ಆಂಬ್ಯುಲೆನ್ಸ್ ಚಾಲಕರು, ತುರ್ತು ವೈದ್ಯಕೀಯ ತಂತ್ರಜ್ಞರಿಗೆ 7 ತಿಂಗಳಿಂದ ಸಿಗ್ತಿಲ್ಲ ವೇತನ

|

Updated on: Aug 03, 2024 | 12:23 PM

ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಕ್ಕಾಗಿಯೇ ಕೆಲವು ವಸ್ತುಗಳ ತೆರಿಗೆಗಳನ್ನು ಹೆಚ್ಚಿಸಿದೆ ಕಾಂಗ್ರೆಸ್ ಸರ್ಕಾರ ಎಂಬ ಆರೋಪಗಳು ಒಂದೆಡೆಯಾದರೆ, ಬಿಎಂಟಿಸಿ ಸಿಬ್ಬಂದಿಗೆ ಕೊಡುವ ಯೂನಿಫಾರಂ ದುಡ್ಡಿನಲ್ಲಿಯೂ ಕಡಿತ ಮಾಡಿದೆ ಎಂಬುದು ಶುಕ್ರವಾರ ವರದಿಯಾಗಿತ್ತು. ಇದೀಗ ಆಂಬ್ಯುಲೆನ್ಸ್ ಚಾಲಕ, ವೈದ್ಯಕೀಯ ತಂತ್ರಜ್ಞರ ವೇತನವನ್ನೂ ಕಳೆದ 7 ತಿಂಗಳುಗಳಿಂದ ನೀಡಿಲ್ಲ ಎಂಬುದು ಗೊತ್ತಾಗಿದೆ.

ಆಂಬ್ಯುಲೆನ್ಸ್ ಚಾಲಕರು, ತುರ್ತು ವೈದ್ಯಕೀಯ ತಂತ್ರಜ್ಞರಿಗೆ 7 ತಿಂಗಳಿಂದ ಸಿಗ್ತಿಲ್ಲ ವೇತನ
ಆಂಬ್ಯುಲೆನ್ಸ್ ಚಾಲಕರು, ತುರ್ತು ವೈದ್ಯಕೀಯ ತಂತ್ರಜ್ಞರಿಗೆ 7 ತಿಂಗಳಿಂದ ಸಿಗ್ತಿಲ್ಲ ವೇತನ
Follow us on

ಬೆಂಗಳೂರು, ಆಗಸ್ಟ್ 3: ಆಂಬ್ಯುಲೆನ್ಸ್ ಚಾಲಕರು, ‘108 ಆರೋಗ್ಯ ಕವಚ ಆಂಬ್ಯುಲೆನ್ಸ್’ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು ಮತ್ತು ತುರ್ತು ವೈದ್ಯಕೀಯ ತಂತ್ರಜ್ಞರಿಗೆ ಡಿಸೆಂಬರ್‌ನಿಂದ ಪೂರ್ಣ ವೇತನ ದೊರೆತಿಲ್ಲ. ಮೂರು ಯೂನಿಯನ್‌ಗಳ ಸುಮಾರು 3,500 ಉದ್ಯೋಗಿಗಳ ಪರವಾಗಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. ಇವರೆಲ್ಲ ಇಎಂಆರ್​ಐ ಗ್ರೀನ್ ಹೆಲ್ತ್ ಸರ್ವಿಸಸ್‌ (ಹಿಂದೆ ಜಿವಿಕೆ ಇಎಂಆರ್​ಐ) ಜತೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೂರು ಯೂನಿಯನ್‌ಗಳ ಸದಸ್ಯರು ಮೇ 6 ರಿಂದ ಮುಷ್ಕರ ನಡೆಸಲು ಯೋಜಿಸಿದ್ದರು. ಆದರೆ ರಾಜ್ಯ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿದ ನಂತರ ಮುಷ್ಕರ ಮುಂದೂಡಿದ್ದರು. ಆಗಿ ಮೂರು ತಿಂಗಳ ನಂತರವೂ ವೇತನ ಪಾವತಿ ಸಮಸ್ಯೆ ಹಾಗೆಯೇ ಉಳಿದಿದೆ.

ಆಂಬ್ಯುಲೆನ್ಸ್ ಚಾಲಕರು ಮತ್ತು ತುರ್ತು ವೈದ್ಯಕೀಯ ತಂತ್ರಜ್ಞರು ತಮ್ಮ ಡಿಸೆಂಬರ್ ಮತ್ತು ಜನವರಿ ತಿಂಗಳ ಸಂಬಳದ ಶೇ 50 ರಷ್ಟನ್ನು ಮೇ ತಿಂಗಳಲ್ಲಿ ಸ್ವೀಕರಿಸಿದ್ದಾರೆ. ಫೆಬ್ರವರಿಯಿಂದ ವೇತನ ದೊರೆತಿಲ್ಲ ಎಂದು ಅವರು ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಕೆಲವೇ ಕೆಲವು ಸಿಬ್ಬಂದಿಗೆ 5,000 ಮತ್ತು 10,000 ರೂ.ನಂತೆ ಪಾವತಿಯಾಗಿದೆ ಎಂದೂ ಹೇಳಲಾಗಿದೆ.

12 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ನಾವು. ಕಾನೂನಿನ ಪ್ರಕಾರ ಕನಿಷ್ಠ 30,000 ರೂ. ವೇತನ ದೊರೆಯಬೇಕಿತ್ತು. ಆದರೆ, ಡಿಸೆಂಬರ್‌ನಿಂದ ನಾವು ಸರಿಯಾಗಿ ವೇತನ ಪಡೆದಿಲ್ಲ. ಬಾಕಿ ಮೊತ್ತವನ್ನೂ ಸ್ವೀಕರಿಸಿಲ್ಲ. ನಾವು ನಮ್ಮ ಕುಟುಂಬಗಳನ್ನು ಸಾಕುವುದು ಹೇಗೆ ಎಂದು ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘದ ಅಧ್ಯಕ್ಷ ಆರ್ ಶ್ರೀಧರ್ ಅಲವತ್ತುಕೊಂಡಿದ್ದಾರೆ.

ಆರೋಗ್ಯ ಸಚಿವರು ಹೇಳಿದ್ದೇನು?

ಸರ್ಕಾರ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ. ಏಜೆನ್ಸಿ ಲೆಕ್ಕಾಚಾರದ ತಪ್ಪುಗಳನ್ನು ಮಾಡಿದೆ. ಕೆಲವು ಉದ್ಯೋಗಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಪಾವತಿಸಿದೆ. ಅವರು ಈಗ ಸಂಬಳವನ್ನು ಸರಿಹೊಂದಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಲಕ, ನಿರ್ವಾಹಕರ ಯೂನಿಫಾರಂಗೆ ಪುಡಿಗಾಸು ಕೊಟ್ಟು ಕೈತೊಳೆದುಕೊಂಡ ಬಿಎಂಟಿಸಿ; ನೌಕರರಿಂದ ಆಕ್ರೋಶ

ಸಮರ್ಪಕವಾಗಿ ನಿಭಾಯಿಸುವಂಥ ಸೂಕ್ತ ಏಜೆನ್ಸಿಗಳನ್ನು ಹುಡುಕಲು ಮುಂದಿನ ಎರಡು ತಿಂಗಳೊಳಗೆ ಹೊಸ ಟೆಂಡರ್ ಕರೆಯುತ್ತೇವೆ ಎಂದೂ ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:05 am, Sat, 3 August 24