ಒಕ್ಕಲಿಗರ ಸಂಘದಲ್ಲಿ ಅವ್ಯವಹಾರದ ವಾಸನೆ: ನೇಮಕದಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ
ರಾಜ್ಯದ ಪ್ರತಿಷ್ಠಿತ ಸಮುದಾಯ ಸಂಸ್ಥೆಗಳಲ್ಲಿ ಒಂದಾದ ರಾಜ್ಯ ಒಕ್ಕಲಿಗರ ಸಂಘ ದಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಪ್ರೊಫೆಸರ್, ನರ್ಸಿಂಗ್ ನೇಮಕಾತಿಯಲ್ಲಿ ಕೋಟಿ ಕೋಟಿ ಲಂಚದ ಜೊತೆಗೆ 10 ವರ್ಷದ ಬದಲಿಗೆ ಕೇವಲ 3.5 ವರ್ಷ ಅನುಭವ ಇದ್ದವರಿಗೆ ಪ್ರಮೋಷನ್ ಭಡ್ತಿ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಅಲ್ಲದೇ ವೈದ್ಯಕೀಯ ಉಪಕರಣಗಳ ಖರೀದಿ, ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಲಾಗಿದೆ ಎನ್ನಲಾಗಿದೆ.

ಮುಖ್ಯಾಂಶಗಳು
- ಕರ್ನಾಟಕ ಒಕ್ಕಲಿಗರ ಸಂಘದಲ್ಲಿ ಅವ್ಯವಹಾರದ ವಾಸನೆ
- ಪ್ರೊಫೆಸರ್, ನರ್ಸಿಂಗ್ ನೇಮಕಾತಿಯಲ್ಲಿ ಕೋಟಿ ಕೋಟಿ ಲಂಚದ ಆರೋಪ
- ವೈದ್ಯಕೀಯ ಉಪಕರಣಗಳ ಖರೀದಿ, ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಬೆಂಗಳೂರು, (ಜುಲೈ 01): ರಾಜ್ಯ ಒಕ್ಕಲಿಗ ಸಂಘದಲ್ಲಿ (Karnataka Vokkaliga Sangha) ಸಾಲು ಸಾಲು ಅಕ್ರಮಗಳು (corruption) ನಡೆದಿವೆ ಎನ್ನುವ ಸ್ಫೋಟಕ ಸತ್ಯಗಳು ಈಗ ಒಂದೊಂದಾಗಿ ಹೊರಬರುತ್ತಿವೆ. ಸಂಘದ ಅಧೀನದಲ್ಲಿರುವ ಕಾಲೇಜುಗಳ ಪ್ರೊಫೆಸರ್ ಹಾಗೂ ನರ್ಸಿಂಗ್ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಲಂಚದ ಆಟ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಆಸ್ಪತ್ರೆಗೆ ‘ನಾಟ್ ಫಾರ್ ಸೇಲ್’ ಎಂದು ಬರೆದಿರುವ ಮೆಡಿಕಲ್ ಎಕ್ವಿಪ್ಮೆಂಟ್ಗಳನ್ನು ಖರೀದಿಸಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಸಂಘ ನಡೆಸಲು ಆಗದಿದ್ದರೆ ಕುರ್ಚಿ ಬಿಟ್ಟು ತೊಲಗಿ ಎಂದು ಅಧ್ಯಕ್ಷರು ಹಾಗೂ ಕಾರ್ಯದರ್ಶಿ ವಿರುದ್ಧ ಕೋನಪ್ಪ ರೆಡ್ಡಿ ಕಿಡಿಕಾರಿದ್ದಾರೆ.
ಹೌದು… ರಾಜ್ಯ ಒಕ್ಕಲಿಗ ಸಂಘದ ಆಡಳಿತ ಮಂಡಳಿ ವಿರುದ್ಧ ಈಗ ಅಕ್ರಮಗಳ ಸುರಿಮಳೆಯೇ ಆಗುತ್ತಿದೆ. ಸಂಘದ ಕಾಲೇಜುಗಳಲ್ಲಿ ಉದ್ಯೋಗ ಸಿಗಬೇಕೆಂದರೆ ಯೋಗ್ಯತೆಗಿಂತ ಲಂಚವೇ ಮಾನದಂಡವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಾಧ್ಯಾಪಕರ ನೇಮಕ ಹಾಗೂ ನರ್ಸಿಂಗ್ ಸಿಬ್ಬಂದಿ, ಲ್ಯಾಬ್ ಟೆಕ್ನಿಷಿಯನ್ಸ್, ಕಂಪ್ಯೂಟರ್ ಆಪರೇಟಸ್೯ ನೇಮಕಾತಿಯಲ್ಲಿ ಅರ್ಹತೆ ಇಲ್ಲದವರಿಗೂ ಮಣೆ ಹಾಕಲಾಗಿದೆ. ಇನ್ನು ಪ್ರಮೋಷನ್ ವಿಚಾರದಲ್ಲೂ ದೊಡ್ಡ ಮಟ್ಟದ ಕಾನೂನು ಉಲ್ಲಂಘನೆಯಾಗಿದ್ದು, ನಿಯಮದ ಪ್ರಕಾರ 10 ವರ್ಷಗಳ ಅನುಭವ ಇರಬೇಕಾದ ಜಾಗದಲ್ಲಿ ಕೇವಲ ಮೂರೂವರೆ ವರ್ಷ ಅನುಭವ ಇದ್ದವರಿಗೆ ಪ್ರಮೋಷನ್ ನೀಡಿದ್ದಾರೆ. ಇದರ ವಿರುದ್ಧ ಯಾರಾದರೂ ಪ್ರಾಮಾಣಿಕವಾಗಿ ವರದಿ ನೀಡಿದರೆ, ಅವರ ವೇತನವನ್ನೇ ನಿಲ್ಲಿಸುವ ಬೆದರಿಕೆ ಹಾಕಲಾಗುತ್ತಿದೆ. ಇನ್ನು ಅಧ್ಯಕ್ಷರ ಕಚೇರಿಗೆ ಯಾರೇ ಹೋಗಬೇಕಾದರೂ ಮೊಬೈಲ್ ಫೋನ್ಗಳನ್ನು ಕಡ್ಡಾಯವಾಗಿ ಹೊರಗೆ ಇಟ್ಟೇ ಹೋಗಬೇಕು ಎಂಬ ಹಿಟ್ಲರ್ ನಿಯಮ ಜಾರಿಯಲ್ಲಿದೆ.ಅಂತ ಉಚ್ಚಾಟಿತ ನಿರ್ಧೇಶಕ ಕೋನಪ್ಪರೆಡ್ಡಿ ಗಂಭೀರವಾದಂತ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: KPSC ಅಧ್ಯಕ್ಷರ ಅಧಿಕಾರ ದುರುಪಯೋಗ ಆರೋಪ : ಸಿಎಂಗೆ ಜೋಶಿ ಬರೆದ ಪತ್ರದಲ್ಲೇನಿದೆ?
ಇನ್ನು ಎಲ್ಲಕ್ಕಿಂತ ಆಘಾತಕಾರಿ ವಿಷಯ ಎಂದರೆ, ಮಾರುಕಟ್ಟೆಯಲ್ಲಿ ಮುಕ್ತ ಮಾರಾಟಕ್ಕೆ ಅವಕಾಶವಿಲ್ಲದ, ‘ನಾಟ್ ಫಾರ್ ಸೇಲ್’ ಎಂಬ ಬೋರ್ಡ್ ಇರುವ ಮೆಡಿಕಲ್ ಎಕ್ವಿಪ್ಮೆಂಟ್ಗಳನ್ನು ಸಂಘದ ಆಸ್ಪತ್ರೆಗೆ ಖರೀದಿ ಮಾಡಲಾಗಿದೆ. ಈ ನಿಷೇಧಿತ ಯಂತ್ರಗಳನ್ನು ಖರೀದಿಸಿ, ಅದಕ್ಕೆ ಖೋಟಾ ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಗುಳುಂ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಖಜಾಂಚಿ ಹಾಗೂ ಕಾರ್ಯದರ್ಶಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಈ ಕೂಡಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.ಸಂಘದ ಕಾಲೇಜುಗಳಲ್ಲಿ ನೇಮಕಾತಿ ಆಗಬೇಕು ಅಂದ್ರೂ ಲಂಚ ಕೊಡಬೇಕು. 10 ವರ್ಷದ ಬದಲು ಮೂರುವರೆ ವರ್ಷ ಅನುಭವ ಇರೋರಿಗೆ ಪ್ರಮೋಷನ್ ಕೊಟ್ಟಿದ್ದಾರೆ. ನಾಟ್ ಫಾರ್ ಸೇಲ್ ಬೋರ್ಡ್ ಇರೋ ಮೆಡಿಕಲ್ ಇಕ್ಯೂಪ್ ಮೆಂಟ್ ಗಳನ್ನ ಖರೀದಿ ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ಸಂಘ ನಡೆಸಲು ಆಗಲಿಲ್ಲ ಅಂದ್ರೆ ಕುರ್ಚಿ ಬಿಟ್ಟುಕೊಡಿ. ಇದರ ಬಗ್ಗೆ ನಿವೃತ್ತ ನ್ಯಾಯಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ಆಗಲೇಬೇಕು ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಒಕ್ಕಲಿಗ ಸಂಘದ ಸಂಸ್ಥೆಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮಗಳು ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ. ಈ ಎಲ್ಲಾ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆದು ಸತ್ಯ ಹೊರಬರಬೇಕಿದೆ.
ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು




