
ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಚಿತ್ರ (Ramayana Movie) ಹಲವು ಕಾರಣಗಳಿಂದ ಚರ್ಚೆಯಲ್ಲಿದೆ. ಈ ಮಹಾಕಾವ್ಯವನ್ನು ಎರಡು ಭಾಗದಲ್ಲಿ ಹೇಳುತ್ತಿರುವುದು ಏಕೆ ಎಂಬುದನ್ನು ನಿರ್ದೇಶಕ ನಿತೇಶ್ ತಿವಾರಿ ರಿವೀಲ್ ಮಾಡಿದ್ದಾರೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್ 2026 ಕಾರ್ಯಕ್ರಮದಲ್ಲಿ ಚಿತ್ರತಂಡ ಈ ಬಗ್ಗೆ ಮಾತನಾಡಿದೆ. ಕುತೂಹಲದ ತಿರುವಿನೊಂದಿಗೆ ಮೊದಲ ಭಾಗ ಕೊನೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಇಡೀ ಭಾರತೀಯ ಚಿತ್ರರಂಗದಲ್ಲೇ ‘ರಾಮಾಯಣ’ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಟೀಸರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ರಾಮಾಯಣದ ಕಥೆ ಅತ್ಯಂತ ವಿಶಾಲವಾಗಿದೆ. ಹಾಗಾಗಿ ಇದನ್ನು ಎರಡು ಭಾಗಗಳಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮೊದಲ ಭಾಗ ಮುಗಿದ ತಕ್ಷಣ ಪ್ರೇಕ್ಷಕರಿಗೆ ಎರಡನೇ ಭಾಗವನ್ನು ನೋಡಲೇಬೇಕು ಎಂಬ ಹಪಾಹಪಿ ಶುರುವಾಗುತ್ತದೆ. ನಿರ್ದೇಶಕರು ಕಥೆಯನ್ನು ಅಷ್ಟು ಅದ್ಭುತವಾಗಿ ಹೆಣೆದಿದ್ದಾರಂತೆ.
‘ರಾಮಾಯಣ’ ಸಿನಿಮಾದ ಟ್ರೇಲರ್ ತುಣುಕುಗಳು ಆನ್ಲೈನ್ನಲ್ಲಿ ಲೀಕ್ ಆಗಿವೆ. ದೆಹಲಿಯ ಭಾರತ್ ಮಂಟಪಂ ಸ್ಕ್ರೀನಿಂಗ್ ವೇಳೆ ವಿಡಿಯೋ ಸೋರಿಕೆಯಾಗಿದೆ. ಈಗ ಕಾಮಿಕ್-ಕಾನ್ ಪ್ರದರ್ಶನದ ಬಳಿಕವೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ಅಲರ್ಟ್ ಆಗಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ಕಾನೂನು ತಂಡವು ಪೈರಸಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಟ್ರೇಲರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಸೆಟ್ನಲ್ಲಿ ಹೇಗಿತ್ತು ಯಶ್ ಹವಾ, ಕೊಡ್ತಿದ್ರು ಸಖತ್ ಕ್ವಾಟ್ಲೆ
ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಚಿತ್ರಕ್ಕೆ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಜಂಟಿಯಾಗಿ ಸಂಗೀತ ನೀಡುತ್ತಿದ್ದಾರೆ. ನಟ ಯಶ್ ಕೂಡ ಈ ಚಿತ್ರಕ್ಕೆ ಸಹ-ನಿರ್ಮಾಪಕರಾಗಿದ್ದಾರೆ. ಬಹುನಿರೀಕ್ಷಿತ ಈ ಸಿನಿಮಾ 2026ರ ನವೆಂಬರ್ ತಿಂಗಳಿನಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.