AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಥಾನಮಾನ ಸಿಗದಿರುವುದು ನನಗೆ ಬೇಸರ ತಂದಿದೆ: ಫೇಸ್​ಬುಕ್​ನಲ್ಲಿ ನೋವು ತೋಡಿಕೊಂಡ ಅರವಿಂದ ಬೆಲ್ಲದ

ತಮಗೆ ಮುಖ್ಯಮಂತ್ರಿ ಹುದ್ದೆ ಮತ್ತು ಸಚಿವ ಸ್ಥಾನ ತಪ್ಪಿ ಹೋದ ಬಗ್ಗೆ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿದ್ದು, ತಮ್ಮ ಮನದ ಮಾತುಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.

ಸ್ಥಾನಮಾನ ಸಿಗದಿರುವುದು ನನಗೆ ಬೇಸರ ತಂದಿದೆ: ಫೇಸ್​ಬುಕ್​ನಲ್ಲಿ ನೋವು ತೋಡಿಕೊಂಡ ಅರವಿಂದ ಬೆಲ್ಲದ
ಶಾಸಕ ಅರವಿಂದ ಬೆಲ್ಲದ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Aug 05, 2021 | 7:13 PM

Share

ಧಾರವಾಡ: ಈ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ವರಿಷ್ಠರ ಆಯ್ಕೆ ಎಂದು ಪ್ರಬಲವಾಗಿ ಕೇಳಿಬಂದಿದ್ದ ಹೆಸರಗಳ ಪೈಕಿ ಅರವಿಂದ ಬೆಲ್ಲದ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೊನೆಗಳಿಗೆಯಲ್ಲಿ ಆದ ಕೆಲವು ಬೆಳವಣಿಗೆಗಳಿಂದ ಅರವಿಂದ ಬೆಲ್ಲದ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣನೆಯಾಗಲಿಲ್ಲ. ಅವರಿಗೆ ಸಚಿವ ಸ್ಥಾನವೂ ಸಿಗಲಿಲ್ಲ. ಹೀಗಾಗಿ ಸಹಜವಾಗಿಯೇ ರಾಜಕೀಯ ರಂಗದಲ್ಲಿ ಹಲವು ವಿಶ್ಲೇಷಣೆಗಳು, ಊಹಾಪೋಹಗಳು ಹರಿದಾಡುತ್ತಿದ್ದವು. ಇದೀಗ ಅರವಿಂದ ಬೆಲ್ಲದ ಈ ಕುರಿತು ಪ್ರತಿಕ್ರಿಯಿಸಿದ್ದು, ತಮ್ಮ ಮನದ ಮಾತುಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.

‘ಧಾರವಾಡ-74 ಮತಕ್ಷೇತ್ರವನ್ನು ಕಳೆದ 2 ಅವಧಿಯಿಂದ ಪ್ರತಿನಿಧಿಸುತ್ತಿದ್ದೇನೆ. ಕ್ಷೇತ್ರದ ಮತದಾರರ ಪ್ರೀತಿ-ವಿಶ್ವಾಸ, ಬೆಂಬಲದಿಂದ ಇಂದು ನನ್ನ ಹೆಸರು ರಾಜ್ಯದ ಅತ್ಯುನ್ನತ ಹುದ್ದೆಯವರೆಗೆ ಪರಿಗಣಿಸಲ್ಪಟ್ಟು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗಮನಕ್ಕೆ ಬರುವಂತಾಗಿದೆ. ಇದು ನಿಮ್ಮೆಲ್ಲರ ಆಶೀರ್ವಾದವೇ ಸರಿ. ರಾಜ್ಯದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನಗೆ ಸ್ಥಾನಮಾನ ಸಿಗದೇ ಇರುವುದು ನಿಮ್ಮೆಲ್ಲರಂತೆ ನನಗೂ ಬೇಸರ ತಂದಿದೆ. ಆದರೂ ಪಕ್ಷದ ಚೌಕಟ್ಟಿನಲ್ಲಿ ನಾನು ಇದೆಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ಆದರೆ ನನ್ನ ಕ್ಷೇತ್ರದ ಜನರ ಸೇವೆ ಮಾಡುವಲ್ಲಿ ನನಗೆ ಇವ್ಯಾವೂ ಅಡೆತಡೆಯಾಗುವುದಿಲ್ಲ’ ಎಂದು ಹೇಳಿದ್ದಾರೆ.

‘ಶಾಸಕನಾಗಿ ಈ ಅವಧಿಯಲ್ಲಿ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ನನ್ನ ಕ್ಷೇತ್ರದಲ್ಲಿ ಸುಮಾರು 6000 ಪಕ್ಕಾ ಮನೆ ನಿರ್ಮಾಣ, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರ ಸಹಕಾರದಿಂದ ಧಾರವಾಡದಲ್ಲಿ ಐಐಟಿ, ಐಐಐಟಿ ಪ್ರಾರಂಭಿಸಿದ್ದು, ಉನ್ನತ ಶಿಕ್ಷಣ ಕೇಂದ್ರ, ಹಲವು ಕಡೆಗಳಲ್ಲಿ ಕಾಂಕ್ರಿಟ್ ರಸ್ತೆಗಳ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ಬ್ಯಾರೇಜ್ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ನಿಮ್ಮೆಲ್ಲರ ಸಹಕಾರ, ಬೆಂಬಲದಿಂದ ಕಾರ್ಯಗತಗೊಳಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ನನ್ನ ಅಥವಾ ನನ್ನ ಕುಟುಂಬದ ಮೇಲೆಯಾಗಲಿ ಇದುವರೆಗೆ ರಾಜಕೀಯ ಭ್ರಷ್ಟಾಚಾರದ ಒಂದೇ ಒಂದು ಕಪ್ಪುಚುಕ್ಕೆ ಬರದಂತೆ ನನ್ನನ್ನು ನೀವು ನಡೆಸಿಕೊಂಡಿದ್ದು ನನ್ನ ಸೌಭಾಗ್ಯವೇ ಸರಿ. ಶಾಸಕನಾಗಿ ಇನ್ನಷ್ಟು ನಿಮ್ಮ ಸೇವೆ ಮಾಡಲು ನಾನು ಸಿದ್ದನಿದ್ದೇನೆ. ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುವ ಕಾಯಕದ ಜತೆಗೆ ನಾನು ನಂಬಿಕೊಂಡು ಬಂದ ಸಿದ್ಧಾಂತ, ಸ್ವಚ್ಛ ಮತ್ತು ಭ್ರಷ್ಟಾಚಾರ ರಹಿತ ರಾಜಕೀಯ ಅನುಷ್ಠಾನಕ್ಕೆ ಬದ್ದವಿದ್ದೇನೆ. ಅಲ್ಲದೇ, ಭ್ರಷ್ಟಾಚಾರಿಗಳ ವಿರುದ್ಧ ಈ ಹಿಂದಿನಂತೆಯೇ ಧ್ವನಿ ಎತ್ತುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ನಂಬಿರುತ್ತೇನೆ. ಏನೇ ಬರಲಿ ಎಲ್ಲರೂ ಒಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ. ಧಾರವಾಡ ಕ್ಷೇತ್ರ ಶಿಕ್ಷಣ ಕಾಶಿ, ಸುಸಂಸ್ಕೃತ ಕ್ಷೇತ್ರ. ಹೀಗಾಗಿ ನನಗೆ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಈ ಕೊರೋನಾ ಸಂದರ್ಭದಲ್ಲಿ ಯಾರೂ ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಬಾರದೆಂದು ವಿನಂತಿಸಿಕೊಳ್ಳುತ್ತೇನೆ’ ಎಂದು ವಿನಂತಿಸಿದ್ದಾರೆ.

‘ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೂ ಮತ್ತು ಸಂಪುಟದ ಎಲ್ಲಾ ಸ್ನೇಹಿತರಿಗೂ ಶುಭಾಶಯ ಕೋರುತ್ತೇನೆ. ನರೇಂದ್ರ ಮೋದಿಜೀಯವರ ಕನಸಿನಂತೆ ಕರ್ನಾಟಕವನ್ನು ತನ್ಮೂಲಕ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನಾವೆಲ್ಲರೂ ಶ್ರಮಿಸೋಣ ಎಂದು ಭಗವಂತ ಹಾಗೂ ತಮ್ಮಲ್ಲಿ ಪ್ರಾರ್ಥಿಸುತ್ತೇನೆ. ಜೀವನದಲ್ಲಿ ಸೋಲು, ಗೆಲುವು ಶಾಶ್ವತವಲ್ಲ. ದೇವರು ಎಲ್ಲವನ್ನೂ ಸಮಯಕ್ಕೆ ತಕ್ಕಂತೆ ಒದಗಿಸುತ್ತಾನೆ. ಈಗಿರುವ ಸಂದರ್ಭದಲ್ಲಿ ಶಾಸಕನಾಗಿ, ನಿಮ್ಮೆಲ್ಲರ ಸ್ನೇಹಿತನಾಗಿ ಈ ಕ್ಷೇತ್ರದ ಕೆಲಸವನ್ನು ಮೊದಲಿನಂತೆ ಮಾಡಲು ನಾನು ಸದಾ ಸಿದ್ದನಿದ್ದೇನೆ’ ಎಂದು ಭರವಸೆ ನೀಡಿದ್ದಾರೆ.

(Arvind Bellad says he is unhappy over not getting cabinet says so in facebook post)

ಇದನ್ನೂ ಓದಿ: Arvind Bellad: ನಾಳೆ ಧಾರವಾಡ ಬಂದ್ ಇಲ್ಲ; ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ದೊರೆಯದ್ದಕ್ಕೆ ಬಂದ್ ಎಂದು ವೈರಲ್ ಆದದ್ದು ಸುಳ್ಳುಸುದ್ದಿ

ಇದನ್ನೂ ಓದಿ: Basavaraj Bommai: ಬಸವರಾಜ ಬೊಮ್ಮಾಯಿ ಆಯ್ಕೆಗೆ ಅರವಿಂದ ಬೆಲ್ಲದ, ಯತ್ನಾಳ ಹರ್ಷ