Gemini Horoscope: ಈ ತಿಂಗಳಲ್ಲಿ ಮಿಥುನ ರಾಶಿಗೆ ಹಣ, ವೃತ್ತಿ ಮತ್ತು ಆರೋಗ್ಯದಲ್ಲಿ ಸವಾಲುಗಳು ಎದುರಾಗಲಿವೆ!

ಮಿಥುನ ರಾಶಿ ಜುಲೈ ಭವಿಷ್ಯವು ಹಣಕಾಸು, ವೃತ್ತಿ ಮತ್ತು ಆರೋಗ್ಯದಲ್ಲಿ ಕೆಲವು ಸವಾಲುಗಳನ್ನು ತರಲಿದೆ. ಅಸ್ತಂಗತ ಗುರು, ವಕ್ರಿ ಶನಿ, ಮಂಗಳನ ಪ್ರಭಾವದಿಂದ ಅನಗತ್ಯ ಖರ್ಚು, ಸಂವಹನ ದೋಷ, ಉದ್ಯೋಗದಲ್ಲಿ ಅಸ್ಥಿರತೆ ಎದುರಾಗಬಹುದು. ಬುಧ, ಸುಬ್ರಹ್ಮಣ್ಯ, ಹನುಮಾನ್, ಸೂರ್ಯ, ಶನಿ ದೇವತೆಗಳ ಆರಾಧನೆ ಮತ್ತು ದಾನಗಳಿಂದ ಈ ಸಮಸ್ಯೆಗಳನ್ನು ನಿವಾರಿಸಿ ಉತ್ತಮ ಫಲ ಪಡೆಯಬಹುದು.

Gemini Horoscope: ಈ ತಿಂಗಳಲ್ಲಿ ಮಿಥುನ ರಾಶಿಗೆ ಹಣ, ವೃತ್ತಿ ಮತ್ತು ಆರೋಗ್ಯದಲ್ಲಿ ಸವಾಲುಗಳು ಎದುರಾಗಲಿವೆ!
ಜುಲೈನಲ್ಲಿ ಮಿಥುನ ರಾಶಿ ಭವಿಷ್ಯ
Image Credit source: Getty Images
Edited By:

Updated on: Jul 09, 2026 | 9:02 AM

​ಮಿಥುನ ರಾಶಿಯ ಅಧಿಪತಿಯಾದ ಬುಧ ಗ್ರಹವು ಮಿಥುನ ರಾಶಿಯಲ್ಲೇ ಪುನರ್ವಸು ನಕ್ಷತ್ರದಲ್ಲಿ ಸ್ಥಿತನಾಗಿದ್ದಾನೆ. ಇದು ಸಾಮಾನ್ಯವಾಗಿ ಬುದ್ಧಿಮತ್ತೆ ಮತ್ತು ಸಂವಹನಕ್ಕೆ ಒಳ್ಳೆಯದೇ ಆದರೂ, ಇತರ ಗ್ರಹಗಳ ಸ್ಥಾನಗಳು ಮತ್ತು ದೃಷ್ಟಿಗಳು ಜೀವನದ ಕೆಲವು ಕ್ಷೇತ್ರಗಳಲ್ಲಿ ಏರುಪೇರುಗಳನ್ನು ಉಂಟುಮಾಡಬಹುದು.

​ಸೂರ್ಯ ಮತ್ತು ಗುರು ಕರ್ಕಾಟಕ ರಾಶಿಯಲ್ಲಿದ್ದಾರೆ. ಮಿಥುನಕ್ಕೆ 2ನೇ ಮನೆ – ಧನ ಹಾಗೂ ಕುಟುಂಬ ಸ್ಥಾನ. ಇಲ್ಲಿ ಗುರುವು ಅಸ್ತಂಗತನಾಗಿದ್ದಾನೆ. ​ಶುಕ್ರ ಮತ್ತು ಕೇತು ಸಿಂಹ ರಾಶಿಯಲ್ಲಿದ್ದಾರೆ, ಮಿಥುನಕ್ಕೆ 3ನೇ ಮನೆ ​ಶನಿ ಮತ್ತು ರಾಹು ಕ್ರಮವಾಗಿ ಮೀನ ಮತ್ತು ಕುಂಭ ರಾಶಿಯಲ್ಲಿದ್ದು, ವಕ್ರಿ ಚಲನೆಯಲ್ಲಿದ್ದಾರೆ. ಮಂಗಳ ವೃಷಭ ರಾಶಿಯಲ್ಲಿದ್ದಾನೆ ಮಿಥುನಕ್ಕೆ 12ನೇ ಮನೆ – ವ್ಯಯ ಸ್ಥಾನ

​ಧನಹಾನಿ ಮತ್ತು ಅನಗತ್ಯ ಖರ್ಚುಗಳು:

ಮಿಥುನ ರಾಶಿಗೆ 12ನೇ ಮನೆಯಾದ ವ್ಯಯ ಸ್ಥಾನದಲ್ಲಿ ಕ್ರೂರ ಗ್ರಹವಾದ ಮಂಗಳನಿದ್ದಾನೆ. ಇದು ಜುಲೈ ತಿಂಗಳಿನಲ್ಲಿ ಅನಿರೀಕ್ಷಿತ ಅಥವಾ ಅನಗತ್ಯ ಖರ್ಚುಗಳನ್ನು ಹೆಚ್ಚಿಸಬಹುದು. ಆಸ್ಪತ್ರೆಯ ವೆಚ್ಚಗಳು, ಪ್ರಯಾಣದ ವೆಚ್ಚಗಳು ಅಥವಾ ಹಠಾತ್ ನಷ್ಟಗಳು ಎದುರಾಗಬಹುದು. ಧನ ಸ್ಥಾನ ಗುರು ಇದ್ದರೂ ಆತ ಅಸ್ತಂಗತನಾಗಿರುವುದರಿಂದ ಧನಸಹಾಯ ಅಥವಾ ಆರ್ಥಿಕ ಹರಿವು ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ.

ಭಿನ್ನಾಭಿಪ್ರಾಯ ಮತ್ತು ಸಂವಹನ ದೋಷ:

​ರಾಶ್ಯಾಧಿಪತಿ ಬುಧನು ಸ್ವಸ್ಥಾನದಲ್ಲಿದ್ದರೂ, 2ನೇ ಮನೆಯಲ್ಲಿ ಸೂರ್ಯನ ತೇಜಸ್ಸು ಹಾಗೂ ಗುರುವಿನ ಅಸ್ತಂಗತ ಸ್ಥಿತಿಯಿಂದಾಗಿ ಕುಟುಂಬದ ಸದಸ್ಯರೊಂದಿಗೆ ಮಾತನಾಡುವಾಗ ಉದ್ವೇಗ ಉಂಟಾಗಬಹುದು. ನಿಮ್ಮ ಮಾತುಗಳು ಇತರರಿಗೆ ಕಠಿಣವಾಗಿ ಕೇಳಿಸಬಹುದು. ಇದರಿಂದ ಸಣ್ಣ ವಿಷಯಗಳೂ ದೊಡ್ಡ ಜಗಳಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಜುಲೈ 2026 ಮಾಸ ಭವಿಷ್ಯ: ಈ ರಾಶಿಯ ಜನರಿಗೆ ಪರಿವರ್ತನಾ ಯೋಗ; ಜುಲೈ ತಿಂಗಳಲ್ಲಿ ಶುಭವೋ ಶುಭ

​ವೃತ್ತಿ ಮತ್ತು ಉದ್ಯೋಗದಲ್ಲಿ ಅಸ್ಥಿರತೆ:

ಕರ್ಮ ಸ್ಥಾನದಲ್ಲಿ ಶನಿ ಗ್ರಹವು ವಕ್ರಿಯಾಗಿದ್ದಾನೆ. ಇದು ಉದ್ಯೋಗದಲ್ಲಿ ತಡೆಗಳು, ಮೇಲಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಅಥವಾ ಕೆಲಸದ ಸ್ಥಳದಲ್ಲಿ ಹೆಚ್ಚಿನ ಒತ್ತಡವನ್ನು ತರಬಹುದು. ವ್ಯಾಪಾರಸ್ಥರಿಗೆ ಜುಲೈ ತಿಂಗಳಿನಲ್ಲಿ ನಿರೀಕ್ಷಿತ ಲಾಭ ಸಿಗುವುದು ಕೊಂಚ ತಡವಾಗಬಹುದು.

​ಆರೋಗ್ಯ ಮತ್ತು ಮಾನಸಿಕ ಆತಂಕ:

​12ನೇ ಮನೆಯ ಮಂಗಳ ಮತ್ತು 9ನೇ ಮನೆಯಲ್ಲಿ ವಕ್ರಿ ರಾಹುವಿನ ಪ್ರಭಾವದಿಂದಾಗಿ ನಿದ್ರಾಹೀನತೆ, ರಕ್ತದೊತ್ತಡ ಅಥವಾ ಅತಿಯಾದ ಆತಂಕ ಎದುರಾಗಬಹುದು. ಶಿರೋವೇದನೆ ಅಥವಾ ಕಣ್ಣಿಗೆ ಸಂಬಂಧಿಸಿದ ಸಣ್ಣಪುಟ್ಟ ತೊಂದರೆಗಳು ಕಾಡಬಹುದು.

ಪರಿಹಾರಗಳು:

​ಬುಧ ಗ್ರಹದ ಪ್ರೀತ್ಯರ್ಥವಾಗಿ ಪ್ರತಿ ಬುಧವಾರ ಹಸಿರು ಹೆಸರು ಬೇಳೆಯನ್ನು ದಾನ ಮಾಡಿ ಅಥವಾ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ. ಗಣೇಶನಿಗೆ ದೂರ್ವೆಯನ್ನು ಸಮರ್ಪಿಸಿ. ಇದರಿಂದ ಬುದ್ಧಿಶಕ್ತಿ ಚುರುಕಾಗಿ, ತಪ್ಪು ನಿರ್ಧಾರಗಳನ್ನು ತಡೆಯಬಹುದು.
​ಖರ್ಚು ನಿಯಂತ್ರಣಕ್ಕೆ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಉತ್ತಮ. ಮಂಗಳವಾರದ ದಿನ ದೇವಸ್ಥಾನದಲ್ಲಿ ಕೆಂಪು ಕಡಲೆ ಅಥವಾ ತೊಗರಿ ಬೇಳೆಯನ್ನು ದಾನ ಮಾಡಿ. ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದರಿಂದ ಧನಹಾನಿ ಮತ್ತು ಅಪಘಾತಗಳ ಭಯ ದೂರವಾಗುತ್ತದೆ. ಗುರುವು ಅಸ್ತಂಗತನಾಗಿರುವುದರಿಂದ ಗುರುವಾರಗಳಂದು ವಿದ್ಯಾರ್ಥಿಗಳಿಗೆ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಿ. ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಅರ್ಘ್ಯವನ್ನು ನೀಡುವುದರಿಂದ ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಹಾಗೂ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ದೀಪವನ್ನು ಹಚ್ಚಿ. ಕಪ್ಪು ಕಡಲೆಯನ್ನು ದಾನ ಮಾಡುವುದು ವೃತ್ತಿ ಜೀವನದ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

– ಲೋಹಿತ್ ಹೆಬ್ಬಾರ್

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us