Drought: ಬೆಳಗಾವಿ -ಬಾಗಲಕೋಟೆ ಜಿಲ್ಲೆಗಳಲ್ಲಿ ಬರದ ನರಕ ದರ್ಶ‌ನ, ಕೃಷಿ ಭೂಮಿಗಳು ಒಣಒಣ ಭಣಭಣ, ಇಲ್ಲಿದೆ ಸಂಪೂರ್ಣ ವರದಿ

| Updated By: ಸಾಧು ಶ್ರೀನಾಥ್​

Updated on: Sep 13, 2023 | 9:21 AM

ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 10,000 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಹಾನಿಗೀಡಾಗಿದೆ. ಮಳೆ ಆಗದ ಹಿನ್ನೆಲೆ ಭತ್ತದ ಗದ್ದೆಗಳು ಬಿರುಕು ಬಿಟ್ಟಿವೆ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿಯೂ ಬರದ ನರಕದರ್ಶ‌ನವಾಗಿದೆ. ಜಿಲ್ಲೆಯ 9 ತಾಲ್ಲೂಕಿನಲ್ಲೂ ಬರದ ಛಾಯೆ ಮೂಡಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರ ಎಂದು ಘೋಷಣೆ ಮಾಡುವಂತೆ ರೈತರು ಒತ್ತಾಯ ಮಾಡಿದ್ದಾರೆ. 

Drought: ಬೆಳಗಾವಿ -ಬಾಗಲಕೋಟೆ ಜಿಲ್ಲೆಗಳಲ್ಲಿ ಬರದ ನರಕ ದರ್ಶ‌ನ, ಕೃಷಿ ಭೂಮಿಗಳು ಒಣಒಣ ಭಣಭಣ, ಇಲ್ಲಿದೆ ಸಂಪೂರ್ಣ ವರದಿ
Drought: ಬೆಳಗಾವಿ -ಬಾಗಲಕೋಟೆ ಜಿಲ್ಲೆಗಳಲ್ಲಿ ಬರದ ನರಕದರ್ಶ‌ನ
Follow us on

ಬೆಳಗಾವಿ/ಬಾಗಲಕೋಟೆ, ಸೆಪ್ಟೆಂಬರ್​ 13 : ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 10,000 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಹಾನಿಗೀಡಾಗಿದೆ. ಇದರಿಂದ ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಭತ್ತದ ಬೆಳೆದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ನೆಲ ಬಿಟ್ಟು ಏಳದ ಭತ್ತ ಒಣಗಿ ಹಾಳಾಗುತ್ತಿದೆ. ಇತ್ತ ಮಳೆ ಆಗದ ಹಿನ್ನೆಲೆ ಭತ್ತದ ಗದ್ದೆಗಳು ಬಿರುಕು ಬಿಟ್ಟಿವೆ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿಯೂ ಬರದ ನರಕದರ್ಶ‌ನವಾಗಿದೆ. ಜಿಲ್ಲೆಯ ಒಂಬತ್ತು ತಾಲ್ಲೂಕಿನಲ್ಲೂ ಬರದ ಛಾಯೆ ಮೂಡಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರ ಎಂದು ಘೋಷಣೆ ಮಾಡುವಂತೆ ರೈತರು ಒತ್ತಾಯ ಮಾಡಿದ್ದಾರೆ.

ಇದರಿಂದ ಬೆಳಗಾವಿ ಜಿಲ್ಲೆ ರೈತರು ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಭತ್ತ ಬಿತ್ತಿ ಕೈ ಸುಟ್ಟುಕೊಂಡಿದ್ದಾರೆ. ಯಳ್ಳೂರ, ವಡಗಾಂವ, ಶಹಾಪುರ, ಧಾಮಣೆ, ಕಡೋಲಿ ಸೇರಿ ಹಲವು ಭಾಗಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಬೆಳೆ ಒಣಗಿ ಹಾಳಾಗ್ತಿದ್ರೂ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಗೆ ರೈತರು ಆಕ್ರೋಶಗೊಂಡಿದ್ದಾರೆ. ಕೂಡಲೇ ಸರ್ಕಾರ ಬೆಳಗಾವಿ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಅರಳುವ ಮುನ್ನವೇ ಹತ್ತಿ ಬೆಳೆ ಬಾಡಿದೆ. ಎರಡು ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದ ಹತ್ತಿ ಬೆಳೆ ಹಾನಿಗೀಡಾಗಿದೆ. ಈಗಾಗಲೇ ಬೆಳೆದು ಕಾಯಿ ಆಗಿ ಹೂ ಬಿಡಬೇಕಿದ್ದ ಹತ್ತಿ ಗಿಡಗಳು ಈ ವರೆಗೆ ಕೇವಲ ಒಂದು ಗೇಣಿನಷ್ಟು ಬೆಳೆದಿದೆ. ಕೆಲವು ಭಾಗದಲ್ಲಿ ಇನ್ನೂ ನೆಲ ಬಿಟ್ಟು ಎದ್ದಿಲ್ಲ ಹತ್ತಿ ಬೀಜಗಳು. ತರಕಾರಿ ಬೆಳೆಗಳಾದ ಟೊಮ್ಯಾಟೊ, ಹೀರೇಕಾಯಿ ಬೆಳೆ ಕೂಡ ಒಣಗಿ ಹೋಗಿವೆ. ಮಳೆ ಕೈ ಕೊಟ್ಟ ಹಿನ್ನೆಲೆ ಬೆಳೆ ಕಳೆದುಕೊಂಡು ಬೀದಿಗೆ ಬರುವ ಆತಂಕ ಎದುರಾಗಿದೆ ಬೆಳೆಗಾರರಿಗೆ. ಸಾಲಸೋಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ಒಣಗುತ್ತಿರುವುದಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಕರೆಗೆ 50 ಸಾವಿರ ಪರಿಹಾರ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿಯೂ ಬರದ ನರಕದರ್ಶ‌ನ

ಬಾಗಲಕೋಟೆ ಜಿಲ್ಲೆಯಲ್ಲಿ ಬರದ ನರಕದರ್ಶ‌ನವಾಗಿದೆ. ಜಿಲ್ಲೆಯ ಒಂಬತ್ತು ತಾಲ್ಲೂಕಿನಲ್ಲೂ ಬರದ ಛಾಯೆ ಮೂಡಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರ ಎಂದು ಘೋಷಣೆ ಮಾಡುವಂತೆ ರೈತರು ಒತ್ತಾಯ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಳೆ‌ ಕೊರತೆಯಿಂದ ಬಿತ್ತನೆ ಪ್ರದೇಶ ಕಡಿಮೆಯಾಗಿದೆ. ೨,೬೫,೦೦೦ ಹೆಕ್ಟೇರ್ ಬಿತ್ತನೆ ಗುರಿ ಇತ್ತಾದರೂ, ಬಿತ್ತನೆಯಾಗಿದ್ದು ೨,೨೬,೪೦೯ ಹೆಕ್ಟೇರ್ ಮಾತ್ರ. ಮಳೆ ಆಗಬೇಕಾಗಿದ್ದು ೩೦೩ ಎಮ್ ಎಮ್ ಆದರೆ ಆಗಿರೋದು ಬರೀ ೨೧೬.೫ ಮಿ.ಮೀ.

ಮಳೆಯಿಲ್ಲದೆ ಒಣಗಿ ಹಾಳಾಗುತ್ತಿರುವ ಈರುಳ್ಳಿ:

ಇನ್ನು ಈರುಳ್ಳಿ ಬೆಳೆ ಮಳೆಯಿಲ್ಲದೆ ಒಣಗಿ ಹಾಳಾಗುತ್ತಿದೆ. ಮಳೆಯಿಲ್ಲದ ಹಿನ್ನೆಲೆ ಚಿಗುರುವ ಹಂತದಲ್ಲೇ ಒಣಗಿ ಹೋಗುತ್ತಿದೆ. ಈರುಳ್ಳಿಯನ್ನು ದುರ್ಬೀನು ಹಾಕಿ ಹುಡುಕುವಂತಾಗಿದೆ. ಹಸಿರಿನಿಂದ ಕಂಗೊಳಿಸಬೇಕಿದ್ದ ಈರುಳ್ಳಿ ಹೊಲ ಬರಡು ಭೂಮಿಯಂತೆ ಗೋಚರವಾಗುತ್ತಿದೆ. ೨೭,೯೮೯ ಹೆಕ್ಟೇರ್ ಈರುಳ್ಳಿ ಬಿತ್ತನೆ ಗುರಿ ಇತ್ತು. ಆದರೆ ಬಿತ್ತನೆಯಾಗಿದ್ದು ೨೦,೭೦೪ ಹೆಕ್ಟೇರ್ ಮಾತ್ರವೇ. ಆದರೆ ಬಿತ್ತನೆ ಮಾಡಿದ ಈರುಳ್ಳಿ ವರುಣನಿಲ್ಲದೆ ಒಣಗಿ ನಾಶವಾಗಿದೆ. ಈರುಳ್ಳಿ ಬೆಳೆ ಬದಲು ಬರಿ ಕಲ್ಲುಗಳ ದರ್ಶನವಾಗುತ್ತಿದೆ. ಇದ್ದ ಈರುಳ್ಳಿ ರಕ್ಷಣೆಗೆ ಕಾರ್ಮಿಕರು ಹರಸಾಹಸಪಡುವಂತಾಗಿದೆ. ಒಣ ಬೇಸಾಯದ ಈರುಳ್ಳಿ ಬೆಳೆ ೧೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಹುತೇಕ ನಾಶಗೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 am, Wed, 13 September 23