AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shani Transit in Pisces 2026: ಕರ್ಮಕಾರಕ ಶನಿಯಿಂದ ಕಷ್ಟ ಮಾತ್ರವಲ್ಲ, ಸುಖವೂ ಇದೆ; ಈ ರಾಶಿಗೆ ಅದೃಷ್ಟ

ಜ್ಯೋತಿಷ್ಯದ ಪ್ರಕಾರ, ಮೀನ ರಾಶಿಯಲ್ಲಿರುವ ಶನಿ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರುತ್ತಾನೆ. ಶನಿಯು ಕರ್ಮ ಫಲ ನೀಡುವವನಾಗಿದ್ದು, ಈ ಸಂಕ್ರಮಣದಿಂದ ಉದ್ಯೋಗ, ಆರ್ಥಿಕ ಸ್ಥಿತಿ, ಸಂಬಂಧಗಳು ಪ್ರಭಾವಿತವಾಗುತ್ತವೆ. ಕೆಲವು ರಾಶಿಗಳಿಗೆ ಶುಭ ಫಲ, ಮತ್ತೆ ಕೆಲವು ರಾಶಿಗಳಿಗೆ ಮಿಶ್ರ ಫಲ. ಶನಿ ದಶೆಯೂ ಈ ಸಮಯದಲ್ಲಿ ಶುಭ ಅಥವಾ ಅಶುಭವಾಗಿ ಪರಿಣಮಿಸಬಹುದು. ಈ ಅವಧಿಯಲ್ಲಿ ಶನಿ ಪ್ರಭಾವವನ್ನು ಅರ್ಥಮಾಡಿಕೊಂಡು ಸೂಕ್ತ ಜಾಗ್ರತೆ ವಹಿಸುವುದು ಮುಖ್ಯ.

Shani Transit in Pisces 2026: ಕರ್ಮಕಾರಕ ಶನಿಯಿಂದ ಕಷ್ಟ ಮಾತ್ರವಲ್ಲ, ಸುಖವೂ ಇದೆ; ಈ ರಾಶಿಗೆ ಅದೃಷ್ಟ
ಕರ್ಮಕಾರಕ ಶನಿಯಿಂದ ಕಷ್ಟ ಮಾತ್ರವಲ್ಲImage Credit source: Pinterest
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 19, 2026 | 12:36 PM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನು‌ ಕರ್ಮ ಫಲವನ್ನು ನೀಡುವವನು ಎಂದು ಪ್ರಸಿದ್ಧ. ಕುಂಡಲಿಯಲ್ಲಿ ಶನಿಯ ಸ್ಥಾನದ ಮೇಲೆ ಉದ್ಯೋಗ, ಉದ್ಯಮಗಳು ತೀರ್ಮಾನವಾಗುತ್ತವೆ. ಅಧಿಕಾರವನ್ನೂ ನೀಡುವನು, ನ್ಯಾಯ ಮಾರ್ಗದಲ್ಲಿ ಹೋಗುವಂತೆ ಮಾಡಿ ನ್ಯಾಯವನ್ನೂ ಕೊಡಿಸುತ್ತಾನೆ. ​​ಮೀನ ಶನಿಗೆ ಸಮ ಕ್ಷೇತ್ರ, ಚಂದ್ರ ದ್ರೇಕ್ಕಾಣ ಶನಿಗೆ ಶತ್ರು ಕ್ಷೇತ್ರ, ರವಿಯ ಹೋರೆ ಶನಿಗೆ ಪರಮ ಶತ್ರುಕ್ಷೇತ್ರ, ಗುರುವಿನ ನವಾಂಶ ಮತ್ತು ತ್ರಿಂಶಾಂಶ ಸಮ/ಮಿತ್ರ ಕ್ಷೇತ್ರ, ಶುಕ್ರನ ದ್ವಾದಶಾಂಶ ಶನಿಗೆ ಮಿತ್ರ ಕ್ಷೇತ್ರ. ವರ್ತಮಾನದಲ್ಲಿ ಶನಿಯ ಸ್ಥಿತಿ ಇದಾಗಿದೆ.

​ಇಂತಹ ಶನಿ ಸ್ಥಿತಿಯಿಂದ ಯಾವ ರಾಶಿಗೆ ಎಂತಹ ಫಲ?

​ಶನಿಯು ಮೀನ ರಾಶಿಯಲ್ಲಿದ್ದಾಗ ಪ್ರಮುಖವಾಗಿ ದ್ವಾದಶ ರಾಶಿಗಳಿಗೆ ಸಾಮಾನ್ಯ ಮತ್ತು ಈ ವರ್ಗ ಬಲದ ಆಧಾರದ ಮೇಲೆ ವಿಶೇಷ ಫಲಗಳಿವು.

​ಮೇಷ, ಕರ್ಕಾಟಕ, ಸಿಂಹ ರಾಶಿ:

ಶನಿಯು ರವಿಯ ಹೋರೆ ಮತ್ತು ಚಂದ್ರನ ದ್ರೇಕ್ಕಾಣದಲ್ಲಿರುವುದರಿಂದ ಈ ರಾಶಿಯವರಿಗೆ ಮಾನಸಿಕ ಆತಂಕ, ಅನಗತ್ಯ ಖರ್ಚುಗಳು ಮತ್ತು ಕೌಟುಂಬಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನ ಹರಿಸುವುದು ಮುಖ್ಯ. ಆದರೆ ಗುರುವಿನ ನವಾಂಶವಿರುವುದರಿಂದ ಅಂತಿಮವಾಗಿ ಧಾರ್ಮಿಕ ಚಿಂತನೆಗಳಿಂದ ನೆಮ್ಮದಿ ಸಿಗುತ್ತದೆ.

​ವೃಷಭ, ತುಲಾ ರಾಶಿ :

ಶನಿಯು ಶುಕ್ರನ ದ್ವಾದಶಾಂಶದಲ್ಲಿರುವುದರಿಂದ ಈ ರಾಶಿಯವರಿಗೆ ಈ ಅವಧಿಯು ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ಫಲಗಳನ್ನು ನೀಡುತ್ತದೆ. ಭೂಮಿ, ವಾಹನ ಅಥವಾ ಆಸ್ತಿ ಖರೀದಿಗೆ ಯೋಗವಿದೆ. ಕಷ್ಟಪಟ್ಟ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.

​ಮಿಥುನ, ಕನ್ಯಾ, ಧನು, ಮೀನ ರಾಶಿ :

ಶನಿಯು ಗುರುವಿನ ರಾಶಿ, ನವಾಂಶ ಮತ್ತು ತ್ರಿಂಶಾಂಶಗಳಲ್ಲಿರುವುದರಿಂದ ಈ ರಾಶಿಯವರಿಗೆ ಜ್ಞಾನಾರ್ಜನೆ, ಅಧ್ಯಾತ್ಮ, ಶಿಕ್ಷಣ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುವ ಸಾಧ್ಯತೆ ಇದೆ. ತೀರ್ಥಯಾತ್ರೆ ಅಥವಾ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಮೀನ ರಾಶಿಯವರಿಗೆ ಜನ್ಮ ಶನಿಯ ಪ್ರಭಾವವಿದ್ದರೂ, ಗುರುವಿನ ಬಲದಿಂದಾಗಿ ಬುದ್ಧಿಶಕ್ತಿ ಮತ್ತು ತಾಳ್ಮೆ ಹೆಚ್ಚುತ್ತದೆ.

​ವೃಶ್ಚಿಕ, ಮಕರ, ಕುಂಭ ರಾಶಿ:

ಮಕರ ಮತ್ತು ಕುಂಭ ಶನಿಯ ಸ್ವಂತ ರಾಶಿಗಳಾಗಿದ್ದರೂ, ಮೀನದಲ್ಲಿನ ಶನಿ ಸ್ಥಿತಿಯು ಮಿಶ್ರಫಲವನ್ನು ನೀಡುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕಂತೆ ಧನಲಾಭವಾಗುತ್ತದೆ. ಆದರೆ ಶತ್ರುಗಳ ಕಾಟ ಅಥವಾ ಗುಪ್ತ ಆತಂಕಗಳು ಎದುರಾಗಬಹುದು.

​ಶನಿಯ ದಶೆ ಶುಭ :

ಈ ನಿರ್ದಿಷ್ಟ ವರ್ಗ ಕುಂಡಲಿಯ ಬಲದ ಪ್ರಕಾರ, ಈ ಕೆಳಗಿನ ಪರಿಸ್ಥಿತಿಯಲ್ಲಿರುವವರಿಗೆ ಶನಿ ದಶೆಯು ಅತ್ಯಂತ ಶುಭ ಫಲಗಳನ್ನು ನೀಡುತ್ತದೆ:

​ವೃಷಭ ಮತ್ತು ತುಲಾ:

ಶನಿಗೆ ಶುಕ್ರನು ಪರಮ ಮಿತ್ರ. ಇಲ್ಲಿ ಶನಿಯು ಶುಕ್ರನ ದ್ವಾದಶಾಂಶದಲ್ಲಿರುವುದರಿಂದ, ವೃಷಭ ಮತ್ತು ತುಲಾ ಲಗ್ನ ಅಥವಾ ರಾಶಿಯವರಿಗೆ ಶನಿ ದಶೆಯು ಭಾಗ್ಯೋದಯವನ್ನು ತರುತ್ತದೆ. ಆಸ್ತಿ ವೃದ್ಧಿ, ಉದ್ಯೋಗದಲ್ಲಿ ಪ್ರಗತಿ ಮತ್ತು ರಾಜಯೋಗದಂತಹ ಫಲಗಳು ಸಿಗುತ್ತವೆ.

​ಧನು ಮತ್ತು ಮೀನ :

ಶನಿಯು ಗುರುವಿನ ನವಾಂಶ ಮತ್ತು ತ್ರಿಂಶಾಂಶದಲ್ಲಿರುವುದರಿಂದ, ಗುರು ಪ್ರಧಾನ ರಾಶಿಯವರಿಗೆ ಶನಿ ದಶೆಯು ಆಧ್ಯಾತ್ಮಿಕ ಉನ್ನತಿ, ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ, ಮತ್ತು ಸಮಾಜದಲ್ಲಿ ಉನ್ನತ ಪದವಿಯನ್ನು ತಂದುಕೊಡುತ್ತದೆ.

ಬಲಿಷ್ಠ ಶನಿ :

ಯಾರ ಜಾತಕದಲ್ಲಿ ಶನಿಯು ತುಲಾ ರಾಶಿಯಲ್ಲಿ ಅಥವಾ ಮಕರ ಅಥವಾ ಕುಂಭದಲ್ಲಿದ್ದು, ಪ್ರಸ್ತುತ ಗೋಚಾರದಲ್ಲಿ ಈ ಮೀನ ರಾಶಿಯ ಸ್ಥಿತಿಯಿದ್ದಾಗ ಶನಿ ದಶೆ ಆರಂಭವಾದರೆ ಅವರಿಗೆ ಸಕಲ ಸುಖ-ಭೋಗಗಳು ದೊರೆಯುತ್ತವೆ.

ಶನಿಯ ದಶೆ ಅಶುಭ:

ಮೇಷ ಮತ್ತು ವೃಶ್ಚಿಕ ಮಂಗಳನ ರಾಶಿ.ಇವರಿಗೆ ಶನಿಯು ನೈಸರ್ಗಿಕ ಶತ್ರು. ಜಾತಕದಲ್ಲಿ ಮಂಗಳ-ಶನಿ ದೋಷವಿದ್ದವರಿಗೆ ಈ ದಶೆಯು ಕಠಿಣ ಪರಿಶ್ರಮ ಪಟ್ಟರೂ ನಿರೀಕ್ಷಿತ ಫಲ ನೀಡದೆ ನಿರಾಸೆ ಮೂಡಿಸಬಹುದು.

​ಸಿಂಹ ಮತ್ತು ಕರ್ಕಾಟಕ :

ಶನಿಯು ಇಲ್ಲಿ ರವಿಯ ಹೋರೆಯಲ್ಲಿಯೂ ಚಂದ್ರನ ದ್ರೇಕ್ಕಾಣದಲ್ಲಿಯೂ ಇದ್ದಾನೆ. ರವಿ ಮತ್ತು ಚಂದ್ರರು ಶನಿಗೆ ವೈರಿಗಳು. ಆದ್ದರಿಂದ ಸಿಂಹ ಮತ್ತು ಕರ್ಕಾಟಕ ರಾಶಿಯವರಿಗೆ ಶನಿ ದಶೆಯು ತಾಯಿಯ ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಶಾಂತಿ, ಅಪವಾದ, ಮತ್ತು ಉದ್ಯೋಗದಲ್ಲಿ ಸ್ಥಾನಪಲ್ಲಟದಂತಹ ಕಷ್ಟಗಳನ್ನು ನೀಡಬಹುದು.

​ಸಾಡೇ ಸಾಥ್ :

ಸದ್ಯ ಮೀನ ರಾಶಿಯಲ್ಲಿ ಶನಿ ಇರುವುದರಿಂದ ಕುಂಭ, ಮೀನ ಮತ್ತು ಮೇಷ ರಾಶಿಯವರಿಗೆ ಏಳೂವರೆ ವರ್ಷದ ಶನಿಯ ಪ್ರಭಾವವಿರುತ್ತದೆ. ಈ ರಾಶಿಯವರ ಜಾತಕದಲ್ಲಿ ಶನಿ ದಶೆಯೂ ಒಟ್ಟಿಗೆ ಬಂದರೆ ಕೌಟುಂಬಿಕ ಮತ್ತು ಆರ್ಥಿಕ ಒತ್ತಡಗಳು ಹೆಚ್ಚಾಗುತ್ತವೆ. ​ ಗ್ರಹವು ರವಿ ಮತ್ತು ಚಂದ್ರನ ವರ್ಗಗಳಲ್ಲಿ ಅಶುಭ ಸ್ಥಾನದಲ್ಲಿದ್ದರೂ, ಗುರು ಮತ್ತು ಶುಕ್ರನ ವರ್ಗಗಳಲ್ಲಿ ಶುಭ ಸ್ಥಾನವನ್ನು ಪಡೆದಿರುವುದರಿಂದ, ಶನಿಯು ಸಂಪೂರ್ಣವಾಗಿ ಕೆಟ್ಟ ಫಲವನ್ನು ನೀಡುವುದಿಲ್ಲ. ಆರಂಭದಲ್ಲಿ ಕಷ್ಟಗಳನ್ನು ನೀಡಿದರೂ, ಅಂತಿಮವಾಗಿ ಜ್ಞಾನ, ತಾಳ್ಮೆ ಮತ್ತು ಅನುಭವದ ಮೂಲಕ ಯಶಸ್ಸನ್ನು ಕರುಣಿಸುತ್ತಾನೆ.

– ಲೋಹಿತ ಹೆಬ್ಬಾರ್

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More