AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಮೌಳಿ ಹೊಸ ಸಿನಿಮಾ ಬಗೆಗಿನ ದೊಡ್ಡ ಗಾಸಿಪ್​ಗೆ ಆರಂಭದಲ್ಲೇ ಅಂತ್ಯ ಹಾಡಿದ ನಿರ್ಮಾಪಕರು

ನಟ ಮಹೇಶ್​ ಬಾಬು ಅವರು ನಿರ್ದೇಶಕ ಎಸ್​ಎಸ್​ ರಾಜಮೌಳಿ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಈ ಸಿನಿಮಾ ಬಗ್ಗೆ ಈಗಾಗಲೇ ಗಾಸಿಪ್​ಗಳು ಹರಿದಾಡಲು ಆರಂಭಿಸಿವೆ. ಆ ಬಗ್ಗೆ ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ. ಕಾಸ್ಟಿಂಗ್​ ಡೈರೆಕ್ಟರ್​ ಬಗ್ಗೆ ಪತ್ರಿಕೆಯೊಂದು ಪ್ರಕಟಿಸಿದ ತಪ್ಪು ಮಾಹಿತಿಯ ಬಗ್ಗೆ ಸ್ವತಃ ನಿರ್ಮಾಪಕರು ಪ್ರತಿಕ್ರಿಯೆ ನೀಡಿದ್ದಾರೆ.

ರಾಜಮೌಳಿ ಹೊಸ ಸಿನಿಮಾ ಬಗೆಗಿನ ದೊಡ್ಡ ಗಾಸಿಪ್​ಗೆ ಆರಂಭದಲ್ಲೇ ಅಂತ್ಯ ಹಾಡಿದ ನಿರ್ಮಾಪಕರು
ಮಹೇಶ್​ ಬಾಬು, ರಾಜಮೌಳಿ
ಮದನ್​ ಕುಮಾರ್​
|

Updated on: May 17, 2024 | 6:18 PM

Share

‘ಆರ್​ಆರ್​ಆರ್​’ ಸಿನಿಮಾದ ಅಭೂತಪೂರ್ವ ಗೆಲುವಿನಿಂದ ನಿರ್ದೇಶಕ ಎಸ್​ಎಸ್​ ರಾಜಮೌಳಿ (SS Rajamouli) ಅವರಿಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೆಚ್ಚಿದೆ. ಈಗ ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾ ಮೇಲೆ ಎಲ್ಲಿಲ್ಲದಷ್ಟು ನಿರೀಕ್ಷೆ ಮೂಡಿದೆ. ಟಾಲಿವುಡ್​ನ ಸ್ಟಾರ್​ ನಟ ಮಹೇಶ್​ ಬಾಬು (Mahesh Babu) ಜೊತೆ ರಾಜಮೌಳಿ ಸಿನಿಮಾ ಮಾಡಲಿದ್ದು, ಅದಕ್ಕೆ ಬೇಕಾದ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಈ ಸಿನಿಮಾವನ್ನು ‘SSMB 29’ ಎಂದು ಕರೆಯಲಾಗುತ್ತಿದೆ. ಅಸಲಿ ಶೀರ್ಷಿಕೆ ಇನ್ನೂ ನಿಗದಿ ಆಗಿಲ್ಲ. ಅಷ್ಟರಲ್ಲಾಗಲೇ ಕೆಲವು ಗಾಸಿಪ್​ಗಳು ಹಬ್ಬಿವೆ.

ದೊಡ್ಡ ಸಿನಿಮಾ ಎಂದಾಗ ಸಹಜವಾಗಿಯೇ ಒಂದಷ್ಟು ಗಾಸಿಪ್​ಗಳು ಹುಟ್ಟಿಕೊಳ್ಳುತ್ತವೆ. ‘SSMB 29’ ಸಿನಿಮಾದ ಬಗ್ಗೆಯೂ ಒಂದು ಗಾಳಿಸುದ್ದಿ ಕೇಳಿಬಂದಿದೆ. ಈ ಸಿನಿಮಾಗೆ ವೀರೇನ್​ ಸ್ವಾಮಿ ಅವರು ಕಾಸ್ಟಿಂಗ್​ ಡೈರೆಕ್ಟರ್​ ಆಗಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಅದು ನಿರ್ಮಾಪಕರ ಗಮನಕ್ಕೂ ಬಂದಿದ್ದು, ಆ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಸ್ಪಷ್ಟನೆ ನೀಡಲಾಗಿದೆ.

‘ಪ್ರತಿಷ್ಠಿತ ಪತ್ರಿಕೆಯೊಂದು ಎಸ್​.ಎಸ್​. ರಾಜಮೌಳಿ ಹಾಗೂ ಮಹೇಶ್​ ಬಾಬು ಕಾಂಬಿನೇಷನ್​ನ ಸಿನಿಮಾ ಬಗ್ಗೆ ಒಂದು ಲೇಖನ ಪ್ರಕಟಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಅದರ ಬಗ್ಗೆ ನಾವು ಸ್ಪಷ್ಟನೆ ನೀಡುತ್ತಿದ್ದೇವೆ. ವೀರೇನ್​ ಸ್ವಾಮಿ ಅವರು ನಮ್ಮ ಸಿನಿಮಾದ ಯಾವುದೇ ವಿಭಾಗದಲ್ಲೂ ಕೆಲಸ ಮಾಡುತ್ತಿಲ್ಲ. ಅಗತ್ಯವಿದ್ದಾಗ ನಿರ್ಮಾಣ ಸಂಸ್ಥೆಯ ಕಡೆಯಿಂದಲೇ ಎಲ್ಲ ಅಧಿಕೃತ ಪ್ರಕಟಣೆಗಳು ಹೊರಬರಲಿವೆ’ ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಶಾರುಖ್​, ಆಮಿರ್​, ಸಲ್ಮಾನ್​; ‘ರಾಜಮೌಳಿ ನಿರ್ದೇಶನ ಮಾಡ್ಬೇಕು’ ಎಂದ ನೆಟ್ಟಿಗರು

‘SSMB 29’ ಸಿನಿಮಾಗಾಗಿ ಮಹೇಶ್​ ಬಾಬು ಅವರು ವಿದೇಶದಲ್ಲಿ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಅವರ ಗೆಟಪ್​ ಕೂಡ ಬದಲಾಗಲಿದೆ. ಉದ್ದ ಕೂದಲಿನ ಲುಕ್​ನಲ್ಲಿ ಮಹೇಶ್​ ಬಾಬು ಕಾಣಿಸಿಕೊಳ್ಳಲಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದ ಯಶಸ್ಸಿನ ಬಳಿಕ ರಾಜಮೌಳಿ ಕೈಗೆತ್ತಿಕೊಳ್ಳುತ್ತಿರುವ ಪ್ರಾಜೆಕ್ಟ್​ ಆದ್ದರಿಂದ ‘SSMB 29’ ಚಿತ್ರದ ಮೇಲೆ ನಿರೀಕ್ಷೆ ದೊಡ್ಡದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More