ಶಹಜಹಾನ್ಪುರದಲ್ಲಿ ಕನ್ವರ್ ಯಾತ್ರೆಗಾಗಿ 1,300 ಪೊಲೀಸರ ನಿಯೋಜನೆ, ಮಾಂಸದಂಗಡಿ ಬಂದ್
ಉತ್ತರ ಪ್ರದೇಶದಲ್ಲಿ, ಕನ್ವರ್ ಯಾತ್ರೆಗೆ ಅಂತಿಮ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಜುಲೈ 30ರಿಂದ ಆಗಸ್ಟ್ 11ರವರೆಗೆ ಉತ್ತರ ಪ್ರದೇಶದ ರಸ್ತೆಗಳಲ್ಲಿ ಕನ್ವರ್ ಯಾತ್ರಿಕರ ಗುಂಪು ಹರಿದು ಬರಲಿದೆ. ಕನ್ವರ್ ಯಾತ್ರೆಗೆ ಸಿದ್ಧತೆಗಳು ರಾಜ್ಯದಾದ್ಯಂತ ನಡೆಯುತ್ತಿವೆ. ಆದರೆ ಪಶ್ಚಿಮ ಉತ್ತರ ಪ್ರದೇಶದ ಕನ್ವರ್ನಲ್ಲಿ ಗಂಗಾ ನೀರನ್ನು ತುಂಬಿದ ನಂತರ ಹರಿದ್ವಾರ ಮತ್ತು ಗೋಮುಖದಿಂದ ಹೊರಡುವ ಭಕ್ತರಿಗೆ ಮುಜಫರ್ನಗರ, ಮೀರತ್ ಮತ್ತು ಗಾಜಿಯಾಬಾದ್ ಪ್ರಮುಖ ನಿಲ್ದಾಣಗಳಾಗಿವೆ. ಇದಕ್ಕಾಗಿ ಈ ಜಿಲ್ಲೆಗಳ ಪೊಲೀಸ್ ಮತ್ತು ಆಡಳಿತ ಮಟ್ಟದಲ್ಲಿ ಭಾರೀ ಸಿದ್ಧತೆಗಳು ನಡೆಯುತ್ತಿವೆ.

ಶಹಜಹಾನ್ಪುರ, ಜುಲೈ 28: ಉತ್ತರ ಪ್ರದೇಶದ (Uttar Pradesh) ಶಹಜಹಾನ್ಪುರದಲ್ಲಿ ಕನ್ವರ್ ಯಾತ್ರೆಯನ್ನು (Kanwar Yatra) ಸುಸೂತ್ರವಾಗಿ ನಡೆಸಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ಗೋಲಾ ಗೋಕರ್ಣನಾಥಕ್ಕೆ ತೆರಳುವ ಮುನ್ನ ಭಕ್ತರು ಪಾಂಚಾಲ ಘಾಟ್ನಿಂದ ಗಂಗಾಜಲವನ್ನು ಸಂಗ್ರಹಿಸುತ್ತಾರೆ. ಭಕ್ತಾದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಮಾರ್ಗದಲ್ಲಿ 1,100 ಕಾನ್ಸ್ಟೇಬಲ್ಗಳು, 210 ಸಬ್-ಇನ್ಸ್ಪೆಕ್ಟರ್ಗಳು, 17 ಇನ್ಸ್ಪೆಕ್ಟರ್ಗಳು, 7 ಸರ್ಕಲ್ ಆಫೀಸರ್ಗಳು ಮತ್ತು 44 ಮೋಟಾರ್ ಸೈಕಲ್ ಗಸ್ತು ಪಡೆಗಳನ್ನು ನಿಯೋಜಿಸಲಾಗಿದೆ.
ಈ ಬಗ್ಗೆ ಪಿಟಿಐ ವರದಿ ಮಾಡಿದ್ದು, “ಶಹಜಹಾನ್ಪುರದಲ್ಲಿ ಕನ್ವರ್ ಮಾರ್ಗವು ಸುಮಾರು 90 ಕಿ.ಮೀನಷ್ಟು ವ್ಯಾಪಿಸಿದೆ. ಈ ಹಾದಿಯುದ್ದಕ್ಕೂ ಸುಮಾರು 100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳನ್ನು ಜಿಲ್ಲಾ ಕೇಂದ್ರ ಮತ್ತು ಬರೇಲಿ ವಿಭಾಗೀಯ ನಿಯಂತ್ರಣ ಕೊಠಡಿಗಳಿಗೆ ಸಂಪರ್ಕಿಸಲಾಗಿದೆ. ಇದಲ್ಲದೆ, ಮಾರ್ಗದುದ್ದಕ್ಕೂ 500 ಬ್ಯಾರಿಕೇಡ್ಗಳನ್ನು ಹಾಕಲಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಚಾರ್ ಧಾಮ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತ
ಪೊಲೀಸ್ ಠಾಣೆ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದ್ದು, ಯಾತ್ರಾರ್ಥಿಗಳಿಗೆ ನೆರವಾಗಲು ಮತ್ತು ಪೊಲೀಸರೊಂದಿಗೆ ಸಮನ್ವಯ ಸಾಧಿಸಲು ಮಾರ್ಗ ಮಧ್ಯದ ಗ್ರಾಮಗಳಲ್ಲಿ 120ಕ್ಕೂ ಹೆಚ್ಚು ಸುರಕ್ಷತಾ ಸಮಿತಿಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ವರ್ ಯಾತ್ರೆಯ ಸಮಯದಲ್ಲಿ ಮಾರ್ಗದಲ್ಲಿರುವ ಡಾಬಾಗಳು ಮತ್ತು ಹೋಟೆಲ್ಗಳಲ್ಲಿ ಆಹಾರ ತಯಾರಿಕೆ ವೇಳೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಬಳಸದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಯಾತ್ರಾ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾಂಸದ ಅಂಗಡಿಗಳು ಮುಚ್ಚಲ್ಪಡುತ್ತವೆ.
ಇದನ್ನೂ ಓದಿ: Amarnath Yatra: ಆರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಂಚಾರ ಮುಕ್ತ
ತೀರ್ಥಯಾತ್ರೆಯ ಮಾರ್ಗದಲ್ಲಿ ವ್ಯಾಪಕವಾದ ಸ್ವಚ್ಛತೆ, ನಿಯಮಿತ ನೈರ್ಮಲ್ಯ ಮತ್ತು ಸಾಕಷ್ಟು ಕುಡಿಯುವ ನೀರನ್ನು ಒದಗಿಸಲಾಗುವುದು. ಯಾತ್ರಿಕರ ಅನುಕೂಲಕ್ಕಾಗಿ ಪ್ರಮುಖ ಸ್ಥಳಗಳಲ್ಲಿ ಪ್ರತಿ 7ರಿಂದ 8 ಕಿಲೋಮೀಟರ್ಗಳಿಗೆ ರಾತ್ರಿ ಆಶ್ರಯಗಳು, ಶೌಚಾಲಯಗಳು, ಸ್ನಾನಗೃಹಗಳು ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳಿಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗುವುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




