ಬಳ್ಳಾರಿ ಬ್ಯಾನರ್ ಗಲಾಟೆ: ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ; ನೂತನ ಎಸ್ಪಿ ನೇಮಕ
ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರವಾಗಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಎಸ್ಪಿ ಪವನ್ ನೆಜ್ಜೂರ್ ಅಮಾನತುಗೊಂಡ ಬೆನ್ನಲ್ಲೇ, ಡಿಐಜಿ ವರ್ತಿಕಾ ಕಟಿಯಾರ್ ಅವರನ್ನೂ ವರ್ಗಾಯಿಸಲಾಗಿದೆ. ಡಾ. ಪಿ.ಎಸ್.ಹರ್ಷ ಬಳ್ಳಾರಿ ವಲಯದ ಹೊಸ ಐಜಿಪಿ, ಡಾ. ಸುಮನ ಪೆನ್ನೆಕರ್ ನೂತನ ಎಸ್ಪಿಯಾಗಿ ನೇಮಕಗೊಂಡಿದ್ದಾರೆ.

ಬೆಂಗಳೂರು, ಜನವರಿ 07: ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರ ನಡುವೆ ಬ್ಯಾನರ್ ವಿಚಾರವಾಗಿ ಗಲಾಟೆ ಸಂಬಂಧ ಎಸ್ಪಿ ತಲೆದಂಡದ ಬೆನ್ನಲ್ಲೇ ಡಿಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್ಮೆಂಟ್ ವಿಭಾಗಕ್ಕೆ ವರ್ತಿಕಾರನ್ನು ಟ್ರಾನ್ಸ್ಫರ್ ಮಾಡಲಾಗಿದ್ದು, ಬಳ್ಳಾರಿ ವಲಯದ ಐಜಿಪಿಯಾಗಿ ಡಾ.ಪಿ.ಎಸ್.ಹರ್ಷ ಅವರನ್ನು ನೇಮಕ ಮಾಡಲಾಗಿದೆ. ಪವನ್ ನೆಜ್ಜೂರು ಅವರ ಅಮಾನತಿನಿಂದ ತೆರವಾಗಿದ್ದ ಎಸ್ಪಿ ಸ್ಥಾನಕ್ಕೆ ಡಾ. ಸುಮನ ಪೆನ್ನೆಕರ್ ಅವರನ್ನು ನೇಮಿಸಿಯೂ ಆದೇಶಿಸಲಾಗಿದೆ.
ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನ ಅಮಾನತು ಮಾಡಿತ್ತು. ದುರ್ದೈವ ಅಂದರೆ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಸಸ್ಪೆಂಡ್ ಆಗಿದ್ದರು. ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಹೀಗಾಗಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಸರ್ಕಾರಕ್ಕೆ ವರದಿ ನೀಡಿದ್ದರು. ಆ ಬೆನ್ನಲ್ಲೇ ಸರ್ಕಾರ ಕ್ರಮ ಕೈಗೊಂಡಿತ್ತು.
ಇದನ್ನೂ ಓದಿ: ರೆಡ್ಡಿಗಳ ಸಂಘರ್ಷಕ್ಕೆ ಗಣಿ ನಾಡು ಉದ್ವಿಗ್ನ, ಕಾಂಗ್ರೆಸ್ ಕಾರ್ಯಕರ್ತ ಸಾವು; ಅಸಲಿಗೆ ಬಳ್ಳಾರಿಯಲ್ಲಿ ಆಗಿದ್ದೇನು?
ಅಮಾನತು ಬೆನ್ನಲ್ಲೇ ಪವನ್ ನಜ್ಜೂರ್ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಗಳು ಹರಿದಾಡಿದ್ದವು. ಸ್ನೇಹಿತನ ಫಾರ್ಮ್ಹೌಸ್ನಲ್ಲಿ ಮಾತ್ರೆ ಸೇವಿಸಿದ್ದ ನಜ್ಜೂರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಈ ಬಗ್ಗೆ ಖುದ್ಧು ಸ್ಪಷ್ಟನೆ ನೀಡಿದ್ದ ಎಸ್ಪಿ ಪವನ್ ನೆಜ್ಜೂರ್ ಅವರ ತಂದೆ ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದರು. ಇದೇ ವಿಚಾರ ಇಟ್ಟುಕೊಂಡು ವಿಪಕ್ಷ ಬಿಜೆಪಿ ರಾಜ್ಯ ಸಕರ್ಕರದ ವಿರುದ್ಧ ಮುಗಿಬಿದ್ದಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.