ವಿಧಾನ ಪರಿಷತ್​​ನಲ್ಲಿ ಮಂಡನೆ ಆಗದ ಮತಾಂತರ ನಿಷೇಧ ವಿಧೇಯಕ: ಮುಂದಿನ ಅಧಿವೇಶನದಲ್ಲಿ ಮಂಡನೆಗೆ ನಿರ್ಧಾರ

| Updated By: ganapathi bhat

Updated on: Dec 24, 2021 | 5:25 PM

ಇಂದು ಪರಿಷತ್​ನಲ್ಲಿ ಕಾಂಗ್ರೆಸ್​ ಸದಸ್ಯರು ಮೊದಲೇ ಹಾಜರಿದ್ದರೂ ಆಡಳಿತ ಪಕ್ಷ ಸದಸ್ಯರು 1 ಗಂಟೆ ತಡವಾಗಿ ಬಂದರು. ಹೀಗಾಗಿ, ವಿಧಾನಸಭೆಯಲ್ಲಿ ಬಿಲ್ ಮಂಡನೆಯಾದ ರೀತಿ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.

ವಿಧಾನ ಪರಿಷತ್​​ನಲ್ಲಿ ಮಂಡನೆ ಆಗದ ಮತಾಂತರ ನಿಷೇಧ ವಿಧೇಯಕ: ಮುಂದಿನ ಅಧಿವೇಶನದಲ್ಲಿ ಮಂಡನೆಗೆ ನಿರ್ಧಾರ
ಮತಾಂತರ ನಿಷೇಧ ವಿಧೇಯಕ (ಪ್ರಾತಿನಿಧಿಕ ಚಿತ್ರ)
Follow us on

ಬೆಳಗಾವಿ: ಮತಾಂತರ ನಿಷೇಧ ವಿಧೇಯಕ ವಿಧಾನ ಪರಿಷತ್​​ನಲ್ಲಿ ಮಂಡನೆ ಆಗಿಲ್ಲ. ವಿರೋಧ ಪಕ್ಷಗಳ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಂಡನೆ ಮಾಡಿಲ್ಲ. ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ಸಂಧಾನ ಸಭೆಯಲ್ಲಿ ಮುಂದಿನ ಅಧಿವೇಶನದಲ್ಲಿ ಬಿಲ್ ಮಂಡನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಇಂದು ಪರಿಷತ್​ನಲ್ಲಿ ಕಾಂಗ್ರೆಸ್​ ಸದಸ್ಯರು ಮೊದಲೇ ಹಾಜರಿದ್ದರೂ ಆಡಳಿತ ಪಕ್ಷ ಸದಸ್ಯರು 1 ಗಂಟೆ ತಡವಾಗಿ ಬಂದರು. ಹೀಗಾಗಿ, ವಿಧಾನಸಭೆಯಲ್ಲಿ ಬಿಲ್ ಮಂಡನೆಯಾದ ರೀತಿ ಬಗ್ಗೆ ಆಕ್ಷೇಪ ಕೂಡ ವ್ಯಕ್ತವಾಯಿತು.

ಏಕಾಏಕಿ ಬಿಲ್ ತಂದರೆ ಚರ್ಚೆ ಸಾಧ್ಯವಿಲ್ಲ ಎಂದು ಗಲಾಟೆ ನಡೆಯಿತು. ಚರ್ಚೆಗೆ ಸಮಯ ಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದವು. ಬೆಳಗ್ಗೆಯಿಂದ ಏಕೆ ಬಿಲ್ ಮಂಡಿಸಿಲ್ಲ. ನಿಮ್ಮ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಸಮಯ ವ್ಯರ್ಥ ಮಾಡಲಾಗಿದೆ. ಸಮಯ ವ್ಯರ್ಥ ಮಾಡಿದ್ದೀರಿ ಎಂದು ಪ್ರತಿಪಕ್ಷ ಆರೋಪ ಮಾಡಿತ್ತು. ಏಕಾಏಕಿ ಬಿಲ್ ಮಂಡನೆಗೆ ಅವಕಾಶ ನೀಡಲ್ಲವೆಂದು ಗಲಾಟೆ ಕೇಳಿಬಂತು. ಕೆಲಕಾಲ ರಣರಂಗವಾಗಿದ್ದ ವಿಧಾನ ಪರಿಷತ್ ಕಲಾಪದ ಹಿನ್ನೆಲೆ ಸಭಾಪತಿ ಕೊಠಡಿಯಲ್ಲಿ ನಾಯಕರ ಸಂಧಾನ ಸಭೆ ನಡೆಸಲಾಯಿತು. ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ಸಂಧಾನ ಸಭೆಯಲ್ಲಿ ಮುಂದಿನ ಅಧಿವೇಶನದಲ್ಲಿ ಬಿಲ್ ಮಂಡನೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಮತಾಂತರ ನಿಷೇಧ ವಿಧೇಯಕ ತರಲ್ಲ ಎಂದು ನೀವು ಹೇಳಿದ್ರಿ. ನಮ್ಮವರೆಲ್ಲರನ್ನೂ ಹೊರಗಡೆ ಕಳುಹಿಸಿ ಬಿಲ್ ತರಲು ಪ್ರಯತ್ನ ಮಾಡಿದ್ದೀರಿ. ಈಗ ಕಾಲಹರಣ ಮಾಡಿ ಬಿಲ್ ಮಂಡಿಸಲು ರೆಡಿ ಅಂತಿದ್ದೀರಲ್ಲ ಎಂದು ಪರಿಷತ್​ನಲ್ಲಿ ಸಿ.ಎಂ.ಇಬ್ರಾಹಿಂ ಆಕ್ರೋಶ ಹೊರಹಾಕಿದ್ದಾರೆ. ಕೆಲವು ಸದಸ್ಯರು ಬರುವುದಕ್ಕಾಗಿ ನಾವೆಲ್ಲರೂ ಕಾಯಬೇಕಾ ಬೇಕಾದರೆ ನಾಳೆಗೆ ಮುಂದೂಡಿ ಎಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದಿದ್ದಾರೆ.

ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡಿಸುತ್ತೇವೆ ಎಂದು ಸರ್ಕಾರದ ಪರವಾಗಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡಿದ್ದಾರೆ. ಮತಾಂತರ ನಿಷೇಧ ವಿಧೇಯಕ ಮಂಡಿಸದ ಸರ್ಕಾರ, ಮುಂದಿನ ಅಧಿವೇಶನದಲ್ಲಿ ತೆಗೆದುಕೊಳ್ಳುತ್ತೇವೆ ಎಂದು ಪೂಜಾರಿ ಹೇಳಿದ್ದಾರೆ. ಸರ್ಕಾರದ ನಿರ್ಧಾರ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದ್ದಾರೆ.

ಇದಕ್ಕೂ ಮೊದಲು ಪರಿಷತ್​ ಕಲಾಪಕ್ಕೆ ಕೆಲಕಾಲ ಬ್ರೇಕ್ ನೀಡಿರುವ ಸಭಾಪತಿ, ಕಾಂಗ್ರೆಸ್ ಸದಸ್ಯರ ಜತೆ ಸಭೆ ನಡೆಸಿದ್ದರು. ಸದನ ನಾಯಕರು, ವಿಪಕ್ಷಗಳ ನಾಯಕರ ಜತೆ ಹೊರಟ್ಟಿ ಸಭೆ ನಡೆಸಿದ್ದಾರೆ. ನಾನು ತಿಳಿದು ತಿಳಿದು ನಾನು ಕಾಲಹರಣ ಮಾಡಿಲ್ಲ. ಬಿಜೆಪಿ ನಾಯಕರೇ ಕಾಲಾವಕಾಶಕ್ಕೆ ಮನವಿ ಮಾಡಿದ್ರು. ಇದರ ಬಗ್ಗೆ ನಿಮ್ಮ ಜೊತೆ ಚರ್ಚಿಸಿದ್ದೇವೆ ಅಂದರು. ಹೀಗಾಗಿ ನಾನು ಕಾಲಾವಕಾಶ ಕೊಟ್ಟಿದ್ದೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದರು. ಇದೀಗ ವಿಧಾನ ಪರಿಷತ್ ಕಲಾಪವನ್ನ ಅನಿರ್ದಿಷ್ಟಾವಧಿಗೆ ಮುಂದೂಡಿ ಉಪಸಭಾಪತಿ ಪ್ರಾಣೇಶ್ ಆದೇಶಿಸಿದ್ದಾರೆ.

ಬಳಿಕ ಪರಿಷತ್ ಕಲಾಪದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ವಿಷಾದ ವ್ಯಕ್ತಪಡಿಸಿದ್ದರು. ಸದನಕ್ಕೆ ತಡವಾಗಿ ಬಂದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ಆಡಳಿತ, ವಿಪಕ್ಷಗಳ ಸದಸ್ಯರ ಸಭೆ ಕರೆದ ಸಭಾಪತಿ ಹೊರಟ್ಟಿ ಕೆಲಕಾಲ ಸದನ ಮುಂದೂಡಿದ್ದರು. ಈ ನಡುವೆ, ದಾವಣಗೆರೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ವಿರೋಧ ವ್ಯಕ್ತವಾಗಿದೆ. ಜಯದೇವ ಸರ್ಕಲ್‌ನಲ್ಲಿ ಎಸ್‌ಡಿಪಿಐ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿದೆ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ನಮ್ಮ ಹಿಡನ್ ಅಲ್ಲ, ಓಪನ್ ಅಜೆಂಡಾ: ಆರಗ ಜ್ಞಾನೇಂದ್ರ

ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಮತಾಂತರ ನಿಷೇಧ ಮಸೂದೆ ಜಾರಿಗೆ ನಿರ್ಧರಿಸಿದ್ದರು; ಬಿಎಸ್​ ಯಡಿಯೂರಪ್ಪ

Published On - 5:14 pm, Fri, 24 December 21