ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ: ತಂದೆ ಸತ್ತರೂ ಮುಖ ನೋಡಲು ಬಾರದ ಮಗ
ಬೆಳಗಾವಿ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತಂದೆಯನ್ನು ಆಸ್ಪತ್ರೆಯಗೆ ದಾಖಲಿಸಿ ಪರಾರಿಯಾಗಿದ್ದಾನೆ. ಇದೀಗ, ತಂದೆ ಮೃತಪಟ್ಟರೂ ಮುಖ ನೋಡಲು ಪುತ್ರ ಬಂದಿಲ್ಲ. ಕೊನೆಗೆ ಪೊಲೀಸರು ಮೃತ ವ್ಯಕ್ತಿಯ ಮಗಳಿಗೆ ಮಾಹಿತಿ ನೀಡಿದ್ದಾರೆ. ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಳಗಾವಿ, ಮಾರ್ಚ್ 31: ಬೆಳಗಾವಿಯಲ್ಲಿ (Belagavi) ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಅಪ್ಪ ಮೃತಪಟ್ಟರೂ ಮುಖ ನೋಡಲೂ ಸಹ ಪುತ್ರ ಬಾರದ ಘಟನೆ ಬೆಳಗಾವಿಯ ಶಹಾಪುರ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋವಾ ಮೂಲದ ಸತೀಶ್ವರ ಸಿನ್ಹಾ (62) ಕೆಲ ದಿನಗಳಿಂದ ಸುಟ್ಟ ಗಾಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ತಂದೆ ಸತೀಶ್ವರ ಸಿನ್ಹಾರನ್ನು ಪುತ್ರ ಉತ್ತಮ್ ಸಿನ್ಹಾ ಮಾರ್ಚ್ 22ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸತೀಶ್ವರ ಸಿನ್ಹಾ ಮೃತಪಟ್ಟಿದ್ದಾರೆ.
ಆಸ್ಪತ್ರೆಗೆ ದಾಖಲಿಸುವಾಗ ಪುತ್ರ ಉತ್ತಮ್ ಸಿನ್ಹಾ ತನ್ನ ತಂದೆ ಸತೀಶ್ವರ ಸಿನ್ಹಾ ಕೆಲಸ ಮಾಡ್ತಿದ್ದ ಹೋಟೆಲ್ ಮಾಲೀಕರ ನಂಬರ್ ನೀಡಿದ್ದಾನೆ. ತಂದೆ ಸತೀಶ್ವರ್ ಸಿನ್ಹಾ ಮೃತಪಟ್ಟರೂ ಉತ್ತಮ್ ಸಿನ್ಹಾ ಮುಖ ನೋಡಲು ಬಂದಿಲ್ಲ. ಹೀಗಾಗಿ, ಪೊಲೀಸರು ಗೋವಾದಲ್ಲಿರುವ ಸತೀಶ್ವರ ಸಿನ್ಹಾರ ಮಗಳಿಗೆ ಕರೆ ಮಾಡಿರುವ ವಿಷಯ ತಿಳಿಸಿದ್ದಾರೆ. ಸತೀಶ್ವರ್ ಸಿನ್ಹಾ ಮಗಳ ಬರುವಿಕೆಗಾಗಿ ಪೊಲೀಸರು ಕಾದು ಕುಳಿತಿದ್ದಾರೆ. ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಹೃದಯವಿದ್ರಾವಕ ಘಟನೆ: ಸೈಬರ್ ವಂಚಕರ ಬಲೆಗೆ ಬಿದ್ದ ವೃದ್ಧ ದಂಪತಿ ದುರಂತ ಸಾವು
2 ಗುಂಪುಗಳ ನಡುವೆ ಮಾರಾಮಾರಿ
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಬೆಳಗಾವಿಯ ಕೃಷ್ಣದೇವರಾಯ ಸರ್ಕಲ್ ಬಳಿಯ ಹೋಟೆಲ್ನಲ್ಲಿ ನಡೆದಿದೆ. ಕಾಲು ತಾಗಿದ್ದಕ್ಕೆ ಪ್ರಶ್ನಿಸಿ ವಾಗ್ವಾದಕ್ಕಿಳಿದು ಯುವಕರು ಹೊಡೆದಾಡಿಕೊಂಡಿದ್ದಾರೆ. ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಎರಡು ಗುಂಪುಗಳ ಪರಸ್ಪರ ಗಲಾಟೆಯ ವಿಡಿಯೋ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಗಲಾಟೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Mon, 31 March 25