ನೇರಳೆ ಹಣ್ಣು ತಿಂದು ಅದರ ಬೀಜ ಎಸೆಯುವ ಮೊದಲು ಅದರ ಉಪಯೋಗ ತಿಳಿಯಿರಿ
ನೇರಳೆ ಹಣ್ಣು ತಿನ್ನುವುದಕ್ಕೆ ಬಹಳ ರುಚಿ. ಆದರೆ ಇದು ಕೇವಲ ತಿನ್ನಲು ಮಾತ್ರವಲ್ಲ ಆರೋಗ್ಯಕ್ಕೂ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಅದರ ಜೊತೆಗೆ ಈ ಹಣ್ಣಿನೊಳಗಿರುವ ಬೀಜ ಕೂಡ ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ, ಆದರೆ ಇದನ್ನು ತಿಂದ ನಂತರ ಅನೇಕರು ಅದರೊಳಗಿನ ಬೀಜಗಳನ್ನು ಎಸೆಯುತ್ತಾರೆ. ಈ ಸಣ್ಣ ಬೀಜಗಳಲ್ಲಿ ಅಡಗಿರುವ ಆರೋಗ್ಯ ರಹಸ್ಯ ತಿಳಿದರೆ, ಇನ್ನು ಮುಂದೆ ನೀವು ಈ ರೀತಿಯ ತಪ್ಪು ಮಾಡಲು ಸಾಧ್ಯವಿಲ್ಲ. ಹಾಗಾದರೆ ಇವು ನಮ್ಮ ಆರೋಗ್ಯಕ್ಕೆ ಹೇಗೆ ಉಪಯೋಗಕಾರಿ ಎಂಬುದನ್ನು ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಆರೋಗ್ಯದ (Health) ವಿಚಾರದಲ್ಲಿ ನಾವು ನಿರ್ಲಕ್ಷ್ಯ ಮಾಡುವುದೇ ಹೆಚ್ಚಾಗುತ್ತದೆ ಹಾಗಾಗಿಯೇ ಸಮಸ್ಯೆಗಳು ಇಳಿಮುಖವಾಗುವ ಬದಲು ಏರು ಗತಿಯಲ್ಲಿ ಸಾಗುತ್ತಿದೆ ಅದರಲ್ಲಿಯೂ ದೀರ್ಘ ಕಾಲ ಕಾಡುವ ರಕ್ತದ ಒತ್ತಡ (blood pressure) ಮತ್ತು ಮಧುಮೇಹ (Diabetes) ಅರ್ಧ ವಯಸ್ಸು ದಾಟಿದವರಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಆರೋಗ್ಯ ಸಮಸ್ಯೆಗಳು ನಮ್ಮಿಂದ ದೂರವಿರಬೇಕು ಎಂದರೆ ನಾವು ಕೆಲವು ಸರಳವಾಗಿರುವ ಪರಿಹಾರ ಕ್ರಮಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ಈ ಲೇಖನದಲ್ಲಿಯೂ ಇಂತಹ ದೀರ್ಘಕಾಲ ಕಾಡುವ ಆರೋಗ್ಯ ಸಮಸ್ಯೆಗಳಿಗೆ ನೇರಳೆ ಹಣ್ಣಿನ ಬೀಜಗಳು (Jamun Seeds) ಹೇಗೆ ಪರಿಹಾರಗಳನ್ನು ನೀಡುತ್ತದೆ ಎಂಬುದರ ಬಗ್ಗೆ ತಿಳಿಸಲಾಗಿದೆ.
ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯುತ್ತದೆ
ನೇರಳೆ ಹಣ್ಣು ಫೈಬರ್ ಅಂಶ ಹೆಚ್ಚಾಗಿದ್ದು. ಇದು ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಮುಕ್ತಿ ನೀಡುವುದಕ್ಕೆ ಸಹಾಯ ಮಾಡುತ್ತದೆ. ಅದರಲ್ಲಿಯೂ ಈ ಹಣ್ಣಿನ ಬೀಜಗಳನ್ನು ಪುಡಿ ಮಾಡಿ ಬಳಸಿದರೆ, ಕರುಳಿನ ಕಾರ್ಯವು ಉತ್ತಮವಾಗಿರುತ್ತದೆ. ಇದು ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುತ್ತದೆ.
ಚರ್ಮದ ಕಾಂತಿ ಹೆಚ್ಚಾಗುತ್ತದೆ
ನೇರಳೆ ಹಣ್ಣಿನ ಬೀಜಗಳಲ್ಲಿರುವ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತವೆ. ಮೊಡವೆಗಳನ್ನು ಕಡಿಮೆ ಮಾಡುವ ಮೂಲಕ ಚರ್ಮದ ಕಾಂತಿಯನ್ನು ಹಚ್ಚಿಸುತ್ತದೆ. ಬೀಜಗಳನ್ನು ಒಣಗಿಸಿ ಅದನ್ನು ಚೆನ್ನಾಗಿ ಪುಡಿ ಮಾಡಿ ಹಾಲಿಗೆ ಹಾಕಿ ಸಿಹಿ ಬೇಕಾದಲ್ಲಿ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಸುಕ್ಕುಗಳು ಕಡಿಮೆಯಾಗುತ್ತದೆ.
ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ
ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಅವುಗಳನ್ನು ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆ ಸರಿಯಾಗಿ ಆಗುತ್ತದೆ. ಅದಲ್ಲದೆ ಇದರ ಸೇವನೆ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಜೊತೆಗೆ ಹಸಿವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುತ್ತಿರುವವರಿಗೆ, ಇವುಗಳ ಸೇವನೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಹೃದಯ ಸಂಬಂಧಿತ ಸಮಸ್ಯೆಯನ್ನು ತಡೆಯುತ್ತದೆ
ಬೀಜಗಳಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯ ಸಂಬಂಧಿತ ಸಮಸ್ಯೆಗಳು ಬರದಂತೆ ತಡೆಯಲು ಇದು ಉಪಯುಕ್ತವಾಗಿದೆ. ಇವುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಹೃದಯದ ಕಾರ್ಯನಿರ್ವಹಣೆಯನ್ನು ಸುಧಾರಿಸಬಹುದು. ಇನ್ನು ರಕ್ತನಾಳಗಳನ್ನು ಸ್ವಚ್ಛವಾಗಿಡುವುದರಿಂದ ಹೃದಯಾಘಾತದ ಸಾಧ್ಯತೆಯೂ ಕೂಡ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಸ್ತನ, ಅನ್ನನಾಳ, ಶ್ವಾಸಕೋಶ ಯಾವುದೇ ರೀತಿಯ ಕ್ಯಾನ್ಸರ್ ಬರಬಾರದು ಎಂದರೆ ಈ ಹಣ್ಣನ್ನು ತಿನ್ನಿ
ಮಧುಮೇಹಿಗಳಿಗೆ ಉಪಯುಕ್ತ
ನೇರಳೆ ಹಣ್ಣಿನ ಬೀಜಗಳು ಮಧುಮೇಹದಿಂದ ಬಳಲುತ್ತಿರುವವರಿಗೆ ನೈಸರ್ಗಿಕ ಪರಿಹಾರವಾಗಿದೆ. ಇವುಗಳಲ್ಲಿರುವ ಔಷಧೀಯ ಗುಣಲಕ್ಷಣಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಪರಿಣಾಮವನ್ನು ಸುಧಾರಿಸಲು ಸಹ ಇದು ಉಪಯುಕ್ತವಾಗಿದೆ. ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ. ಹಾಗಾಗಿ ನೇರಳೆ ಹಣ್ಣು ತಿಂದ ಬಳಿಕ ಅವುಗಳ ಬೀಜಗಳನ್ನು ಎಸೆಯಬೇಡಿ. ಅವುಗಳನ್ನು ಬಳಸಿಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ