AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರಿಂದ 20ರ ವರೆಗಿನ ವಾರಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 14ರಿಂದ 20ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.  ಪ್ರತಿಯೊಂದು ರಾಶಿಗೂ ವೃತ್ತಿ ಪ್ರಗತಿ, ಹಣಕಾಸು ನಿರ್ಧಾರಗಳು ಮತ್ತು ಹೊಸ ಅವಕಾಶಗಳ ಬಗ್ಗೆ ವಿವರವಾದ ಮಾಹಿತಿ ಲಭ್ಯವಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರಿಂದ 20ರ ವರೆಗಿನ ವಾರಭವಿಷ್ಯ  
ವಾರಭವಿಷ್ಯ  
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on:Dec 14, 2025 | 10:27 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಪ್ರವಾಸ, ಎಂಜಾಯ್ ಮೆಂಟ್, ಒಂದಿಷ್ಟು ಬಿಡುವು ಇಂಥದ್ದರ ಕಡೆಗೆ ಹೆಚ್ಚಿನ ಗಮನ ಇರುತ್ತದೆ. ನೀವು ಯಾವ ಉದ್ದೇಶಕ್ಕಾಗಿ ಹಣ ಕೂಡಿಟ್ಟಿರುತ್ತೀರೋ ಅದಕ್ಕಾಗಿ ಮೊತ್ತವನ್ನು ಬಳಸಿಕೊಳ್ತೀರಿ. ರಾಜಕಾರಣಿಗಳಿಗೆ ಒಂದಿಷ್ಟು ಚಿಂತೆಯ ಗೆರೆಗಳು ಕಾಣಿಸಿಕೊಳ್ಳಲಿವೆ. ಇಷ್ಟು ಸಮಯ ನೀವು ಯಾವ ವ್ಯಕ್ತಿಯನ್ನು ಅನುಸರಿಸುತ್ತಾ ಬಂದಿರುತ್ತೀರೋ ಅವರಿಗೆ ಇನ್ನು ಮುಂದೆ ಅಧಿಕಾರ ಇರುವುದಿಲ್ಲ. ಅಥವಾ ಬೇರೆಯವರನ್ನು ಮುನ್ನೆಲೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ತಿಳಿದುಬರಲಿದೆ. ನೀವು ಕೈಗೆತ್ತಿಕೊಳ್ಳುವ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ಲಾನ್ ಬಿ ಇಟ್ಟುಕೊಳ್ಳಲೇಬೇಕು ಎಂಬ ನಿರ್ಧಾರಕ್ಕೆ ಬರಲಿದ್ದೀರಿ.

  • ಕೃಷಿಕರು: ನಾನು ಹಾಗಲ್ಲ ಹೇಳಿದ್ದು, ಹೀಗೆ ಎಂದು ಒಂದು ವಿಷಯಕ್ಕೆ ಬಹಳ ಬಾರಿ ಸಮಜಾಯಿಷಿ ನೀಡುವಂತೆ ಆಗಲಿದೆ. ಸಣ್ಣ ಮೊತ್ತದಲ್ಲಿ ಪೂರ್ಣ ಮಾಡಿಬಿಡಬೇಕು ಅಂದುಕೊಂಡ ಕೆಲಸಗಳು ವಿಪರೀತ ಖರ್ಚು ಮಾಡಿಸುತ್ತವೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಕುಟುಂಬದ ಒಳಗೆ ಇರುವಂಥ ಅಸಮಾಧಾನ ಬಗೆಹರಿಸುವುದಕ್ಕೆ ಆದ್ಯತೆ ನೀಡುತ್ತೀರಿ. ನಿಮ್ಮ ಸಮುದಾಯದಲ್ಲಿ ಗೌರವ ಪಡೆಯುವ ಹಾಗೂ ಪ್ರಭಾವಿ ಆದ ವ್ಯಕ್ತಿಯೊಬ್ಬರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ.
  • ವೃತ್ತಿನಿರತರು: ಯಾವುದಕ್ಕೂ ಇರಲಿ ಎಂದುಕೊಂಡು ಹಣಕಾಸಿನ ಹೊಂದಾಣಿಕೆ ಮಾಡುವುದಕ್ಕೆ ಶುರು ಮಾಡಲಿದ್ದೀರಿ. ಇಷ್ಟು ಸಮಯ ಯಾವ ನಿರ್ಧಾರ ಮಾಡುವುದು ಬೇಡ ಎಂದು ಮುಂದಕ್ಕೆ ಹಾಕಿಕೊಂಡು ಬರುತ್ತಾ ಇರುತ್ತೀರೋ ಆ ಬಗ್ಗೆ ಈಗ ಅಂತಿಮ ಚಿತ್ರಣವೊಂದು ಸಿಗಲಿದೆ. ವಾರದ ಮಧ್ಯಭಾಗದಿಂದ ಆಚೆಗೆ ನಿಮ್ಮ ಉತ್ಸಾಹ- ಉಲ್ಲಾಸ ಹೆಚ್ಚಾಗಲಿದೆ. ನೀವು ಈಗಾಗಲೇ ಕೆಲಸ ಮಾಡಿಕೊಟ್ಟಿದ್ದೀರಿ, ಅದಕ್ಕಾಗಿ ನೀಡಬೇಕಾದ ಹಣ ನೀಡಿಲ್ಲ ಅಂತಾದಲ್ಲಿ, ಅದು ನಿಮ್ಮ ಕೈ ಸೇರಲಿದೆ.
  • ವಿದ್ಯಾರ್ಥಿಗಳು: ನಿಮಗೆ ಗೊತ್ತಿಲ್ಲದ ವಿಷಯವನ್ನೂ ಗೊತ್ತಿದೆ ಎಂದು ಹೇಳುವುದಕ್ಕೆ ಹೋಗಬೇಡಿ. ಈ ವಾರ ನಿಮ್ಮ ಸುತ್ತಮುತ್ತಲು ಇರುವಂಥವರಿಂದ ಪ್ರಭಾವಕ್ಕೆ ಒಳಪಡಲಿದ್ದೀರಿ. ಆದರೆ ಸರಿ- ತಪ್ಪಿನ ಬಗ್ಗೆ ವಿವೇಚನೆ ಇದ್ದೂ ಸರಿಯಲ್ಲದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಡಿ. ಕೆಲವು ಸಮಸ್ಯೆಗಳಿಂದ ತಕ್ಷಣಕ್ಕೆ ಹೊರಬಂದರೆ ಸಾಕು ಎಂದು ಆಲೋಚಿಸುವ ಬದಲಿಗೆ ದೀರ್ಘಾವಧಿ ಪರಿಹಾರಕ್ಕೆ ಯೋಚಿಸಿ.
  • ಮಹಿಳೆಯರು: ನಿಮ್ಮ ನಂಬಿಕೆ ಎಲ್ಲರದ್ದೂ ಆಗಬೇಕಿಲ್ಲ. ನೀವು ಅನುಸರಿಸುವ ವಿಷಯದಲ್ಲಿನ ಲೋಪ- ದೋಷಗಳನ್ನು ಇತರರು ಎತ್ತಿ ತೋರಿಸಿದರು ಎಂಬ ಕಾರಣಕ್ಕೆ ದ್ವೇಷ ಸಾಧನೆಗೆ ಮುಂದಾಗಬೇಡಿ. ಸಣ್ಣ- ಪುಟ್ಟ ಹೂಡಿಕೆಗಳು ಒಳ್ಳೆ ಲಾಭವನ್ನು ತಂದುಕೊಡಲಿವೆ. ಉದ್ಯೋಗದಲ್ಲಿ ಇದ್ದೀರಿ ಅಂತಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಿಡುವು ದೊರೆಯಲಿದೆ. ವೈಯಕ್ತಿಕ ಕೆಲಸಗಳು ಕೆಲವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಕಾರಾತ್ಮಕ ಚಿಂತನೆ ಹೆಚ್ಚಾಗಲಿದೆ. ನಿಮ್ಮ ಸಹಾಯಕ್ಕೆ ನಾವು ಇದ್ದೀವಿ ಎಂದಿದ್ದಂಥ ವ್ಯಕ್ತಿಗಳು ಒಂದಲ್ಲಾ ಒಂದು ನೆಪವನ್ನು ನೀಡುತ್ತಾ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಭಾವನೆ ಮೂಡಲಿದೆ. ಒಂದು ಕೆಲಸಕ್ಕೆ ನಾಲ್ಕಾರು ಬಾರಿ ಅಲೆದಾಡುವಂತೆ ಆಗಲಿದೆ. ನಿಮ್ಮ ಕಷ್ಟವು ಯಾರಿಗೂ ಅರ್ಥವಾಗುತ್ತಿಲ್ಲ ಎಂದುಕೊಂಡು, ಸಿಟ್ಟು ಮಾಡಿಕೊಳ್ಳಬೇಡಿ. ಇದೇ ಮೊದಲ ಬಾರಿಗೆ ಎಂಬಂತೆ ಆರಂಭಿಸಿದ ವ್ಯವಹಾರ- ವ್ಯಾಪಾರಕ್ಕೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಹಣ ಅಗತ್ಯ ಬೀಳಲಿದೆ ಎಂಬುದು ಗಮನಕ್ಕೆ ಬರಲಿದೆ. ಸಮಯಕ್ಕೆ ಸರಿಯಾಗಿ ಊಟ-ತಿಂಡಿ- ನಿದ್ರೆ ಮಾಡುವುದಕ್ಕೆ ಆದ್ಯತೆ ಇರಲಿ. ಉಳಿತಾಯದ ಹಣ ಖರ್ಚಾಗಲಿದೆ.

  • ಕೃಷಿಕರು: ಜಮೀನಿನ ಸಲುವಾಗಿ, ನೀವು ಆದಾಯಕ್ಕಾಗಿ ಮಾಡುತ್ತಿರುವ ಇತರ ಕೃಷಿ ಅವಲಂಬಿತ ಕೆಲಸಗಳಿಗೆ ಇನ್ನು ಹೆಚ್ಚಿನ ಹಣವನ್ನು ಖರ್ಚು ಮಾಡಬಾರದು ಎಂಬ ತೀರ್ಮಾನಕ್ಕೆ ಬರುತ್ತೀರಿ. ಸ್ವಂತಕ್ಕೆ ಇರುವ ಮನೆಯನ್ನು ಇನ್ನಷ್ಟು ದೊಡ್ಡದು ಮಾಡಿಕೊಳ್ಳಬೇಕು, ಹೆಚ್ಚು ವ್ಯವಸ್ಥಿತವಾಗಿ ಮಾಡಬೇಕು ಎಂದುಕೊಳ್ಳುತ್ತಿರುವವರು ಸಂಬಂಧಪಟ್ಟ ವೃತ್ತಿಯವರನ್ನು ಕರೆಸಿ ಮಾತುಕತೆ ಆಡಲಿದ್ದೀರಿ. ಚೀಟಿ ಹಾಕುತ್ತಿರುವವರು ಅದರಿಂದ ಹಣ ಹಿಂಪಡೆಯಲು ನಿರ್ಧರಿಸುತ್ತೀರಿ.
  • ವೃತ್ತಿನಿರತರು: ನಿಮ್ಮದೇ ಧೋರಣೆಯಿಂದ ದೊಡ್ಡ ಪ್ರಮಾಣದ ಆದಾಯ- ಲಾಭವನ್ನು ಕಳೆದುಕೊಂಡಿರಿ ಎಂಬ ಸಂಗತಿ ಗಮನಕ್ಕೆ ಬರಲಿದೆ. ಸಮಯಕ್ಕೆ ಕಾಯುತ್ತಾ ಕೆಲವು ವಿಷಯಗಳನ್ನು ಪ್ರಸ್ತಾವ ಮಾಡಬೇಕು ಎಂದುಕೊಳ್ಳುತ್ತಾ ಇದ್ದಲ್ಲಿ ಅಂಥವನ್ನು ಸಂಬಂಧಪಟ್ಟವರಿಗೆ ತಿಳಿಸಲಿದ್ದೀರಿ. ಹೊಸದಾಗಿ ಕ್ಲೈಂಟ್ ಗಳನ್ನು ಒಪ್ಪಿಸುವುದಕ್ಕೆ ಬಂದಂಥ ಕೆಲಸಗಳನ್ನು ಅರೆಬರೆ ಮನಸ್ಸಿನಿಂದ ಮಾಡಲು ಮುಂದಾಗಬೇಡಿ. ಸಾಧ್ಯವಿಲ್ಲ ಎಂಬಂಥದ್ದನ್ನು ನೇರಾನೇರ ಹೇಳಿ ಮುಗಿಸುವುದು ಉತ್ತಮ.
  • ವಿದ್ಯಾರ್ಥಿಗಳು: ಯಾಕೆ ಹೀಗಾಯಿತು ಎಂದು ಕೆಲವು ವಿಷಯಗಳು ನಿಮ್ಮನ್ನು ಒಗಟಾಗಿ ಕಾಡಲಿದೆ. ಕಾರ್ಯ ಪೂರ್ಣ ಆಗುವವರೆಗೆ ಇನ್ನು ಮುಂದೆ ಸೆಲಬ್ರೇಟ್ ಮಾಡಬಾರದು ಎಂದು ಹಲವು ಬಾರಿ ಅನಿಸುವುದಕ್ಕೆ ಶುರು ಆಗಲಿದೆ. ನಿಮ್ಮ ದೌರ್ಬಲ್ಯವನ್ನು ಕಟುವಾದ ಮಾತುಗಳ ಮೂಲಕ ಹೇಳಿದವರ ಮೇಲೆ ಪ್ರತೀಕಾರ ಹೇಳಬೇಕು ಅಂದುಕೊಳ್ಳಬೇಡಿ. ಬದಲಿಗೆ ಅದರಲ್ಲಿನ ಸತ್ಯಾಂಶಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ಒಳಿತಾಗುತ್ತದೆ.
  • ಮಹಿಳೆಯರು: ಉದ್ಯಮ- ವ್ಯಾಪಾರಕ್ಕಾಗಿ ನಿಮ್ಮ ಒಡವೆ ಇಟ್ಟಾದರೂ ಹಣ ಹೊಂದಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಕೆಲವರು ನಿಮ್ಮಿಂದ ವಿಷಯಗಳನ್ನು ಮುಚ್ಚಿಡುತ್ತಿದ್ದಾರೆ ಎಂಬ ಭಾವನೆ ಗಟ್ಟಿ ಆಗಲಿದೆ. ಹೊಸ ಕಲಿಕೆಗಾಗಿ ಕೋರ್ಸ್ ಗಳಿಗೆ ಸೇರ್ಪಡೆ ಆಗುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಸವಾಲು ಹೆಚ್ಚಾಗಿರುತ್ತದೆ. ಅಂದುಕೊಳ್ಳದ ಕೆಲವು ಖರ್ಚುಗಳು ಉದ್ಭವಿಸಿ, ಸ್ವಲ್ಪವಾದರೂ ಸಾಲ ಮಾಡುವಂಥ ಸನ್ನಿವೇಶ ಸೃಷ್ಟಿಯಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಯ ನಾಜೂಕಿನಿಂದ ನಿಮ್ಮ ಕೆಲಸ- ಕಾರ್ಯಗಳನ್ನು ಮಾಡಿ ಮುಗಿಸಲಿದ್ದೀರಿ. ಬುದ್ಧಿವಂತಿಕೆ- ಸಮಯಪ್ರಜ್ಞೆಯಿಂದ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸುತ್ತಮುತ್ತ ಇರುವಂಥವರು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ಏಕ ಕಾಲಕ್ಕೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಆಗಲಿದೆ. ನೀವು ಊಹಿಸದ ರೀತಿಯಲ್ಲಿ ಹಣಕಾಸಿನ ಹರಿವು ಇರಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ರೀತಿಯಲ್ಲಿ ಬೆಳವಣಿಗೆಗಳು ಆಗಲಿವೆ. ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಬ್ಯಾಂಕ್ ಗಳು- ಬ್ಯಾಂಕೇತರ ಸಂಸ್ಥೆಗಳಲ್ಲಿ ಕೆಲವರ ಸಹಾಯದಿಂದ ದೊರೆಯುವ ಸಾಧ್ಯತೆ ಇದೆ. ಗಡುವಿನೊಳಗೆ ಹಣಕಾಸು ಹೊಂದಾಣಿಕೆ ಮಾಡಬೇಕು ಎಂದಿದ್ದಲ್ಲಿ ಆ ಕಡೆಗೆ ಲಕ್ಷ್ಯವನ್ನು ನೀಡಿ.

  • ಕೃಷಿಕರು: ಹಾಕಿಕೊಂಡ ಲೆಕ್ಕಾಚಾರದಂತೆಯೇ ಕೆಲಸ- ಕಾರ್ಯಗಳನ್ನು ಮಾಡಿ ಮುಗಿಸಲಿದ್ದೀರಿ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಸೇರಿದಂತೆ ಸರ್ಕಾರಿ ಯೋಜನೆಗಳಿಗಾಗಿ ನೀವು ಹಾಕಿಕೊಂಡಿದ್ದ ಅರ್ಜಿಯು ಇಷ್ಟು ಸಮಯ ಒಂದಲ್ಲ ಒಂದು ಕಾರಣಕ್ಕೆ ತಡವಾಗುತ್ತಿತ್ತು ಎಂದಾದಲ್ಲಿ ಈ ವಾರ ಅದು ಮುಗಿಯಲಿದೆ. ಇನ್ನು ನಿಮ್ಮ ಬಳಿ ಕೆಲವರು ಜಮೀನು ಮಾರಾಟ ಮಾಡುತ್ತೀರಾ ಎಂದು ಕೇಳಿಕೊಂಡು ಬರಬಹುದು. ಹಾಗೂ ಉತ್ತಮ ಬೆಲೆಯನ್ನು ಕೊಡಿಸುವುದಾಗಿಯೂ ಹೇಳಬಹುದು.
  • ವೃತ್ತಿನಿರತರು: ಈಗ ನೀವು ಒಪ್ಪಿಕೊಂಡ ಕಾರ್ಯಗಳನ್ನು ಮುಗಿಸುವ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಕೆಲವು ಪ್ರತಿಷ್ಠಿತ ಕಂಪನಿಗಳಿಂದ ಉದ್ಯೋಗಕ್ಕಾಗಿ ಆಫರ್ ಬರುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಈಗಿರುವ ಕಚೇರಿಯಲ್ಲಿ ಕೆಲವು ಬದಲಾವಣೆಗಳು ಮಾಡಿಸಬೇಕು ಎಂದೆನಿಸಬಹುದು. ಒಂದು ವೇಳೆ ಇತರರ ಬಳಿ ವೃತ್ತಿ ನಿರ್ವಹಣೆ ಮಾಡುತ್ತಿರುವವರು ಸ್ವಂತವಾಗಿ ಕಚೇರಿ ಶುರು ಮಾಡುವ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.
  • ವಿದ್ಯಾರ್ಥಿಗಳು: ಈಗ ತೆಗೆದುಕೊಂಡ ಕೋರ್ಸ್ ಗಳಿಂದ ಬೇರೆಯದಕ್ಕೆ ವರ್ಗಾವಣೆ ಮಾಡಿಕೊಳ್ಳಲು ನಿರ್ಧಾರವನ್ನು ಮಾಡಲಿದ್ದೀರಿ. ಕುಟುಂಬದವರ ಬೆಂಬಲ ನಿಮ್ಮ ಪಾಲಿಗೆ ಇದೆ. ಪರೀಕ್ಷೆ ಒತ್ತಡ ಸ್ವಲ್ಪ ಹೆಚ್ಚಾಗಲಿದೆ. ಮನೆಗೆ ಕೆಲವು ಸಂಬಂಧಿಗಳು, ನೆಂಟರು ಬರುವುದರಿಂದ ನಿಮ್ಮ ಲಕ್ಷ್ಯ ಆಚೀಚೆ ಆಗಬಹುದು. ಅದು ಮನೆಯ ಕೆಲಸವೇ ಇರಬಹುದು ಅಥವಾ ಉದ್ಯೋಗ, ವೃತ್ತಿ- ವ್ಯವಹಾರಗಳೇ ಇರಬಹುದು.
  • ಮಹಿಳೆಯರು: ನಿಮ್ಮ ನಿರ್ಧಾರಗಳಿಗೆ ಸ್ನೇಹಿತರು- ಸಂಬಂಧಿಗಳಿಂದ ಬೆಂಬಲ ದೊರೆಯಲಿದೆ. ಬಿಪಿ- ಶುಗರ್ ಇಂಥವುಗಳ ಪರೀಕ್ಷೆ ಮಾಡುವಂಥ ಮಶೀನ್ ಖರೀದಿ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ನೀಡಲಿದ್ದೀರಿ. ಎಲ್ಲ ಕೆಲಸ- ಕಾರ್ಯಗಳಲ್ಲಿ ಹೆಚ್ಚು ಹುಮ್ಮಸ್ಸಿನಲ್ಲಿ ತೊಡಗಲಿದ್ದೀರಿ. ಚಿನ್ನದ ಚೀಟಿ ಅಥವಾ ಬೇರೆ ಯಾವುದೇ ಚೀಟಿಯನ್ನು ಹಾಕಿದಲ್ಲಿ ಅದನ್ನು ತೆಗೆದುಕೊಳ್ಳುವುದಕ್ಕೆ ನಿರ್ಧಾರವನ್ನು ಮಾಡಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಈ ಹಿಂದೆ ಕಷ್ಟ ಇತ್ತು ಎಂದು ಸಹಾಯ ಕೇಳಿಕೊಂಡು ಬಂದವರಿಗೆ ನೀವು ಸಹಾಯ ಮಾಡಿರುತ್ತೀರಿ. ಆದರೆ ಅವರು ಈಗ ನಿಮಗೆ ನೆರವು ಕೊಡುವ ಸ್ಥಿತಿಯಲ್ಲಿ ಇದ್ದರೂ ತಮ್ಮಿಂದ ಏನೂ ಮಾಡಲಿಕ್ಕೆ ಆಗಲ್ಲ ಎಂದುಬಿಡುತ್ತಾರೆ. ಈ ವಾರ ಭಾವನಾತ್ಮಕವಾಗಿ ನಿಮಗೆ ಒಂದಿಷ್ಟು ಬೇಸರ ಆಗುವಂಥ ಬೆಳವಣಿಗೆಗಳು ಆಗಲಿವೆ. ನಿಮ್ಮಿಂದಲೇ ಏನೋ ತಪ್ಪಾಗಿದೆಯಾ ಅಥವಾ ಅದು ನಿಮ್ಮ ಎದುರಿಗೆ ಇರುವಂಥವರ ಸಮಸ್ಯೆಯೋ ತಿಳಿಯದೆ ಕಸಿವಿಸಿಗೆ ಗುರಿ ಆಗುತ್ತೀರಿ. ಕುಟುಂಬದಲ್ಲೂ ಸನ್ನಿವೇಶ ಅಷ್ಟೇನೂ ಚೆನ್ನಾಗಿರುವುದಿಲ್ಲ. ಸಂಬಂಧಗಳನ್ನು ತುಂಬಾ ಚೆನ್ನಾಗಿ ನಿಭಾಯಿಸಬೇಕು ಎಂಬ ಪ್ರಯತ್ನ ಫಲವನ್ನು ನೀಡುವುದಿಲ್ಲ.

  • ಕೃಷಿಕರು: ಕೃಷಿ ಉತ್ಪನ್ನಗಳ ಮಾರಾಟದ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಬಹಳ ನಂಬಿಕೆ ಇಟ್ಟು ಮಾಡಿದ್ದ ಕೆಲಸಗಳು ಅಂದುಕೊಂಡಂತೆ ಆಗದೆ ಭಾರೀ ಬೇಸರ ಆಗಲಿದೆ. ಇದರಿಂದ ಸಮಯ, ಹಣ, ಶ್ರಮ ಎಲ್ಲವೂ ವ್ಯರ್ಥವಾಯಿತು ಎಂದು ಬೇಸರ ಮಾಡಿಕೊಳ್ಳಲಿದ್ದೀರಿ. ಇನ್ನು ನೀವು ಕಾರ್ಯ ನಿರ್ವಹಿಸುವಂಥ ವಲಯದಲ್ಲಿ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಅಪಪ್ರಚಾರ ಮಾಡುವ ಸಾಧ‌್ಯತೆ ಇದೆ. ಇದರಿಂದ ಎದೆಗುಂದಬೇಡಿ. ಈ ಸಮಸ್ಯೆ ತಾತ್ಕಾಲಿಕ ಮಾತ್ರ.
  • ವೃತ್ತಿನಿರತರು: ಕೆಲವು ವಿಚಾರಗಳಲ್ಲಿ ನಡೆಯುವಂಥ ಬೆಳವಣಿಗೆಗಳು ಸ್ವಲ್ಪ ಕುಗ್ಗುವಂತೆ ಮಾಡಲಿವೆ. ಈಗಾಗಲೇ ಮುಗಿದು ಹೋಗಿದ್ದ ಒಪ್ಪಂದಗಳು ಮತ್ತೆ ಮುಂದುವರಿಯುತ್ತದೆ ಎಂದು ನಿರೀಕ್ಷೆ ಮಾಡುತ್ತಿದ್ದಲ್ಲಿ ನಿರಾಸೆ ಆಗಬಹುದು. ಆ ಒಪ್ಪಂದ ಮುಂದುವರಿಯದೇ ಹೋಗಬಹುದು. ಆದರೆ ನೀವು ಅದನ್ನು ನೆಚ್ಚಿಕೊಂಡು, ಬೇರೆ ಕಮಿಟ್ ಮೆಂಟ್ ಮಾಡಿಕೊಂಡಿದ್ದಲ್ಲಿ ಸಂಕಷ್ಟ ಎದುರಿಸುವಂತಾಗುತ್ತದೆ. ಇದರಿಂದ ಆರ್ಥಿಕವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆ.
  • ವಿದ್ಯಾರ್ಥಿಗಳು: ನೀವು ತೆರಳಬೇಕಾದ ಸ್ಥಳಕ್ಕೆ ಹತ್ತು ನಿಮಿಷ ಮುಂಚಿತವಾಗಿಯೇ ಇರುವಂತೆ ಹೊರಡುವುದು ಒಳ್ಳೆಯದು. ಕೊನೆ ಕ್ಷಣದ ತನಕ ಕಾಯುತ್ತಾ ಕೂರಬೇಡಿ. ಇನ್ನು ನಿಮ್ಮಲ್ಲಿ ಕೆಲವರು ವಾಹನಗಳಿಂದ ಬಿದ್ದು ಪೆಟ್ಟು ಮಾಡಿಕೊಳ್ಳುವಂಥ ಸಾಧ್ಯತೆಗಳಿವೆ. ಆದ್ದರಿಂದ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಅದರಲ್ಲೂ ವೇಗವಾಗಿ ಚಾಲನೆ ಮಾಡಲೇಬಾರದು. ಇತರರ ವಾಹನ ಓಡಿಸುವುದು ಬೇಡ.
  • ಮಹಿಳೆಯರು: ನಿಮ್ಮದೇ ಸರಿ ಎಂದು ಮೊಂಡು ವಾದ ಹೂಡುತ್ತಾ ಕೂರಬೇಡಿ. ಅದನ್ನು ಒಪ್ಪಿಕೊಂಡು, ಹೇಗೆ ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆ ಆಲೋಚನೆಯನ್ನು ಮಾಡಿ. ನಿಮ್ಮಲ್ಲಿ ಕೆಲವರಿಗೆ ರಕ್ತದ ಕೊರತೆ ಕಾಡಬಹುದು. ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವಂತೆ ವೈದ್ಯರು ಸೂಚಿಸಬಹುದು. ಇದರಿಂದ ಖರ್ಚು ಜಾಸ್ತಿ ಆಗುವುದು ಒಂದು ಕಡೆಯಾದರೆ, ಆತಂಕ ಇನ್ನೊಂದು ಕಡೆ ಕಾಡಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನೀವು ಲೆಕ್ಕಾಚಾರ ಹಾಕಿಕೊಂಡು ಮಾಡಿದ್ದ ಕೆಲಸಗಳು ಫಲ ನೀಡುವುದಕ್ಕೆ ಶುರುವಾಗುತ್ತದೆ. ರಾಜಕಾರಣದಲ್ಲಿ ಇರುವಂಥವರು ಭಾರೀ ಚೌಕಾಶಿ ಮಾಡಿ, ಬೇಕಾದ್ದನ್ನು ದಕ್ಕಿಸಿಕೊಳ್ಳುವುದರಲ್ಲಿ ಯಶಸ್ಸನ್ನು ಕಾಣುತ್ತೀರಿ. ಈಗಾಗಲೇ ಸೈಟು ಇದೆ ಎನ್ನುವಂಥವರು ಬಹಳ ದೊಡ್ಡ ಮನೆ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸುತ್ತೀರಿ. ಅಥವಾ ಮನೆಯ ನವೀಕರಣವನ್ನಾದರೂ ಭಾರೀ ಬದಲಾವಣೆಯೊಂದಿಗೆ ಕೈಗೊಳ್ಳುವ ಸಾಧ್ಯತೆಗಳಿವೆ. ಮ್ಯೂಚುವಲ್ ಫಂಡ್ ಅಥವಾ ಷೇರು ಮಾರಾಟವನ್ನು ಮಾಡಿ, ಅದನ್ನು ರಿಯಲ್ ಎಸ್ಟೇಟ್ ಅಥವಾ ಚಿನ್ನ ಮೊದಲಾದವುಗಳಲ್ಲಿ ಹೂಡಿಕೆ ಮಾಡುವುದಕ್ಕೆ ನಿರ್ಧಾರವನ್ನು ಮಾಡುತ್ತೀರಿ.

  • ಕೃಷಿಕರು: ನಿಮ್ಮದೇ ವೃತ್ತಿಯಲ್ಲಿ ಇರುವಂಥ ಕೆಲವರು ಸಹಾಯ ಕೇಳಿಕೊಂಡು ಬರಲಿದ್ದಾರೆ. ಸರ್ವೇ, ಸ್ಕೆಚ್, ಪೋಡಿ, ಖಾತಾ ಬದಲಾವಣೆ ಇಂಥವುಗಳಿಗೆ ಅರ್ಜಿ ಹಾಕಿಕೊಂಡಂಥವರಿಗೆ ಕೆಲಸ ಸಲೀಸಾಗಿ ಮುಗಿಯುವುದಕ್ಕೆ ಬೇಕಾದ ಸಹಾಯ ದೊರೆಯಲಿದೆ. ಮನೆಯಲ್ಲಿ ದೇವತಾ ಕಾರ್ಯಗಳನ್ನು ಆಯೋಜನೆ ಮಾಡುವುದಕ್ಕೆ ತೀರ್ಮಾನವನ್ನು ಮಾಡಲಿದ್ದೀರಿ. ನಿಮ್ಮ ಹಣಕಾಸಿನ ಅಗತ್ಯಗಳಿಗೆ ಸೋದರ- ಸೋದರಿಯರಿಂದ ನೆರವು ದೊರೆಯಲಿದೆ.
  • ವೃತ್ತಿನಿರತರು: ನೀವು ಈಗಾಗಲೇ ಮುಗಿಸಿದ ಕೆಲವು ಕೆಲಸಗಳನ್ನು ಮೊದಲಿಂದ ಶುರು ಮಾಡಬೇಕಾಗುತ್ತದೆ. ಆದರೆ ಅದಕ್ಕೆ ಬೇಸರ ಮಾಡಿಕೊಳ್ಳಬೇಡಿ. ಈಗಾಗಲೇ ಮಾಡಿದ ಖರ್ಚಿನ ಜತೆಗೆ ಹೊಸದಾಗಿ ಖರ್ಚುಗಳು ಸೇರ್ಪಡೆ ಆಗುತ್ತವೆ. ಅಭಿಪ್ರಾಯ ಭೇದದ ಕಾರಣದಿಂದಾಗಿ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದದಿಂದ ಹೊರಗೆ ಬರಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಇದಕ್ಕೆ ಪರ್ಯಾಯವಾಗಿ ಆದಾಯದ ದಾರಿ ಮಾಡಿಕೊಳ್ಳುವುದಕ್ಕೆ ಒತ್ತಡ ಸೃಷ್ಟಿ ಆಗಲಿದೆ.
  • ವಿದ್ಯಾರ್ಥಿಗಳು: ತಂದೆ- ತಾಯಿಗೆ ಬೇಸರ ಆಗದಿರುವಂತೆ ನೋಡಿಕೊಳ್ಳಿ. ಮನೆಯಲ್ಲಿನ ಬಿಡುವಿಲ್ಲದ ಕೆಲಸವು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುವಂತೆ ಆಗುತ್ತದೆ. ನೀವು ಬಹಳ ನಿರೀಕ್ಷೆ ಇಟ್ಟುಕೊಂಡು ತೆರಳಿದ್ದ ಟ್ಯೂಷನ್ ನಿಮ್ಮ ನಿರೀಕ್ಷೆಯ ಮಟ್ಟದಲ್ಲಿ ಇಲ್ಲದೆ ಬೇಸರಕ್ಕೆ ಕಾರಣವಾಗಲಿದೆ. ಇದೇ ಸಂದರ್ಭದಲ್ಲಿ ನೀವು ಬಳಸುತ್ತಿರುವ ವಾಹನದ ಸಮಸ್ಯೆ ಕೂಡ ಆಗಬಹುದು. ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗುತ್ತದೆ.
  • ಮಹಿಳೆಯರು: ಇತರರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಹೆಚ್ಚು ಸಮಯವನ್ನು ಮೀಸಲಿಡಲಿದ್ದೀರಿ. ಸಂಘ- ಸಂಸ್ಥೆಗಳಲ್ಲಿ ಸ್ಥಾನಮಾನ ಪಡೆದುಕೊಳ್ಳಲಿದ್ದೀರಿ. ತವರು ಮನೆಯಿಂದ ಬರಬೇಕಾದ ಪಿತ್ರಾರ್ಜಿತ ಆಸ್ತಿಗಳು ಇದ್ದಲ್ಲಿ ಆ ಬಗ್ಗೆ ಬಹಳ ಮುಖ್ಯವಾದ ಅಪ್ ಡೇಟ್ ದೊರೆಯಲಿದೆ. ಕಾನೂನು ವ್ಯಾಜ್ಯಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಬೇಕಾದಂಥ ವೇದಿಕೆ ದೊರೆಯಲಿದೆ. ನಿಮ್ಮ ಬಗ್ಗೆ ಕೆಲವರು ಗಾಸಿಪ್ ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬರಲಿದೆ. ನಿಮಗೆ ಬಹಳ ಆಪ್ತರಾದವರ ಅನಾರೋಗ್ಯ ಆತಂಕಕ್ಕೆ ಕಾರಣ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಒಂದು ಬಗೆಯ ಉಸಿರುಗಟ್ಟುವ ವಾತಾವರಣದಲ್ಲಿ ಇರುವಂತೆ ಭಾಸವಾಗಲಿದೆ. ಇನ್ನು ಉದ್ಯೋಗದಲ್ಲಿ ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಒಂದು ಹಂತದಲ್ಲಿ ನಿಮಗೆ ಈಗಿರುವ ಕೆಲಸವನ್ನು ಬದಲಾಯಿಸಿ ಬಿಡೋಣ ಅಂತಲೂ ಅನಿಸಲಿದೆ. ಆದರೆ ಗಾಬರಿಯಲ್ಲಿ ಯಾವುದೇ ತೀರ್ಮಾನವನ್ನು ಮಾಡಬೇಡಿ. ಒಂದು ಅವಕಾಶ ನಿಮ್ಮ ಕೈಗೆ ಬರುವ ತನಕ ಈಗಿರುವ ಯಾವ ಪ್ರಾಜೆಕ್ಟ್ ನಿಂದಲೂ ಹೊರಬರಬೇಡಿ. ನೆರೆಮನೆಯವರ ಜತೆಗೆ ಹಣಕಾಸಿನ ವ್ಯವಹಾರಗಳು ಇದ್ದಲ್ಲಿ ಈ ವಾರ ಬಗೆಹರಿಸಿಕೊಳ್ಳುವಂಥ ಅವಕಾಶ ದೊರೆಯಲಿದೆ. ಇದಕ್ಕಾಗಿ ಒಂದು ಗಟ್ಟಿ ಪ್ರಯತ್ನವನ್ನು ಮಾಡುವುದು ಮುಖ್ಯವಾಗುತ್ತದೆ.

  • ಕೃಷಿಕರು: ಈಗೇನಾದರೂ ಗದ್ದೆ ಮಾಡುತ್ತಿದ್ದಲ್ಲಿ ಬೆಳೆಯ ವಿಧಾನವನ್ನು ಬದಲಿಸಿಕೊಳ್ಳೋಣ ಎಂದು ಅಲೋಚನೆ ಮಾಡುತ್ತೀರಿ. ಆದಾಯಕ್ಕೆ ಸಂಬಂಧಿಸಿದಂತೆ ದೈನಂದಿನ ಖರ್ಚು, ತಿಂಗಳ ವೆಚ್ಚ, ವರ್ಷಗಳ ಉಳಿತಾಯ ಹೀಗೆ ಆಲೋಚನೆ ಮಾಡಿ, ಕೆಲವು ತೀರ್ಮಾನಗಳನ್ನು ಜಾರಿಗೆ ತರಲಿದ್ದೀರಿ. ಇದಕ್ಕಾಗಿ ಮನೆಯಲ್ಲಿನ ಚಿನ್ನವನ್ನೋ ಅಥವಾ ಭೂಮಿಯನ್ನೋ ಅಡಮಾನ ಮಾಡಿ, ಸಾಲವನ್ನು ಪಡೆಯಲಿದ್ದೀರಿ. ಸ್ವಂತಕ್ಕೆ ಅಥವಾ ಆಪತ್ ಕಾಲಕ್ಕೆ ಎಂದು ಕೂಡಿಟ್ಟುಕೊಂಡಿದ್ದ ಹಣವನ್ನು ಸಹ ಬಳಸಬೇಕಾದ ಪರಿಸ್ಥಿತಿ ಉದ್ಭವಿಸಲಿದೆ.
  • ವೃತ್ತಿನಿರತರು: ನಿಮ್ಮ ಪ್ರಭಾವ ಹಲವು ರೀತಿಯಲ್ಲಿ ನಿಮಗೆ ನೆರವಿಗೆ ಬರಲಿದೆ. ಸಮಯಪ್ರಜ್ಞೆಯಿಂದ ದೊಡ್ಡ ಮೊತ್ತದ ಹಣಕಾಸಿನ ನಷ್ಟವನ್ನು ತಪ್ಪಿಸಲಿದ್ದೀರಿ. ನೀವು ಬಹಳ ಸಮಯದಿಂದ ಆರಂಭಿಸಬೇಕು ಎಂದುಕೊಂಡಿದ್ದ ಕೆಲವು ವೃತ್ತಿಪರ ಸೇವೆಗಳನ್ನು ಶುರು ಮಾಡುವುದಕ್ಕೆ ಸಾಧ್ಯವಾಗಲಿದೆ ಅಥವಾ ಅಂತಿಮ ರೂಪು-ರೇಖೆಯನ್ನು ರೂಪಿಸಲಿದ್ದೀರಿ. ಸರ್ಕಾರದಿಂದ ಬರಬೇಕಾದ ಹಣವಿದ್ದಲ್ಲಿ ಈ ಅವಧಿಯಲ್ಲಿ ಪ್ರಯತ್ನಿಸಿದರೆ ಪಡೆದುಕೊಳ್ಳುವ ಅವಕಾಶ ಹೆಚ್ಚಿದೆ.
  • ವಿದ್ಯಾರ್ಥಿಗಳು: ನಿಮ್ಮ ಸುಪ್ತಪ್ರಜ್ಞೆ ಹೇಳಿದಂತೆ ನಡೆದುಕೊಳ್ಳುವುದು ಮುಖ್ಯವಾಗುತ್ತದೆ. ಹೊಸದಾಗಿ ನೀವು ಯಾರ ಜತೆಗೆ ಸ್ನೇಹ ಮಾಡುತ್ತಿದ್ದೀರೋ ಅವರ ಹಿನ್ನೆಲೆಯನ್ನು ಒಮ್ಮೆ ಗಮನಿಸಿಕೊಳ್ಳಿ ನೀವು ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆಯಲ್ಲಿ ಖ್ಯಾತಿ ಹೆಚ್ಚಾಗಲಿದೆ. ಸಮಾನಾಸಕ್ತರ ಬಳಗ ದೊಡ್ಡದಾಗಲಿದೆ. ಸ್ಕಾಲರ್ ಷಿಪ್ ಗಾಗಿಯೋ ಅಥವಾ ಹಾಸ್ಟೆಲ್ ಗಾಗಿ ಅರ್ಜಿ ಸಲ್ಲಿಸಿದವರಿಗೆ ಅದು ದೊರೆಯಲಿದ್ದು, ಇದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ.
  • ಮಹಿಳೆಯರು: ಮನೆಯಲ್ಲಿನ ಜವಾಬ್ದಾರಿಯಿಂದ ಹೈರಾಣಾಗುತ್ತೀರಿ. ಉನ್ನತ ವಿದ್ಯಾಭ್ಯಾಸಕ್ಕೆ ಸ್ನೇಹಿತರು- ಸಂಬಂಧಿಕರ ಸಹಾಯ ದೊರೆಯಲಿದೆ. ಇಷ್ಟು ಸಮಯ ನಿಮಗೆ ವೈದ್ಯಕೀಯ ವಿಷಯಗಳಿಗೆ ನೆರವಾಗುವುದಕ್ಕೆ ಜನ ಇದ್ದರು ಎಂದಾದಲ್ಲಿ ಈ ವಾರ ಅವರ ಸಹಾಯ ಸಿಗಲ್ಲ. ಉದ್ಯೋಗಿಗಳಾಗಿದ್ದರೆ ರಜಾ ಕೇಳಿ, ಅದಕ್ಕೆ ಒಪ್ಪಿಗೆಯೂ ಸಿಕ್ಕಿದ್ದು ಕೊನೆ ಕ್ಷಣದಲ್ಲಿ ರಜಾ ದೊರೆಯದಂತಾಗುತ್ತದೆ.

ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಇತರರು ಸಹಾಯ ಕೇಳಿದರು ಎಂಬ ಕಾರಣಕ್ಕೆ ನನ್ನ ಕೈಲಾದ ಎಲ್ಲ ಪ್ರಯತ್ನವನ್ನು ಮಾಡಿಯೇ ಮಾಡುತ್ತೇನೆ ಅಂತ ನೀವು ಏನಾದರೂ ಹೇಳಿದಲ್ಲಿ ಯಾಕಪ್ಪ ಇಂಥ ಮಾತನ್ನು ಹೇಳಿದೆ ಎಂದುಕೊಳ್ಳುವಂತೆ ಆಗುತ್ತದೆ. ನಿಮ್ಮ ಸ್ನೇಹಿತರು ಅಥವಾ ಆಪ್ತರಿಗಾಗಿ ಹಣವನ್ನು ಹೊಂದಿಸಿಕೊಡುವ ಮಾತು ನೀಡಿದ್ದಲ್ಲಿ ಅದು ತಲೆನೋವಾಗಿ ಪರಿಣಮಿಸಲಿದೆ. ನಿಮಗೆ ಬೇಡ ಅನಿಸಿದ್ದನ್ನು ಯಾವುದೇ ಕಾರಣಕ್ಕೂ ಆ ಕೆಲಸವನ್ನು ಒಪ್ಪಿಕೊಳ್ಳುವುದಕ್ಕೆ ಅಥವಾ ಮಾಡುವುದಕ್ಕೆ ಹೋಗಬೇಡಿ. ಮಕ್ಕಳ ಶಿಕ್ಷಣಕ್ಕಾಗಿ ನೀವು ಮೀಸಲಿಟ್ಟಿದ್ದ ಹಣಕ್ಕಿಂತ ಹೆಚ್ಚು ಖರ್ಚಾಗಲಿದೆ. ಇದಕ್ಕಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಬೇಕಾಗುತ್ತದೆ ಅಥವಾ ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾಗುತ್ತದೆ.

  • ಕೃಷಿಕರು: ಸರ್ಕಾರದ ಕೆಲವು ಯೋಜನೆಗಳಿಗೆ ಅರ್ಜಿ ಹಾಕಿಕೊಂಡಿದ್ದಲ್ಲಿ ಅದರ ಮೂಲಕ ಸಬ್ಸಿಡಿ ದೊರೆಯಲಿದೆ. ಜಮೀನಿನಲ್ಲಿ ನೀರಿನ ವ್ಯವಸ್ಥೆ, ಪಂಪ್ ಸೆಟ್, ವಿದ್ಯುತ್ ಪೂರೈಕೆ ಇತ್ಯಾದಿಗಳನ್ನು ಮಾಡಿಸುವುದಕ್ಕೆ ಬಜೆಟ್ ಮಾಡಿಕೊಳ್ಳಲಿದ್ದೀರಿ. ಇದೇ ವೇಳೆ ಗೋದಾಮು ನಿರ್ಮಾಣ ಸೇರಿದಂತೆ ಇತರ ಕೆಲಸಗಳನ್ನು ಮಾಡಿಸಲು ಅಡ್ವಾನ್ಸ್ ಕೂಡ ನೀಡುವ ಸಾಧ್ಯತೆಗಳಿವೆ. ನಿಮಗೆ ಬಹಳ ಹತ್ತಿರವಾದವರು ಅಥವಾ ಸ್ನೇಹಿತರು ತಮ್ಮ ಹಣಕಾಸಿನ ಅಗತ್ಯಕ್ಕಾಗಿ ನೆರವು ಕೇಳಿಕೊಂಡು ಬರಲಿದ್ದಾರೆ.
  • ವೃತ್ತಿನಿರತರು: ಈಗ ಇರುವ ಕಚೇರಿಯನ್ನು ಬದಲಾಯಿಸುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇಲ್ಲಿಯ ತನಕ ನೀವು ನೀಡಿದ್ದಂಥ ವೃತ್ತಿನಿರತ ಸೇವೆಗೆ ಹಣಕಾಸಿನ ಬಾಕಿ ಬರಬೇಕಿದ್ದಲ್ಲಿ ಈ ವಾರ ಪ್ರಯತ್ನ ಪಟ್ಟಲ್ಲಿ ಅದು ಬರಲಿದೆ. ನೀವು ಕೈಗೊಳ್ಳಬೇಕು ಎಂದುಕೊಂಡಿದ್ದ ಕೋರ್ಸ್, ಖರೀದಿ ಮಾಡಬೇಕು ಎಂದುಕೊಂಡಿದ್ದ ವಾಹನ ಇದ್ದಲ್ಲಿ ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೀರಿ. ಇನ್ನು ಕೆಲವರನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವುದಕ್ಕೆ ನಿರ್ಧಾರವನ್ನು ಮಾಡಲಿದ್ದೀರಿ.
  • ವಿದ್ಯಾರ್ಥಿಗಳು: ಉತ್ಸಾಹದಿಂದ ಹಲವು ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿದೆ. ನೀವು ಅಂದುಕೊಂಡಿದ್ದಂಥ ಶಿಕ್ಷಣ ಸಂಸ್ಥೆಗೆ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅದು ಸಿಗಲಿದೆ. ಈ ವಾರದಲ್ಲಿ ನೀವು ಸೇವಿಸುವ ಆಹಾರ- ನೀರಿನ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು. ನಿಮ್ಮಲ್ಲಿ ಯಾರು ಹಾಸ್ಟೆಲ್ ಅಥವಾ ಪಿ..ಜಿ.ಯಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದೀರೋ ಅಂಥವರಿಗೆ ಖರ್ಚಿನ ಪ್ರಮಾಣವು ವಿಪರೀತ ಹೆಚ್ಚಾಗಲಿದೆ.
  • ಮಹಿಳೆಯರು: ರಕ್ತ ಹಾಗೂ ನರಕ್ಕೆ ಸಂಬಂಧಿಸಿದ ತೊಂದರೆಗಳು ಇದ್ದಲ್ಲಿ ಮುಂಜಾಗ್ರತೆಯನ್ನು ವಹಿಸಿ. ಮನೆಯಲ್ಲಿ ಇರುವ ಹಿರಿಯರ ಆರೋಗ್ಯದ ಬಗ್ಗೆಯೂ ಹೆಚ್ಚಿನ ಲಕ್ಷ್ಯ ವಹಿಸಬೇಕಾಗುತ್ತದೆ. ಇನ್ನು ಯುವತಿಯರಿಗೆ ತಮ್ಮ ಮನಸ್ಸಿನಲ್ಲಿರುವ ಪ್ರೀತಿಯನ್ನು ಮನೆಯಲ್ಲಿ ಹೇಳಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಬ್ಯೂಟಿಪಾರ್ಲರ್, ಬ್ಯಾಂಗಲ್ ಸ್ಟೋರ್ಸ್ ನಡೆಸುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಹೊಟ್ಟೆಗೆ ಸಂಬಂಧಿಸಿದಂಥ ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾ ಇದ್ದು, ಅದಕ್ಕಾಗಿ ನಿಮ್ಮಲ್ಲಿ ಆಹಾರ ಪಥ್ಯ ಅನುಸರಿಸುವಂಥವರು ಆ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಒಂದು ವೇಳೆ ಈಗ ಯಾರ ಬಳಿ ಔಷಧೋಪಚಾರ ಪಡೆದುಕೊಳ್ಳುತ್ತೀರಿ, ಅಂಥ ವೈದ್ಯರನ್ನು ಬದಲಾವಣೆ ಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಯೋಚಿಸುವುದು ಉತ್ತಮ. ಇನ್ನು ಮನೆ ನಿರ್ಮಾಣದಲ್ಲಿ ತೊಡಗಿರುವಂಥವರು, ಸೈಟು ಖರೀದಿಗೆ ಹಣ ಹೊಂದಿಸುತ್ತಿರುವಂಥವರಿಗೆ ಹಣಕಾಸಿನ ಹರಿವಿನಲ್ಲಿ ಆಗಾಗ ಅಡೆತಡೆಗಳು ಉಂಟಾಗಿ ಚಿಂತೆಗೆ ಕಾರಣ ಆಗಲಿದೆ. ಹೆಚ್ಚಿನ ಬಡ್ಡಿಗೆ ಹಣ ತಂದರೂ ಪರವಾಗಿಲ್ಲ ಎಂದುಕೊಂಡು ನಿಮ್ಮ ಸಾಮರ್ಥ್ಯವನ್ನು ಮೀರಿದಂತೆ ಸಾಲ ಮಾಡಿದರೆ ಆ ನಂತರ ಪರಿತಪಿಸುವಂತೆ ಆಗುತ್ತದೆ.

  • ಕೃಷಿಕರು: ಅಂದುಕೊಂಡ ಸಮಯದಲ್ಲಿ ಮುಗಿಯಬೇಕಾದ ಕೆಲಸಗಳು ಬಹಳ ಮುಂದೆ ಹೋಗುತ್ತದೆ. ಕೈಯಲ್ಲಿ ಇಟ್ಟುಕೊಂಡ ಹಣ ಸಾಕಾಗುವುದಿಲ್ಲ. ನಿಮ್ಮಲ್ಲಿ ಕೆಲವರು ಸಹಕಾರ ಸಂಘಗಳು ಅಥವಾ ಇತರ ಕಡೆಗಳಿಂದ ಸಾಲ ಮಾಡಲೇಬೇಕಾದ ಅನಿವಾರ್ಯ ಎದುರಾಗಲಿದೆ. ಈ ಹಿಂದೆ ನೀವು ನೀಡಿದ್ದ ಮಾತಿನಂತೆ ಸೋದರ ಸಂಬಂಧಿಗಳು, ಅದರಲ್ಲೂ ಅಕ್ಕ-ತಂಗಿಯರಿಗೆ ದೊಡ್ಡ ಮೊತ್ತದ ಹಣವೊಂದನ್ನು ನೀಡಬೇಕಾಗುತ್ತದೆ. ಅವರ ಮನೆಯಲ್ಲಿನ ಮದುವೆ, ಶಿಕ್ಷಣ ಮೊದಲಾದವುಗಳಿಗೆ ಹಣದ ನೆರವು ನೀಡುವಂತೆ ಕೇಳಿಕೊಂಡು ಬರಲಿದ್ದಾರೆ.
  • ವೃತ್ತಿನಿರತರು: ತುಂಬ ನಿರೀಕ್ಷೆ ಇರಿಸಿಕೊಂಡಿದ್ದ ಕೆಲಸವೊಂದಕ್ಕೆ ಸಂಬಂಧಿಸಿದಂತೆ ಮಾಡಿಕೊಂಡ ಸಿದ್ಧತೆಯೆಲ್ಲ ವ್ಯರ್ಥವಾಗುವಂಥ ಸನ್ನಿವೇಶ ನಿರ್ಮಾಣ ಆಗಲಿದೆ. ನೀವು ಬಹಳ ನಂಬಿದ್ದ ಉದ್ಯೋಗಿಯೋ ಅಥವಾ ನಿಮ್ಮ ಪಾಲುದಾರರೋ ತಮ್ಮದೇ ಕಚೇರಿಯನ್ನು ಆರಂಭಿಸುವುದಕ್ಕಾಗಿಯೋ ಅಥವಾ ಬೇರೆಯವರ ಜತೆಗೂಡಿ ವೃತ್ತಿಯ ಸೇವೆಗಳನ್ನು ನೀಡುವುದಕ್ಕೋ ನಿರ್ಧಾರ ಮಾಡಲಿದ್ದಾರೆ. ಇದರಿಂದಾಗಿ ನಿಮಗೆ ಆತಂಕ ಆಗಲಿದೆ.
  • ವಿದ್ಯಾರ್ಥಿಗಳು: ಒಂದು ಸಲಕ್ಕೇ ಎಲ್ಲರ ಮಾತನ್ನು ನಂಬುವುದು ಒಳ್ಳೆ ನಿರ್ಧಾರ ಎಂದೆನಿಸುವುದಿಲ್ಲ. ಕೆಲವು ವ್ಯಕ್ತಿಗಳ ಮಾತನ್ನು ಕೇಳಿ ಒಂದೇ ಕೆಲಸವನ್ನು ಎರಡೆರಡು ಸಲ ಮಾಡುವಂತಾಗುತ್ತದೆ. ಆದ್ದರಿಂದ ಇತರರ ಮಾತನ್ನು ಕೇಳುವ ಮುನ್ನ ಅದರ ಪರಿಣಾಮವನ್ನು ಆಲೋಚಿಸುವುದು ಮುಖ್ಯ. ಸ್ನೇಹಿತರ ಜತೆಗೂಡಿ ಪ್ರಾಜೆಕ್ಟ್- ಅಸೈನ್ ಮೆಂಟ್ ಮಾಡುವುದರಲ್ಲಿ ಹೆಚ್ಚು ಸಮಯವನ್ನು ಮೀಸಲು ಇಡಲಿದ್ದೀರಿ. ಕೆಲವು ಬೆಳವಣಿಗೆಗಳಿಂದ ಕಿರಿಕಿರಿ ಆಗಲಿದೆ.
  • ಮಹಿಳೆಯರು: ವಿದೇಶದಲ್ಲಿ ಉದ್ಯೋಗ ಅಥವಾ ವ್ಯಾಸಂಗಕ್ಕಾಗಿ ಪ್ರಯತ್ನ ಮಾಡುತ್ತಾ ಇದ್ದೀರಿ ಎಂದಾದಲ್ಲಿ ಕೆಲವು ದಾಖಲಾತಿಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಲಿದೆ. ಅದೇ ರೀತಿ ಉದ್ಯೋಗದ ವಿಚಾರಕ್ಕೆ ಕೂಡ ಅಗತ್ಯ ದಾಖಲಾತಿಗಳು ಎಲ್ಲವೂ ನಿಮ್ಮ ಬಳಿ ಇವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಪ್ರತಿ ಸಲವೂ ನಾನೇ ಎಲ್ಲಕ್ಕೂ ರಾಜೀ ಮಾಡಿಕೊಳ್ಳಬೇಕು ಏಕೆ ಎಂಬ ಮನೋಭಾವ ನಿಮ್ಮಲ್ಲಿ ಕಾಣಲಿದೆ. ಆ ಕಾರಣದಿಂದಾಗಿ ಈ ವಾರ ನಿಮ್ಮಲ್ಲಿ ಒಂದು ಬಗೆಯ ಮೊಂಡುತನ, ಯಾವುದನ್ನೂ ಕೇಳಿಸಿಕೊಳ್ಳದ ರೀತಿಯಲ್ಲಿ ನಿರ್ಲಕ್ಷ್ಯ ಮನೆ ಮಾಡಲಿದೆ. ಎಲ್ಲವನ್ನೂ ಮೈ ಮೇಲೆ ಎಳೆದುಕೊಳ್ಳಲಿದ್ದೀರಿ. ಯಾಕೆಂದರೆ ಯಾವುದೇ ಕೆಲಸವನ್ನು ಇತರರಿಗೆ ಒಪ್ಪಿಸುವುದಕ್ಕೆ ನಿಮಗೆ ಮನಸ್ಸಾಗುವುದಿಲ್ಲ ಅಥವಾ ಧೈರ್ಯ ಸಾಕಾಗುವುದಿಲ್ಲ. ಆದರೆ ಇದು ವಾರದ ಮೊದಲಾರ್ಧ ಮಾತ್ರ, ಆ ನಂತರದಲ್ಲಿ ಯಾರು ಏನೇ ಅಂದುಕೊಳ್ಳಲಿ ನನಗೆ ಅನಿಸಿದ್ದನ್ನೇ ಮಾಡುತ್ತೇನೆ ಎಂದು ಹೊರಡಲಿದ್ದೀರಿ. ಆರಂಭದಲ್ಲಿ ನಿಮಗೂ ನಿಮ್ಮ ನಿರ್ಧಾರದಿಂದ ಆತಂಕ, ಭಯ ಕಾಡುತ್ತದೆ. ಆದರೆ ಅದರಿಂದ ಕ್ರಮೇಣ ಒಳ್ಳೆಯದಾಗುತ್ತಾ ಇದೆ ಎಂಬುದು ಅರಿವಿಗೆ ಬರಲಿದೆ.

  • ಕೃಷಿಕರು: ಈಗಿರುವ ಭೂಮಿಯ ಅಕ್ಕಪಕ್ಕದಲ್ಲೇ ಇನ್ನಷ್ಟು ಭೂಮಿಯನ್ನು ಖರೀದಿಸಬಹುದು ಅಥವಾ ಗುತ್ತಿಗೆಗೆ ಪಡೆಯುವಂಥ ಯೋಗ ಕಂಡುಬರುತ್ತಿದೆ. ಇನ್ನು ಕೆಲವರು ತಾವಾಗಿಯೇ ದುಂಬಾಲು ಬಿದ್ದು, ಕೆಲವರಿಗೆ ಸದ್ಯಕ್ಕೆ ಎಷ್ಟು ಹಣ ಇದೆಯೋ ಅಷ್ಟನ್ನು ಕೊಡಿ, ಬಾಕಿ ಉಳಿದಿದ್ದಕ್ಕೆ ಸಮಯ ನೀಡುವುದಾಗಿ ಮಾರಾಟಕ್ಕೆ ಇಟ್ಟವರೇ ಹೇಳುವ ಸಾಧ್ಯತೆಗಳು ಹೆಚ್ಚಿವೆ. ಈಗಿನ ಸಮಯದ ಅನುಕೂಲ ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಆಲೋಚಿಸುವುದು ಒಳ್ಳೆಯದು.
  • ವೃತ್ತಿನಿರತರು: ವಿಲಾಸಿ ವಾಹನಗಳನ್ನು ಖರೀದಿಸಬಹುದು ಅಥವಾ ನಿಮ್ಮ ಕ್ಲೈಂಟ್ ಗಳೇ ನಿಮಗೆ ನೀಡಬೇಕಾದ ಹಣದ ಬದಲಿಗೆ ವಾಹನವನ್ನು ತೆಗೆದುಕೊಳ್ಳುವಂತೆ ಹೇಳಬಹುದು. ಸಾಮಾಜಿಕವಾಗಿಯೂ ನಿಮ್ಮನ್ನು ಗುರುತಿಸುವವರು ಹೆಚ್ಚಾಗಲಿದ್ದಾರೆ. ಪ್ರತಿಷ್ಠಿತ ಸಂಸ್ಥೆಗಳ ಸದಸ್ಯತ್ವ ಕೂಡ ದೊರೆಯುವ ಯೋಗ ಇದೆ. ಈ ಹಿಂದೆ ನೋಡಿಕೊಂಡು ಬಂದು, ಹಣಕಾಸು ವಿಚಾರಕ್ಕೆ ಬಿಟ್ಟುಹೋಗಿದ್ದ ಭೂಮಿಯೋ ಅಥವಾ ಕಟ್ಟಡವೋ ಮತ್ತೆ ಖರೀದಿಗಾಗಿ ನಿಮ್ಮ ಬಳಿಯೇ ಹುಡುಕಿಕೊಂಡು ಬರಲಿದೆ.
  • ವಿದ್ಯಾರ್ಥಿಗಳು: ಶೈಕ್ಷಣಿಕವಾಗಿ ಅಮೋಘ ಸಾಧನೆ ಮಾಡುವಂಥ ಯೋಗ ಕಂಡುಬರುತ್ತಿದೆ. ಇತರರು ನಿಮ್ಮ ಕಡೆಗೆ ಬೆರಗಿನಿಂದ ನೋಡುವಂಥ ದಿನಗಳು ಇದಾಗಿರುತ್ತವೆ. ಇತರರಿಗೆ ಮಾದರಿ ಆಗುವಂಥ ಕೆಲವು ಕೆಲಸಗಳನ್ನು ನೀವು ಮಾಡಿ ಮುಗಿಸಲಿದ್ದೀರಿ. ಹೊಸದಾಗಿ ದ್ವಿಚಕ್ರ ವಾಹನ ತೆಗೆದುಕೊಳ್ಳಬೇಕು ಅಂದುಕೊಳ್ಳುತ್ತಿರುವವರು ಅದಕ್ಕೆ ಅಡ್ವಾನ್ಸ್ ನೀಡಲಿದ್ದೀರಿ.
  • ಮಹಿಳೆಯರು: ಉದ್ಯೋಗ ಸ್ಥಳದಲ್ಲಿ ಬಡ್ತಿ, ವೇತನ ಹೆಚ್ಚಳ, ವಿದೇಶಕ್ಕೆ ಪ್ರಯಾಣ, ಪ್ರಮುಖ ಹುದ್ದೆಗಳಿಗೆ ನಿಮ್ಮ ಹೆಸರು ಕೇಳಿಬರಬಹುದು. ನಿಮ್ಮಲ್ಲಿ ಕೆಲವರು ಹಳೇ ಸಾಲವನ್ನು ತೀರಿಸಬಹುದು. ಇನ್ನು ಕೆಲವರು ಎಫ್.ಡಿ. ಮಾಡುವಂಥ ಸಾಧ್ಯತೆಗಳಿವೆ. ಬ್ಯಾಂಕ್ ಬ್ಯಾಲೆನ್ಸ್ ಇರುವುದರಿಂದಾಗಿ ನಿಮ್ಮ ಆತ್ಮವಿಶ್ವಾಸ ಹಾಗೂ ಅಹಂಕಾರ ಹೆಚ್ಚಾಗುವ ವಾರ ಇದಾಗಿರುತ್ತದೆ.

ಲೇಖನ- ಎನ್‌.ಕೆ.ಸ್ವಾತಿ

Published On - 10:27 am, Sun, 14 December 25