ಈ ಎರಡು ರಾಶಿಯವರಿಗೆ ಬರುವ ತಾಪತ್ರಯಕ್ಕೆ ಪರಿಹಾರ ಅವರ ಕೈಯಲ್ಲಿದೆ
ಸಿಂಹ ಮತ್ತು ಕನ್ಯಾ ರಾಶಿಯವರಿಗೆ ಈ ತಿಂಗಳು ಗ್ರಹಗಳ ಸ್ಥಾನದಿಂದ ಎದುರಾಗುವ ಸವಾಲುಗಳನ್ನು ಲೇಖನ ವಿವರಿಸುತ್ತದೆ. ಅಷ್ಟಮ ಶನಿ, ಗ್ರಹಣ ದೋಷ, ವೆಚ್ಚ ಹೆಚ್ಚಳದಂತಹ ತೊಂದರೆಗಳನ್ನು ವಿಶ್ಲೇಷಿಸಿ, ಮಾನಸಿಕ ಒತ್ತಡ ಹಾಗೂ ಕಷ್ಟಗಳಿಂದ ಹೊರಬರಲು ಶಿವನ ಆರಾಧನೆ, ವಿಷ್ಣು ಸಹಸ್ರನಾಮದಂತಹ ವೈಯಕ್ತಿಕ ಪರಿಹಾರಗಳನ್ನು ಸೂಚಿಸಲಾಗಿದೆ. ನಿಮ್ಮ ಸಮಸ್ಯೆಗಳಿಗೆ ಜ್ಯೋತಿಷ್ಯ ಮಾರ್ಗದರ್ಶನ ಇಲ್ಲಿದೆ.

ಈ ತಿಂಗಳಲ್ಲಿ ಎದುರಾದ ಎದುರಾಗಲಿರುವ ತೊಂದರೆಗಳು ಯಾವುವು ಎಂದು ಸಿಂಹ ಮತ್ತು ಕನ್ಯಾ ರಾಶಿಯವರಿಗೆ ನೋಡೋಣ. ರವಿ ಹಾಗೂ ಬುಧನ ಆಧಿಪತ್ಯದ ಈ ಎರಡೂ ರಾಶಿಗಳಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏನೆಲ್ಲ ಆಗಲಿದೆ, ಅದಕ್ಕೆ ಪರಿಹಾತವನ್ನು ವೈಯಕ್ತಿಯಕವಾಗಿಯೂ ಮಾಡಿಕೊಳ್ಳಬಹುದು.
ಸಿಂಹ ರಾಶಿ :
ಸಿಂಹ ರಾಶಿಯವರಿಗೆ ಪ್ರಸ್ತುತ ಗೋಚಾರದಲ್ಲಿ ಪ್ರಮುಖ ಗ್ರಹಗಳ ಸ್ಥಾನವು ಸವಾಲಿನ ಪರಿಸ್ಥಿತಿಯನ್ನು ತಿಳಿಸುತ್ತದೆ.
ಅಷ್ಟಮ ಶನಿಯ ಪ್ರಭಾವ :
ಮೀನ ರಾಶಿಯಲ್ಲಿ ವಕ್ರಿಯಾಗಿರುವ ಶನಿಯು ಸಿಂಹ ರಾಶಿಗೆ ೮ನೇ ಮನೆಯಲ್ಲಿದ್ದಾನೆ. ಇದು ಮಾನಸಿಕ ಒತ್ತಡ, ಕಾರ್ಯಗಳಲ್ಲಿ ಅನಿರೀಕ್ಷಿತ ಅಡೆತಡೆಗಳು, ಧನ ನಷ್ಟ ಮತ್ತು ಆರೋಗ್ಯದಲ್ಲಿ ಏರಿಳಿತಗಳನ್ನು ಉಂಟುಮಾಡಬಹುದು.
ಕೇತು ಮತ್ತು ಶುಕ್ರ :
ರಾಶಿಯಲ್ಲೇ ಕೇತು ಮತ್ತು ಶುಕ್ರ ಇರುವುದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ, ಶರೀರದಲ್ಲಿ ಶಕ್ತಿ ಕುಂದುವುದು ಹಾಗೂ ಅನಗತ್ಯ ಮಾನಸಿಕ ವಿರಕ್ತಿ ಭಾವನೆ ಕಾಡಬಹುದು.
ಸಪ್ತಮ ಭಾವದಲ್ಲಿ ರಾಹು ಮತ್ತು ಚಂದ್ರ:
ಕುಂಭ ರಾಶಿಯಲ್ಲಿ ರಾಹು ಮತ್ತು ಚಂದ್ರರ ಸಂಯೋಜನೆಯಿಂದ ‘ಗ್ರಹಣ ದೋಷ’ ಉಂಟಾಗುತ್ತದೆ. ಇದು ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಭಿನ್ನಾಭಿಪ್ರಾಯ, ಸಂಗಾತಿಯೊಂದಿಗೆ ಅಸಮಾಧಾನ, ಹಾಗೂ ವ್ಯಾಪಾರ-ಪಾಲುದಾರಿಕೆಯಲ್ಲಿ ತಪ್ಪು ಗ್ರಹಿಕೆಗಳಿಗೆ ಕಾರಣವಾಗಬಹುದು.
ದ್ವಾದಶ ಭಾವದಲ್ಲಿ ಸೂರ್ಯ ಮತ್ತು ಗುರು:
ರಾಶ್ಯಾಧಿಪತಿ ಸೂರ್ಯ ಹಾಗೂ ಅಸ್ತಂಗತನಾದ ಗುರು ೧೨ನೇ ಮನೆಯಲ್ಲಿ ಕರ್ಕಾಟಕ ರಾಶಿಯಲ್ಲಿದ್ದಾರೆ. ಇದರಿಂದ ಅನಗತ್ಯ ಹಾಗೂ ಅನಿರೀಕ್ಷಿತ ವೆಚ್ಚಗಳು ಹೆಚ್ಚಾಗುವುದು, ನಿದ್ರಾಹೀನತೆ ಮತ್ತು ಪ್ರಯಾಣದಲ್ಲಿ ಕ್ಲೇಶಗಳು ಎದುರಾಗಬಹುದು.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಗ್ರಹಗಳ ಸ್ಥಾನಮಾನದಂತೆ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಎಚ್ಚರಿಕೆ ಅಗತ್ಯ.
ಸಪ್ತಮ ಭಾವದಲ್ಲಿ ವಕ್ರ ಶನಿ:
ಮೀನ ರಾಶಿಯ ಶನಿಯು ಕನ್ಯಾ ರಾಶಿಗೆ ನೇರವಾಗಿ ೭ನೇ ಮನೆಯಲ್ಲಿದ್ದು ಲಗ್ನವನ್ನು ವೀಕ್ಷಿಸುತ್ತಾನೆ. ಇದರಿಂದ ದಾಂಪತ್ಯ ಜೀವನದಲ್ಲಿ ಕಷ್ಟ-ಮನಸ್ತಾಪಗಳು, ಸಂಗಾತಿಯ ಆರೋಗ್ಯದಲ್ಲಿ ಏರಿಳಿತ ಮತ್ತು ಹೊಸ ವ್ಯವಹಾರಿಕ ಒಪ್ಪಂದಗಳಲ್ಲಿ ವಿಳಂಬ ಉಂಟಾಗಬಹುದು.
ದ್ವಾದಶ ಭಾವದಲ್ಲಿ ಕೇತು ಮತ್ತು ಶುಕ್ರ:
೧೨ನೇ ಮನೆಯಲ್ಲಿ ಕೇತು ಮತ್ತು ಶುಕ್ರ ಇರುವುದರಿಂದ ಹಣಕಾಸಿನ ಆಸೋರಿಕೆ, ಹಿಡಿತವಿಲ್ಲದ ಖರ್ಚು, ಕಣ್ಣಿನ ತೊಂದರೆಗಳು ಹಾಗೂ ವೈಯಕ್ತಿಕ ಸುಖ-ಸಂತೋಷಗಳಲ್ಲಿ ಕೊರತೆ ಕಾಣಿಸಬಹುದು.
ಷಷ್ಠ ಭಾವದಲ್ಲಿ ರಾಹು ಮತ್ತು ಚಂದ್ರ:
೬ನೇ ಮನೆಯಲ್ಲಿ ರಾಹು-ಚಂದ್ರರ ಸಂಯೋಜನೆಯಿಂದ ರಹಸ್ಯ ಚಿಂತೆಗಳು, ಜೀರ್ಣಕ್ರಿಯೆ ಅಥವಾ ಮಾನಸಿಕ ಆತಂಕದಂತಹ ಸಮಸ್ಯೆಗಳು ಕಾಡಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಣ್ಣಪುಟ್ಟ ಕಿರಿಕಿರಿ ಅಥವಾ ಸಾಲದ ಸುಳಿಗೆ ಸಿಲುಕುವ ಎಚ್ಚರಿಕೆ ಅಗತ್ಯ.
ಗುರು ಅಸ್ತ:
ಲಾಭ ಸ್ಥಾನದಲ್ಲಿ ಉಚ್ಚ ಗುರುವಿದ್ದರೂ, ಆತ ಸೂರ್ಯನಿಂದ ಅಸ್ತಂಗತನಾಗಿರುವುದರಿಂದ ನಿರೀಕ್ಷಿತ ಆರ್ಥಿಕ ಲಾಭಗಳು ತಕ್ಷಣಕ್ಕೆ ಸಿಗದೆ ವಿಳಂಬವಾಗಬಹುದು.
ಪರಿಹಾರಗಳು:
ಸಿಂಹ ರಾಶಿಯವರು ಶಿವನ ಆರಾಧನೆ, ಹನುಮಾನ್ ಚಾಲೀಸಾ ಪಾರಾಯಣ ಮಾಡುವುದು ಹಾಗೂ ಶನಿವಾರ ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವುದು ಶ್ರೇಯಸ್ಸು ಪಡೆಯುವರು.
ಕನ್ಯಾ ರಾಶಿಯವರು ವಿಷ್ಣು ಸಹಸ್ರನಾಮ ಪಠಣ, ಸುಬ್ರಹ್ಮಣ್ಯ ಸ್ವಾಮಿ ಪೂಜೆಯಿಂದ ಶುಭ ಫಲ ಪಡೆಯಬಹುದು.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




