ಮೇಲಾಧಿಕಾರಿ ಕಿರುಕುಳ ಆರೋಪ: ಕೃಷಿ ಇಲಾಖೆ ಗುತ್ತಿಗೆ ನೌಕರ ಆತ್ಮಹತ್ಯೆ

11 ತಿಂಗಳಿಂದ ಸಂಬಳ ನೀಡಿಲ್ಲ. ಸಾಲಗಾರರ ಕಾಟ ತಾಳಲಾರದೇ ಡೆತ್ ನೋಟ್ ಬರೆದಿಟ್ಟು ಗ್ರಾಮ ಪಂಚಾಯಿತಿಯ ನೀರುಗಂಟಿ ಆತ್ಮಹತ್ಯೆ ಶರಣಾಗಿದ್ದು, ಇನ್ನೊಂದೆಡೆ ಮೇಲಾಧಿಕಾರಿಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಕೃಷಿ ಇಲಾಖೆಯ ಗುತ್ತಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೂರು ಪುಟಗಳ ಡೆತ್‌ನೋಟ್‌ನಲ್ಲಿ ಸಾವಿನ ಕಾರಣ ಬರೆದಿರುವ ಗುತ್ತಿಗೆ ನೌಕರ, ಕೃಷಿ ಇಲಾಖೆಯ ಅಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಮೇಲಾಧಿಕಾರಿ ಕಿರುಕುಳ ಆರೋಪ: ಕೃಷಿ ಇಲಾಖೆ ಗುತ್ತಿಗೆ ನೌಕರ ಆತ್ಮಹತ್ಯೆ
Raju
Edited By:

Updated on: Mar 16, 2026 | 7:45 PM

ಬಳ್ಳಾರಿ, (ಮಾರ್ಚ್ 16): ಮೇಲಾಧಿಕಾರಿಯ ಮಾನಸಿಕ ಕಿರುಕುಳ ಹಿನ್ನೆಲೆ ಕೃಷಿ ಇಲಾಖೆಯ ( agriculture department) ಗುತ್ತಿಗೆ ನೌಕರ ಆತ್ಮಹತ್ಯೆಗೆ (Suicide)  ಶರಣಾಗಿರುವ ಘಟನೆ ಬಳ್ಳಾರಿ (Bellary) ಜಿಲ್ಲೆಯ ಸಂಡೂರು ತಾಲೂಕಿನ‌ ಗೌರಿಪುರದಲ್ಲಿ ನಡೆದಿದೆ. ಜಿ.ಎನ್. ರಾಜು ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆ ನೌಕರ. ಸಂಡೂರು ಕೃಷಿ ಇಲಾಖೆಯ ತಾಲೂಕು (AO) ಅಧಿಕಾರಿ ರಾಘವೇಂದ್ರ ಅವರ ವಿರುದ್ದ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಮೂರು ಪುಟಗಳ ಡೆತ್‌ನೋಟ್‌ನಲ್ಲಿ ಸಾವಿನ ಕಾರಣ ಬರೆದಿರುವ ಗುತ್ತಿಗೆ ನೌಕರ ರಾಜು ಅವರು ಕೃಷಿ ಇಲಾಖೆಯ ಅಧಿಕಾರಿ ರಾಘವೇಂದ್ರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಸಂಡೂರು ಕೃಷಿ ಇಲಾಖೆ ಅಧಿಕಾರಿ ರಾಘವೇಂದ್ರ ಅವರು ರಾಜು ಅವರಿಗೆ ಕೆಲಸಕ್ಕೆ ಸೇರಿದ ದಿನದಿಂದಲೇ ಮಾನಸಿಕ ಕಿರುಕುಳ ನೀಡುತ್ತಿದ್ರು. ಕಚೇರಿಯಲ್ಲಿನ ಕಿರುಕುಳದ ಬಗ್ಗೆ ಮೃತ ರಾಜು ಪತ್ನಿ ಪ್ರೇಮಾ ಅವರ ಮುಂದೆ ಹೇಳಿಕೊಂಡಿದ್ದರು, ದಿನ ನಿತ್ಯ ಕೆಲಸಕ್ಕೆ ಹೋದ್ರು ರಾಘವೇಂದ್ರ ಅವರು ತನ್ನನ್ನು ಮಾತನಾಡಿಸುತ್ತಿರಲಿಲ್ಲ. ಯಾವುದೇ ಕೆಲಸ ಮಾಡು ಅಂತ ಹೇಳುತ್ತಿರಲಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ಸಂಬಳ ಸಹ ಬಂದಿರಲಿಲ್ಲವಂತೆ. ಹಿರಿಯ ಅಧಿಕಾರಿಗಳು ಹೇಳಿದ್ರು ನನ್ನ ಗಂಡನಿಗೆ ಸಂಬಳ ಕೊಡದೇ ಕಿರುಕುಳ ನೀಡುತ್ತಿದ್ದರು ಎಂದು ಮೃತ ರಾಜು ಪತ್ನಿ ಪ್ರೇಮಾ ಅವರು ಅರೋಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: 11 ತಿಂಗಳಿಂದ ಸಂಬಳವಿಲ್ಲ, ಸಾಲಗಾರರ ಕಾಟ; ಡೆತ್‌ನೋಟ್‌ ಬರೆದಿಟ್ಟು ಗ್ರಾ ಪಂ ನೀರುಗಂಟಿ ಆತ್ಮಹತ್ಯೆ

ನೀರುಗಂಟಿ ಆತ್ಮಹತ್ಯೆ

ಚಿಕ್ಕಮಗಳೂರು: ಡೆತ್‌ನೋಟ್ ಬರೆದಿಟ್ಟು ಗ್ರಾಮ ಪಂಚಾಯಿತಿಯ ನೀರುಗಂಟಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಣಸೇಮಕ್ಕಿ ಗ್ರಾಮದಲ್ಲಿ ನಡೆದಿದೆ. ಆಣೂರು ಗ್ರಾಮ ಪಂಚಾಯಿತಿಯ ನೀರುಗಂಟಿ ರಮೇಶ್(47) ನೇಣಿಗೆ ಶರಣಾದ ವ್ಯಕ್ತಿ. 11 ತಿಂಗಳಿಂದ ಸಂಬಳ ನೀಡಿಲ್ಲ, ಸಾಲಗಾರರ ಕಾಟ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್‌ನೋಟ್‌ನಲ್ಲಿ ಏನಿದೆ?

ನಾನು ತುಂಬಾ ವರ್ಷದಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನನಗೆ 11 ತಿಂಗಳ ವೇತನ ಕೊಟ್ಟಿಲ್ಲ ಹಾಗೂ ಸಂಘದವರು ಮನೆಗೆ ಬಂದು ಹಣ ಕಟ್ಟುವಂತೆ ನನಗೆ ಮತ್ತು ನಮ್ಮ ಮನೆಯವರಿಗೆ ತೊಂದರೆ ಕೊಡುತ್ತಿದ್ದಾರೆ. ಹಾಗಾಗಿ ನನಗೆ ತುಂಬಾ ಮನಸ್ಸಿಗೆ ಬೇಜಾರಾಗಿದೆ. ಫೈನಾನ್ಸ್‌ನಲ್ಲಿ ಸಾಲ ಮಾಡಿರುವೆ, ಸಂಬಳ ನೀಡದಿದ್ದಕ್ಕೆ ಸಾಲಕಟ್ಟಲು ಆಗುತ್ತಿಲ್ಲ. RBL, SKS, ಗ್ರಾಮಿಣಕೂಟ, ಮುತ್ತೂಟ್ ಫೈನಾನ್ಸ್‌ ಸಿಬ್ಬಂದಿ ಮನೆಗೆ ಬಂದು ಮನೆಯವರಿಗೂ ಕಿರುಕುಳ ನೀಡುತ್ತಿದ್ದಾರೆ. ಇನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲೂ ಕೆಲವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us