
ಬಳ್ಳಾರಿ, ಫೆಬ್ರುವರಿ 08: ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಬ್ಯಾನರ್ ಗಲಭೆ (Banner clash) ಪ್ರಕರಣದ ಬಳಿಕ DIGP ಹುದ್ದೆಯಿಂದ ವರ್ಗಾವಣೆಗೊಂಡಿರುವ IPS ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಇದೀಗ ಗಂಭೀರ ಆರೋಪಗಳು ಕೇಳಿಬಂದಿವೆ. ವರ್ಗಾವಣೆ ಆದ ನಂತರವೂ ಕಡತಗಳ ವಿಚಾರದಲ್ಲಿ ಕೆಳ ಹಂತದ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಸಂಚಲನ ಮೂಡಿಸಿದೆ.
ಬಳ್ಳಾರಿ ವಲಯ ಆಡಳಿತಾಧಿಕಾರಿಗೆ ವಾಟ್ಸಾಪ್ ಕರೆ ಮೂಲಕ ಮಾತನಾಡಿದ ವರ್ತಿಕಾ ಕಟಿಯಾರ್, ಹೊಸದಾಗಿ ಆಗಮಿಸಿರುವ ಅಧಿಕಾರಿಗೆ ಯಾವುದೇ ಪ್ರಮುಖ ದಾಖಲೆಗಳನ್ನು ಹಸ್ತಾಂತರಿಸದಂತೆ ಸೂಚನೆ ನೀಡಿದ್ದಾರೆಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ತಮ್ಮ ವರ್ಗಾವಣೆ ವಿಚಾರ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (CAT)ಯಲ್ಲಿ ವಿಚಾರಣೆಯಲ್ಲಿದೆ ಎಂದು ಹೇಳಿಕೊಂಡಿರುವ ವರ್ತಿಕಾ ಕಟಿಯಾರ್, ಕಡತಗಳನ್ನು ನೀಡಿದರೆ CATನಲ್ಲಿ ಪ್ರತಿವಾದಿಯಾಗಿ ಸೇರಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ವಲಯ ಆಡಳಿತಾಧಿಕಾರಿಗೆ ಮಾಡಿರುವ ಕರೆಗಳ ವಿಡಿಯೋ ಹಾಗೂ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ ಬಳ್ಳಾರಿ ಬ್ಯಾನರ್ ಗಲಾಟೆ: ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ; ನೂತನ ಎಸ್ಪಿ ನೇಮಕ
ಇದಕ್ಕೆ ಪ್ರತಿಕ್ರಿಯೆಯಾಗಿ ಬಳ್ಳಾರಿ ವಲಯ ಆಡಳಿತಾಧಿಕಾರಿ ಬಸವರಾಜ್ ಅವರು ವರ್ತಿಕಾ ಕಟಿಯಾರ್ ಅವರಿಗೆ ಅಧಿಕೃತ ಪತ್ರ ಬರೆದು, ನಿಮ್ಮ ನಿರ್ದೇಶನಗಳು ನನ್ನ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿವೆ ಎಂದು ತಿಳಿದ್ದಾರೆ. ಯಾವುದೇ ರೀತಿಯ ಕರೆ, ಪತ್ರ ಅಥವಾ ಮೌಖಿಕ ಸೂಚನೆಗಳನ್ನು ನೀಡದಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಗಲಭೆ ಬಳಿಕ ಜನವರಿ 7ರಂದು DIGP ಹುದ್ದೆಯಿಂದ ವರ್ಗಾವಣೆಗೊಂಡಿರುವ ವರ್ತಿಕಾ ಕಟಿಯಾರ್ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ CATಗೆ ಮೇಲ್ಮವಿ ಸಲ್ಲಿಸಿದ್ದರು. ಆದರೆ ವರ್ಗಾವಣೆ ಬಳಿಕವೂ ಆಡಳಿತಾತ್ಮಕ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳು ಇದೀಗ ರಾಜ್ಯದ ಆಡಳಿತ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.