ನಿರ್ಮಾಣ ಹಂತದ ಕಟ್ಟಡ ಕುಸಿದು ದುರಂತ ಬೆನ್ನಲ್ಲೇ ಬೆಂಗಳೂರಲ್ಲಿ ವಾಲಿದ ಮತ್ತೊಂದು ಕಟ್ಟಡ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 24, 2024 | 3:58 PM

ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿತ ದುರಂತ ಬೆನ್ನಲ್ಲೇ ಇದೀಗ ನಿರ್ಮಾಣ ಹಂತದ 6 ಅಂತಸ್ತಿನ ಮತ್ತೊಂದು ಕಟ್ಟಡ ಬಲಭಾಗಕ್ಕೆ ವಾಲಿರುವಂತಹ ಘಟನೆ ಹೊರಮಾವು ಪ್ರದೇಶದ ನಂಜಪ್ಪ ಗಾರ್ಡನ್​ನಲ್ಲಿ ಕಂಡುಬಂದಿದೆ. ಸದ್ಯ ವಾಲಿದ ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬಾಣಸವಾಡಿ ಉಪ ವಿಭಾಗದ ಎಸಿಪಿ ಉಮಾಶಂಕರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ನಿರ್ಮಾಣ ಹಂತದ ಕಟ್ಟಡ ಕುಸಿದು ದುರಂತ ಬೆನ್ನಲ್ಲೇ ಬೆಂಗಳೂರಲ್ಲಿ ವಾಲಿದ ಮತ್ತೊಂದು ಕಟ್ಟಡ
ನಿರ್ಮಾಣ ಹಂತದ ಕಟ್ಟಡ ಕುಸಿದು ದುರಂತ ಬೆನ್ನಲ್ಲೇ ಬೆಂಗಳೂರಲ್ಲಿ ವಾಲಿದ ಮತ್ತೊಂದು ಕಟ್ಟಡ
Follow us on

ಬೆಂಗಳೂರು, ಅಕ್ಟೋಬರ್​ 24: ನಗರದ ಬಾಬುಸಾಪಾಳ್ಯದಲ್ಲಿ ಕಟ್ಟಡ (building) ಕುಸಿದು ದೊಡ್ಡ ದುರಂತವೇ ಸಂಭವಿಸಿತ್ತು. ಇದುವರೆಗೂ 8 ಜನ ಕಾರ್ಮಿಕರು ಸಾವನ್ನಪ್ಪಿದ್ದರೆ, 8 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ ಸಿಲಿಕಾನ್​ ಸಿಟಿಯಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಮತ್ತೊಂದು ಕಟ್ಟಡ ವಾಲಿದ್ದು, ಬಲಿ ಪಡೆಯಲು ಸಿದ್ಧವಾಗಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿದೆ.

ನಗರದ ಹೊರಮಾವು ಪ್ರದೇಶದ ನಂಜಪ್ಪ ಗಾರ್ಡನ್​ನಲ್ಲಿರುವ ಪುಟ್ಟಪ್ಪ ಮಾಲೀಕತ್ವದ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಬಲಭಾಗಕ್ಕೆ ವಾಲಿದೆ. 12*30 ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಸದ್ಯ ವಾಲಿರುವುದರಿಂದ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ.

ಬಿಬಿಎಂಪಿ ಸೂಚನೆ ಬೆನ್ನಲ್ಲೇ ಕಟ್ಟಡ ತೆರವಿಗೆ ಮುಂದಾದ ಮಾಲೀಕ

ಗ್ರೌಂಡ್​ ಫ್ಲೋರ್ ಸೇರಿದಂತೆ ನಾಲು ಅಂತಸ್ತಿನ ಕಟ್ಟಡಕ್ಕೆ ಮಾಲೀಕ ಪುಟ್ಟಪ್ಪ ಅನುಮತಿ ಪಡೆದಿದ್ದ. ಆದರೆ ನಿಯಮ‌ ಮೀರಿ ಆರಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನೋಟಿಸ್​ಗೆ ಉತ್ತರ ನೀಡಿರುವ ಮಾಲೀಕ ಕಟ್ಟಡ ಸ್ವಂತ ಖರ್ಚಿನಲ್ಲಿ ತೆರವು ಮಾಡೋದಾಗಿ ಪತ್ರ ಬರೆದಿದ್ದಾರೆ. ಸದ್ಯ ವಾಲಿದ ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬಾಣಸವಾಡಿ ಉಪ ವಿಭಾಗದ ಎಸಿಪಿ ಉಮಾಶಂಕರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಅವಶೇಷಗಳಡಿ ಸಿಲುಕಿರುವ ಇಬ್ಬರ ರಕ್ಷಣೆಗಾಗಿ ತೀವ್ರ ಶೋಧ

ಬಾಬುಸಾಪಾಳ್ಯದಲ್ಲಿ 6 ಅಂತಸ್ತಿನ ಕಟ್ಟಡ ಕುಸಿದಿದ್ರಿಂದ ನಿರಂತರ ಶೋಧ ನಡೆಸಲಾಗುತ್ತಿದೆ. ಕಟ್ಟಡದ ಅವಶೇಷಗಳಡಿ ಮತ್ತಷ್ಟು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಎನ್​ಡಿಆರ್​ಎಫ್​ ತಂಡದದಿಂದ ಶೋಧ ನಡೆಸಲಾಗುತ್ತಿದೆ. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದ್ದೇ ದುರಂತಕ್ಕೆ ಕಾರಣ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಕಟ್ಟಡ ಕುಸಿತ ದುರಂತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇನ್ನು ಗಾಯಾಳುಗಳಿಗೆ ಸರ್ಕಾರದಿಂದ ವೈದ್ಯಕೀಯ ವೆಚ್ಚ ಭರಿಸಲಾಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಬುಸಾಬ್​ಪಾಳ್ಯದಲ್ಲಿ ಕಟ್ಟಡ ಕುಸಿತ ಪ್ರಕರಣ: ಕರ್ತವ್ಯಲೋಪ ಹಿನ್ನೆಲೆ ಬಿಬಿಎಂಪಿ ಅಧಿಕಾರಿ ಅಮಾನತು

ಇನ್ನು ಪ್ರಕರಣದಲ್ಲಿ ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ, ಪುತ್ರ ಆರೋಪಿ ಭುವನ್ ರೆಡ್ಡಿ ಹಾಗೂ ಕಾಂಟ್ರ್ಯಾಕ್ಟರ್ ಮುನಿಯಪ್ಪನನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಬಿಎನ್​ಎಸ್ ಕಾಯ್ದೆ 105, 125(A), 125(B) , 270, 3(5) ಹಾಗೂ ಬಿಬಿಎಂಪಿ ಆ್ಯಕ್ಟ್ 326, 327, 328, ರೇರಾ ಕಾಯ್ದೆಗಳ ಉಲ್ಲಂಘನೆ ಸೆಕ್ಷನ್ 3 ರಡಿ ಎಫ್​ಐಆರ್​ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.