
ಬೆಂಗಳೂರು, ಜುಲೈ 4: ರಾಜಧಾನಿ ಬೆಂಗಳೂರಿನ (Bengaluru) ಐಟಿ ಕಂಪನಿಯೊಂದರ ಆವರಣದಲ್ಲಿ ನಡೆಯುತ್ತಿದ್ದ ಶಿಶುವಿಹಾರದಲ್ಲಿ (ಡೇ ಕೇರ್) ಪುಟ್ಟ ಮಕ್ಕಳ ಮೇಲೆ ದಾದಿಯರು ಎಸಗಿರುವ ಅಮಾನವೀಯ ಮತ್ತು ಕ್ರೂರ ದೌರ್ಜನ್ಯದ ಘಟನೆ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ದಿಗಿಲು ಹುಟ್ಟಿಸುವ ಘಟನೆಯನ್ನು ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿಕೊಂಡಿದೆ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳು ನಿಜವೇ ಆಗಿದ್ದರೆ, ಇದು ಮಕ್ಕಳ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ (DGP) ಆಯೋಗ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಎರಡು ವಾರಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಆಘಾತಕಾರಿ ದೃಶ್ಯಗಳ ಪ್ರಕಾರ, ಈ ಶಿಶುವಿಹಾರದಲ್ಲಿ ದಾದಿಯರು ಅಳುವ ಪುಟ್ಟ ಮಕ್ಕಳನ್ನು ಸುಮ್ಮನಿರಿಸಲು ಅತಿ ಕ್ರೂರ ವಿಧಾನಗಳನ್ನು ಬಳಸುತ್ತಿದ್ದರು. ಅಳುವ ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಇಡುವುದು, ಶೌಚಾಲಯದ ಜೆಟ್ ಸ್ಪ್ರೇ ಮೂಲಕ ಬಾಯಿಗೆ ಬಲವಂತವಾಗಿ ನೀರು ಸಿಂಪಡಿಸುವುದು, ಹಾಗೂ ಶೌಚಾಲಯದೊಳಗೆ ಹಾಕಿ ಬೀಗ ಹಾಕುವ ಮೂಲಕ ಮಕ್ಕಳನ್ನು ಮೌನವಾಗಿಸಲು ಯತ್ನಿಸುತ್ತಿದ್ದ ದೃಶ್ಯಗಳು ಬೆಚ್ಚಿಬೀಳಿಸಿದ್ದವು. ಮಕ್ಕಳು ಅಳಲು ಆರಂಭಿಸಿದರೆ ವೆಸ್ಟರ್ನ್ ಕಮೋಡ್ಗಳ ಮೇಲೆ ಬಲವಂತವಾಗಿ ಕೂರಿಸಿ ಸುಮ್ಮನಿರಬೇಕು ಎಂದು ಬೆದರಿಸಲಾಗುತ್ತಿತ್ತು. ಈ ಐಟಿ ಕಂಪನಿಯ ಉದ್ಯೋಗಿಗಳು ತಮ್ಮ ಮಕ್ಕಳನ್ನು ನಂಬಿಕೆಯಿಂದ ಇಲ್ಲಿಗೆ ಬಿಡುತ್ತಿದ್ದರು. ಮಕ್ಕಳ ಸಹಾಯವಾಣಿ ಅಧಿಕಾರಿಯೊಬ್ಬರಿಗೆ ಈ ವಿಡಿಯೋಗಳು ತಲುಪಿದ ನಂತರ ಕ್ರೌರ್ಯ ಬೆಳಕಿಗೆ ಬಂದಿದೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಈ ಶಿಶುವಿಹಾರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಇದನ್ನೂ ಓದಿ: ವಾಷಿಂಗ್ ಮಷಿನ್ಗೆ ಹಾಕಿ ಮಕ್ಕಳಿಗೆ ಹಿಂಸೆ: ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯ ವಜಾಗೊಳಿಸಿದ್ದ ಡೇ ಕೇರ್ ಸೆಂಟರ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ