ಬಾಗಲಕೋಟೆ: ಬರದಿಂದ ಬೇಸತ್ತ ರೈತರಿಗೆ ಸಿಮೆಂಟ್ ಕಾರ್ಖಾನೆ ಕಂಟಕ; ಧೂಳಿನಿಂದ ಸೇವಂತಿ, ಚೆಂಡು ಹೂ ಹಾಳು
ಮೊದಲೇ ಮಳೆ ಇಲ್ಲ, ಇದ್ದ ಬೆಳೆ ಹಾಳಾಗಿ ರೈತ ಕುಲ ಸಂಕಷ್ಟಕ್ಕೆ ಸಿಲುಕಿದ್ದು, ಬರದಿಂದ ರೈತರ ಬದುಕು ಅಧೋಗತಿಗೆ ತಲುಪಿದೆ. ಇಂತಹ ಕಡು ಕಷ್ಟದ ಸಮಯದಲ್ಲಿಯೇ ಅದೊಬ್ಬ ರೈತ, ಹೂ ಕೃಷಿ ಮಾಡಿದ್ದ. ಸುಂದರವಾಗಿ ಅರಳಿದ ಹೂಗಳು, ಇನ್ನೇನು ಕೈಗೆ ಬರುತ್ತದೆ, ಲಾಭ ಕೊಡುತ್ತದೆ ಎಂದು ರೈತ ತಿಳಿದುಕೊಂಡಿದ್ದ. ಆದರೆ, ಪಕ್ಕದಲ್ಲಿರುವ ಸಿಮೆಂಟ್ ಕಾರ್ಖಾನೆಯ ದೂಳು ರೈತನ ಬದುಕನ್ನು ಧೂಳಿಪಟ ಮಾಡಿದೆ. ಆ ರೈತ ಯಾರು? ಆತನ ಸ್ಥಿತಿ ಹೇಗಿದೆ, ಇಲ್ಲಿದೆ ವಿವರ.

ಬಾಗಲಕೋಟೆ, ನ.19: ಜಿಲ್ಲೆಯ ಮುಧೋಳ(Mudhol) ತಾಲೂಕಿನ ಲೋಕಾಪುರ ಗ್ರಾಮದ ಬಳಿ. ಮೊದಲೇ ಬರಗಾಲ ಬಿದ್ದು, ಎಲ್ಲ ಬೆಳೆ ಕೈ ಕೊಟ್ಟು ಬರಗಾಲದಿಂದ ರೈತರು ಕಂಗಲಾಗಿದ್ದಾರೆ. ಮಳೆ ಇಲ್ಲದೆ ಬಿತ್ತಿದ ಬೆಳೆ ಎಲ್ಲವೂ ಕೂಡ ಒಣಗಿ, ರೈತರ ಬದುಕು ಬೀದಿಗೆ ಬರುವಂತಹ ಸ್ಥಿತಿ ಬಂದೊದಗಿದೆ. ಇಂಥಹ ಸಂದರ್ಭದಲ್ಲೂ ಕೂಡ ಮಲ್ಲಪ್ಪ ಕುರಿ ಎಂಬ ರೈತ, ಕಷ್ಟಪಟ್ಟು ಸೇವಂತಿ ಹಾಗೂ ಚೆಂಡು ಹೂ(Flowers) ಕೃಷಿ ಮಾಡಿದ್ದಾನೆ. ರೈತನಿಗೆ ಒಂದು ಕಡೆ ಮಳೆ ಇಲ್ಲದೆ ತೊಂದರೆ ಆದರೆ ಇನ್ನೊಂದು ಕಡೆ ಅಂತರ್ಜಲ ಕೂಡ ಬತ್ತು ಹೋಗಿದೆ. ಅದರ ಜೊತೆಗೆ ಅಲ್ಪ ಸ್ವಲ್ಪ ನೀರಲ್ಲಿ ಬೆಳೆದ ಸೇವಂತಿ, ಚೆಂಡು ಹೂವಿಗೆ ಪಕ್ಕದಲ್ಲಿರುವ ಕೇಶವ್ ಸಿಮೆಂಟ್ ಕಾರ್ಖಾನೆಯ ಧೂಳು ಕಂಟಕವಾಗಿದೆ.
ಪರಿಹಾರ ಕೊಡದಿದ್ದರೆ, ಕಾರ್ಖಾನೆ ಮುಂದೆಯೇ ಆತ್ಮಹತ್ಯೆಯ ಎಚ್ಚರಿಕೆ ಕೊಟ್ಟ ರೈತ
ಮಲ್ಲಪ್ಪ ಮತ್ತೊಬ್ಬ ರೈತನ ಬಳಿ ವರ್ಷಕ್ಕೆ 75 ಸಾವಿರ ಕೊಟ್ಟು 5 ಎಕರೆ ಲಾವಣಿ ಮೇಲೆ ಪಡೆದಿದ್ದಾರೆ. ಬರದಲ್ಲೂ ಸಮೃದ್ಧವಾಗಿ ಬೆಳೆದ ಹೂವಿಗೆ ಪಕ್ಕದಲ್ಲಿರುವ ಕೇಶವ ಸಿಮೆಂಟ್ ಕಾರ್ಖಾನೆಯ ದೂಳು ಮೆತ್ತಿಕೊಂಡು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಿಮ್ಮ ಕಾರ್ಖಾನೆ ಧೂಳಿನಿಂದ ಇಷ್ಟೊಂದು ಪ್ರಮಾಣದಲ್ಲಿ ನಷ್ಟವಾಗಿದೆ. ಪರಿಹಾರ ಕೊಡಿ ಎಂದು ಕೇಳಿದರೆ, ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿ ರೈತರಿಗೆ ಸ್ಪಂದನೆ ನೀಡಿಲ್ಲ. ಈ ಬಗ್ಗೆ ಲೋಕಾಪುರ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ಆಗಿದೆ. ಜೊತೆಗೆ ಪರಿಸರ ಇಲಾಖೆಗೂ ರೈತ ದೂರು ನೀಡಿದ್ದಾರೆ. ಆದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ನಮಗೆ ಪರಿಹಾರ ನೀಡಬೇಕು ಇಲ್ಲದಿದ್ದರೆ ನಾನು ಕಾರ್ಖಾನೆ ಮುಂದೆ ಹೋಗಿ ವಿಶೇಷ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರೈತ ತನ್ನ ಅಳಲು ತೋಡಿಕೊಂಡಿದ್ದಾನೆ.
ಇದನ್ನೂ ಓದಿ:ಅದು ದಾವಣಗೆರೆಯ ಮತ್ತೊಂದು ಪ್ರವಾಸಿ ತಾಣವಾಗಬೇಕಿತ್ತು! ಆದ್ರೆ ಅಭಿವೃದ್ಧಿಯ ಮಾತೇ ಇಲ್ಲ -ರೈತರ ನೆಮ್ಮದಿ ಕೆಡಿಸಿದೆ
ಇದು ಅವರ ಸ್ವಂತ ಹೊಲವಲ್ಲ, ಐದು ಎಕರೆಗೆ ಪ್ರತಿ ವರ್ಷ 75 ಸಾವಿರದಂತೆ ಲಾವಣಿ ಮೇಲೆ ಪಡೆದಿದ್ದಾರೆ. ನಾಲ್ಕು ಎಕರೆಯಲ್ಲಿ ಸೇವಂತಿ ಒಂದು ಎಕರೆಯಲ್ಲಿ ಚಂಡು ಹೂವನ್ನು ಬೆಳೆದಿದ್ದಾರೆ. ಪ್ರತಿ ಎಕರೆಗೆ ಕನಿಷ್ಠ ಅಂದ್ರು, ಒಂದುವರೆ ಲಕ್ಷ ಖರ್ಚು ಮಾಡಿದ್ದಾರೆ . ಆದರೆ, ಸುಂದರವಾಗಿ ಬೆಳೆದ ಹೂವಿಗೆ ನಿತ್ಯ ನಿರಂತರವಾಗಿ ಕೇಶವ ಸಿಮೆಂಟ್ ಕಾರ್ಖಾನೆಯ ಧೂಳು ಸೇವಂತಿ ಹಾಗೂ ಚಂಡು ಹೂವು ಮೇಲೆ ಬೀಳುತ್ತಿದ್ದು, ಸೇವಂತಿ ಹೂಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ. ಹೂವಿನ ಸೈಜ್ ಕೂಡ ಚಿಕ್ಕದಾಗಿದೆ. ಅದರಲ್ಲೂ ಕಪ್ಪು ಬಣ್ಣಕ್ಕೆ ತಿರುಗಿದ್ದು, ಮಾರುಕಟ್ಟೆಯಲ್ಲಿ ಇವರ ಹೂವನ್ನು ಯಾರು ಮಾತನಾಡಿಸುತ್ತಿಲ್ಲ. ಐದು ಎಕರೆಗೆ ಸಂಬಂಧಪಟ್ಟಂತೆ ಸುಮಾರು 8 ಲಕ್ಷ ರೂಪಾಯಿ ಇವರಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ಕೊಡಬೇಕೆಂದು ಇವರು ಆಗ್ರಹ ಮಾಡುತ್ತಿದ್ದಾರೆ.
ಇನ್ನು ಇಲ್ಲಿ ಕೇವಲ ಮಲ್ಲಪ್ಪ ಕುರಿ ಎಂಬುವ ರೈತರದ್ದು, ಮಾತ್ರ ಸಮಸ್ಯೆ ಇಲ್ಲ. ಅಕ್ಕ ಪಕ್ಕದಲ್ಲಿರುವ ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಕೂಡ ಸಿಮೆಂಟ್ ಕಾರ್ಖಾನೆಯ ದೋಳಿಗೆ ಬಲಿಯಾಗಿವೆ. ಇದರಿಂದ ಲೋಕಾಪುರ ಗ್ರಾಮದ ರೈತರು ಕಾರ್ಖಾನೆಯ ವಿರುದ್ದ ತಿರುಗಿ ಬಿದ್ದಿದ್ದಾರೆ. ಮೊದಲೇ ಬರಗಾಲ ಬಿದ್ದು, ಎಲ್ಲ ರೈತರ ಸ್ಥಿತಿ ಚಿಂತಾಜನಕವಾಗಿದೆ ಕಾರ್ಖಾನೆ ಧೂಳಿನಿಂದ ಕನಿಷ್ಠ ಎಂದರೂ ಎರಡು ನೂರರಿಂದ ಎರಡುವರೆ ನೂರು ಎಕರೆ ಹಾಳಾಗುತ್ತಿದೆ.
ರೈತರಿಗೆ ಕಾರ್ಖಾನೆಗಳು ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಪರಿಹಾರ ಕೇಳಿದರೆ ಇಂದು-ನಾಳೆ ಹಾಗೂ ಮಾಲೀಕರು ವಿದೇಶದಲ್ಲಿದ್ದಾರೆ ಎಂದು ಸಬೂಬು ನೀಡುತ್ತಿದ್ದಾರೆ. ಈ ಬಗ್ಗೆ ರೈತರು ಗರಂ ಆಗಿದ್ದು, ಕಾರ್ಖಾನೆ ಆಡಳಿತ ಮಂಡಳಿಗೆ ಎರಡು ದಿನ ಕಾಲಾವಕಾಶ ಕೊಡುತ್ತೇವೆ. ರೈತರಿಗೆ ಸೂಕ್ತ ಪರಿಹಾರ ಕೊಡದಿದ್ದರೆ ಕಾರ್ಖಾನೆ ಬಂದ್ ಮಾಡೋದಾಗಿ ಎಚ್ಚರಿಕೆ ನೀಡಿದರು. ಇನ್ನು ಈ ಬಗ್ಗೆ ಕಾರ್ಖಾನೆ ಸಿಬ್ಬಂದಿ ಉತ್ತರ ನೀಡಲು ಸಂಪರ್ಕಕ್ಕೆ ಸಿಕ್ಕಿಲ್ಲ, ಅಧಿಕಾರಿಗಳು ಕೂಡ ನಾಟ್ ರೀಚೇಬಲ್ ಆಗಿದ್ದು, ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರೈತರ ನೆರವಿಗೆ ಬರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:47 pm, Sun, 19 November 23