಣೆ ಮಾಡಲಾಗಿದೆ. ಅಲ್ಲದೇ, ಅನೇಕ ದೇವಸ್ಥಾನಗಳಲ್ಲಿ ಅನ್ನದಾನ ಮಾಡಲಾಗಿದೆ. ಈ ಕಾರ್ಯದ ವಿಡಿಯೋ ಮತ್ತು ಫೋಟೋಗಳನ್ನು ಕೂಡ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನವ ದಂಪತಿ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.