ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್ ಕಡಿತಗೊಳಿಸಿದ್ದಕ್ಕೆ ಹೊರಟ್ಟಿ ಬೇಸರ: ಪತ್ರದ ಮೂಲಕ ಶಿಕ್ಷಣ ಸಚಿವರಿಗೆ ಸಲಹೆ
ಇನ್ನು ಮುಂದೆ SSLCಯಲ್ಲಿ 35ರ ಬದಲಿಗೆ 33 ಅಂಕ ಪಡೆದರೆ ಉತ್ತೀರ್ಣ ಎಂದು ಘೋಷಿಸಲಾಗಿದ್ದು, ಈ ವರ್ಷದಿಂದಲೇ ಖಾಸಗಿ ಶಾಲೆಗಳಿಗೂ ಇದು ಅನ್ವಯ ಆಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಈಗಾಗಲೇ ಹೇಳಿದ್ದಾರೆ. ಆದ್ರೆ, ಇದೀಗ ಇದಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು, (ಅಕ್ಟೋಬರ್,29): ವಾರ್ಷಿಕ ಪರೀಕ್ಷೆಗಳಲ್ಲಿ 35ರಿಂದ 33ಕ್ಕೆ ಉತ್ತೀರ್ಣದ ಅಂಕವನ್ನ ಇಳಿಸಲು ಮುಂದಾಗಿರುವುದಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj horatti) ವಿರೋಧ ವ್ಯಕ್ತಪಡಿಸಿದ್ದಾರೆ. SSLC, ಪಿಯು ಪಾಸಿಂಗ್ ಮಾರ್ಕ್ಸ್ ಕಡಿಮೆ ಮಾಡುವ ವಿಚಾರವಾಗಿ ಬೇಸರಗೊಂಡಿರುವ ಬಸವರಾಜ್ ಹೊರಟ್ಟಿ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪನವರಿಗೆ (Madhu Bangarappa) ಪತ್ರ ಬರೆದಿದ್ದು, 33 ಅಂಕದ ಬದಲು ಹಿಂದಿನಂತೆ 35 ಅಂಕ ನಿಗದಿಪಡಿಸಬೇಕು. ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಹೊರಟ್ಟಿ ಬರೆದ ಪತ್ರದಲ್ಲೇನಿದೆ?
ಇತ್ತೀಚೆಗೆ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳಲ್ಲಿ ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ತೆಗೆದುಕೊಂಡರೆ ಅವರನ್ನು ಉತ್ತೀರ್ಣ ಗೊಳಿಸುತ್ತೇವೆ ಎಂದು ಹೇಳಿಕೆ ನೀಡಿರುತ್ತೀರಿ ಇದು ಬಹಳ ಖೇದಕರ ಸಂಗತಿ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಎದುರಿಸುವುದು ಒಂದು ಅವಿಸ್ಮರಣೀಯ ಹಾಗೂ ವಿಶೇಷ ಘಟ್ಟವಾಗಿರುತ್ತದೆ ಮತ್ತು ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಎದುರಿಸುವುದು ಅನೇಕ ಅನುಭವಗಳನ್ನು ಸಹ ನೀಡುತ್ತದೆ. ಅದರಲ್ಲೂ ಅಂಕಗಳನ್ನು ಗಳಿಸುವುದು ಒಂದು ಮುಖ್ಯ ಉದ್ದೇಶವಾಗಿದ್ದರೂ ಸಹ ಉಳಿದಂತೆ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ, ಧೈರ್ಯ, ಜ್ಞಾಪಕ ಶಕ್ತಿ, ಕಲಿಕೆಯ ನೈಪುಣ್ಯತೆ, ವಿಷಯಗಳ ಮನನ ಮಾಡುವುದು ಸೇರಿದಂತೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವಂತಹ ಅನೇಕ ವ್ಯಕ್ತಿತ್ವ ವಿಕಸನದಂತಹ ವಿದ್ಯಾರ್ಥಿ ಪರವಾಗಿರುವ ಸೂಕ್ಷ್ಮ ಅಂಶಗಳ ಸಮೀಕರಣ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳನ್ನು ಹೊರತರಲು ಪ್ರೇರಣೆ ಹೊಂದಿದ್ದು ಅವರುಗಳು ಮುಂದಿನ ಜೀವನದ ಸರ್ವತೋಮುಖ ಬೆಳಗಣಿಗೆಗೆ ಪೂರಕವಾಗಿರುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿ, ಪೋಷಕರು ಗಮನಕ್ಕೆ: SSLC ಪರೀಕ್ಷಾ ನಿಯಮದಲ್ಲಿ ಮಹತ್ವದ ಬದಲಾವಣೆ
ವಿದ್ಯಾರ್ಥಿಗಳಿಗೆ ಈ ರೀತಿಯ ಅನುಭವ ಮತ್ತು ಅನುಕೂಲತೆ ನೀಡುವಂತ ಪರೀಕ್ಷೆಗಳು ಮತ್ತು ಅಂತಹ ಪರೀಕ್ಷೆಗಳನ್ನು ಉತ್ತೀರ್ಣ ಹೊಂದಲು ಈ ಹಿಂದಿನಿಂದ ನಿಗಧಿ ಪಡಿಸಿರುವಂತೆ ಶೇಕಡಾ 35 ಅಂಕಗಳು ಸಮಂಜಸವಾಗಿದ್ದು, ದೀರ್ಘಕಾಲದಿಂದ ಸಾಭೀತಾದ ಮಾನದಂಡವಾಗಿರುತ್ತದೆ. ಇಂತಹ ಮಾನದಂಡವನ್ನು ಎಕಾಏಕಿ 33 ಅಂಕಗಳಿಗೆ ಕಡಿತಗೊಳಿಸುವಂತಹ ನಿರ್ಧಾರವು ಯಾವ ಕೋನದಿಂದಲೂ ಸಹ ಸಮಂಜಸವಾದುದಲ್ಲ.
ಮುಂದುವರೆದು ಈ ರೀತಿ ನಿರ್ಧಾರಗಳು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಮನೋಭಾವಕ್ಕೆ ಪೆಟ್ಟು ಬೀಳುವುದಲ್ಲದೇ ಮಾನಸಿಕವಾಗಿ ಧೃಡತೆಯ ಕೊರತೆಯುಂಟಾಗುತ್ತದೆ ಮತ್ತು ಮುಂದಿನ ದಿನಮಾನಗಳಲ್ಲಿ ನಿರ್ಧಿಷ್ಟ ಬ್ಯಾಚಿನ ಅಭ್ಯರ್ಥಿಗಳ ಶೇಕಡಾ 33 ರ ಬ್ಯಾಚಿಗೆ ಸೇರಿವರು ಎಂಬಂತೆ ಇತರೆ ಬ್ಯಾಚಿನ ಅಭ್ಯರ್ಥಿಗಳೊಂದಿಗೆ ಗೇಲಿ ಮಾಡುವಂತಹ ಪ್ರಸಂಗ ಉಂಟಾಗುವ ಸಾಧ್ಯತೆ ಇದ್ದು ಅಂತಹ ಬ್ಯಾಚಿನ ಅಭ್ಯರ್ಥಿಗಳಿಗೆ ಕೀಳಿರಿಮೆಯ ಅನುಭವ ಉಂಟಾಗುವುದಕ್ಕೆ ಎಡೆ ಮಾಡಿದಂತಾಗುತ್ತದೆ. ಮುಂದುವರೆದು ಇದು ಇಂದಿನ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವನ್ನು ಹಾಗೂ ಶಿಕ್ಷಕರು ಕಲಿಸುವ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ. ಇದು ಸರಿಯಾದ ಕ್ರಮವಲ್ಲ ಎಂಬುದು ನನ್ನ ಭಾವನೆ. ಇದನ್ನು ಕೈಬಿಟ್ಟು ಈ ಮುಂಚೆ ಇದ್ದ ಹಾಗೆ ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 35 ಅಂಕಗಳನ್ನು ತೆಗೆದುಕೊಂಡ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೆಟ್ಟು: 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ
ಶಿಕ್ಷಕರ ನೇಮಕಾತಿ ಬಗ್ಗೆಯೂ ಉಲ್ಲೇಖ
ಇದಕ್ಕಿಂತ ಮೊದಲು ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬಿ ವಿದ್ಯಾರ್ಥಿಗಳ ವಿದ್ಯಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಹಾಗೆಯೇ ಎಲ್ಲಾ ಶಾಲಾ ಹಾಗೂ ಕಾಲೇಜುಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಅನುಕೂಲ ಮಾಡಿಕೊಡುವತ್ತ ಗಮನ ಹರಿಸಬೇಕು. ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸುವುದು, ಅವರು ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಾಗುವುದು ಸೇರಿದಂತೆ ಇನ್ನು ಅನೇಕ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಧನಾತ್ಮಕ ಬದಲಾವಣೆಗಳನ್ನು ತರುವುದರ ಮೂಲಕ ಶಾಲಾ ಶಿಕ್ಷಣದಲ್ಲೂ ಅಮೂಲಾಗ್ರ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.
ಈ ಹಿಂದೆ ನಾನು ಶಿಕ್ಷಣ ಸಚಿವನಾಗಿ ಕಾರ್ಯ ನಿರ್ವಹಿಸಿದ್ದು, ಸದರಿ ಕಾಲಾವಧಿಯಲ್ಲಿ ಅಗತ್ಯವಿರುವ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರನ್ನು ನೇಮಕಾತಿ ಮಾಡಿದ್ದೆನು. ಒಟ್ಟಿನಲ್ಲಿ ನಾನು ಈ ಮೂಲಕ ತಮಗೆ ತಿಳಿಸುವುದೇನೆಂದರೆ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲೂ ಕನಿಷ್ಠ 33 ಅಂಕಗಳನ್ನು ತೆಗೆದುಕೊಂಡರೆ ಉತ್ತೀರ್ಣ ಮಾಡುತ್ತೇವೆ ಎಂಬುದನ್ನು ಕೈಬಿಟ್ಟು, ಮುಂಚೆ ಇದ್ದ ಪದ್ದತಿಯನ್ನೇ ಮುಂದುವರೆಸಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



