2025ರ ಮಾರ್ಚ್ 30ರ ಭಾನುವಾರದಂದು ಚಾಂದ್ರಮಾನ ಯುಗಾದಿ. (chandramana ugadi 2025) ಅಂದಿನಿಂದ ವಿಶ್ವಾವಸು ಸಂವತ್ಸರದ ಆರಂಭವಾಗುತ್ತದೆ. ಈ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳವರಿಗೆ ಶುಭಾಶುಭ ಫಲಗಳು ಏನಿವೆ ಎಂಬುದರ ವಿವರ ಇಲ್ಲಿದೆ. ಇದಕ್ಕಾಗಿ ಶನಿ, ಗುರು, ರಾಹು- ಕೇತು ಗ್ರಹಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದು ಗ್ರಹ ಗೋಚಾರದಲ್ಲಿ ತಿಳಿಸುವ ಭವಿಷ್ಯ. ವೈಯಕ್ತಿಕ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ದಶಾಭುಕ್ತಿ ಇತ್ಯಾದಿ ವಿಚಾರಗಳನ್ನು ಸಹ ಪರಾಂಬರಿಸಬೇಕು. ಆದರೆ ಗೋಚಾರ ರೀತಿಯಾಗಿ ಗ್ರಹಗಳು ಬೀರುವಂಥ ಪ್ರಭಾವವು ಇದ್ದೇ ಇರುತ್ತದೆ.
ಈ ಸಂವತ್ಸರದ ಗ್ರಹಸ್ಥಿತಿಗಳು ಹೀಗಿವೆ: ಮಾರ್ಚ್ ಇಪ್ಪತ್ತೊಂಬತ್ತನೇ ತಾರೀಕಿನಂದು ಶನಿ ಗ್ರಹ ಮೀನ ರಾಶಿ ಪ್ರವೇಶ ಮಾಡುತ್ತದೆ. ಮೇ 14ಕ್ಕೆ ಗುರು ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇನ್ನು ಮೇ ಹದಿನೆಂಟನೇ ತಾರೀಕಿನಂದು ರಾಹು ಗ್ರಹವು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹವು ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ. ಗುರು ಗ್ರಹ ಅಕ್ಟೋಬರ್ 18ನೇ ತಾರೀಕಿನಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿ, ಡಿಸೆಂಬರ್ 5ನೇ ತಾರೀಕಿನಂದು ಮತ್ತೆ ಮಿಥುನ ರಾಶಿಯಲ್ಲಿ ಸಂಚರಿಸುತ್ತಾ ಸಂವತ್ಸರ ಪರ್ಯಂತವಾಗಿ ಅದೇ ರಾಶಿಯಲ್ಲಿ ಇರುತ್ತದೆ.
ನಿಮಗೆ ಈ ಹಿಂದೆ ಯಾರು ಮೋಸ ಮಾಡಿದ್ದರೋ ಅವರ ಜೊತೆಗೇ ಮತ್ತೆ ವ್ಯವಹಾರ- ವ್ಯಾಪಾರ ಮಾಡುವುದಕ್ಕೆ ಆರಂಭಿಸಿ, ಇನ್ನೊಮ್ಮೆ ಮೋಸ ಹೋಗುವಂತಾಗುತ್ತದೆ. ವಿವಾಹಿತರಾಗಿದ್ದಲ್ಲಿ ದಂಪತಿ ಮಧ್ಯೆ ಪದೇ ಪದೇ ಜಗಳ- ಕಲಹಗಳು ಏರ್ಪಡುತ್ತವೆ. ಮಕ್ಕಳ ಮದುವೆಗೆ ಪ್ರಯತ್ನಿಸುತ್ತಿರುವವರಿಗೆ ಬಹಳ ಚಿಂತೆ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಓದಿಗಿಂತ ಬೇರೆ ವಿಚಾರಗಳ ಕಡೆಗೆ ಆಕರ್ಷಣೆ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಕೋರ್ಟ್- ಕಚೇರಿ ಮೆಟ್ಟಿಲೇರುವಂತಾಗುತ್ತದೆ. ಹಣಕಾಸು- ಲೆಕ್ಕಪತ್ರದ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ, ತೆಗೆದುಕೊಳ್ಳಬೇಕಾದ ಪರವಾನಗಿ ಇತ್ಯಾದಿಗಳ ವಿಚಾರಕ್ಕೆ ನೆಮ್ಮದಿ ಹಾಳಾಗುತ್ತದೆ.
ಇದನ್ನೂ ಓದಿ: ಸಿಂಹ ರಾಶಿಯವರ ವಿಶ್ವಾವಸು ಸಂವತ್ಸರ ಯುಗಾದಿ ವರ್ಷ ಭವಿಷ್ಯದ ಫಲಾಫಲ ಇಲ್ಲಿದೆ
ನೀವು ಪ್ರಯತ್ನಿಸುವ ಕೆಲಸಗಳು- ಕಾರ್ಯಗಳು ಶೇಕಡಾ ಎಂಬತ್ತರಷ್ಟು, ತೊಂಬತ್ತರಷ್ಟು ಪೂರ್ಣಗೊಂಡು, ಆ ಮೇಲೆ ನಿಲ್ಲುವಂತೆ ಆಗಲಿದೆ. ಉದ್ಯೋಗದಲ್ಲಿ ನಿಮಗೆ ಸಿಗಬೇಕಾದ ಅವಕಾಶಗಳು ಕೆಲವು ಕೊನೆ ಕ್ಷಣದಲ್ಲಿ ಬೇರೆಯವರು ಪಾಲಾಗಲಿದೆ. ಒಂದು ವೇಳೆ ಬಡ್ತಿ ಅಂತ ಬಂದರೂ ಅದರಿಂದ ನಿಮಗೆ ಮಾನಸಿಕ ಕಿರಿಕಿರಿ ಆಗುತ್ತದೆ. ಅಕ್ಟೋಬರ್- ಡಿಸೆಂಬರ್ ಮಧ್ಯೆ ವಿಲಾಸಿ ವಾಹನ, ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಪ್ರೇಮ ನಿವೇದನೆ ಮಾಡುವ ಸಾಧ್ಯತೆ ಸಹ ಇದ್ದು, ಅದಕ್ಕೆ ಒಪ್ಪಿಗೆ ಸಹ ಸಿಕ್ಕಿಬಿಡುವ ಯೋಗ ಇದೆ.
ನಿಮ್ಮಲ್ಲಿ ಯಾರು ಭೂಮಿ ಮಾರಾಟ ಮಾಡಿಸುವ- ಖರೀದಿ ಮಾಡಿಸುವ ವ್ಯವಹಾರದಲ್ಲಿ ಕಮಿಷನ್ ಪಡೆಯುವ ಮೂಲಕ ಆದಾಯ ಕಾಣುತ್ತಿದ್ದೀರೋ ಅಂಥವರಿಗೆ ಆದಾಯದಲ್ಲಿ ಹೆಚ್ಚಳ ಇದೆ. ಭೂಮಿಯೋ ಮನೆಯನ್ನೋ ಮಾರಾಟಕ್ಕೆ ಇಟ್ಟವರಿಗೆ ಉತ್ತಮ ಬೆಲೆ ದೊರೆಯುವ ಯೋಗ ಸಹ ಇದೆ. ಇದೇ ವೇಳೆ ಪ್ರಾಯಶ್ಚಿತ್ತ ಪೂಜೆ, ಹರಕೆ ಮೊದಲಾದವುಗಳಿಗೆ ಹೆಚ್ಚಿನ ಖರ್ಚಾಗಲಿದೆ. ಹಳೇ ಮನೆ ದುರಸ್ತಿ, ವಾಹನಗಳ ದುರಸ್ತಿ, ವೈದ್ಯಕೀಯ ಚಿಕಿತ್ಸೆಗಳಿಗಾಗಿ ಹೆಚ್ಚಿನ ಖರ್ಚು ಬರಲಿದೆ.
-ಸ್ವಾತಿ ಎನ್.ಕೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ