Summer Health Tips: ಮಂಗಳೂರಿಗರೇ ಸೆಖೆ ತುಂಬಾ ಇದ್ಯಾ? ಹಾಗಿದ್ರೆ ಅದರಿಂದ ಪಾರಾಗಲು ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಟಿಪ್ಸ್
ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಅದರಲ್ಲಿಯೂ ಕರಾವಳಿ ಪ್ರದೇಶಗಳಲ್ಲಿ ಅತಿ ಹೆಚ್ಚು ಉಷ್ಣತೆ ಮತ್ತು ಆರ್ದ್ರತೆ ಕಂಡುಬರುತ್ತದೆ. ಹಾಗಾಗಿ ಈ ಸಮಯದಲ್ಲಿ ಅನುಸರಿಸುವ ಆಹಾರ ಪದ್ಧತಿ ಬೇಸಿಗೆಯಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳಿಂದ ಅನಾಯಾಸವಾಗಿ ತಪ್ಪಿಸಿಕೊಳ್ಳಬಹುದಾಗಿದೆ. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯದ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕಲು ಉಡುಪಿ ಎಸ್ಡಿಎಮ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೋನಿಷಾಪಿ ಅವರನ್ನು ಸಂಪರ್ಕಿಸಿದ್ದು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಮಂಗಳೂರಿನಂತಹ ಕರಾವಳಿ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ಅತಿ ಹೆಚ್ಚು ಉಷ್ಣತೆ ಮತ್ತು ಆರ್ದ್ರತೆ ಕಂಡುಬರುತ್ತದೆ ಎಂಬುದು ತಿಳಿದಿರುವ ವಿಚಾರ. ಈ ರೀತಿ ಬಿಸಿಲಿನ ತಾಪಮಾನ ಹೆಚ್ಚಾಗಿರುವಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಬೇಸಿಗೆಯಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳಿಂದ ಅನಾಯಾಸವಾಗಿ ತಪ್ಪಿಸಿಕೊಳ್ಳಬಹುದು. ಆಯುರ್ವೇದದ ಪ್ರಕಾರ ಈ ಕಾಲವನ್ನು ಗ್ರೀಷ್ಮ ಋತು ಎಂದು ಕರೆಯಲಾಗುತ್ತದೆ. ಬೇಸಿಗೆಯ ಸಮಯದಲ್ಲಿ ದೇಹದಲ್ಲಿ ಪಿತ್ತದ ಪ್ರಮಾಣ ಹೆಚ್ಚಾಗುತ್ತದೆ. ಮಂಗಳೂರುಂತಹ ತೇವಾಂಶ ಇರುವ ಪ್ರದೇಶದಲ್ಲಿ ಇದು ಇನ್ನಷ್ಟು ಪರಿಣಾಮ ಬೀರುತ್ತದೆ. ಆದ್ದರಿಂದ ಗ್ರೀಷ್ಮ ಋತುಚರ್ಯೆಯನ್ನು ಅನುಸರಿಸುವುದು ಅತ್ಯವಶ್ಯಕ. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯದ ಕುರಿತು ಮತ್ತಷ್ಟು ಮಾಹಿತಿ ಕಲೆ ಹಾಕಲು ಉಡುಪಿ ಎಸ್ಡಿಎಮ್ ಆಯುರ್ವೇದ ಕಾಲೇಜು (SDM College of Ayurveda, Udupi) ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೋನಿಷಾಪಿ ಅವರನ್ನು ಸಂಪರ್ಕಿಸಿದ್ದು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಈ ಸಮಯದಲ್ಲಿ ಸೂರ್ಯನ ಬೆಳಕು ಮಿತವಾಗಿ ಉಪಯುಕ್ತವಾಗಬಹುದು, ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸಲು, ಮನಸ್ಥಿತಿಗಳನ್ನು ನಿಯಂತ್ರಿಸಲು ಮತ್ತು ಆರೋಗ್ಯ ಪ್ರಯೋಜನಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಆದರೂ ಕೂಡ ಹೆಚ್ಚಿನ ಪ್ರಮಾಣವು ಪಿತ್ತ ಮಟ್ಟವನ್ನು ಹೆಚ್ಚಿಸುತ್ತದೆ, ಅಂಗಾಂಶಗಳನ್ನು ಒಣಗಿಸುತ್ತದೆ ಮತ್ತು ದೇಹದಲ್ಲಿನ ಓಜಸ್ (ಪ್ರಮುಖ ಶಕ್ತಿ) ಅನ್ನು ದುರ್ಬಲಗೊಳಿಸುತ್ತದೆ, ಇದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ದೇಹದ ಬಲ ಕಡಿಮೆಯಾಗುತ್ತದೆ ಹಾಗೂ ಪಚನ ಶಕ್ತಿ ಕೂಡ ಕಡಿಮೆ ಇರುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಶೀತಲ, ಮಧುರ ಮತ್ತು ದ್ರವ ಆಹಾರಗಳನ್ನು ಸೇವಿಸಬೇಕು. ಹಾಲು, ಮಜ್ಜಿಗೆ, ತೆಂಗಿನಕಾಯಿ ನೀರು ಮತ್ತು ಹಣ್ಣುಗಳ ರಸಗಳು ದೇಹಕ್ಕೆ ತಂಪು ನೀಡುತ್ತವೆ.
ಬೇಸಿಗೆಗೆ ತಂಪಾಗಿಸುವ ಆಹಾರಗಳು:
ನಾವು ಈ ಸಮಯದಲ್ಲಿ ನೈಸರ್ಗಿಕವಾಗಿ ತಂಪಾಗಿಸುವ, ರಸಭರಿತವಾದ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರಗಳನ್ನು ಸೇವಿಸಬೇಕು.
ಮಜ್ಜಿಗೆ: ಹಗುರ, ಜೀರ್ಣಕ್ರಿಯೆಗೆ ಅನುಕೂಲಕರ ಮತ್ತು ತಂಪಾಗಿಸುವ ಪಾನೀಯ. ಮಜ್ಜಿಗೆಯಲ್ಲಿ ಒಂದು ಚಿಟಿಕೆ ಜೀರಿಗೆ ಸೇರಿಸುವುದರಿಂದ ಅದರ ಪರಿಣಾಮ ಹೆಚ್ಚಾಗುತ್ತದೆ. ಎಳನೀರು: ಇದು ಪ್ರಕೃತಿಯ ಪರಿಪೂರ್ಣ ಎಲೆಕ್ಟ್ರೋಲೈಟ್ ಪಾನೀಯವಾಗಿದ್ದು, ಇದನ್ನು ಬೆಳಿಗ್ಗೆ ಮಧ್ಯಾಹ್ನದ ಸಮಯದಲ್ಲಿ ಸೇವಿಸುವುದು ಉತ್ತಮ. ಗಿಡಮೂಲಿಕೆಗಳ ಕಷಾಯ: ಕೊತ್ತಂಬರಿ ಬೀಜ ಅಥವಾ ಸೋಂಪು ಬೀಜದ ನೀರು ಶಾಖ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಆಮ್ಲಾ ಜ್ಯೂಸ್: ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಣ್ಣುಗಳು: ಕಲ್ಲಂಗಡಿ, ದ್ರಾಕ್ಷಿ ಮತ್ತು ದಾಳಿಂಬೆ. ತರಕಾರಿಗಳು: ಸೌತೆಕಾಯಿಗಳು, ಸೋರೆಕಾಯಿಗಳು ಮತ್ತು ಎಲೆಗಳ ತರಕಾರಿಗಳು. ಧಾನ್ಯ: ಅಕ್ಕಿ ಮತ್ತು ಬಾರ್ಲಿ. ಡೈರಿ: ಪಿತ್ತ ಸಮತೋಲನಕ್ಕೆ ತಾಜಾ ಹಾಲು ಮತ್ತು ತುಪ್ಪದ ಸೇವನೆಯ ಮಿತಿಯ ಅಗತ್ಯವಿದೆ.
ಇದನ್ನೂ ಓದಿ: Cold Water Vs Warm Water: ಬಿಸಿ ನೀರು ಅಥವಾ ತಣ್ಣೀರು; ಬೇಸಿಗೆಯಲ್ಲಿ ಕುಡಿಯಲು ಯಾವುದು ಬೆಸ್ಟ್?
ಈ ಸಲಹೆಗಳನ್ನು ತಪ್ಪದೆ ಪಾಲಿಸಿ:
ಸಾಮಾನ್ಯವಾಗಿ ಈ ಸಮಯದಲ್ಲಿ ಹೆಚ್ಚು ಖಾರ ಮತ್ತು ಎಣ್ಣೆಯ ಪದಾರ್ಥಗಳನ್ನು ಕಡಿಮೆ ಬಳಸುವುದು ಉತ್ತಮ, ದಿನವಡಿ ಸಾಕಷ್ಟು ನೀರು ಕುಡಿಯಬೇಕು ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಬೇಕು, ಬಿಸಿಲಿನಿಂದ ರಕ್ಷಣೆ ಪಡೆಯಲು ಹತ್ತಿ ಬಟ್ಟೆಗಳನ್ನು ಧರಿಸಬೇಕು, ಛತ್ರಿ- ಸನ್ ಗ್ಲಾಸ್ ಬಳಸುವುದರಿಂದ ಕಣ್ಣು ಮತ್ತು ಚರ್ಮವನ್ನು ರಕ್ಷಿಸಬಹುದು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು ಮತ್ತು ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಸರಿಯಾದ ನಿದ್ರೆ, ನಿಯಮಿತ ಸ್ನಾನ ಮತ್ತು ಸ್ವಚ್ಛತೆ ಕೂಡ ಮುಖ್ಯ ಬೆವರು ಕಾರಣದಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಉತ್ತಮ. ಯೋಗ ಮತ್ತು ಧ್ಯಾನದಿಂದ ಮಾನಸಿಕ ಸಮತೋಲನವನ್ನು ಕಾಪಾಡಬಹುದು.
ಸುಡುವ ಬಿಸಿಲಿನ ನಡುವೆ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸೇರಿದಂತೆ ಒಟ್ಟಾರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು. ಜಾಗತಿಕ ತಾಪಮಾನವು ಪ್ರಸ್ತುತ ಮಟ್ಟಕ್ಕಿಂತ ಹೆಚ್ಚಾದರೆ, ಜನರು ಬಿಸಿ ಮತ್ತು ಆರ್ದ್ರ ವಾತಾವರಣದಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದ್ದರಿಂದ ಈ ಕ್ರಮಗಳನ್ನು ಅನುಸರಿಸಿದರೆ ಮಂಗಳೂರು ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




